ಮಂಡ್ಯದಲ್ಲಿ ರಣ ಕಹಳೆ ; ಸುಮಲತಾ ಪರ ದರ್ಶನ್, ಯಶ್, ಭರ್ಜರಿ ಪ್ರಚಾರ
Team Udayavani, Apr 2, 2019, 4:37 PM IST
ಮಂಡ್ಯ : ಲೋಕಸಭಾ ಚುನಾವಣೆಯ ರಣಕಣವಾಗಿರುವ ಮಂಡ್ಯದಲ್ಲಿ ಮಂಗಳವಾರ ಪ್ರಚಾರದ ಕಾವು ತೀವ್ರಗೊಂಡಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ನಟ ದರ್ಶನ್, ಯಶ್,ನೆನಪಿರಲಿ ಪ್ರೇಮ್ ಅವರು ರೋಡ್ ಶೋ ನಡೆಸಿ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಪ್ರಮುಖವಾಗಿ ನಟರು ಮತ ಯಾಚನೆ ಮಾತ್ರ ಮಾಡಿದ್ದು ಯಾವುದೇ ಆರೋಪಗಳನ್ನು, ತಿರುಗೇಟು ನೀಡುವುದಕ್ಕೆ ಮುಂದಾಗಿಲ್ಲ.
ಸಾವಿರಾರು ಜನರು ನೆಚ್ಚಿನ ನಟರಿಗೆ ಹಾರ ಹಾಕಿ, ಕೈ ಕುಲುಕಿ ಸಂಭ್ರಮಿಸಿದರು. ಕೆಲವೆಡೆ ಮಹಿಳೆಯರು ಆರತಿ ಬೆಳಗಿ ಸಂಭ್ರಮಿಸಿದರು.
ದರ್ಶನ್ ಅವರು ಕಹಳೆ ಊದುವ ಮೂಲಕ ಪ್ರಚಾರ ಆರಂಭಿಸಿ ವಿವಿಧೆಡೆ ಮತ ಯಾಚಿಸಿದರು.
ನಟರ ಪ್ರಚಾರದಿಂದ ಮತ ಬೀಳುವುದಿಲ್ಲ
ಸಚಿವ ಜಿ.ಟಿ.ದೇವೇಗೌಡ ಅವರು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ ನಟರು ಬಂದು ಪ್ರಚಾರ ಮಾಡಿದರೆ ಮತಗಳು ಬೀಳುವುದಿಲ್ಲ. ದರ್ಶನ್ ಅವರು ಚಾಮುಂಡೇಶ್ವರಿಯಲ್ಲಿ ಭರ್ಜರಿ ಪ್ರಚಾರ ಮಾಡಿದ್ದರು. ಅವರು ಬಂದಾಗ ಭಾರೀ ಜನ ಸೇರಿದ್ದರು.ಆದರೆ ಮತ ಎಣಿಕೆ ದಿನ ನನಗೆ 1000 ಬಿದ್ದಲ್ಲಿ ಸಿದ್ದರಾಮಯ್ಯ ಅವರಿಗೆ 100 ವೋಟು ಮಾತ್ರ ಬಿದ್ದಿತ್ತು ಎಂದು ಲೇವಡಿ ಮಾಡಿದ್ದಾರೆ.