‘ಸಾಮಾಜಿಕ ಚಿಂತನೆ ಇದ್ದರೆ ಬದುಕು ಸಾರ್ಥಕ’
Team Udayavani, Mar 31, 2018, 10:03 AM IST
ಮಹಾನಗರ: ಮನುಷ್ಯನು ಸಮಾಜ ಜೀವಿಯಾಗಿದ್ದುಕೊಂಡು ತನ್ನ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಾಮಾಜಿಕ ಚಿಂತನೆಗಳನ್ನು ಬೆಳೆಸಿ ಸಮಾಜಮುಖಿ ಚಟುವಟಿಕೆ ನಡೆಸಿದಾಗ ಮಾತ್ರ ಆತನ ಬದುಕು ಸಾರ್ಥಕತೆಯನ್ನು ಕಾಣುತ್ತದೆ ಎಂದು ರಾಮಕೃಷ್ಣ ಮಠದ ಸ್ವಾಮಿ ಏಕಗಮ್ಯನಂದಾಜೀ ಹೇಳಿದರು.
ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಆಶ್ರಯದಲ್ಲಿ ನಗರದ ವಿವಿಧ ಭಾಗದ ಹಂಪ್ ಗಳಿಗೆ ಬಣ್ಣ ಬಳಿಯುವ ಕಾರ್ಯ ಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ರಾಷ್ಟ್ರೀಯತೆ ಶ್ರಮಿಸುವ ಸಂಘಟನೆಗಳು ಹೆಚ್ಚಾಗಿ ಬೆಳೆದರೆ ಮಾತ್ರ ರಾಷ್ಟ್ರದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವಂತಾದೀತು. ಈ ನಿಟ್ಟಿನಲ್ಲಿ ಕ್ರೈಸ್ತರ ವೇದಿಕೆ ಮಾಡುತ್ತಿರುವ ಕಾರ್ಯ ಎಲ್ಲರಿಗೂ ಮಾದರಿ ಎಂದರು.
ನೋಟರಿ ಲ್ಯಾನಿ ಮರಿಝ ಪಿಂಟೋ ಮಾತನಾಡಿದರು. ಉದ್ಯಮಿಗಳಾದ ಫ್ರಾನ್ಸಿಸ್ ಪಿಂಟೋ ಬಿಜೈ, ಬೆನೆಟ್ ಮಿನೇಜಸ್ ಬಿಜೈ, ಧರ್ಮಪ್ರಾಂತ್ಯದ ಮಹಿಳಾ ಅಧ್ಯಕ್ಷೆ ಟೆರ್ರಿ ಪಾಯ್ಸ, ಉದ್ಯಮಿ ಜೋಯ್ಸ ವಾಸ್, ಕೆಥೋಲಿಕ್ ಸಭಾದ ಬಿಜೈ ಘಟಕದ ಮಾಜಿ ಅಧ್ಯಕ್ಷ ರಿಚರ್ಡ್, ಜೋಯ್ಸ ಬಿಜೈ, ಜೆನ್ನಿಫರ್ ಮಿನೇಜಸ್ ಬಿಜೈ, ಓಸ್ವಾಲ್ಡ್ ಡಿ’ಕುನ್ಹಾ , ಜೋಸ್ಸಿ ರೇಗೊ ಬೆಂದೂರು, ಬಯೋಕಾನ್ ಸಂಸ್ಥೆಯ ರೊನಾಲ್ಡ್, ಆಲ್ವಿನ್ ಪಾಯ್ಸ, ಜೆರೊಮ್ ಉರ್ವಾ, ಜೋಸ್ಸಿ ಪಾಯ್, ಜೋಸೆಫ್ ಸಲ್ದಾನ ಉಪಸ್ಥಿತರಿದ್ದರು. ವೇದಿಕೆಯ ಸ್ಥಾಪಕ ಫ್ರಾಂಕ್ಲಿನ್ ಮೊಂತೇರೊ ಸ್ವಾಗತಿಸಿ, ಲೀಡಿಯಾ ಡಿ ಕುನ್ಹಾ ಉರ್ವ ವಂದಿಸಿದರು. ಬಿಜೈ ಹಾಗೂ ಕಾಪಿಕಾಡ್ ರಸ್ತೆಯ ಒಂಬತ್ತು ರಸ್ತೆ ವೇಗ ತಡೆ ಉಬ್ಬುಗಳಿಗೆ ಬಿಳಿ ಬಣ್ಣ ಬಳಿಯಲಾಯಿತು.