ಕ್ವಾರೆಂಟೈನ್ ವ್ಯಕ್ತಿಗಳ ಟ್ರ್ಯಾಕ್ ಗೆ ಮಣಿಪಾಲ ಸಮೂಹ ಸಂಸ್ಥೆಯ ತಂತ್ರಜ್ಞಾನ ಬಳಕೆ
Team Udayavani, Mar 30, 2020, 9:27 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಂಗಳೂರು: ಹೋಮ್ ಕ್ವಾರೆಂಟೈನ್ ಗೆ ಒಳಗಾಗಿದ್ದು ಅಧಿಕಾರಿಗಳ ಹಾಗೂ ಪೊಲೀಸರ ಕಣ್ತಪ್ಪಿಸಿ ಸಾರ್ವಜನಿಕವಾಗಿ ಓಡಾಡುವ ವ್ಯಕ್ತಿಗಳನ್ನು ಪತ್ತೆಹಚ್ಚಲು ಸೆಲ್ಫೀ ಆಧಾರಿತ ಆರ್ಟಿಫಿಷಿಯಲ್ ಇಂಟಲಿಜೆಂಟ್ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ವಿಶೇಷವೆಂದರೆ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವುದು ಮಣಿಪಾಲ ಸಮೂಹ ಸಂಸ್ಥೆಗಳಿಗೆ ಸೇರಿದ ವಿಜ್ಞಾ ಲ್ಯಾಬ್ಸ್.
ಭಾರತದಲ್ಲಿ ಕೋವಿಡ್ 19 ವೈರಸ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇರುವ ಹಿನ್ನಲೆಯಲ್ಲಿ ಹೋಮ್ ಕ್ವಾರೆಂಟೈನ್ ಆಗಿರುವ ವ್ಯಕ್ತಿಗಳ ಮೇಲೆ ಸೂಕ್ತ ನಿಗಾ ಇರಿಸುವುದು ಒಂದು ಸವಾಲಿನ ವಿಷಯವೇ ಸರಿ.
ಇದೀಗ ಹೋಮ್ ಕ್ವಾರೆಂಟೈನ್ ಆಗಿರುವ ವ್ಯಕ್ತಿಗಳ ಮೇಲೆ ನಿಗಾ ಇರಿಸುವ ಉದ್ದೇಶಕ್ಕಾಗಿ ಸೆಲ್ಫೀ ಆಧಾರಿತ ಮುಖ ಗುರುತು ಪತ್ತೆ ಮತ್ತು ಸ್ಥಳ ಗುರುತು ಪತ್ತೆ ಮೊಬೈಲ್ ಅಪ್ಲಿಕೇಷನನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತಿದು ಕೃತಕ ಬುದ್ದಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಆಧಾರದಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿದೆ.
ಈ ವಿನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ವಿಜ್ಞಾ ಲ್ಯಾಬ್ ನ ಸಹ-ಸಂಸ್ಥಾಪಕರಾಗಿರುವ ಡಾ. ಮುರಳಿ ಕೋಟ ಅವರು ಇದರ ಕುರಿತಾಗಿ ಹೇಳಿದ್ದಿಷ್ಟು, ‘ಈ ಹೊಸ ವಿಧಾನದಲ್ಲಿ ವ್ಯಕ್ತಿಯೊಬ್ಬನ ಹೆಸರು, ದೂರವಾಣಿ ಸಂಖ್ಯೆ, ಸೆಲ್ಫೀ ಮತ್ತು ಇತರೇ ಸೂಕ್ತ ಮಾಹಿತಿಗಳನ್ನು ತನ್ನಿಂತಾನೇ ನೋಂದಾಯಿಸಲು ವ್ಯಕ್ತಿಗಳಿಗೆ ಅವಕಾಶ ನೀಡುತ್ತದೆ. ಬಳಿಕ ಅವರು ಈ ಅಪ್ಲಿಕೇಷನ್ ಬಳಸಿಕೊಂಡು ತಮ್ಮ ನೋಂದಣಿಯನ್ನು ಅಪ್ಲೋಡ್ ಮಾಡಿಕೊಳ್ಳಬೇಕಾರುತ್ತದೆ. ಇದರ ಬೆನ್ನಲ್ಲೇ ಈ ಎಲ್ಲಾ ಮಾಹಿತಿಗಳನ್ನು ಈಗಾಗಲೇ ಕ್ವಾರೆಂಟೈನ್ ನಲ್ಲಿರುವ ವ್ಯಕ್ತಿಗಳ ಮಾಹಿತಿ ಹೊಂದಿರುವ ಸಿದ್ಧ ಮಾಸ್ಟರ್ ಲಿಸ್ಟ್ ಜೊತೆ ಈ ಮಾಹಿತಿಗಳನ್ನು ಹೋಲಿಸಿ ನೋಡಲಾಗುತ್ತದೆ.
ಈ ರೀತಿಯಾಗಿ ನೋಂದಣಿ ವಿವರಗಳನ್ನು ಪರಿಶೀಲನೆಗೊಳಪಟ್ಟ ಬಳಿಕ ಕ್ವಾರೆಂಟೈನ್ ಗೊಳಗಾಗಿರುವ ವ್ಯಕ್ತಿಯ ಸೆಲ್ಫೀ ಮಾದರಿಯಲ್ಲಿ ಹಾಗೂ ಆ ವ್ಯಕ್ತಿ ಇರುವ ಸ್ಥಳದ ಮಾಹಿತಿ ಸಹಿತ ಹಾಜರಾತಿಯನ್ನು ದಾಖಲು ಮಾಡಿಕೊಳ್ಳಲು ಈ ಅಪ್ಲಿಕೇಷನ್ ಸಿದ್ಧವಾಗಿರುತ್ತದೆ.
ಆ ಬಳಿಕ ಈ ಎಲ್ಲಾ ಮಾಹಿತಿಗಳನ್ನು ಕ್ಲೌಡ್ ಆಧಾರಿತ ಖಾಸಗಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸರ್ವರ್ ಗೆ ಅಪ್ಲೋಡ್ ಮಾಡಲಾಗುತ್ತದೆ. ಇಲ್ಲಿ ವ್ಯಕ್ತಿಯು ದಾಖಲಿಸಿದ ಮುಖದ ಹಾಗೂ ಸ್ಥಳದ ಮಾಹಿತಿಗಳನ್ನು ನೈಜ ಮಾಹಿತಿಗಳ ಜೊತೆ ತಾಳೆ ಹಾಕಲಾಗುತ್ತದೆ. ಇಲ್ಲಿ ಎರಡೂ ಮಾಹಿತಿಗಳೂ ಸರಿಯಾಗಿ ತಾಳೆಹಾಕಲ್ಪಟ್ಟಲ್ಲಿ ಆ ವ್ಯಕ್ತಿಯ ಕ್ವಾರೆಂಟೈನ್ ಹಾಜರಾತಿಯನ್ನು ಲೈವ್ ಡ್ಯಾಶ್ ಬೋರ್ಡ್ ನಲ್ಲಿ ಪ್ರಕಟಿಸಲಾಗುತ್ತದೆ.
ಒಂದುವೇಳೆ ಮುಖ ಮತ್ತು ಸ್ಥಳ ಮಾಹಿತಿಗಳು ಡಾಟಾಬೇಸ್ ಮಾಹಿತಿಗಳೊಂದಿಗೆ ತಾಳೆಯಾಗದೇ ಇದ್ದಲ್ಲಿ ರಿಯಲ್ ಟೈಮ್ ಎಚ್ಚರಿಕೆಯೊಂದು ಪ್ರಕಟಗೊಳ್ಳುತ್ತದೆ ಮತ್ತು ಇದರ ಆಧಾರದಲ್ಲಿ ಸಂಬಂಧಿತ ಅಧಿಕಾರಿಗಳು ಹೋಮ್ ಕ್ವಾರೆಂಟೈನ್ ತಪ್ಪಿಸಿಕೊಂಡ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಸದ್ಯ ಭಾರತದಲ್ಲಿ ಹೋಮ್ ಕ್ವಾರೆಂಟೈನ್ ಆಗಿತುಬ ವ್ಯಕ್ತಿಗಳ ಚಲನವಲನ ಪತ್ತೆಗಾಗಿ ಅಭಿವೃದ್ಧಿಪಡಿಸಲಾಗಿರುವ ತಂತ್ರಜ್ಞಾನದಲ್ಲಿ ಇದು ಹೆಚ್ಚು ಸುಧಾರಿತವಾದುದಾಗಿದೆ ಎಂದು ವಿಜ್ಞಾನ್ ಲ್ಯಾಬ್ ನ ಪ್ರವರ್ತಕರು ಮತ್ತು ಮಣಿಪಾಲ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾಗಿರುವ ಗೌತಮ್ ಪೈ ಅವರು ಅಭಿಪ್ರಾಯಪಟ್ಟಿದ್ದಾರೆ.
‘ನಾವು ಈ ತಂತ್ರಜ್ಞಾನವನ್ನು ಹೆಚ್ಚು ಬಳಕೆದಾರ ಸ್ನೇಹಿಯಾಗಿ ರೂಪಿಸಿದ್ದು ಸದ್ಯಕ್ಕೆ ಇದನ್ನು ಬಳಸುತ್ತಿರುವ ಪುಣೆ ಪೊಲೀಸರು ಈ ಆ್ಯಪ್ ನ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದಾರೆ ಮತ್ತು ಕ್ವಾರೆಂಟೈನ್ ಆಗಿರುವ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ಇಡುವಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ’ ಎಂದು ಗೌತಮ್ ಪೈ ಅವರು ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್ ಚರ್ಚೆ
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’
Fazal ur Rehman; ಭಾರತ ಸೂಪರ್ಪವರ್, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ