ಎಪಿಎಂಸಿಯಲ್ಲಿ ಐಸೋಲೇಷನ್ ಸೆಂಟರ್
ಲಾರಿ ಚಾಲಕರು, ವರ್ತಕರ ಆರೋಗ್ಯ ಕಾಪಾಡಲು ಕ್ರಮ: ತಹಶೀಲ್ದಾರ್
Team Udayavani, Apr 28, 2020, 5:54 PM IST
ಸಾಂದರ್ಭಿಕ ಚಿತ್ರ
ಹೊಳೆನರಸೀಪುರ: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಕೃಷಿ ಮಾರುಕಟ್ಟೆಗೆ ಆಗಮಿಸುವ ಲಾರಿ ಚಾಲಕರು ಮತ್ತು ವರ್ತಕರ ಆರೋಗ್ಯ ಕಾಪಾಡುವ ಸಲುವಾಗಿ ಪ್ರತಿ ತಾಲೂಕಿನ ಕೃಷಿ ಮಾರುಕಟ್ಟೆಯಲ್ಲಿ ಐಸೋಲೇಷನ್ ಸೆಂಟರ್ ಆರಂಭಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ ಎಂದು ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್ ಅವರು ತಿಳಿಸಿದರು.
ತಾಲೂಕು ಕಚೇರಿಯಲ್ಲಿನ ನಡೆದ ಜಿಲ್ಲಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ನಿರ್ದೇಶನದಂತೆ ವಾರಕ್ಕೆ 3 ದಿನ ಅಗತ್ಯವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದರು. ಹೊರರಾಜ್ಯಗಳಿಂದ ಚಾಲಕರು ಮತ್ತು ವರ್ತಕರು ಬಂದಲ್ಲಿ ಅಂತಹವರಿಗೆ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯದಲ್ಲಿ ತೊಂದರೆ ಇಲ್ಲವೆಂದು ದೃಢಪಟ್ಟಲ್ಲಿ ಅಂತಹವರನ್ನು ಒಂದೆರಡು ದಿನಗಳಲ್ಲಿ ಅವರ ಮನೆಗಳಿಗೆ ಕಳುಹಿಸಿಕೊಡಲಾವುದೆಂದರು. ಚುನಾವಣಾ ಬಿಎಲ್ಒಗಳಿಂದ ಎಚ್ಐವಿ., ಕ್ಷಯ ರೋಗದಿಂದ ಬಳಳಲುತ್ತಿರುವ ಮತ್ತು ಅರವತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಾದವರ ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದೆ ಎಂದರು. ತಾಲೂಕಿಗೆ ಅಕ್ಕ ಪಕ್ಕದ ತಾಲೂಕುಗಳಿಂದ ಸಂಪರ್ಕ ಕಲ್ಪಿಸುವ ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದ್ದು, ಹೊರ ಜಿಲ್ಲೆಗಳಿಂದ ಜನರು ಅಕ್ರಮವಾಗಿ ಪ್ರವೇಶಿಸದಂತೆ ನಿಗಾ ವಹಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್, ಇಒ ಕೆ.ಯೋಗೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ಲಿಂಗು, ಕಾರ್ಮಿಕ ಅಧಿಕಾರಿ ಮಂಗಳಗೌರಿ, ಪಶುವೈದ್ಯ ತಿಪ್ಪೇಸ್ವಾಮಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.