ಕೋವಿಡ್ ಭತ್ಯೆ ಬಾಕಿ ವಿತರಣೆಗೆ ಆಗ್ರಹ
Team Udayavani, Oct 16, 2021, 12:38 PM IST
ರಾಯಚೂರು: ಪ್ರಾಥಮಿಕ ಆರೋಗ್ಯ ನಿರೀಕ್ಷಣಾಧಿಕಾರಿಗಳಿಗೆ ಬಾಕಿ ಇರುವ ಕೋವಿಡ್ ಹಾಗೂ ಪ್ರಯಾಣ ಭತ್ಯಯನ್ನು ಡಿ.15ರೊಳಗೆ ವಿತರಿಸಬೇಕು. ಇಲ್ಲವಾದರೆ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ಪ್ರಾಥಮಿಕ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಸುರೇಶ ಭಂಡಾರಿ ಎಚ್ಚರಿಸಿದರು.
ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಅಕ್ಕಪಕ್ಕದ ಜಿಲ್ಲೆಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೇ ಭತ್ಯೆ ನೀಡಲಾಗಿದೆ. ಆದರೆ, ರಾಯಚೂರು ಜಿಲ್ಲೆಯಲ್ಲಿ ಮಾತ್ರ ಸಮಸ್ಯೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪ್ರಾಥಮಿಕ ಆರೋಗ್ಯ ನಿರೀಕ್ಷಣಾಧಿಕಾರಿಗಳು ಕಳೆದ 2018ರಿಂದ ಪ್ರಯಾಣ ಭತ್ಯ ನೀಡಿಲ್ಲ, ಪ್ರತಿಯೊಬ್ಬರಿಗೆ ಪ್ರತಿ ತಿಂಗಳು 3-4 ಸಾವಿರ ರೂ. ಪ್ರಯಾಣ ಭತ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ ನಿರೀಕ್ಷಣಾಧಿಕಾರಿಗಳು ಕೆಲಸ ಮಾಡುತ್ತಿದ್ದು, ಕೋವಿಡ್ನ್ನು ಲೆಕ್ಕಿಸದೇ ಕೆಲಸ ಪ್ರತಿಯೊಂದು ಗ್ರಾಮದಲ್ಲಿ ಕೆಲಸ ಮಾಡಿದ್ದೇವೆ. ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರನ್ನು ಕೋವಿಡ್ ವಾರಿಯರ್ಗಳೆಂದು ಸರ್ಕಾರ ಘೋಷಿಸಿದೆ. ಸರ್ಕಾರ ಈವರೆಗೆ ನಮ್ಮನ್ನು ಪರಿಗಣಿಸಿಲ್ಲ ಎಂದರು.
ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಕೇಳಿದರೆ, ನಮ್ಮಲ್ಲಿ ಈಗ ಹಣವಿಲ್ಲ. ಬೇರೆ ಉದ್ದೇಶಗಳಿಗೆ ಬಳಕೆಯಾಗಿದೆ. ಶೀಘ್ರದಲ್ಲೇ ಭತ್ಯೆ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸುತ್ತಾರೆ. ಸರ್ಕಾರ ಈ ಕೂಡಲೇ ಪ್ರಾಥಮಿಕ ಆರೋಗ್ಯ ನಿರೀಕ್ಷಣಾಧಿಕಾರಿಗಳ ಬಾಕಿ ಇರುವ ಪ್ರಯಾಣ ಭತ್ಯ ಡಿ.15ರೊಳಗೆ ನೀಡಬೇಕು. ಇಲ್ಲದಿದ್ದರೆ, ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಬಿ.ಪಿ.ದೊಡ್ಡಮನಿ, ವಿಜಯ ಕುಮಾರ್ ಇದ್ದರು.