ನೀ ಬರಿಯೋ ಕವಿತೆಗಳ ಪ್ರತೀ ಸಾಲು ನನಗಿಷ್ಟ… ಕವಿಯೂ ಇಷ್ಟ !
Team Udayavani, Feb 14, 2021, 1:18 PM IST
ಹಸಿರ ಹುಲ್ಲು ಹಾಸಿನ ಮೇಲೆ ಮಲಗಿ ಮುಗಿಲ ಆಟವನು ನೋಡುತ್ತಿದ್ದವನಿಗೆ ಕೇಳಿದ್ದ ಆ ಗೆಜ್ಜೆ ಸದ್ದು ನಿನ್ನದೋ ಎಂಬ ಅನುಮಾನ, ಮೇಲೆದ್ದು ಸುತ್ತ ಹುಡುಕಿದವನಿಗೆ ಕಂಡಿದ್ದು ಭರಪೂರವಾಗಿ ತುಂಬಿದ್ದ ಹಸಿರು ಮಾತ್ರ… ಮನಸು ನಾಚಿ ಮುಗುಳ್ನಕ್ಕು ನನ್ನ ಕೈಯಿಂದಲೆ ತಲೆಗೊಂದು ಏಟು ಕೊಡಿಸಿದಾಗ ಎಚ್ಚೆತ್ತ ಹೃದಯ ಕೇಳಿದ್ದೊಂದೆ ಪ್ರಶ್ನೆ! ಕೇಳಿದ ಗೆಜ್ಜೆ ಸದ್ದು ನಿನ್ನದು ಅಂತ ಅನಿಸಿದ್ದೇಕೆ?
ಅದೇ, ಪ್ರೀತಿ…
ಬಿಳಿಯ ಕಾಗದದಲಿ ಬರೆದು ಮುಗಿಸಲಾಗದಷ್ಟು ಅರ್ಥಗಳು, ಸರಿದ ನಿಮಿಷಗಳು ಮರೆಯದೇ ಇರುವಷ್ಟು ನೆನಪುಗಳು, ಹೇಳಿ ಮುಗಿಸಲಾರದಷ್ಟು ಭಾವನೆಗಳು, ಮನಸೊಳಗೆ ಅಳಿಸಲಾರದಷ್ಟು ಒಲವ ರೇಖೆಗಳು.
ಹಳೇ ಕಥೆಗಳನು ನೆನಪಿನ ರುಮಾಲಿನಲ್ಲಿ ಬಿಗಿಯಾಗಿ ಕಟ್ಟಿ ಕುಂತರೂ ರುಮಾಲಿನ ತುದಿಯೆಳೆದು ಮತ್ತೆ ಹೊರಬಂದು ಮನಸಿನಲಿ ಕುಣಿಯುತ್ತಿರುತ್ತದೆ. ಅದೇನು ಬಚ್ಚಿಟ್ಟು ಕೂರುವಂಥ ನೆನಪುಗಳೇ?!
ಕಾಲೇಜಿನಲ್ಲಿ ಯಾವುದೋ ಆಲೋಚನೆಯಲಿ ಕುಳಿತಿದ್ದವನ ಆಲೋಚನೆಗಳ ಕದಡಿಸಿ ನೀ ಹೇಳಿದ ಆ ಮಾತುಗಳು ಈಗಲೂ ಕೇಳಿಸುತ್ತಿವೆ. ನಿನ್ನ ಬಾಯಿಯಿಂದ ಬಂದ ಆ ಹೊಗಳಿಕೆ ‘ ನೀ ಬರಿಯೋ ಕವಿತೆಗಳ ಪ್ರತೀ ಸಾಲು ನನಗಿಷ್ಟ.. ದಿನವೂ ಓದುತ್ತಲೇ ಇರುತ್ತೇನೆ.. ಕವಿತೆಯ ಜೊತೆಗೆ ಕವಿಯೂ ಇಷ್ಟವಾದ.. ಮತ್ತೇನೂ ಹೇಳಬೇಕಿಲ್ಲ ಅಲ್ವಾ?’ ಅಂತ ಒಂಟಿ ಹುಬ್ಬೇರಿಸಿ ನಡೆದದ್ದು ನಿನಗೆ ನೆನಪಿದೆಯೋ ಇಲ್ವೋ, ನನಗಂತೂ ಅದುವೇ ಮಧುರ ಕ್ಷಣ. ಅದೇಕೋ ಸಿನಿಮಾ ಶೈಲಿಯಲ್ಲೇ ತಂಗಾಳಿ ಬಂದು ನಿನ್ನ ಮುಂಗುರಳ ನಡುವೆ ಹಾದು, ಕಿವಿಯೋಲೆಗಳ ಹಿಡಿದು ತೂಗಾಡಿ ಸಾಗಿತ್ತು. ಅದರ ರಭಸಕೆ ಮುಚ್ಚಿಕೊಂಡ ಕಣ್ರೆಪ್ಪೆ ನಿನ್ನ ಕಣ್ಣುಗಳ ನಗುವನ್ನೊಮ್ಮೆ ಮರೆಯಾಗಿಸಿ ಮತ್ತೆ ತೆರೆದುಕೊಂಡಿತ್ತು. ಪಕ್ಕದಲಿ ಕುಳಿತಿದ್ದ ಗೆಳೆಯರ ಕೂಗಾಟವೇ ಕೇಳಿಸದೆ, ನಿನ್ನ ತುಂಟ ನಗುವೇ ಕಿವಿಯೊಳಗೆ ಇಳಿದಿತ್ತು.
ನಿನ್ನ ಹೆಸರೇ ನೆನಪಿರಲಿಲ್ಲ ಮೊದಲು. ನಿನ್ನ ಹೆಸರು ಬೇಕಾಗಿಯೂ ಇರಲಿಲ್ಲ. ನಿನ್ನ ಪ್ರೀತಿಗೆ, ಮಾತಾಡೋ ರೀತಿಗೆ, ನಗುವ ಕಂಗಳಿಗೆ ನಾನೇ ನೆನಪಾಗೋ ಹೆಸರಿಟ್ಟಾಗಿತ್ತು. ಮನಸು ಆ ಹೆಸರ ಕರೆಯುತ್ತಿತ್ತು ಬಿಟ್ಟರೆ ಹೊರಗೆ ಹೇಳಿದ್ದಿಲ್ಲ. ಭಾವನೆಗಳನ್ನು ನಿನ್ನಲ್ಲಿ ಹಂಚಿದಷ್ಟು ಇನ್ನೊಬ್ಬರಿಗೆ ತಿಳಿಸಿದ್ದಿಲ್ಲ.
ಬಹುಶಃ ನಮ್ಮ ಪ್ರೀತಿಗೆ ನಾವಿಬ್ಬರೂ ಆಡಿದ ಜಗಳಗಳೂ ಸಾಥ್ ಕೊಟ್ಟಿರಬೇಕು. ಅದ್ಯಾರೋ ಪ್ರೇಮಿಗಳು ಮೊದಲೇ ಹೇಳಿದ್ದಾರೆಲ್ಲವೇ, ಜಗಳವಾಡಿದ್ರೇನೆ ಪ್ರೀತಿ ಹೆಚ್ಚಾಗೋದಂತೆ; ಹಾಗೇನೆ. ಜಗಳದ ನಂತರ, ಮಾತು ನಿಂತಾದ ಮೇಲೆ, ಕ್ಷಣಗಳಿಗೊಮ್ಮೆ ಮನಸು ಭಾರವಾಗುತ್ತ ಹೋದಂತೆ ಅನಿಸಿದಾಗ ಕೇಳುವ ಆ ‘SORRY’ ಪದ ತನ್ನಲ್ಲೇ ಮುಗಿಯದಷ್ಟು ಪ್ರೀತಿ ತಂದಿರುತ್ತದೆ. ದೂರ ಹೋಗು ಅಂದಿದ್ದ ಹೃದಯ ಹತ್ತಿರ ಬಾ ಎಂದು ಕೂಗಿ ಕರೆಯುತ್ತದೆ.
ಭಾವನೆಗಳಿಗೆ ಬೇಕಾದ ಬಣ್ಣ ಹಚ್ಚಿ ನಮಗಿಬ್ಬರಿಗೆ ಮಾತ್ರ ಕಾಣುವಂತೆ ಚಿತ್ರಿಸಿ ದಿನವೂ ನೋಡಿ ಖುಷಿಪಡುತ್ತಿದ್ದಿದ್ದು ನೆನಪಿರಬಹುದು ನಿನಗೆ. ಹುಟ್ಟಿದ ಹಬ್ಬದ ದಿನ ನೀ ಹೇಳಿದ ಶುಭಾಶಯಗಳು, ನೀ ಕೊಡಿಸಿದ ನೀಲಿ ಬಣ್ಣದ ಲೇಖನಿಯಲ್ಲಿರೋ ನಿನ್ನ ಹಸ್ತಾಕ್ಷರ, ಸಂಜೆ ಕುಳಿತು ಕುಡಿದ ಕಾಫಿ, ಜೊತೆಗೆ ನಡೆದು ಸವೆಸಿದ ಹೆಜ್ಜೆಗಳು, ಹಾದಿಗಳು….ಪ್ರೀತಿಯ ಹಬ್ಬಗಳ ತುಂಬಿರೋ ಹೊಸ ಸಂವತ್ಸರ.
ಇನ್ನೇನಿದೆ ಹೇಳೋಕೆ?…
ಮನಸಿನ ಅಪ್ಸರೆಯೆ ಕನಸಲ್ಲೂ ಕನವರಿಸು
ನಾ ಬಂದು ಮುದ್ದಿಸುವೆ ಮನಸು ಹೇಳುವಷ್ಟು
ಹೃದಯದ ಅರಮನೆಯ ಬಾಗಿಲೊಳಗೆ ಕಾಲಿರಿಸು
ಕೈ ಹಿಡಿದು ಕರೆದೊಯ್ವೆ, ದಾರಿ ಮುಗಿಯದಷ್ಟು.
ನಿನ್ನ ಪ್ರೇಮಲೋಕದ ಕಥೆಗಾರ- ಮೃಗಾಂಕ (ಶ್ರೀಶ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ