ಮದ್ಯ ಮಾರಾಟಕ್ಕೆ ಅವಕಾಶ ಬೇಡ
ಎಡೀಸಿ ಬಿ.ಶಿವಸ್ವಾಮಿ ಮೂಲಕ ಸಿಎಂಗೆ ರೈತ ಸಂಘದ ಕಾರ್ಯಕರ್ತರಿಂದ ಮನವಿ
Team Udayavani, Apr 18, 2020, 2:52 PM IST
ಸಾಂದರ್ಭಿಕ ಚಿತ್ರ
ಕೋಲಾರ: ಮದ್ಯ ಮಾರಾಟಕ್ಕೆ ಅವಕಾಶ ನೀಡದಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ನಗರದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಮಾತನಾಡಿ, ಕೊರೊನಾ ಸೋಂಕನ್ನು ತಡೆಯಲು ದೇಶದಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದೆ. ಇಂತಹ ಸಮಯದಲ್ಲಿ ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈಗ ರಾಜ್ಯ ಸರ್ಕಾರ ಮದ್ಯದ ಅಂಗಡಿಗಳನ್ನು ತೆರೆದು ಮದ್ಯ ಮಾರಾಟದಿಂದ ಬರುವ ತೆರಿಗೆಯಿಂದ ಸರ್ಕಾರ ನಡೆಸಲು ಹೊರಟಿರುವುದು ದುರಂತ ಎಂದು ಆರೋಪಿಸಿದರು. ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ ಮಾತನಾಡಿ, ಗುಜರಾತಿನಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಮದ್ಯಪಾನ ಸಂಪೂರ್ಣವಾಗಿ ನಿಷೇಧ ಇದೆ. ಪಕ್ಕದ ಕೇರಳ ಸರ್ಕಾರವು ಮದ್ಯ ಮಾರಾಟದಿಂದ ಬರುವ ತೆರಿಗೆಯಿಂದ ಆಡಳಿತ ಮಾಡುವುದು ಅವಮಾನಕರ ಎಂದು ಹೇಳಿ ಸಂಪೂರ್ಣವಾಗಿ
ನಿಷೇಧ ಮಾಡಿದೆ. ಅದೇ ರೀತಿ ರಾಜ್ಯದಲ್ಲಿಯೂ ಸಂಪೂರ್ಣವಾಗಿ ಮದ್ಯ ನಿಷೇಧ ಮಾಡಿ, ಉತ್ತಮ ಸಮಾಜ ನಿರ್ಮಾಣ ಮಾಡಬೇಕೆಂದು
ಒತ್ತಾಯಿಸಿದರು.
ನಿಯೋಗದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಕೋಲಾರ ತಾಲೂಕು ಅಧ್ಯಕ್ಷ ದಿನ್ನೆಹೊಸಹಳ್ಳಿ ರಮೇಶ್ ಉಪಸ್ಥಿತರಿದ್ದರು.
ಮಾಂಸದ ಅಂಗಡಿಗೆ ಗ್ರಾಪಂ ನೋಟಿಸ್
ಕೋಲಾರ: ತಾಲೂಕಿನ ತೊಟ್ಲಿ ಹಾಗೂ ಚಿಟ್ನಹಳ್ಳಿ ಗ್ರಾಮದ ಗೇಟ್ನಲ್ಲಿ ಮಾಂಸದ ಅಂಗಡಿ ತೆರೆಯದಂತೆ ಪಿಡಿಒ ಇಂದಿರಮ್ಮ ಮಾಲಿಕರಿಗೆ ನೋಟಿಸ್ ಜಾರಿ ಮಾಡಿದರು. ತೊಟ್ಲಿ ಗ್ರಾಪಂನಲ್ಲಿ ನಡೆದ ಕೋವಿಡ್ -19 ಜಾಗೃತಿ ಸಭೆಯಲ್ಲಿ, ಕೊರೊನಾ ಹಾಟ್ ಸ್ಪಾಟ್ ಚಿಕ್ಕಬಳ್ಳಾಪುರ ಜಿಲ್ಲೆಯ ಎಚ್. ಕ್ರಾಸ್ನಿಂದ ಹಂದಿ ಮಾಂಸ ಮಾರಾಟಗಾರರೊಬ್ಬರು ಕುರಿಗಳನ್ನು ತಂದಿರುವ ಸಂಬಂಧ ಇಡೀ ಕುಟುಂಬವನ್ನೇ ಹೋಂ ಕ್ವಾರಂಟೈನ್ ಮಾಡಿರುವ ಬಗ್ಗೆ ಚರ್ಚೆ ನಡೆಯಿತು. ಕೋವಿಡ್ -19 ಸೋಂಕು ವೇಗವಾಗಿ ಹರಡುತ್ತಿರುವುದರಿಂದ ಗ್ರಾಮದಲ್ಲಿ ಯಾರೂ ಮಾಂಸದ ಅಂಗಡಿ ತೆಗೆಯದಿರುವಂತೆ ಸೂಚಿಸುವುದು ಹಾಗೂ
ಗ್ರಾಮದಿಂದ 1 ಕಿ.ಮೀ. ದೂರದಲ್ಲಿ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾಂಸ ವ್ಯಾಪಾರ ನಡೆಸುವಂತೆ ತೀರ್ಮಾ ನಿಸಲಾಯಿತು.
ಸಭೆಯ ನಂತರ ಗ್ರಾಮದಲ್ಲಿನ 11 ಮಾಂಸದ ಅಂಗಡಿ ಮಾಲಿಕರಿಗೆ ಖುದ್ದು ನೋಟಿಸ್ ನೀಡಿ ಆದೇಶ ಪಾಲನೆ ಮಾಡಬೇಕು, ತಪ್ಪಿದ್ದಲ್ಲಿ ಕಾನೂನು ರೀತಿ ಕ್ರಮ ಜರುಗಿಸುವುದಾಗಿ ಪಿಡಿಒ ಇಂದಿರಮ್ಮ ಎಚ್ಚರಿಸಿದರು.