ಡಿಸಿ ನೇತೃತ್ವದಲ್ಲಿ ಪರಿಣಾಮಕಾರಿ ಕೆಲಸ: ಸಚಿವ ಶೆಟ್ಟರ
Team Udayavani, Apr 18, 2020, 12:59 PM IST
ಧಾರವಾಡ: ಕೋವಿಡ್ 19 ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ನೇತೃತ್ವದಲ್ಲಿ ಎಲ್ಲ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈವರೆಗೆ 682 ಮಾದರಿ ಸಂಗ್ರಹಿಸಲಾಗಿದೆ. ಅದರಲ್ಲಿ 632 ನೆಗೆಟಿವ್, 6 ವರದಿಗಳು ಪಾಸಿಟಿವ್ ಬಂದಿದ್ದರೆ ಇನ್ನೂ 44 ಮಾದರಿ ವರದಿ ಬರಬೇಕಿದೆ. ಬೆಳಗಾವಿ ಜಿಲ್ಲೆಯಲ್ಲಿ ಗುರುವಾರದವರೆಗೆ 36 ಪ್ರಕರಣಗಳು ದಾಖಲಾಗಿದ್ದು, ಕುಡಚಿ, ಬಾಗೇವಾಡಿ ಭಾಗದಲ್ಲೇ ಹೆಚ್ಚಿನ ಪ್ರಕರಣಗಳು ದಾಖಲಾಗಿದೆ. ಈ ಗ್ರಾಮಗಳ ಜನರನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ಆಶಾ ಕಾರ್ಯಕರ್ತೆಯರು ಪ್ರತಿ ಮನೆಗಳ ಸರ್ವೇ ನಡೆಸುತ್ತಿದ್ದಾರೆ. ಎಲ್ಲೆಡೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಡಿಸಿ-ಎಸ್ಪಿ ಜತೆ ಸಂಪರ್ಕದಲ್ಲಿದ್ದು, ಅಗತ್ಯ ಸೂಚನೆ ನೀಡಲಾಗಿದೆ ಎಂದರು.
ದೆಹಲಿ ಜಮಾತ್ನಿಂದ ಬಂದವರಿಂದಲೇ ಬಹಳಷ್ಟು ಪ್ರಕರಣಗಳು ಕಂಡು ಬಂದಿವೆ. ಯಾವುದೇ ಧರ್ಮ, ಜಾತಿಗೆ ಈ ವೈರಸ್ ಸೀಮಿತವಾಗಿಲ್ಲ. ದೆಹಲಿಯಿಂದ ಬಂದವರು ಕದ್ದು ಮುಚ್ಚಿ ಕುಳಿತುಕೊಳ್ಳದೆ, ಪ್ರಾಮಾಣಿಕವಾಗಿ ಮಾಹಿತಿ ನೀಡಬೇಕು. ಮಾಹಿತಿ ಕೇಳಲು ಸಹಕಾರ ನೀಡಬೇಕು. ತೊಂದರೆ ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸ್ವಯಂ ಪ್ರೇರಿತವಾಗಿ ಬಂದರೆ ಯಾವುದೇ ಸಮಸ್ಯೆ ಉದ್ಭವಿಸಲ್ಲ. ಇದರಿಂದ ತಮ್ಮ ಕುಟುಂಬ ಮಾತ್ರವಲ್ಲ ಇಡೀ ರಾಜ್ಯ-ದೇಶದ ಜನರಿಗೆ ಅನುಕೂಲವಾಗಲಿದೆ. – ಜಗದೀಶ ಶೆಟ್ಟರ, ಜಿಲ್ಲಾ ಉಸ್ತುವಾರಿ ಸಚಿವ