ಹಬ್ಬಕ್ಕೆ ಸಿಂಪಲ್ ಸ್ವೀಟ್ಸ್
Team Udayavani, Jul 29, 2020, 3:43 PM IST
ಹಬ್ಬ ಬಂದಿದೆ. ಆದರೆ ಹಬ್ಬ ಮಾಡಲು ಮನಸಿಲ್ಲ. ಬಗೆಬಗೆಯ ತಿನಿಸು ಮಾಡಿದರೂ, ಎಲ್ಲರನ್ನೂ ಕರೆದು ಬಡಿಸಲು ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಆದರೂ, ಶಾಸ್ತ್ರದ ಪ್ರಕಾರ ಪೂಜೆ ಆಗಲೇಬೇಕು. ಆ ನೆಪದಲ್ಲಿ ಹಬ್ಬದಡುಗೆ ಮಾಡಲೇಬೇಕು. ಹಾಗಾಗಿ ಕೆಲವು ಸಿಂಪಲ್ ರೆಸಿಪಿಗಳು ಇಲ್ಲಿವೆ.
ಬಾದಾಮ್ ಪುರಿ
ಬೇಕಾಗುವ ಸಾಮಗ್ರಿ: ಗೋಧಿ ಹಿಟ್ಟು 1 ಕಪ್, ಚಿರೋಟಿ ರವೆ ಮುಕ್ಕಾಲು ಕಪ್, ಮೈದಾ ಹಿಟ್ಟು ಅರ್ಧ ಕಪ್, ಸಕ್ಕರೆ 2 ಕಪ್, ತುಪ್ಪ, ಕೊಬ್ಬರಿ ತುರಿ 1 ಕಪ್, ಏಲಕ್ಕಿ.
ಮಾಡುವ ವಿಧಾನ: ಗೋಧಿ ಹಿಟ್ಟು, ಚಿರೋಟಿ ರವೆ ಮತ್ತು ಮೈದಾ ಹಿಟ್ಟಿಗೆ ಸ್ವಲ್ಪ ತುಪ್ಪ, ಸ್ವಲ್ಪ ನೀರು ಸೇರಿಸಿ, ಚಪಾತಿ ಹಿಟ್ಟಿನ ಹದಕ್ಕೆ ನಾದಿ. ಸಕ್ಕರೆ ಪಾಕ ತಯಾರಿಸಿ, ಏಲಕ್ಕಿ ಪುಡಿ ಸೇರಿಸಿ. ಅರ್ಧ ಗಂಟೆಯ ನಂತರ, ಕಲಸಿದ ಹಿಟ್ಟಿನಿಂದ ಸಣ್ಣ ಸಣ್ಣ ಪೂರಿ ಲಟ್ಟಿಸಿ, ಎರಡು ಕೊನೆಯನ್ನು ಸೇರಿಸಿ ತ್ರಿಕೋನ ಆಕಾರಕ್ಕೆ ತಂದು ಎಣ್ಣೆಯಲ್ಲಿ ಕರಿಯಿರಿ. ಸ್ವಲ್ಪ ತಣ್ಣಗಾದ ಬಳಿಕ ಅದನ್ನು ಸಕ್ಕರೆ ಪಾಕದಲ್ಲಿ ಅದ್ದಿ ತೆಗೆದು, ಕೊಬ್ಬರಿ ತುರಿಯಲ್ಲಿ ಹೊರಳಾಡಿಸಿ.
ಗೋಧಿ ಉಂಡೆ
ಬೇಕಾಗುವ ಸಾಮಗ್ರಿ: ಗೋಧಿಹಿಟ್ಟು- 1 ಕಪ್, ತುಪ್ಪ- 1 ಕಪ್, ಸಕ್ಕರೆ ಪುಡಿ- ಮುಕ್ಕಾಲು ಕಪ್, ಹಾಲು- 1 ಕಪ್, ಏಲಕ್ಕಿ ಪುಡಿ, ಗೋಡಂಬಿ, ದ್ರಾಕ್ಷಿ, ಬಾದಾಮಿ.
ಮಾಡುವ ವಿಧಾನ:
ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ, ನಂತರ ಗೋಧಿ ಹಿಟ್ಟು ಹಾಕಿ ಕೆಂಪಗಾಗುವ ತನಕ ಹುರಿದುಕೊಳ್ಳಿ. ಹಿಟ್ಟು ತುಪ್ಪದೊಂದಿಗೆ ಬೆರೆಯಲಿ. ಮಿಶ್ರಣ ತಣ್ಣಗಾದ ಮೇಲೆ ಸಕ್ಕರೆ ಪುಡಿ, ಏಲಕ್ಕಿ ಪುಡಿ, ಡ್ರೈ ಫ್ರೂಟ್ಸ್ ಹಾಕಿ ಕಲಸಿ. ನಂತರ, ಬೆಚ್ಚಗಿನ ಹಾಲು ಹಾಕುತ್ತಾ ಹಿಟ್ಟನ್ನು ಉಂಡೆ ಮಾಡಿ.
ಸಿಹಿ ಶಂಕರ ಪೋಳಿ
ಬೇಕಾಗುವ ಸಾಮಗ್ರಿ:
ಚಿರೋಟಿ ರವೆ- 3 ಕಪ್, ಅಕ್ಕಿ ಹಿಟ್ಟು- 1 ಕಪ್, ಮೈದಾಹಿಟ್ಟು- 1 ಕಪ್, ಸಕ್ಕರೆ, ತುಪ್ಪ- 1 ಕಪ್, ಉಪ್ಪು ರುಚಿಗೆ, ಕರಿಯಲು ಎಣ್ಣೆ.
ಮಾಡುವ ವಿಧಾನ: ಸ್ವಲ್ಪ ಸಕ್ಕರೆಯನ್ನು ನೀರಿನಲ್ಲಿ ಕರಗಿಸಿಕೊಳ್ಳಿ. ಮೇಲೆ ಹೇಳಿದ ಎಲ್ಲ ಹಿಟ್ಟುಗಳನ್ನು, ಉಪ್ಪು ಮತ್ತು ತುಪ್ಪವನ್ನು ಮಿಶ್ರಣ ಮಾಡಿ ಆ ಸಕ್ಕರೆ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಲಟ್ಟಿಸಿ. ನಂತರ ಡೈಮಂಡ್ ಆಕಾರದಲ್ಲಿ ಕತ್ತರಿಸಿ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ.