ಚುನಾವಣೆ ಪ್ರಚಾರ ವಸ್ತು ಆಗದಿರಲಿ ಉಗ್ರ ದಾಳಿ


Team Udayavani, Feb 22, 2019, 12:30 AM IST

34.jpg

ಸೈನಿಕರು ಸೇವೆಯಲ್ಲಿರುವಾಗ ನಿಧನರಾದರೆ ಮಾತ್ರ ಮಂತ್ರಿ ಮಹೋದಯರು, ಅಧಿಕಾರಿ ವರ್ಗದವರು ಗೌರವ ತೋರ್ಪಡಿಸುತ್ತಾರೆ. ಅವರನ್ನು ಆಶ್ರಯಿಸಿದ್ದವರಿಗೆ ಸವಲತ್ತು ಮತ್ತು ಪರಿಹಾರ ಧನ ಘೋಷಿಸುತ್ತಾರೆ. ಆದರೆ ಇದೊಂದು ತೋರಿಕೆಯ ನಟನೆ ಮಾತ್ರ. ಆ ಸಂತ್ರಸ್ತರು ಘೋಷಿತ ಪರಿಹಾರ ಸವಲತ್ತುಗಳನ್ನು ಪಡೆಯಲು ಕಚೇರಿಯಿಂದ ಕಚೇರಿಗೆ ವರ್ಷಗಟ್ಟಲೆ ಅಲೆಯಬೇಕಾಗುತ್ತದೆ.

ಇತ್ತ ಇಡೀ ದೇಶ ದೇಹಪ್ರೇಮಕ್ಕೆ ಮೀಸಲಾದ ಪ್ರೇಮಿಗಳ ದಿನಾಚರಣೆ ಸಂಭ್ರಮದ ಮತ್ತಿನಲ್ಲಿ ಮಿಂದೇಳುತ್ತಿದ್ದರೆ ಅತ್ತ ದೇಶ ಪ್ರೇಮಕ್ಕೆ ಮೀಸಲಾದ ಸಾಧನೆಗೈಯಲು ಹೊರಟ ಭಾರತೀಯ ಯೋಧರಲ್ಲಿ 42 ಮಂದಿಯ ದೇಹವೇ ಸ್ಫೋಟಗೊಂಡು ಅವರು ಭಾರತಾಂಬೆಯ ಪದತಲಕ್ಕೆ ರಕ್ತ ತರ್ಪಣ ನೀಡಿ ಅಸುನೀಗಿದರು. ನೂರೊಂದು ಕನಸುಗಳ ಬುತ್ತಿ ಕಟ್ಟಿ ಅದನ್ನು ಮನೆಮಂದಿ ಬಂಧುಗಳೊಡನೆ ಹಂಚಿ ಸವಿಯುಣ್ಣುತ್ತಾ ರಜೆಯನ್ನು ಕಳೆದು ಮರಳಿ ದೇಶ ಸೇವೆಯ ಕರೆಗೆ ಓಗೊಟ್ಟು ತೆರಳುತ್ತಿದ್ದ ಇವರು ಕಾಲನ ಕರೆಗೇ ಓಗೊಡಬೇಕಾಗಿ ಬಂತು. ದೇಶಕ್ಕಾಗಿ ಪರಮಾತ್ಮ ಪಾದ ಸೇರಿ ಮಹಾತ್ಮರ ಪದವನ್ನಲಂಕರಿಸಿದ ಹುತಾತ್ಮರಿಗೆ ಹೃತೂ³ರ್ವಕ ಶ್ರದ್ಧಾಂಜಲಿ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ. ಈ ದುರ್ಘ‌ಟನೆಯನ್ನು ಒಂದು ವಿಪರ್ಯಾಸ ಎನ್ನುವುದಕ್ಕಿಂತ ಈ ದೇಶದ ದೌರ್ಬಲ್ಯದಿಂದಾದ ಎಡವಟ್ಟು ಎನ್ನಬಹುದು. 

ಭಾರತ ಶಾಂತಿಪ್ರಿಯರ ದೇಶ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರಂತಹ ಪುಣ್ಯ ಪುರುಷರ ಜನ್ಮ ಭೂಮಿ ಮತ್ತು ಕರ್ಮ ಭೂಮಿ. ಅಂದು ಶಾಂತಿ ಮತ್ತು ಅಹಿಂಸೆಯ ಅಸ್ತ್ರವನ್ನೇ ಬಳಸಿಕೊಂಡು ನಾವು ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದೆವು. ಇಂದು ಕೂಡಾ ಇದೇ ಅಸ್ತ್ರವನ್ನು ಬಳಸಿ ಉಗ್ರಗಾಮಿಗಳನ್ನು ಹತ್ತಿಕ್ಕಬೇಕು ಎಂದು ಕೆಲವು ಪ್ರಗತಿಪರ ಚಿಂತಕರು ವಾದಿಸುತ್ತಾರೆ. ಇದು ಉಗ್ರಗಾಮಿಗಳನ್ನು ಹತ್ತಿಕ್ಕುವ ವಿಚಾರದಲ್ಲಿ ಭಾರತವನ್ನು ಕಾಡುವ ದೌರ್ಬಲ್ಯ. 2001 ಸೆಪ್ಟಂಬರ್‌ ನಲ್ಲಿ ಅಲ್‌ ಖೈದಾ ಉಗ್ರಗಾಮಿ ಸಂಘಟನೆ ಅಮೆರಿಕದ ಮೇಲೆ ನಡೆಸಿದ ದಾಳಿಗೆ ಪ್ರತಿಕಾರವಾಗಿ ಆ ದೇಶ ಉಗ್ರ ಸಂಘಟನೆಯ ತಾಯಿಬೇರನ್ನೇ ನಾಶಮಾಡಿತು. ನಂತರ ಉಗ್ರರು ಆ ದೇಶಕ್ಕೆ ದಾಳಿ ನಡೆಸಲು ಹೆದರುತ್ತಿದ್ದು ಅದಿಂದು ನಿಶ್ಚಿಂತೆಯಿಂದ ಇದೆ. ಭಯೋತ್ಪಾದಕರ ವಿಚಾರವಾಗಿ ಇಸ್ರೇಲ್‌ ಕೂಡಾ ಖಡಕ್‌ ನಿಲುವು ಹೊಂದಿದೆ. ಆದುದರಿಂದ ಸಿರಿಯಾದ ಐಸಿಸ್‌ ಉಗ್ರ ಸಂಘಟನೆಯನ್ನು ಕೆಂಡದಂತೆ ಸೆರಗಿನÇÉೇ ಕಟ್ಟಿಕೊಂಡಿದ್ದರೂ ಇಸ್ರೇಲ್‌ ನೆಮ್ಮದಿಯಿಂದಿದೆ. ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಂದಿನಿಂದ ಇಂದಿನವರೆಗೂ ಉಗ್ರರ ಪೀಡೆಗೆ ಪರಿಹಾರ ಪಡೆಯಲಾಗಲಿಲ್ಲವೆಂದರೆ ಇದು ಈ ದೇಶದ ದೌರ್ಭಾಗ್ಯವೇ ಸರಿ. ಉಗ್ರ ಚಟುವಟಿಕೆಗಳನ್ನು ಶಾಂತಿ ಮಂತ್ರದಿಂದ ನಿಯಂತ್ರಿಸುವುದು ಕಷ್ಟ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ನಮ್ಮ ಶತ್ರು ಪಾಳಯಕ್ಕೆ ನೀತಿ ಸಂಹಿತೆಯಿತ್ತು. ಸಂವಿಧಾನವೂ ಇತ್ತು. ಆದುದರಿಂದ ಆಗ ಶಾಂತಿ ಅಹಿಂಸೆಗಳಿಗೆ ಬೆಲೆ ಸಿಕ್ಕಿತು. ಆದರೆ ಈಗ ನಮ್ಮ ಮುಂದಿರುವ ಶತ್ರುಗಳು ಪುಂಡುಪೋಕರಿಗಳು. ಅವರನ್ನು ನಿಯಂತ್ರಿಸಲು ಶಾಂತಿಮಂತ್ರ ಪಠಿಸಿ ಹೆಡ್ಡತನ ತೋರುವ ಬದಲು ಅವರದೇ ಭಾಷೆಯಲ್ಲಿ ಅವರ ಮೂಲವನ್ನು ನಿರ್ನಾಮ ಮಾಡಲು ಪಣ ತೊಡಬೇಕು. 

ಫೆಬ್ರವರಿ 14ರಂದು ಅವಂತಿಪೋರಾದಲ್ಲಿ ನಡೆದ ಉಗ್ರರ ದಾಳಿ ಈ ದೇಶದ ಸಮಗ್ರತೆಗೊಂದು ಸವಾಲಾಗಿದೆ. ಇದನ್ನು ನಡೆಸಿದ ಜೈಶ್‌ – ಎ- ಮೊಹಮ್ಮದ್‌ ಸಂಘಟನೆ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಿಂದ ಕಾರ್ಯಾಚರಿಸುತ್ತಿದ್ದು ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿರುವುದು ಸ್ಪಷ್ಟ. ಜೈಶ್‌ ಸಂಘಟನೆಯನ್ನು ಪಾಕ್‌ ಸರಕಾರ 2002ರಲ್ಲೇ ನಿಷೇಧಿಸಿದ್ದರೂ ಆ ನಿಷೇಧ ಕಡತಗಳಲ್ಲಷ್ಟೇ ಉಳಿದಿದೆ. ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಪಾಕ್‌ನಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದು ಈತ ಅಲ್ಲಿನ ಸೈನ್ಯಕ್ಕೂ ಐಎಸ್‌ಐ ಸಂಸ್ಥೆಗೂ ಆಪ್ತನಾಗಿ¨ªಾನೆ. ಆದುದರಿಂದ ದಾಳಿಯ ಹೊಣೆಗಾರಿಕೆಯಿಂದ ಪಾಕ್‌ ಸರಕಾರ ಜಾರಿಕೊಳ್ಳುವಂತಿಲ್ಲ. ದಾಳಿ ನಡೆದು ಅಷ್ಟೊಂದು ಸೈನಿಕರು ದುರ್ಮರಣಕ್ಕೀಡಾದಾಗ ಭಾರತೀಯರೆಲ್ಲರೂ ಇದನ್ನು ಒಟ್ಟಾಗಿ ಒಕ್ಕೊರಲಿನಿಂದ ಪ್ರತಿಭಟಿಸಬೇಕಿತ್ತು. ಆದರೆ ಕೆಲವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಈ ಹತ್ಯೆ ಜೆಹಾದಿಗಳು ಕಾಶ್ಮೀರಕ್ಕೆ ನೀಡಿದ ಕೊಡುಗೆ ಎಂದು ಬರೆದುಕೊಂಡರು. ಅಲಿಘಡ ಮುಸ್ಲಿಂ ವಿ. ವಿ. ವಿದ್ಯಾರ್ಥಿಯೊಬ್ಬ ದಾಳಿಯನ್ನು ಬೆಂಬಲಿಸಿ ಅಮಾನತಾದ. ಇನ್ನು ಕೆಲವರು ಪಾಕಿಸ್ತಾನಕ್ಕೆ ಜೈ ಹೋ ಎಂದರು.

 ಭಾರತಕ್ಕೆ ಸೇರಿದ ಪಂಜಾಬ್‌ ಪ್ರಾಂತ್ಯದ ಸಚಿವರೊಬ್ಬರು ಈ ಕೃತ್ಯದ ಹಿಂದೆ ಪಾಕ್‌ನ ಪಾತ್ರವೇ ಇಲ್ಲ ಎಂದು ಹೇಳಿ ವಿವಾದ ಸೃಷ್ಟಿಸಿದರು. ಕನ್ನಡದ ಲೇಖಕರೊಬ್ಬರು ದಾಳಿಯ ವಿರುದ್ಧ ಕಾರ್ಯಾಚರಣೆ ನಡೆಸಲು ಪ್ರಧಾನಮಂತ್ರಿಯ ಜೊತೆ ನಾವಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಇನ್ನೊಬ್ಬರು ವಿಚಾರವಾದಿ (ಸಿನಿಮಾ ನಿರ್ದೇಶಕಿ) ಅವರ ಮಾನಸಿಕ ಆರೋಗ್ಯ ಸರಿಯಿಲ್ಲ ಎಂದರು. ಈ ಹಿಂದೆ ಪ್ರಧಾನಮಂತ್ರಿ ತಳೆದ ದಿಟ್ಟ ನಿಲುವಿನಿಂದ ಉಗ್ರಗಾಮಿಗಳ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್‌ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ನಂತರ ನಡೆದ ಸಂಸತ್‌ ಅಧಿವೇಶನದಲ್ಲಿ ವಿರೋಧ ಪಕ್ಷದವರು ಈ ಕುರಿತಾದ ಪುರಾವೆ ಕೇಳುವ ಮೂಲಕ ಆಡಳಿತ ಪಕ್ಷವನ್ನು ಪೇಚಿಗೆ ಸಿಲುಕಿಸಿದರು. ಈ ಎಲ್ಲ ವಿದ್ಯಮಾನಗಳು ದೇಶದ ಸಮಗ್ರತೆ ಮತ್ತು ಐಕ್ಯತೆಯನ್ನು ಪ್ರಶ್ನಿಸುವಂತಿದೆ. ಉಗ್ರಗಾಮಿಗಳ ಬದಲಿಗೆ ಶತ್ರು ಸೈನಿಕರೇ ಈ ದೇಶದ ವಿರುದ್ಧ ದಂಡತ್ತಿ ಬಂದರೆ ಭಾರತೀಯರೊಳಗಿನ ಒಗ್ಗಟ್ಟು ಹೇಗಿರಬಹುದು ಎಂಬ ಜಿಜ್ಞಾಸೆ ಕೂಡಾ ಮೂಡುತ್ತದೆ. 

ಇಂದು ಕರ್ತವ್ಯನಿಷ್ಠೆ , ಪ್ರಾಮಾಣಿಕತೆ ಮತ್ತು ನೆಲದ ಋಣ ತೀರಿಸುವ ಹಂಬಲವನ್ನು ಕೃಷಿ ಮಾಡುವ ರೈತರಲ್ಲಿ ಮತ್ತು ಪಹರೆ ಕಾಯುವ ಸೈನಿಕರಲ್ಲಿ ಮಾತ್ರ ಕಾಣಬಹುದು. ಭಾರತದಲ್ಲಿ ಈ ಎರಡು ವರ್ಗಗಳ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಫೆ.14ರ ಉಗ್ರರ ದಾಳಿಯಲ್ಲಿ ಮಡಿದ ಯೋಧರ ಮನೆಯ ಪರಿಸ್ಥಿತಿಯನ್ನು ದೃಶ್ಯ ಮಾಧ್ಯಮಗಳಲ್ಲಿ ನೋಡುವಾಗ ಬಹಳ ಖೇದವೆನಿಸಿತು ಮತ್ತು ನಮ್ಮ ರಾಜಕೀಯ ವ್ಯವಸ್ಥೆಯ ಮೇಲೆ ಜುಗುಪ್ಸೆಯೂ ಮೂಡಿತು. ಮಂಡ್ಯದ ಹುತಾತ್ಮ ಯೋಧ ಗುರು ಅವರಿಗೆ ಸ್ಮಾರಕ ಕಟ್ಟಲು ಆ ತಾಲೂಕಿನಲ್ಲಿ ಎಲ್ಲೂ ಸರಕಾರಿ ಜಾಗವಿಲ್ಲ ಎಂಬ ತಾಲೂಕು ತಹಶೀಲ್ದಾರರ ಹೇಳಿಕೆ ಹಾಸ್ಯಾಸ್ಪದವೆನಿಸಿತು. ಸೈನಿಕರು ದೇಶ ಹಿತ ರಕ್ಷಣೆ ಮಾಡುವ ಘನವೆತ್ತ ಹೊಣೆ ಹೊತ್ತು ಅದನ್ನು ಕಾಯಾ ವಾಚಾ ಮನಸಾ ಮಾಡುತ್ತಿದ್ದರೂ ಅವರಿಗೆ ಸಿಗುವ ಪ್ರತಿಫ‌ಲ ಅತ್ಯಲ್ಪ. ಕರ್ತವ್ಯದ ಸಂದರ್ಭದಲ್ಲಿ ಅಧಿಕಾರಿಗಳಿಂದ ಅಥವಾ ಸರಕಾರದಿಂದ ಆಗುವ ಕಿರುಕುಳವನ್ನು ಅವರು ಬಹಿರಂಗವಾಗಿ ಹೇಳಿಕೊಳ್ಳುವಂತೆಯೂ ಇಲ್ಲ. 

ಅವರು ಸೇವೆಯಲ್ಲಿರುವಾಗ ನಿಧನರಾದರೆ ಮಾತ್ರ ಮಂತ್ರಿ ಮಹೋದಯರು, ಅಧಿಕಾರಿ ವರ್ಗದವರು ಗೌರವ ತೋರ್ಪಡಿಸುತ್ತಾರೆ. ಅವರನ್ನು ಆಶ್ರಯಿಸಿದ್ದವರಿಗೆ ಸವಲತ್ತು ಮತ್ತು ಪರಿಹಾರ ಧನ ಘೋಷಿಸುತ್ತಾರೆ. ಆದರೆ ಇದೊಂದು ತೋರಿಕೆಯ ನಟನೆ ಮಾತ್ರ. ಆ ಸಂತ್ರಸ್ತರು ಘೋಷಿತ ಪರಿಹಾರ ಸವಲತ್ತುಗಳನ್ನು ಪಡೆಯಲು ಕಚೇರಿಯಿಂದ ಕಚೇರಿಗೆ ವರ್ಷಗಟ್ಟಲೆ ಅಲೆಯಬೇಕಾಗುತ್ತದೆ. 2016ರಲ್ಲಿ ಸಿಯಾಚಿನ್‌ನಲ್ಲಿ ಹಿಮಪಾತಕ್ಕೆ ಸಿಲುಕಿ ದುರ್ಮರಣವನ್ನಪ್ಪಿದ ಹುಬ್ಬಳ್ಳಿಯ ಯೋಧ ಹನುಮಂತಪ್ಪ ಕೊಪ್ಪದ ಅವರ ಕುಟುಂಬಕ್ಕೆ ಸಿಗಬೇಕಾದ ಪರಿಹಾರ ಪೂರ್ತಿಯಾಗಿ ಇನ್ನೂ ಸಿಕ್ಕಿಲ್ಲ. ಸಂಸದರು, ಶಾಸಕರು ಮಂತ್ರಿಗಳು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಕರ್ಮಕಾಂಡಗಳ ಬಗ್ಗೆ ಕಚ್ಚಾಡುವ ವಿಧಾನ ಮಂಡಲ ಅಧಿವೇಶನಕ್ಕೆ ಜನ ಕಟ್ಟಿದ ತೆರಿಗೆಯ ಕೋಟಿಗಟ್ಟಲೆ ಹಣವನ್ನು ಸರಕಾರ ಖರ್ಚು ಮಾಡುತ್ತದೆ. ಆದರೆ ದೇಶ ಕಾಯುವ ಓರ್ವ ಸಿಪಾಯಿಗೆ ನ್ಯಾಯಯುತವಾದ ಪರಿಹಾರ ನೀಡಲು ಅದಕ್ಕೆ ತಾಕತ್ತಿಲ್ಲದಿರುವುದು ಈ ದೇಶದ ವಿಪರ್ಯಾಸ. ಜನಪ್ರತಿನಿಧಿಗಳು ವಿಧಾನ ಮಂಡಲ ಅಧಿವೇಶನಗಳಲ್ಲಿ ಸೈನಿಕರಿಗೆ ಒದಗಿಸಿದ ವಿಮಾನ, ಶಸ್ತ್ರಾಸ್ತ್ರವೇ ಅಲ್ಲದೆ ಶವಪೆಟ್ಟಿಗೆಯಲ್ಲೂ ನಡೆಸಿದ ಹಗರಣಗಳ ಬಗ್ಗೆ ಆರೋಪ, ಪ್ರತ್ಯಾರೋಪ ಮಾಡುತ್ತಾ ಕಾಲ ಕಳೆಯುತ್ತಾರೆ. ಸೈನಿಕರ ಸ್ಥಿತಿಗತಿಯನ್ನು ಉತ್ತಮ ಪಡಿಸುವ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ. ಹಿಮದ ಹೆಬ್ಬಂಡೆಗಳ ನಡುವೆ ಕನಿಷ್ಟ ಡಿಗ್ರಿ ಉಷ್ಣತೆಯ ಸಿಯಾಚಿನ್‌ನಂತಹ ಪ್ರದೇಶದಲ್ಲಿ ಮೈಯಲ್ಲಾ ಕಣ್ಣಾಗಿ ಗಡಿ ಕಾವಲು ಕಾಯುವ ಯೋಧರ ಸುಖ ದುಃಖವನ್ನು ಹವಾನಿಯಂತ್ರಿತ ಕೋಣೆಯೊಳಗೆ ಕುಳಿತ ಜನಪ್ರತಿನಿಧಿಗಳು ಅರ್ಥೈಸಲಾರರು. ದೇಶಕ್ಕಾಗಿ ದುಡಿಯುತ್ತಿರುವಾಗ ಯಾರೂ ಸೈನಿಕರಿಗೆ ಸಲ್ಯೂಟ್‌ ಹೊಡೆಯುವುದಿಲ್ಲ. ಮಡಿಯುವಾಗ ಸಲ್ಯೂಟ್‌ ಹೊಡೆದು ಕಣ್ಣೀರು ಸುರಿಸುವ ನಟನೆ ಮಾಡುತ್ತಾರೆ ಅಷ್ಟೆ . ಇದು ಈ ದೇಶದ ಸೈನಿಕರ ದುರಂತ ಕತೆ. 

ಕಾಶ್ಮೀರದ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಧಾರ್ಮಿಕ ಮೂಲಭೂತವಾದದೊಂದಿಗೆ ರಾಜಕೀಯವನ್ನು ಕಲಸುಮೇಲೋ ಗರಗೊಳಿಸಿ ಈ ರಾಜ್ಯದ ಜನತೆಯನ್ನು ಗುರಾಣಿಯಂತೆ ಬಳಸಿ ಕೊಂಡು ಪಾಕಿಸ್ತಾನ ಇಲ್ಲಿ ಉಗ್ರವಾದದ ವಿಷಬೀಜವನ್ನು ಬಿತ್ತುತ್ತಿದೆ. ಇದನ್ನು ಹತ್ತಿಕ್ಕಲು ಭಾರತೀಯ ಪ್ರಜೆಯೆನಿಸಿದ ಪ್ರತಿಯೊಬ್ಬರೂ ಹಾಳು ರಾಜಕೀಯವನ್ನು ಬದಿಗಿಟ್ಟು ನಿಸ್ವಾರ್ಥ ಮನೋಭಾವ ದಿಂದ, ಸಮಚಿತ್ತದಿಂದ ಪ್ರಯತ್ನಿಸಬೇಕಿದೆ. ಯಾವನೇ ಭಾರತೀಯ ಯೋಧನಿಗೆ ಉಗ್ರರ ದಾಳಿಯನ್ನು ಎದುರಿಸುವ ಪರಿಸ್ಥಿತಿ ಮುಂದೆಂದೂ ಬರಬಾರದು. ಅಂಥದ್ದೊಂದು ಬದಲಾವಣೆಗೆ ಅವಂತಿಪೋರಾ ಉಗ್ರ ದಾಳಿ ಕಾರಣವಾಗಲಿ; ಬದಲಿಗೆ ಮುಂಬರುವ ಲೋಕಸಭಾ ಚುನಾವಣೆಗೆ ಪ್ರಚಾರತಂತ್ರವಾಗದಿರಲಿ ಎಂಬುದು ಭಾರತೀಯರೆಲ್ಲರ ಹಾರೈಕೆ.

ಭಾಸ್ಕರ ಕೆ. ಕುಂಟಪದವು 

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.