ಶಿಕ್ಷಣದಿಂದ ಸಾಧನೆ ಅವಕಾಶ: ಡಾ| ಹೆಗ್ಗಡೆ
Team Udayavani, Oct 13, 2018, 3:25 PM IST
ಬೆಳ್ತಂಗಡಿ: ಬಡತನ ಸಹಿತ ವಿವಿಧ ಸಾಮಾಜಿಕ ಮಿತಿಗಳ ನಡುವೆ ಉನ್ನತ ಸಾಧನೆಯ ಅವಕಾಶವನ್ನು ಒದಗಿಸಿ ಕೊಡುವ ಮಹತ್ವದ ವಲಯವಾಗಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ಅಜೀಮ್ ಪ್ರೇಮ್ಜಿ ಪ್ರತಿಷ್ಠಾನವು ಉಜಿರೆ ಎಸ್ಡಿಎಂ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಸಹಯೋಗದೊಂದಿಗೆ ಅ. 12ರ ವರೆಗೆ ಆಯೋಜಿಸಿದ ಒಂದು ವಾರದ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ವ್ಯಕ್ತಿಗತ ಬೆಳವಣಿಗೆಯ ಜತೆಗೆ ಸಾಮಾಜಿಕವಾಗಿಯೂ ಕೊಡುಗೆ ನೀಡಲು ನೆರವಾಗುತ್ತದೆ. ಶಿಕ್ಷಣವು ಪರೀûಾ ಫಲಿತಾಂಶ ನೀಡುವುದಷ್ಟೇ ಅಲ್ಲದೆ, ಬದುಕನ್ನು ಸಮಗ್ರವಾಗಿಸಿಕೊಳ್ಳುವುದಕ್ಕೂ ಸಹಾಯಕವಾಗುತ್ತದೆ. ಇದನ್ನು ಸ್ಪಷ್ಟಪಡಿಸಿಕೊಂಡು ಜ್ಜೆಯಿರಿಸಬೇಕು. ಇಂದಿನ ಸಮಾಜದಲ್ಲಿ ಜನರು ಸಕಾರಾತ್ಮಕ ವಿಚಾರಗಳಿಗಿಂತ ನಕಾರಾತ್ಮಕತೆಗೇ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಕಲಬುರ್ಗಿ, ಯಾದಗಿರಿ, ಜೇವರ್ಗಿ, ಸುರಪುರದ ಪ್ರಾ.ಶಾಲೆಗಳ 228 ಸಮಾಜ ವಿಜ್ಞಾನ ಶಿಕ್ಷಕರು ಕಾರ್ಯಾಗಾರ ದಲ್ಲಿ ಭಾಗವಹಿಸಿದ್ದರು. ಶಿಕ್ಷಕರಿಗೆ 24 ಮಂದಿ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದ್ದಾರೆ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಪ್ರಾಂಶು ಲ ಪ್ರೊ| ಟಿ.ಎನ್. ಕೇಶವ್, ಅಜೀಮ್ ಪ್ರೇಮ್ಜಿ ಪ್ರತಿಷ್ಠಾನದ ಗುರುರಾಜ್ ಉಪಸ್ಥಿತರಿದ್ದರು.
ಪೂರಕ ಮಾರ್ಗದರ್ಶನ
ಶಿಕ್ಷಕನಾದವನು ವಿದ್ಯಾರ್ಥಿಯಾದವನಿಗೆ ಪಾಠವನ್ನು ಬೋಧಿಸು ವುದರ ಜತೆಗೆ ಜೀವನಕ್ಕೆ ಪೂರಕವಾದ ಮಾರ್ಗದರ್ಶನ ನೀಡಬೇಕು. ವಿದ್ಯಾರ್ಥಿಗಳಲ್ಲಿ ಶಿಕ್ಷಣ ಪಡೆಯುವ ಮಹತ್ವಾಕಾಂಕ್ಷೆ ಬಿತ್ತಬೇಕು. ಜ್ಞಾನಾರ್ಜನೆಗೆ ಸಹಾಯಕವಾಗುವ ವಾತಾವರಣ ವನ್ನು ನಿರ್ಮಿಸಬೇಕು.
– ಡಾ| ಡಿ. ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿ