ಉಳ್ಳಾಲ: ಪ್ರಬಲ ಪೈಪೋಟಿ ನಿರೀಕ್ಷೆ
Team Udayavani, Aug 30, 2018, 10:36 AM IST
ಉಳ್ಳಾಲ: ಚುನಾವಣೆಗೆ ಇನ್ನೂ ಒಂದು ದಿನ ಬಾಕಿ ಉಳಿದಿರುವಂತೆ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಕೊನೆಯ ಹಂತದ ಪ್ರಚಾರ ಕಾರ್ಯ ಬುಧವಾರವೂ ಮುಂದುವರಿದಿದ್ದು ಪಕ್ಷಗಳ ಅಭ್ಯರ್ಥಿ ಪರ ಕಾರ್ಯಕರ್ತರು, ಮುಖಂಡರು ಮತದಾರರ ಓಲೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 31 ವಾರ್ಡ್ಗಳ ಪೈಕಿ 6 ವಾರ್ಡ್ ಗಳಲ್ಲಿ ನೇರ ಸ್ಪರ್ಧೆಯಿದ್ದರೆ, 25 ವಾರ್ಡ್ಗಳಲ್ಲಿ ತ್ರಿಕೋನ ಸ್ಪರ್ಧೆಯಿದೆ. ಈ ಬಾರಿ ಎಸ್ಡಿಪಿಐ ಮತ್ತು ಜೆಡಿಎಸ್ ಸಕ್ರಿಯವಾಗಿ ಚುನಾವಣೆಯಲ್ಲಿ ತೊಡಗಿಸಿಕೊಂಡಿರುವುದು ಕಾಂಗ್ರೆಸ್ಗೆ ತಲೆನೋವಾಗಿದೆ.
ಉಳ್ಳಾಲ ನಗರಸಭೆಯ 1ನೇ ವಾರ್ಡ್ ಕೋಟೆಪುರದಲ್ಲಿ ಕಾಂಗ್ರೆಸ್ಗೆ ಎಸ್ಡಿಪಿಐ ನೇರ ಸ್ಪರ್ಧೆಯಿದ್ದರೆ, 5ನೇ ಉಳಿಯ ಹೊಗೆ ಮತ್ತು 6ನೇ ಕಕ್ಕೆತೋಟ ವಾರ್ಡ್ನಲ್ಲಿ ಕಾಂಗ್ರೆಸ್ಗೆ ಪಕ್ಷೇತರ ನೇರ ಸ್ಪರ್ಧೆಯಿದೆ. 15ನೇ ಕಲ್ಲಾಪು ಅಂಬತ್ತಡಿಯಲ್ಲಿ ಜೆಡಿಎಸ್ ನೊಂದಿಗೆ ನೇರ ಸ್ಪರ್ಧೆಯಿದ್ದರೆ, 8ನೇ ಮೊಗವೀರಪಟ್ಣ ವಾರ್ಡ್ ಮತ್ತು 20ನೇ ಶಿವಾಜಿನಗರ ವಾರ್ಡ್ನಲ್ಲಿ ಕಾಂಗ್ರೆಸ್ಗೆ ಬಿಜೆಪಿ ನೇರಸ್ಪರ್ಧೆಯಿದೆ.
ಕಾಂಗ್ರೆಸ್ ಭದ್ರಕೋಟೆಯಾಗಿರುವ 2ನೇ ಉಳ್ಳಾಲ ಕೋಡಿ, 3ನೇ ಸೇನೆರೆಬೈಲು ವಾರ್ಡ್ನಲ್ಲಿ ತ್ರಿಕೋನ ಸ್ಪರ್ಧೆಯಿದೆ. ಇಲ್ಲಿ ಜೆಡಿಎಸ್ ಮತ್ತು ಎಸ್ಡಿಪಿಐ ಪಡೆಯುವ ಮತಗಳು ಕಾಂಗ್ರೆಸ್ ಸೋಲು -ಗೆಲುವಿಗೆ ನಿರ್ಣಾಯಕವಾಗಲಿದೆ. 3ನೇ ಸೇನೆರೆಬೈಲು ಮತ್ತು 28ನೇ ಒಂಭತ್ತುಕೆರೆ ವಾರ್ಡ್ನಲ್ಲಿ ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿಗಳು ಪಡೆಯುವ ಮತಗಳು ನಿರ್ಣಾಯಕವಾಗಲಿವೆ.
4ನೇ ವಾರ್ಡ್ ಸೇನೆರೆ ಬೈಲು 2, 7ನೇ ಉಳ್ಳಾಲ ಪೇಟೆ, 9ನೇ ಛೋಟಾ ಮಂಗಳೂರು, 22ನೇ ಭಟ್ನಗರ, 23ನೇ ಕೃಷ್ಣ ನಗರ, 24ನೇ ಅಬ್ಬಕ್ಕನಗರ 1, 29ನೇ ಧರ್ಮನಗರ, 30ನೇ ಉಳ್ಳಾಲಬೈಲ್ 31ನೇ ಕಾಪಿಕಾಡ್ ವಾರ್ಡ್ಗಳಲ್ಲಿ ಕೆಲವೆಡೆ ಬಿಜೆಪಿ ಮತ್ತು ಕಾಂಗ್ರೆಸ್ಗೆ ಜೆಡಿಎಸ್ ಪೈಪೋಟಿ ನೀಡಿದರೆ ಕೆಲವೆಡೆ ಸಿಪಿಐಎಂ ಮತ್ತು ಎಸ್ಡಿಪಿಐ ಸ್ಪರ್ಧೆ ನೀಡಲಿದ್ದು, ಉಳ್ಳಾಲ ಪೇಟೆಯಲ್ಲಿ ಸಿಪಿಐಎಂ ಬೆಂಬಲಿತ ಅಭ್ಯರ್ಥಿ ಸ್ಪರ್ಧೆ ನೀಡಲಿದ್ದಾರೆ.
ತ್ರಿಕೋನ ಸ್ಪರ್ಧೆ
ತ್ರಿಕೋನ ಸ್ಪರ್ಧೆಯಿರುವ 12ನೇ ಹಳೆಕೋಟೆ ವಾರ್ಡ್ನಲ್ಲಿ ಎಸ್ಡಿಪಿಐ, 13ನೇ ಅಳೇಕಲ, 14ನೇ ಮಂಚಿಲ, 18ನೇ ಪಟ್ಲಗಂಡಿ ವಾರ್ಡ್ನಲ್ಲಿ ಜೆಡಿಎಸ್ ಪ್ರಬಲ ಸ್ಪರ್ಧೆ ನೀಡಲಿದೆ. ಮುಕ್ಕಚ್ಚೇರಿ ವಾರ್ಡ್ನಲ್ಲಿ ಕಾಂಗ್ರೆಸ್ಗೆ ಎಸ್ಡಿಪಿಐ ಪ್ರತಿ ಸ್ಪರ್ಧೆ ನೀಡಿದರೆ, ಮುಕ್ಕಚ್ಚೇರಿ 2ರಲ್ಲಿ ಕಾಂಗ್ರೆಸ್ಗೆ ಎಸ್ಡಿಪಿಐಯೊಂದಿಗೆ ಜೆಡಿಎಸ್ ಸ್ಪರ್ಧೆ ನೀಡುತ್ತಿದೆ. ಉಳಿದ ಕೆಲವು ವಾರ್ಡ್ಗಳಲ್ಲಿ ಕಾಂಗ್ರೆಸ್ಗೆ ಎಸ್ ಡಿಪಿಐ, ಜೆಡಿಎಸ್, ಸಿಪಿಐಎಂ ಮತ್ತು ಬಿಜೆಪಿ ಸಮಾನವಾಗಿ ಸ್ಪರ್ಧೆ ನೀಡುತ್ತಿದೆ.
ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಸೇನೆರೆಬೈಲು, ಮುಕ್ಕಚ್ಚೇರಿ, ಅಬ್ಬಕ್ಕನಗರ, ಪಟ್ಲಗಂಡಿ ವಾರ್ಡ್ ಗಳು ಪುನರ್ ವಿಂಗಡನೆಯಾಗಿ ನಾಲ್ಕು ವಾರ್ಡ್ಗಳು ಹೆಚ್ಚುವರಿಯಾಗಿದ್ದು, ಈ ಬಾರಿ ಕಾಂಗ್ರೆಸ್ ಪುರಸಭೆಯ ಸಂದರ್ಭದಲ್ಲಿದ್ದ 17 ಸ್ಥಾನಗಳನ್ನು ಉಳಿಸಿಕೊಂಡು ಹೆಚ್ಚುವರಿ ಹೊಸ ನಾಲ್ಕು ವಾರ್ಡ್ಗಳನ್ನು ತೆಕ್ಕೆಗೆ ತೆಗೆದುಕೊಳ್ಳುತ್ತಾ ಎನ್ನುವುದು ಮತದಾರರು ನಿರ್ಧರಿಸಲಿದ್ದು, ಈ ಬಾರಿ ಕಾಂಗ್ರೆಸ್ಗೆ ಎಸ್ಡಿಪಿಐ, ಜೆಡಿಎಸ್, ಬಿಜೆಪಿ ಕಠಿನ ಸ್ಪರ್ಧೆ ನೀಡಲಿದೆಯಾ ಎನ್ನುವುದು ಆ. 31ರಂದು ಮತದಾರರು ನಿರ್ಧರಿಸಲಿದ್ದಾರೆ.