ಕೊರೊನಾ ವೈರಸ್ ತಡೆಗಟ್ಟಲು ಸರ್ಕಾರದೊಂದಿಗೆ ಕಾರ್ಯನಿರ್ವಹಿಸಲು ಇಎಸ್ಐ ಸಿದ್ಧ
Team Udayavani, Mar 13, 2020, 4:58 PM IST
ಕಲಬುರಗಿ: ಸಾಮಾಜಿಕ ಸುರಕ್ಷತಾ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ ಇಎಸ್ಐಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಕೊರೊನಾ ಸೊಂಕು ತಡೆಗಟ್ಟಲು ಸವಾಲಾಗಿ ಸ್ವೀಕರಿಸಿ ಕಾರ್ಯನಿರ್ವಹಿಸಲು ಸಿದ್ಧ ಎಂದು ದೆಹಲಿಯ ಇಎಸ್ಐ ಕಾರ್ಪೊರೇಷನ್ ಸದಸ್ಯ ಶಿವಪ್ರಸಾದ ತಿವಾರಿ ಹೇಳಿದರು.
ನಗರದ ಇಎಸ್ಐ ಆಸ್ಪತ್ರೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕಲಬುರಗಿ ಇಎಸ್ಐ ಮೆಡಿಕಲ್ ಕಾಲೇಜಿನಲ್ಲಿ 200 ಕ್ವಾರಂಟೈನ್ ವಾರ್ಡ್, 16 ಐಸೋಲೇಷನ್ ವಾರ್ಡ್ (2 ವೆಂಟಿಲೇಟರ್ ) ದೊಂದಿಗೆ ಚಿಕಿತ್ಸೆಗೆ ಸಿದ್ಧಗೊಂಡಿದೆ. ಇನ್ನು 200 ಕ್ವಾರಂಟೈನ್ ಕೋಣೆಗಳು ನಾಳೆ ಬೆಳಿಗ್ಗೆ ಸಿದ್ಧವಾಗಲಿವೆ ಎಂದರು.
ಜಿಲ್ಲಾಡಳಿತ ಬಯಸಿದಲ್ಲಿ ಇನ್ನೂ 200 ಕ್ವಾರಂಟೈನ್ ವಾರ್ಡ್ ತೆರೆಯಲಾಗುವುದು. 4 ಜನರನ್ನು ಐಸೊಲೇಷನ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 24 ಗಂಟೆ ಕಾಲ ವೈದ್ಯ ಸಿಬ್ಬಂದಿ ನಿಗಾ ವಹಿಸಲಿದ್ದಾರೆ. ಸೂಕ್ತ ಚಿಕಿತ್ಸೆಗೆ ಅಗತ್ಯವಿರುವ ಮೆಡಿಸಿನ್, ಮಾಸ್ಕ್ ಗಳನ್ನು ಬೆಂಗಳೂರಿನಿಂದ ತರಿಸಲಾಗುತ್ತಿದ್ದು, ನಾಳೆಯೊಳಗೆ ಕಲಬುರಗಿಗೆ ತಲುಪಲಿವೆ ಎಂದರು.
ಇದೂವರೆಗೆ ಶಂಕಿತ ಮತ್ತು ದೃಢ ಕೊರೊನಾ ಪ್ರಕರಣಗಳು ನೋಡಿದಾಗ ಎಲ್ಲರು ಹೊರದೇಶದಿಂದ ಬಂದವರಿಗೆ ಸೋಂಕು ತಗುಲಿದೆ ಎಂದು ವಿವರಿಸಿದರು.
ರಾಜ್ಯದ ಜನತೆ ಯಾವುದೇ ಸುಳ್ಳು ಸುದ್ದಿಗೆ ಕಿವಿಗೊಡದೆ ಧೈರ್ಯ, ಆತ್ಮಸ್ಥೈರ್ಯದಿಂದ ಇರಬೇಕು. ಕೊರೊನಾ ಹರಡದಂತೆ ಜಾಗೃತಿ ವಹಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಇದನ್ನು ಗಂಭೀರ ಮತ್ತು ಸುಕ್ಮ್ಮವಾಗಿ ಪರಿಗಣಿಸಿದ್ದು, ಸಕಲ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದರು.
ಇಎಸ್ಐಸಿ ಮೆಡಿಕಲ್ ಕಾಲೇಜಿನ ಡೀನ್ ಡಾ.ಎ.ಎಲ್.ನಾಗರಾಜ್, ವೈದ್ಯಕೀಯ ಅಧೀಕ್ಣಕ ಎಸ್.ಪಿ.ಚೌಧರಿ ಇದ್ದರು.