ದುಬಾೖಯಿಂದ ಬಂದ ಪ್ರಯಾಣಿಕನಲ್ಲಿ ಜ್ವರ: ತಪಾಸಣೆ
ಮುಂಜಾಗ್ರತೆ ವಹಿಸಲು ಸೂಚನೆ
Team Udayavani, Mar 9, 2020, 6:15 AM IST
ಮಂಗಳೂರು: ದುಬಾೖಯಿಂದ ಮಂಗಳೂರಿಗೆ ರವಿವಾರ ವಿಮಾನದಲ್ಲಿ ಆಗಮಿಸಿದ ವ್ಯಕ್ತಿಯೋರ್ವರಿಗೆ ಜ್ವರ ಕಂಡು ಬಂದ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಅವರನ್ನು ತಪಾಸಣೆಗೆ ಒಳಪಡಿಸಿ ಅನಂತರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು.
ದುಬಾೖ ಸಹಿತ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ಕಂಡುಬಂದಿರುವ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣ ಕಾರ್ಯ ನಡೆಯುತ್ತಿದ್ದು, ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಹೆಚ್ಚಿನ ನಿಗಾ ವಹಿಸಿಕೊಳ್ಳಲಾಗುತ್ತಿದೆ.
ರವಿವಾರ ಸಂಜೆ ಬಂದ ಪ್ರಯಾಣಿಕನಲ್ಲಿ ಜ್ವರ ಇದ್ದ ಕಾರಣ ಅವರನ್ನು ಹೆಚ್ಚಿನ ತಪಾಸಣೆಗೆ ನಿರ್ಧರಿಸಲಾಯಿತು. ತೀವ್ರ ನಿಗಾ ಘಟಕದಲ್ಲಿಟ್ಟು ಸಮಗ್ರ ತಪಾಸಣೆಯ ಬಳಿಕ ಆತನಲ್ಲಿ ಯಾವುದೇ ಸೋಂಕು ಕಂಡುಬರದಿದ್ದರೆ ಬಿಡುಗಡೆ ಮಾಡಲಾಗುವುದು ಎಂದು ತಿಳಿದು ಬಂದಿದೆ.
ಈ ವ್ಯಕ್ತಿಯಲ್ಲಿ ಸಾಮಾನ್ಯ ಜ್ವರ ಇದ್ದಂತಿದೆ ಆದರೂ ವರದಿ ಬರುವವರೆಗೆ ಕಾಯಲಾಗುತ್ತದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ತಪಾಸಣೆ ಮುಂದುವರಿಕೆ
ಕೊರೊನಾ ವೈರಸ್ ಹರಡದಂತೆ ದ.ಕ. ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳು ಮುಂದು ವರಿದಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣಾ ಕಾರ್ಯ
ನಡೆಯುತ್ತಿದ್ದು, ವಿದೇಶಗಳಿಂದ ಆಗಮಿಸುವ ಮಂದಿಗೆ ಹೆಚ್ಚಿನ ನಿಗಾ ವಹಿಸಿಕೊಳ್ಳಲಾಗಿದೆ. ನಗರದ ವಿವಿಧ ಮೆಡಿಕಲ್ ಶಾಪ್ಗ್ಳಲ್ಲಿ ರವಿವಾರವೂ ಮಾಸ್ಕ್ ಗಳಿಗೆ ಬೇಡಿಕೆ ಕಂಡು ಬಂದಿದ್ದು, ಮಾಸ್ಕ್ ಅಲಭ್ಯತೆ ಉಂಟಾಗಿತ್ತು.