ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕಾನೂನು ಸಮರ
Team Udayavani, Sep 11, 2019, 5:39 AM IST
ಮಹಾನಗರ: ಲೋಕಾಯುಕ್ತ ಕಾಯ್ದೆಯ ಪ್ರಕಾರ ಆಸ್ತಿ ಘೋಷಣೆ ಪತ್ರವನ್ನು ಈ ಹಿಂದೆ ಸಲ್ಲಿಸದ ಮಹಾ ನಗರ ಪಾಲಿಕೆಯ ಮಾಜಿ ಸದಸ್ಯರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿ ಸಿದರೆ, ಕಾನೂನು ತೊಡಕು ಎದುರಾಗುವ ಸಾಧ್ಯತೆಯಿದೆ.
ಆಸ್ತಿ ವಿವರ ಸಲ್ಲಿಸದ ಮಹಾನಗರ ಪಾಲಿಕೆ ಮಾಜಿ ಸದಸ್ಯರು ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅಂಥವರ ವಿರುದ್ಧ ಕಾನೂನು ಹೋರಾಟಕ್ಕೆ ಸಾಮಾಜಿಕ ಹೋರಾಟಗಾರರು ನಿರ್ಧರಿಸಿದ್ದಾರೆ. ಶಾಸಕರಿಂದ ಹಿಡಿದು ಪಾಲಿಕೆ ಸದಸ್ಯರವರೆಗೆ ಪ್ರತಿ ಜನ ಪ್ರತಿನಿಧಿಯೂ ಪ್ರತಿವರ್ಷ ಲೋಕಾಯುಕ್ತ ಕಾಯ್ದೆ ಪ್ರಕಾರ, ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯ.
ಹೀಗಾಗಿ, ಲೋಕಾಯುಕ್ತ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಐದು ವರ್ಷದಲ್ಲಿ ಆಸ್ತಿ ವಿವರ ಸಲ್ಲಿಸದ ಮಾಜಿ ಸದಸ್ಯರ ಮೇಲೆ ಚುನಾವಣೆ ಆಯೋಗ, ಲೋಕಾಯುಕ್ತಕ್ಕೆ ದೂರು ನೀಡಲು ಕೆಲವು ಸಾಮಾಜಿಕ ಕಾರ್ಯಕರ್ತರು ಮುಂದಾಗಿದ್ದಾರೆ. ಜತೆಗೆ, ಮುಂದಿನ ಮನಪಾ ಚುನಾವಣೆಗೆ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳು ಕೂಡ ತಮ್ಮ ಆಸ್ತಿ ವಿವರವನ್ನು ನಿಗದಿತ ಸಮಯದಲ್ಲಿಯೂ ಚುನಾವಣೆ ಆಯೋಗಕ್ಕೆ ಸಲ್ಲಿಸಬೇಕು.
ಮೂರು ವಾರದ ಗಡುವು; ಅವಕಾಶ
ಲೋಕಾಯುಕ್ತ ಕಾಯ್ದೆಗೆ 2010ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ತಿದ್ದುಪಡಿ ಪ್ರಕಾರ ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ನಗರ ಪಾಲಿಕೆ, ಪುರಸಭೆಗೆ ಚುನಾಯಿತರಾಗುವ ಸದಸ್ಯರು ತಮ್ಮ ಆಸ್ತಿ ಘೋಷಣೆ ಪತ್ರವನ್ನು ಲೋಕಾಯುಕ್ತರ ಮುಂದೆ ಮಂಡಿಸಬೇಕಾಗಿತ್ತು. ಆದರೆ, 9 ವರ್ಷಗಳಿಂದ ಇದು ನಡೆದಿಲ್ಲ. ಈ ಸಂಬಂಧ ಬೆಂಗಳೂರಿನ ಸಾಮಾಜಿಕ ಹೋರಾಟಗಾರ ಎಚ್.ಎಂ. ವೆಂಕಟೇಶ್ ಅವರು ಲೋಕಾಯುಕ್ತಕ್ಕೆ ಇತ್ತೀಚೆಗೆ ಮನವಿ ಸಲ್ಲಿಸಿದ ಕಾರಣ ವಿಚಾರಣೆ ನಡೆಸಿದ ಲೋಕಾಯುಕ್ತರು, ಎಲ್ಲ ಚುನಾಯಿತ ಸದಸ್ಯರು ತಮ್ಮ ಆಸ್ತಿ ಘೋಷಣೆ ಮಾಡುವಂತೆ ಆ. 28ರಿಂದ ಮೂರು ವಾರಗಳ ಗಡುವು ನೀಡಿದ್ದಾರೆ.
ಈ ಸಂಬಂಧ ಸಾಮಾಜಿಕ ಕಾರ್ಯಕರ್ತರನ್ನು ಒಳಗೊಂಡ ನಿಯೋಗವು ಮಂಗಳೂರು ಪಾಲಿಕೆಗೆ ಸೋಮವಾರ ಭೇಟಿ ನೀಡಿ ಮನಪಾ ಉಪಆಯುಕ್ತೆ ಗಾಯತ್ರಿ ನಾಯಕ್ ಅವರನ್ನು ಭೇಟಿ ಯಾಗಿ ಲೋಕಾಯುಕ್ತ ಆದೇಶ ಪ್ರತಿಯನ್ನು ನೀಡಿದ್ದಾರೆ. ಈಗಾಗಲೇ ಅವಧಿ ಮುಗಿದಿರುವ 60 ಸದಸ್ಯರ ಗಮನಕ್ಕೂ ಈ ಆದೇಶವನ್ನು ಪಾಲಿ ಸು ವಂತೆ ಪತ್ರ ಬರೆಯುವ ಬಗ್ಗೆ ಮನವಿ ಮಾಡಿದ್ದಾರೆ.
ಒಂದು ವೇಳೆ ಪಾಲಿಸದಿದ್ದರೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇರುವ ಮಾಜಿ ಮನಪಾ ಸದಸ್ಯರ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಉಲ್ಲೇಖೀಸಲಾಗಿದೆ.