ಸ್ವಾತಂತ್ರ್ಯದಿನದ ಸವಿನೆನಪಿನೊಂದಿಗೆ ಜಾಗೃತಿಯ ಮನಸ್ಸಿರಲಿ..!
Team Udayavani, Aug 15, 2021, 1:31 PM IST
ಪ್ರಾತಿನಿಧಿಕ ಚಿತ್ರ
ಇಂದಿಗೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಆದವು. ದೇಶದ ಎಲ್ಲೆಡೆ ಇಂದು ಅಮೃತ ಮಹೋತ್ಸವದ ಆಚರಣೆ ನಡೆಯುತ್ತದೆ. ಈ ಸುಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣ ನೀಡಿದ, ದೇಶಕ್ಕಾಗಿ ಹೋರಾಡಿದ ಪ್ರತಿಯೊಬ್ಬರನ್ನು ನೆನೆಸಿಕೊಂಡು ಅವರ ಪರಿಶ್ರಮ, ಬಲಿದಾನಗಳಿಗೆ ಕೈಜೋಡಿಸಿ ನಮನ ಸಲ್ಲಿಸುವ ದಿನವಿದು.
ಆದರೆ ಇದೆಲ್ಲದರ ಮಧ್ಯೆ ಮಾಯವಾಗಿದ್ದು ಮಾತ್ರ ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸುತ್ತಿದ್ದ ಸ್ವಾತಂತ್ರೋತ್ಸವ ದಿನ ಮತ್ತು ನಮ್ಮ ಬಾಲ್ಯದ ದಿನಗಳಲ್ಲಿ ನಾವು ಆಚರಿಸುತ್ತಿದ್ದ ಸ್ವಾತಂತ್ರ್ಯೋತ್ಸವ ದಿನ. ಅಂದೆಲ್ಲ ನಮಗೆ ಆಗಸ್ಟ್ ತಿಂಗಳು ಬಂತೆಂದರೆ ಸಾಕು ಶಾಲೆಯಲ್ಲಿ ಎಲ್ಲರ ಮುಖದಲ್ಲಿ ಒಂದು ಹುರುಪಿನ ಕಳೆ ಎದ್ದು ಕಾಣುತ್ತಿತ್ತು. ಈ ಸ್ವಾತಂತ್ರ್ಯ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಹೇಗೆ ವೈವಿಧ್ಯಮಯವಾಗಿ ಆಚರಿಸಬೇಕೆನ್ನುವುದರ ಬಗ್ಗೆಯೆ ವಾದ-ವಿವಾದ, ಚರ್ಚೆಗಳು ಪ್ರಾರಂಭವಾಗುತ್ತಿತ್ತು.
ಇದನ್ನೂ ಓದಿ : ದೇಶದಲ್ಲಿಂದು ಕೋವಿಡ್ ಸೋಂಕು ಕೊಂಚ ಇಳಿಕೆ: 24 ಗಂಟೆಯಲ್ಲಿ 36,083 ಹೊಸ ಪ್ರಕರಣಗಳು ಪತ್ತೆ..!
ಸ್ವಾತಂತ್ರ್ಯ ದಿನದ ಆಚರಣೆಯಲ್ಲಿ ಒಬ್ಬರಿಗೊಬ್ಬರು ಸ್ಪರ್ಧಿಗಳಂತೆ ಯಾವೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎನ್ನುವುದರ ಬಗ್ಗೆ ದೊಡ್ಡ ದೊಡ್ಡ ಪಟ್ಟಿಗಳನ್ನು ಗುರುಗಳ ಮುಂದಿಡುತ್ತಿದ್ದೇವೆ. ಹಾಡು, ಭಾಷಣ ನಾಟಕ, ನೃತ್ಯ, ಏಕಪಾತ್ರ ಅಭಿನಯ ಇತ್ಯಾದಿಗಳಿಗೆ ತಯಾರಿ ನೆಡೆಸಿಕೊಳ್ಳುತ್ತಿದ್ದೆವು. ಸ್ವಾತಂತ್ರ್ಯ ದಿನದಂದು ಬೇಗ ಬಂದು ಧ್ವಜಾರೋಹಣ ಕಟ್ಟೆಯನ್ನು ಹೂವುಗಳಿಂದ ಅಲಂಕಾರ ಮಾಡಿ ಹಬ್ಬದ ಆಚರಣೆ ನೆಡೆಸುತ್ತಿದ್ದೆವು.
ಆದರೆ ಇಂದಿನ ನಮ್ಮ ಪರಿಸ್ಥಿತಿ ಬದಲಾಗಿದೆ. ಕೊರೋನಾ ಎಂಬ ಮಹಾಮಾರಿ ಬಂದ ಮೇಲಂತು ಎಲ್ಲಾ ಹಬ್ಬಗಳಿಗೆ ಕಡಿವಾಣ ಬಿದ್ದಿದೆ. ಮನೆಯಲ್ಲಿ ನಮ್ಮ ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋಗಳನ್ನು ಹಾಕುವುದರ ಮೂಲಕ ಹಬ್ಬದ ಆಚರಣೆಯನ್ನು ನಡೆಸುತ್ತಿದ್ದೇವೆ. ನಮ್ಮ ಕಾಲೇಜ್ ದಿನಗಳ ಮತ್ತು ಎರಡು ವರ್ಷದ ಹಿಂದಿನ ಸ್ವಾತಂತ್ರ್ಯ ದಿನಾಚರಣೆಗಳ ಸವಿನೆನಪುಗಳನ್ನು ಮೆಲಕು ಹಾಕಿಕೊಳ್ಳುತ್ತಿದ್ದೇವೆ.
ಸಮಯಯಕ್ಕೆ ತಕ್ಕಹಾಗೆ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿ ಕೊಳ್ಳುವ ಅನಿವಾರ್ಯತೆ ಇರುವುದರಿಂದ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯನ್ನು ಮನೆಯಲ್ಲಿಯೇ ಆಚರಿಸೋಣ. ದೇಶ ಭಕ್ತಿ ಎನ್ನುವುದು ನಮ್ಮ ತೋರ್ಪಡಿಕೆಯ ಆಚರಣೆಯಲ್ಲಿ ತೋರಿಸುವ ಬದಲು ಮನದಲ್ಲಿಯೇ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆದುಕೊಳ್ಳೋಣ.
ಸ್ವಾತಂತ್ರ್ಯ ನಂತರದ ಭಾರತದ ಬಗ್ಗೆ ಒಮ್ಮೆ ಯೋಚಿಸೋಣ. ಸಿಕ್ಕ ಸ್ವಾತಂತ್ರ್ಯದ ದುರುಪಯೋಗ ಸದುಪಯೋಗ ಎಲ್ಲಿ ಆಗುತ್ತದೆ.ಹಳ್ಳಿ ಹಳ್ಳಿಗಳಲ್ಲಿ ಅಭಿವೃದ್ಧಿಯನ್ನು ಸಾಧಿಸಿ ಅಭಿವೃದ್ಧಿಹೊಂದಿದ ದೇಶಕ್ಕೆ ಸೇರಬೇಕೆಂದು ಹಂಬಲಿಸುತ್ತಿರುವ ದೇಶ ಸ್ಥಿತಿ ಹೇಗಿದೆ. ಬಡತನ, ಜನಸಂಖ್ಯಾ ಸ್ಪೋಟ, ಅನಕ್ಷರತೆ, ನಿರುದ್ಯೋಗಗಳೆಂಬ ಜ್ವಲಂತ ಸಮಸ್ಯೆಗಳ ಜೊತೆ ಸಂಕುಚಿತ ಭಾವನೆ, ಸ್ವಾರ್ಥ, ದುರಾಸೆ , ದ್ವೇಷ, ಮೂಢನಂಬಿಕೆ, ತಪ್ಪು ಎಂದು ತಿಳಿದಿದ್ದರೂ ಅದನ್ನೆ ಮುಂದುವರೆಸಿಕೊಂಡು ಹೋಗುವ ಮನಸ್ಥಿತಿ, ಅನ್ಯಾಯ, ಮೋಸ ಮಾಡುವ ಮನೋಭಾವ ಇವುಗಳ ನಿರ್ಮೂಲನೆ ಬಗ್ಗೆ ಯೋಚಿಸೋಣ.
ಆಗಲೆ ಸ್ವಾತಂತ್ರ್ಯ ದಿನದ ಆಚರಣೆಗೂ ಒಂದು ಮಹತ್ವ ಬರಬಹುದು. ಹಬ್ಬದ ಆಚರಣೆ ಎಲ್ಲಾದರೇನು ಆಚರಣೆಯ ಮಹತ್ವ ಮತ್ತು ಮನಸ್ಸು ಶುದ್ಧವಾಗಿರಬೇಕಷ್ಟೆ.
ಮಧುರಾ ಎಲ್ ಭಟ್ಟ
ಎಸ್ ಡಿ ಎಮ್ ಸ್ನಾತಕೋತ್ತರ ಕೇಂದ್ರ ಉಜಿರೆ
ಇದನ್ನೂ ಓದಿ : 47 ಕೋಟಿ ರೂ. ಅತಿವೃಷ್ಠಿ ಹಾನಿ ಪರಿಹಾರಕ್ಕೆ ಪ್ರಸ್ತಾವನೆ: ಸಚಿವ ಶಂಕರ ಪಾಟೀಲ