ಕಿಷ್ಕಿಂದೆಯಲ್ಲಿ ಬೋನಿಗೆ ಬಿದ್ದ ಕರಡಿ
Team Udayavani, Aug 28, 2019, 11:50 AM IST
ಗಂಗಾವತಿ: ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಹತ್ತಿರ ಕರಡಿಯೊಂದು ಬುಧವಾರ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಸುಮಾರು 17 ವರ್ಷ ಪ್ರಾಯದ ಈ ಕರಡಿ ಕಳೆದ ಒಂದು ತಿಂಗಳಿನಿಂದ ಹನುಮನಹಳ್ಳಿ, ಚಿಕ್ಕರಾಂಪೂರ, ಪಂಪಾ ಸರೋವರ, ಜಂಗ್ಲಿ, ವಿರೂಪಾಪೂರಗಡ್ಡಿ ಗ್ರಾಮಗಳ ಸುತ್ತ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು.
ಈ ಕುರಿತಾಗಿ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದ ಸುತ್ತಮುತ್ತಿಲನ ಗ್ರಾಮಸ್ಥರು ಈ ಕರಡಿಯನನ್ನು ಸೆರೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆನೆಗೊಂದಿ ಪ್ರದೇಶದ ಸುತ್ತಮುತ್ತ ಬಾಳೆ ಬೆಳೆ ಬೆಳೆಯುವುದರಿಂದ ಈ ಪ್ರದೇಶದಲ್ಲಿ ಕರಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ.
ಕರಡಿ ಬೋನಿಗೆ ಬಿದ್ದಿರುವ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯಕ್ಕೆ ಕರಡಿ ಬೋನನ್ನು ವಡ್ರಟ್ಟಿ ಸಸ್ಯ ಸಂರಕ್ಷಣಾ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಸೂಚನೆಯ ಬಳಿಕ ಇದನ್ನು ಬೇರೆಡೆಗೆ ಕಳುಹಿಸಲಾಗುವುದು ಎಂದು ಅರಣ್ಯಾಧಿಕಾರಿ ರಾಮಣ್ಣ ಅವರು ಉದಯವಾಣಿಗೆ ತಿಳಿಸಿದ್ದಾರೆ.