ಶೇಖಾವತ್‌ ಹೇಳಿದ ನೀರಿನ ಪಾಠಗಳು

ಜನಾಂದೋಲನದಿಂದ ಮಾತ್ರ ಜಲಪೂರ್ಣತೆ ಸಾಧಿಸುವುದು ಸಾಧ್ಯವಾಗುತ್ತದೆ

Team Udayavani, Aug 17, 2019, 5:26 AM IST

p-28

ಉತ್ತರ ಕರ್ನಾಟಕ ಸಮಗ್ರ ನೀರಾವರಿ ಅಭಿವೃದ್ಧಿ ಸಮಿತಿಯ ಸದಸ್ಯರಾದ ನಮಗೆ ಕೇಂದ್ರ ಜಲಶಕ್ತಿ ಮಂತ್ರಿ ಗಜೇಂದ್ರಸಿಂಗ್‌ ಶೇಖಾವತ್‌ ಅವರನ್ನು ಲೋಕಸಭೆಯ ಅವರ ಕಚೇರಿಯಲ್ಲಿ ಭೇಟಿ ಮಾಡುವ ಒಂದು ಅಪರೂಪದ ಅವಕಾಶ ಇತ್ತೀಚೆಗೆ ಲಭಿಸಿತ್ತು. ಸಮಯಕ್ಕೆ ಸರಿಯಾಗಿ ಅವರ ಕಚೇರಿ ಬಳಿಗೆ ಹೋದಾಗ ಸ್ವತಃ ಸಚಿವರೇ ಎದ್ದು ದ್ವಾರದವರೆಗೆ ಬಂದು ನಮ್ಮನ್ನು ಸ್ವಾಗತಿಸಿದರು. ಅವರ ಸೌಜನ್ಯದ ನಡೆ ನನ್ನ ಮನಸ್ಸನ್ನು ತಾಕಿತು. ಅಧಿಕಾರದಲ್ಲಿರುವವರು ಜನರ ಬಳಿಗೆ ಬಂದು ಅವರ ಅಹವಾಲು ಕೇಳುವುದು ನಿಜಕ್ಕೂ ಒಂದು ಅಪರೂಪದ ಸಂಗತಿ.

ಡಾ| ಝಾಕೀರ್‌ ಹುಸೇನ್‌ ರಾಷ್ಟ್ರಪತಿಯಾಗಿದ್ದಾಗ ಅವರನ್ನು ಭೇಟಿಯಾಗಲು ಅವರ ಹುಟ್ಟೂರಿನ ಕಿರಾಣಿ ವರ್ತಕರೊಬ್ಬರು ಬರುತ್ತಿದರು. ಹುಸೇನ್‌ ಅವರು ತಾವೇ ಸ್ವತಃ ದ್ವಾರದ ಬಳಿಗೆ ಬಂದು ಆ ವರ್ತಕ ಮಹಾಶಯರನ್ನು ರಾಷ್ಟ್ರಪತಿ ಭವನದ ಒಳಗೆ ಕರೆದುಕೊಂಡು ಹೋಗುತ್ತಿದ್ದರಂತೆ. ವಿದೇಶಿ ರಾಷ್ಟ್ರಪತಿಗಳು -ಅಧ್ಯಕ್ಷರು ರಾಜಭವನಕ್ಕೆ ಭೇಟಿ ನೀಡಿದಾಗ ಮಾತ್ರ ಭಾರತದ ರಾಷ್ಟ್ರಪತಿಗಳು ದ್ವಾರದ ಬಳಿಗೆ ಹೋಗಿ ಕರೆತರುವ ಸಂಪ್ರದಾಯವಿದೆ. ಇದು ರಾಷ್ಟ್ರಪತಿ ಭವನದ ಪ್ರೋಟೊಕಾಲ್. ‘ಕಿರಾಣಿ ವರ್ತಕನನ್ನು ಕರೆತರಲು ದ್ವಾರದ ಬಳಿಗೆ ಹೋಗಬೇಡಿರಿ’ ಎಂದು ಅಧಿಕಾರಿಗಳು ರಾಷ್ಟ್ರಪತಿ ಹುಸೇನ್‌ರಿಗೆ ಸಲಹೆ ನೀಡಿದರು. ಡಾ| ಹುಸೇನ್‌ ಬಾಯ್ತುಂಬ ನಕ್ಕು ಹೇಳಿದರು-‘ಈ ವರ್ತಕ ಬಾಲ್ಯದಲ್ಲಿ ನಮ್ಮ ಕುಟುಂಬಕ್ಕೆ ಉದ್ರಿ ಕಿರಾಣಿ ರೇಶನ್‌ ಕೊಡುತ್ತಿದ್ದರು. ಅವರ ಕೊಟ್ಟ ಆಹಾರ ಧಾನ್ಯ ಉಂಡು ಬೆಳೆದವನು ನಾನು. ಅವರ ನೆರವು ಇಲ್ಲದಿದ್ದರೆ ನಾನು ಈ ಸ್ಥಾನದಲ್ಲಿ ಕುಳಿತುಕೊಳ್ಳುತ್ತಿದ್ದೇನೋ ಇಲ್ಲವೋ ಗೊತ್ತಿಲ್ಲ. ಪ್ರೋಟೊಕಾಲ್ ಪಕ್ಕಕ್ಕೆ ಇಡಿರಿ. ನಾನು ಗೇಟ್ ಬಳಿಗೆ ಬಂದು ಆ ಪುಣ್ಯಾತ್ಮನನ್ನು ಕರೆತರುತ್ತೇನೆಂದು’ ಡಾ| ಹುಸೇನ್‌ ಹೇಳುತ್ತಿ ದ್ದರು. ಸಚಿವ ಶೇಖಾವತ್‌ ಅವರ ನಡೆ ನೋಡಿದ ತಕ್ಷಣ ನನ್ನ ಮನಸ್ಸಿನಲ್ಲಿ ಈ ಮೇಲಿನ ಘಟನೆ ಸುಳಿದು ಹೋಯಿತು.

ಶೇಖಾವತ್‌ ತುಂಬ ಸ್ಪಷ್ಟವಾಗಿ ಮಾತನಾಡುತ್ತಾರೆ. ಅವರು ಮಾತನಾಡತೊಡಗಿದರೆ ಕೇಳಬೇಕು ಎನ್ನುವ ಆಸಕ್ತಿ ಮೂಡುತ್ತದೆ. ಅವರ ಆಳವಾದ ಜ್ಞಾನ, ವಿಷಯ ಸಂಗ್ರಹ, ಮಾತಿನ ಸ್ಪಷ್ಟತೆ ಎದ್ದು ಕಾಣುತ್ತದೆ. ಕುಸ್ತಿ ಪಟುವಿನಂತಿರುವ ಅವರದು ಆಕರ್ಷಕ ವ್ಯಕ್ತಿತ್ವ.

‘ನೀರು ನಿರ್ವಹಣೆ ಯಶಸ್ವಿಯಾಗಲು ಜನ ಆಂದೋಲನ ಸಂಘಟಿಸಬೇಕು ಬಾಗಲಕೋಟೆಯ ನೀವು ನೀರಾವರಿ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಸಂತೋಷದ ಸಂಗತಿ’ ಎಂದು ಅವರು ಮಾತು ಆರಂಭಿಸಿದರು. ನಾವು ಕಾಳಿ ನದಿಯನ್ನು ಮಹದಾಯಿ-ಮಲಪ್ರಭಾ ನದಿಗಳಿಗೆ ಜೋಡಿಸುವ ವರದಿಯನ್ನು ಅವರಿಗೆ ಸಲ್ಲಿಸಿದೆವು. ನಾವು ಹೇಳುವುದನ್ನೆಲ್ಲ ತುಂಬ ಆಸಕ್ತಿಯಿಂದ ಕೇಳಿದರು. ಮಧ್ಯದಲ್ಲಿ ಒಂದು ಶಬ್ದ ಕೂಡ ಮಾತನಾಡಲಿಲ್ಲ. ಚೆನ್ನಾಗಿ ಕೇಳುವ ಕಲೆಯನ್ನು ಅವರು ಅರಿತುಕೊಂಡಿದ್ದಾರೆ. ನಾವು ತೋರಿಸಿದ ನಕ್ಷೆ ನೋಡಿದರು. ವಿಡಿಯೋ ವೀಕ್ಷಿಸಿದರು.

ಅವರು ಭಾರತದ ನೀರು, ನೀರಿನ ಸಮಸ್ಯೆ ಪರಿಹಾರ, ನೀರಿನ ಮಹತ್ವ, ತಾವು ಹಾಕಿಕೊಂಡ ಯೋಜನೆಗಳು ಅದಕ್ಕೆ ಸಂಬಂಧಿಸಿದ ವಿವರ ಎಲ್ಲವನ್ನು ನಮಗೆ ಹೇಳತೊಡಗಿದರು. ಅವರು ಒಂದು ಚೆಂದದ ಕಥೆಯೊಂದಿಗೆ ಮಾತು ಆರಂಭಿಸಿದರು. ರಾಜಸ್ಥಾನದ ಲಪ್ಪೇರಿಯಾ ಎಂಬ ಹಳ್ಳಿಯ ಲಕ್ಷ್ಮಣಸಿಂಗ್‌ ಎಂಬ ಯುವಕ 40 ವರ್ಷಗಳ ಹಿಂದೆ ಜಲಕ್ರಾಂತಿ ಮಾಡಿದ ಕಥೆ ಅದು. ಆ ಹಳ್ಳಿಯಲ್ಲಿ ಕುಡಿಯುವುದಕ್ಕೆ ಒಂದು ಹನಿ ನೀರು ಸಿಗುತ್ತಿರಲಿಲ್ಲ. ಜನರನ್ನು ಸಂಘಟಿಸಿ ಗ್ರಾಮದ 19 ಬಾವಿಗಳನ್ನು ಸ್ವಚ್ಛ ಮಾಡುವ ಕಾರ್ಯ ಆರಂಭಿಸಿದನು. ತಕ್ಷಣ ಕುಡಿಯುವುದಕ್ಕೆ ನೀರು ಸಿಗತೊಡಗಿತು. ಲಕ್ಷ್ಮಣಸಿಂಗ್‌ ಸಲಹೆ ಪ್ರಕಾರ ಗ್ರಾಮದ ಎಲ್ಲರೂ ಮಳೆ ನೀರು ಕೊಯ್ಲು ಮಾಡಲು ನಿರ್ಧರಿಸಿದರು.

ಶ್ರಮದಾನ ಮಾಡಿ ಆರು ಕೆರೆಗಳನ್ನು ಕಟ್ಟಲಾಯಿತು. ಗ್ರಾಮದಲ್ಲಿ ಹನಿ ನೀರಾವರಿ ಪದ್ಧತಿ ಜಾರಿಗೆ ತರುವ ವ್ಯವಸ್ಥೆ ಮಾಡಿದ. ಈ ಯುವಕನ ಸಾಹಸದಿಂದ ಲಪ್ಪೇರಿಯಾ ಗ್ರಾಮ ನೀರಿನ ವಿಷಯದಲ್ಲಿ ಬಹುದೊಡ್ಡ ಸಾಧನೆ ಮಾಡಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಊರಿನ ಹೆಸರು ಗಮನ ಸೆಳೆಯಿತು. ಇಸ್ರೇಲ್ ದೇಶದ ಪ್ರಮುಖರು ರಾಜಸ್ಥಾನದ ಲಪ್ಪೇರಿಯಾ ಗ್ರಾಮಕ್ಕೆ ಭೇಟಿ ನೀಡಿ ಲಕ್ಷ್ಮಣಸಿಂಗ್‌ ಅವರೊಂದಿಗೆ ಮಾತನಾಡಿ ಮಾಹಿತಿ ಸಂಗ್ರಹಿಸಿದರು. ಹೆಮ್ಮೆಯ ಸಂಗತಿಯೆಂದರೆ ಲಕ್ಷ್ಮಣಸಿಂಗ್‌ನಿಂದ ಪ್ರೇರಣೆ ಪಡೆದು ಇಸ್ರೇಲ್ ದೇಶ ನೀರು ನಿರ್ವಹಣೆಯಲ್ಲಿ ಈಗ ಜಗತ್ತಿಗೆ ಮಾದರಿಯಾಗಿ ನಿಂತಿದೆ. ‘ಭಾರತದ ಪ್ರತಿಯೊಂದು ಗ್ರಾಮಕ್ಕೆ ಒಬ್ಬ ಲಕ್ಷ್ಮಣಸಿಂಗ್‌ ಬೇಕಾಗಿದ್ದಾರೆ. ನೀವು ಬಾಗಲಕೋಟ ಯುವಕರು ನಿಮ್ಮ ನಿಮ್ಮ ಊರುಗಳಲ್ಲಿ ಲಕ್ಷ್ಮಣಸಿಂಗ್‌ ಆಗುತ್ತೀರಾ?’ ಎಂದು ಪ್ರಶ್ನಿಸಿ ನಕ್ಕರು.

ಅವರು ಮುಂದುವರೆದು ಹೇಳಿದರು- ‘ಭಾರತದಲ್ಲಿ ಒಂದು ಕಿಲೋ ಭತ್ತ ಬೆಳೆಯಲು 560 ಲೀಟರ್‌ ನೀರು ಬೇಕು. ಚೀನಾದಲ್ಲಿ ಕೇವಲ 350 ಲೀಟರ್‌ನಲ್ಲಿ ಒಂದು ಕಿಲೋ ಭತ್ತ ಬೆಳೆಯುತ್ತಾರೆ. ಭಾರತದಲ್ಲಿ ನೀರಿನ ಫ‌ಲ ಉತ್ಪಾದಕತೆ (productivity) ಜಗತ್ತಿನಲ್ಲಿಯೇ ತೀರ ಕಡಿಮೆ ಇರುವುದು ಅತ್ಯಂತ ನೋವಿನ ಸಂಗತಿ. ಕಳೆದ 2 ವರ್ಷಗಳಿಂದ ನೀರಿನ ನಿರ್ವಹಣೆ ಜಾಗೃತಿ ಕ್ರಮೇಣ ಮೂಡತೊಡಗಿದೆ. 2035ರ ವೇಳೆಗೆ ಭಾರತ ನೀರಿನ ಸಮಸ್ಯೆಯಿಂದ ಪೂರ್ಣ ಮುಕ್ತವಾಗಿ ಬೆಳೆಯಲು ಯೋಜನೆ ರೂಪಿಸಲಾಗಿದೆ.

ಈ ವರ್ಷದ ಬಜೆಟ್‌ನಲ್ಲಿ 10 ಸಾವಿರ ಕೋಟಿ ರೂ. ಭಾರತದ ಕುಡಿಯುವ ನೀರಿನ ಯೋಜನೆಗಾಗಿ ತೆಗೆದಿರಿಸಲಾಗಿದೆ. ಜಿಲ್ಲಾ ಅಧಿಕಾರಿಗಳಿಗೆ ನೀರು ನಿರ್ವಹಣೆ ಹೊಣೆ ವಹಿಸಲಾಗಿದೆ. ಅವರನ್ನು ನೇರವಾಗಿ ಜವಾಬ್ದಾರರನ್ನಾಗಿ ಮಾಡಲಾಗಿದೆ. ಕುಡಿಯುವ ನೀರಿಗೆ ಬೇಕಾಗುವ ಹಣವನ್ನು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಈ ಯೋಜನೆ ಕಾರ್ಯರೂಪಕ್ಕೆ ತರಲು 256 ಜಿಲ್ಲೆಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆಯಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯನ್ನು ಸೇರಿಸಲಾಗಿದೆ. ನೀವೆಲ್ಲರೂ ಇದಕ್ಕೆ ಸಹಯೋಗ ನೀಡಬೇಕು’ ಎಂದು ಅವರು ಹೇಳಿದರು.

ಜನರೇ ನೀರಿನ ಆಂದೋಲನ ಆರಂಭಿಸಬೇಕು
‘ಜನರ ಸಹಯೋಗ ಮತ್ತು ಸಹಭಾಗಿತ್ವದಿಂದ ಭಾರತದಲ್ಲಿ ಜಲಕ್ರಾಂತಿಯನ್ನು ಮಾಡಬಹುದು. ಪ್ರಧಾನಮಂತ್ರಿಗಳು ಈ ವಿಷಯವನ್ನು ತಮ್ಮ ಮನ್‌ಕಿ ಬಾತ್‌ನಲ್ಲಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕೆಲವು ಹಳ್ಳಿಗಳಲ್ಲಿ ಜನರು ಸಂಘಟಿತರಾಗಿ ತಮ್ಮ ಗ್ರಾಮದ ನೀರಿನ ಸಮಸ್ಯೆ ತಾವೇ ಬಗೆಹರಿಸಲು ಮಾರ್ಗೋಪಾಯ ರೂಪಿಸುತ್ತಿದ್ದಾರೆ. ಮಳೆನೀರು ಕೊಯ್ಲು, ಕೆರೆಗಳ ರಕ್ಷಣೆ, ಜಲಮೂಲಗಳ ರಕ್ಷಣೆ, ಹನಿ ನೀರಾವರಿಗೆ ಆದ್ಯತೆ ಕೊಡುತ್ತಿದ್ದಾರೆ. ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ರೈತರು ತಮ್ಮ ಹೊಲಗಳಲ್ಲಿ ಕೆರೆ ಕಟ್ಟಿಗಳನ್ನು ನಿರ್ಮಿಸುವ ವಿಷಯ ನನ್ನ ಗಮನಕ್ಕೆ ಬಂದಿದೆ. ಇದೊಂದು ಒಳ್ಳೆಯ ಬೆಳವಣಿಗೆ. ನೀವೆಲ್ಲರೂ ರೈತರಿಗೆ ಮಾರ್ಗದರ್ಶನ ನೀಡಬೇಕು, ಅವರಲ್ಲಿ ಹುರುಪು ತುಂಬಬೇಕು. ಸಣ್ಣ ಪುಟ್ಟ ತೊಂದರೆಗಳಿದ್ದರೆ ಪರಿಹರಿಸಬೇಕು’ ಎಂದು ಅವರು ಮಾರ್ಗದರ್ಶನ ಮಾಡಿದರು.

ಒಂದೇ ನ್ಯಾಯ ಮಂಡಳಿ
ದೇಶದ ಜಲವಿವಾದ ಇತ್ಯರ್ಥಕ್ಕೆ ಒಂದೇ ನ್ಯಾಯ ಮಂಡಳಿ ರಚಿಸುವ ಉದ್ದೇಶವಿರುವ ವಿಚಾರವನ್ನು ಗಜೇಂದ್ರಸಿಂಗ್‌ ವಿವರಿಸಿದರು. (ವಿಧೇಯಕ ದಿನಾಂಕ 31/07/2019 ರಂದು ಲೋಕಸಭೆಯಲ್ಲಿ ಅಂಗೀಕಾರವಾಗಿದೆ) ಸದ್ಯ ದೇಶದಲ್ಲಿ ಕಾವೇರಿ, ಮಹದಾಯಿ, ಕೃಷ್ಣಾ, ರಾವಿ, ಗೋದಾವರಿ, ಬಿಯಾಸ್‌, ನರ್ಮದಾ ಹೀಗೆ ಅಂತರ್‌ರಾಜ್ಯಗಳ ವಿವಾದ ಕುರಿತು 9 ನ್ಯಾಯಮಂಡಳಿಗಳಿವೆ. ಇನ್ನು ಮುಂದೆ ಇವುಗಳ ಬದಲಿಗೆ ದೇಶಾದ್ಯಂತ ಏಕರೂಪದ ಒಂದೇ ಟ್ರಿಬ್ಯೂನಲ್ ರಚಿಸಿ ಆ ಮೂಲಕ ವಿವಾದಗಳ ತ್ವರಿತ ಇತ್ಯರ್ಥ ನಡೆಸಲಾಗುವುದು. ಸುಮಾರು 33 ವರ್ಷಗಳಷ್ಟು ಹಳೆಯ ವಿವಾದಗಳಿವೆ. ಇವುಗಳನೆಲ್ಲ ಬೇಗನೆ ಪರಿಹರಿಸುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ ಎಂದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತನ್ನ ಯಶಸ್ವಿ-ಎರಡನೇ ಅವಧಿಯಲ್ಲಿ ಇದೇ ಮೊದಲು ಬಾರಿಗೆ ನೀರನ್ನು ಪೂಜ್ಯ ಮತ್ತು ಪರಿಪೂರ್ಣ ದೃಷ್ಟಿಯಿಂದ ನೋಡುವ ವಿಧಾನ ಜಾರಿಯಲ್ಲಿ ತಂದಿದೆ. ಮಳೆ ನೀರು ಕೊಯ್ಲು, ವ್ಯಕ್ತಿಗತವಾಗಿ ಅವಶ್ಯವಿರುವಷ್ಟೇ ನೀರಿನ ಬಳಕೆ, ಅಂತರ್‌ಜಲ ರಕ್ಷಣೆಗೆ ಕ್ರಮ, ಬಳಸಿದ ನೀರು ಶುದ್ಧೀಕರಿಸಿ ಪುನರ್‌ ಬಳಸುವುದು, ಕೃಷಿ ಕೈಗಾರಿಕೆಗಳಿಗೆ ತಾಂತ್ರಿಕ ವಿಧಾನದ ಮೂಲಕ ನೀರಿನ ಬಳಕೆ ಇವು ನೀರು ರಕ್ಷಣೆಯ ಪ್ರಮುಖ ಸ್ತಂಭಗಳಾಗಿವೆ. ಈ ಐದು ವಿಧಾನಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತಂದರೆ ದೇಶದಲ್ಲಿ ನೀರಿನ ವಿಷಯದಲ್ಲಿ ಬಹುದೊಡ್ಡ ಬದಲಾವಣೆ ಕಾಣಬಹುದು. ನಲ್ಲಿಯ ಮೂಲಕ ಪ್ರತಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆ ಕೇಂದ್ರ ಸರಕಾರ ರೂಪಿಸಿದೆ. ಇದು ನಮ್ಮ ಸರಕಾರದ ಬಹುದೊಡ್ಡ ಜನಪರ ಯೋಜನೆಯಾಗಿದೆ. ನೀವೆಲ್ಲ ದಕ್ಷತೆಯಿಂದ ಕೆಲಸ ಮಾಡಿದರೆ ಈ ಯೋಜನೆ ಯಶಸ್ವಿಯಾಗುತ್ತದೆ’ ಎಂದರು.

ಜನರ ಸಹಭಾಗಿತ್ವ, ಜನಾಂದೋಲನದಿಂದ ಮಾತ್ರ ಜಲ ಪೂರ್ಣತೆ ಸಾಧಿಸುವುದು ಸಾಧ್ಯವಾಗುತ್ತದೆ. ಜನಾಂದೋಲನ ದಿಂದ ಜಗತ್ತಿನ ಅನೇಕ ರಾಷ್ಟ್ರಗಳು ಪ್ರಗತಿ ಸಾಧಿಸಿವೆ. ನದಿ ಹಳ್ಳ ಕೆರೆಗಳ ಶುದ್ಧೀಕರಣದಲ್ಲಿ ಜನರ ಸಹಭಾಗಿತ್ವ ಬಹುದೊಡ್ಡ ಕೆಲಸ ಮಾಡುತ್ತದೆ. ಗಂಗಾ ನದಿಯ ಶುದ್ಧೀಕರಣದಲ್ಲಿ ಜನಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ.

ಹರಿಯಾಣ ಮಾದರಿ
‘ಹರಿಯಾಣದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್‌ ಅವರು ಅಲ್ಲಿಯ ರೈತರು ಭತ್ತ ಬೆಳೆಯುವುದಕ್ಕೆ ಹೆಚ್ಚು ನೀರು ಬಳಸುವುದನ್ನು ಗಮನಿಸಿದರು. ಭತ್ತಕ್ಕೆ ಗ್ಯಾರಂಟಿ ಮಾರುಕಟ್ಟೆಯಿದೆ. ಈ ಕಾರಣಕ್ಕೆ ಅಲ್ಲಿ ರೈತರು ಭತ್ತ ಬೆಳೆಯುತ್ತಿದ್ದಾರೆ. ಭತ್ತದ ಬದಲಾಗಿ ಪರ್ಯಾಯ ಬೆಳೆ ಬೆಳೆಯುವುದಕ್ಕಾಗಿ ಅವರು ಮಾರ್ಗ ಕಂಡು ಹಿಡಿದರು. ಗೋವಿನಜೋಳ ಬೆಳೆಯುವ ರೈತರಿಗೆ ಪ್ರತಿ ಎಕರೆಗೆ 2000 ರೂ ಸಹಾಯಧನ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದರು. ಒಂದೇ ಏಟಿಗೆ 18000 ಹೆಕ್ಟೆರಿನಲ್ಲಿ ಭತ್ತ ಬೆಳೆಯುವುದನ್ನು ನಿಲ್ಲಿಸಿ ರೈತರು ಗೋವಿನ ಜೋಳ ಬೆಳೆಯತೊಡಗಿದ್ದಾರೆ.

ಅದೇ ರೀತಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಕಬ್ಬು ಬೆಳೆಯುವುದಕ್ಕೆ ಕಡ್ಡಾಯವಾಗಿ ಡ್ರಿಪ್‌ ಇರಿಗೇಶನ್‌ ಮಾಡಬೇಕು ಎಂಬ ನಿಯಮ ಜಾರಿಗೆ ತಂದಿದ್ದಾರೆ. ಮಹಾರಾಷ್ಟ್ರದಲ್ಲಿ ಮಳೆನೀರು ಕೊಯ್ಲು ವಿಷಯದಲ್ಲಿ ಪ್ರಗತಿ ಸಾಧಿಸಿದ ಹಳ್ಳಿಗಳಿಗೆ 50 ಲಕ್ಷ ರೂ. ಅನುದಾನ ಕೊಡುವ ಯೋಜನೆಯನ್ನು ಸರಕಾರ ಜಾರಿಗೆ ತಂದಿದೆ. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಮಳೆ ನೀರು ಕೊಯ್ಲು ವಿಷಯದಲ್ಲಿ ನಾ ಮುಂದೆ ತಾ ಮುಂದೆ ಎಂಬ ಸ್ಪರ್ಧೆ ಏರ್ಪಟ್ಟಿದೆ. ಜನನಾಯಕರ ಒಳ್ಳೆಯ ಚಿಂತನೆಗಳು ಪವಾಡ ಸೃಷ್ಟಿ ಮಾಡಬಹುದು ಅಲ್ಲವೇ?’ ಎಂದು ಅವರು ನಗುತ್ತ ಪ್ರಶ್ನಿಸಿದರು. ಶೇಖಾವತ್‌ ಕೇಳಿದ ಈ ಪ್ರಶ್ನೆ ಮನಸ್ಸಿನಲ್ಲಿ ಗಟ್ಟಿಯಾಗಿ ನಿಂತುಬಿಟ್ಟಿದೆ.

ಸಂಗಮೇಶ ಆರ್‌. ನಿರಾಣಿ

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.