“ಗೋ ಬ್ಯಾಕ್ ನಿಖಿಲ್’ ಎನ್ನಬೇಕಾದವರು ಜನ
Team Udayavani, Mar 10, 2019, 1:19 AM IST
ಮಂಡ್ಯ: ಸಾಮಾಜಿಕ ಜಾಲತಾಣಗಳಲ್ಲಿ “ಗೋ ಬ್ಯಾಕ್ ನಿಖೀಲ್’ ಅಂತ ಹೇಳುತ್ತಿದ್ದಾರೆ. ಅದನ್ನು ಹೇಳಬೇಕಿರುವುದು ಜನರು. ವಿರೋಧ ಪಕ್ಷಗಳ ಕುತಂತ್ರದಿಂದ ಸಾಮಾಜಿಕ ಜಾಲತಾಣಗಳಲ್ಲಿ ದಿಕ್ಕು ತಪ್ಪಿಸುವ ಯತ್ನನಡೆಯುತ್ತಿದೆ. ಮತದಾರರು ಇದಕ್ಕೆ ಕಿವಿಗೊಡಬಾರದು ಎಂದು ನಟ, ನಿಖಿಲ್ ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.
ನಗರದಲ್ಲಿ ಮಾತನಾಡಿ, “ನಾನು ಮಂಡ್ಯದಲ್ಲಿ ಬಾಡಿಗೆ ಮನೆ ಮಾಡುವುದಿಲ್ಲ, ಅದರ ಬದಲು ಜಮೀನು ಖರೀದಿಸಿ ಮನೆಯನ್ನೇ ಕಟ್ಟಿಸುತ್ತೇನೆ. ಲೋಕಸಭಾ ಚುನಾವಣೆಯ ಅಭ್ಯರ್ಥಿ ಎಂದು ನಾನು ಅಂದುಕೊಂಡಿರಲಿಲ್ಲ. ಜಿಲ್ಲೆಯ ಎಲ್ಲಾ ಶಾಸಕರ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನಾನು ಶೋಕಿಕಾಗಿ ರಾಜಕಾರಣ ಮಾಡಲು ಬಂದಿಲ್ಲ. ಕೇವಲ ನಟನಾಗಿ ಕಾಲ ಕಳೆಯಬಹುದಿತ್ತು. ಆದರೆ, ನಿಮ್ಮೆಲ್ಲರ ಸೇವೆ ಮಾಡುವ ಹಂಬಲ ಇರುವುದರಿಂದ ರಾಜಕೀಯಕ್ಕೆ ಬಂದಿದ್ದೇನೆ. ನಾನು ಈ ಕುಟುಂಬದಲ್ಲಿ ಹುಟ್ಟಿರೋದು ನನ್ನ ಪುಣ್ಯ. ತಂದೆಯ ಸೇವೆಗೆ ನಾನೂ ಕೂಡ ಕೈಜೋಡಿಸುತ್ತೇನೆ’ ಎಂದರು.