ಹವ್ಯಾಸಿಯಾಗಿ ಜೇನುಕೃಷಿ ಕೈಗೊಂಡಾದರೂ ಉಳಿವಿಗೆ ಪ್ರಯತ್ನಿಸಿ
Team Udayavani, Nov 10, 2017, 2:49 PM IST
ಸುಳ್ಯ: ಇಂದು ವೈಜ್ಞಾನಿಕ ಕೃಷಿ ಹೆಚ್ಚಳವಾದ್ದರಿಂದ ಜೇನುಕೃಷಿಗೆ ಸ್ವಲ್ಪ ತೊಡಕಾಗಿದೆ. ಮುಂದಿನ ದಶಕಗಳಲ್ಲಿ ಅಳಿವಿನ ಅಂಚಿಗೆ ಹೋಗುವ ಆತಂಕವಿರುವುದರಿಂದ ಆಸಕ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಜೇನುಕೃಷಿಗೆ ತೊಡಗಿಕೊಳ್ಳುವ ಮೂಲಕ ಉಳಿವಿಗೆ ಪ್ರಯತ್ನಿಸಬೇಕು ಎಂದು ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅಭಿಪ್ರಾಯಪಟ್ಟರು.
ತೋಟಗಾರಿಕೆ ಇಲಾಖೆ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಗುರುವಾರ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರಗಿದ 7 ದಿನಗಳ ವೈಜ್ಞಾನಿಕ ಜೇನುಗಾರಿಕೆ ಕೃಷಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಆರ್ಥಿಕವಾಗಿ ಮುಂದುವರಿಯಲು ಅಸಾಧ್ಯವಾದರೂ ಹವ್ಯಾಸಿಯಾಗಿಯಾದರೂ ಹೆಚ್ಚು ಮಂದಿ ಜೇನುಕೃಷಿಯಲ್ಲಿ ತೊಡಗಬೇಕು ಎಂದರು.
ಜೇನುಕೃಷಿ ಅತೀ ಸೂಕ್ಷ್ಮ
ಪ್ರಗತಿಪರ ಕೃಷಿ ಜಯರಾಮ ಭಟ್ ಮಾತನಾಡಿ, ಒಂದು ಕುಟುಂಬದವರು ಕನಿಷ್ಠ 5ರಿಂದ 10 ಜೇನು ಪೆಟ್ಟಿಗೆಗಳನ್ನಿಟ್ಟು ಕೃಷಿಯಲ್ಲಿ ತೊಡಗಬಹುದು. ಜೇನು ಕೃಷಿಯಿಂದ ನಮ್ಮಲ್ಲಿ ಶಿಸ್ತು, ಪರಿಪಾಲನೆ, ರಕ್ಷಣೆ, ವೈಯಕ್ತಿಕ ಸ್ವಚ್ಛತೆ ಎಲ್ಲವೂ ರೂಢಿಗತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷ ಚನಿಯಕಲ್ತಡ್ಕ, ಪ್ರತಿಯೊಬ್ಬರು ಜೇನು ಕೃಷಿಯಲ್ಲಿ ತೊಡಗುವ ಮೂಲಕ ಉಳಿವೆಗೆ ಪ್ರಯತ್ನಿಸಬೇಕು ಎಂದರು.
ರಾಧಾಕೃಷ್ಣ ಬೆಟ್ಟಂಪಾಡಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಕೈಗಾರಿಕಾ ವಿಸ್ತರಣಾಧಿಕಾರಿ ವೀರಪ್ಪ ಗೌಡ ಸ್ವಾಗತಿಸಿ, ವಂದಿಸಿದರು. ತೋಟಗಾರಿಕಾ ಇಲಾಖೆಯ ಧರ್ಮಪಾಲ ನಿರೂಪಿಸಿದರು.
12 ಮಂದಿ ಮಹಿಳೆಯರ ಸಹಿತ ಒಟ್ಟು 50 ಮಂದಿ ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಪ್ರತೀದಿನ ಬೆಳಗ್ಗೆ 10.30ರಿಂದ ಸಂಜೆ 5ರ ವರೆಗೆ ಜೇನುಕೃಷಿ ಬಗ್ಗೆ ತರಬೇತಿ ನಡೆಯಲಿದೆ.