ಐಪಿಎಲ್‌: ಅಚ್ಚರಿ, ಅನಿರೀಕ್ಷಿತಗಳ ಮೆಗಾ ಹರಾಜಿಗೆ ತೆರೆ


Team Udayavani, Feb 14, 2022, 7:40 AM IST

ಐಪಿಎಲ್‌: ಅಚ್ಚರಿ, ಅನಿರೀಕ್ಷಿತಗಳ ಮೆಗಾ ಹರಾಜಿಗೆ ತೆರೆ

ಬೆಂಗಳೂರು: ಕ್ರಿಕೆಟ್‌ ಪ್ರೇಮಿಗಳನ್ನು ಕಳೆದೆರಡು ದಿನಗಳಿಂದ ತುದಿಗಾಲಲ್ಲಿ ನಿಲ್ಲಿಸಿದ್ದ ಐಪಿಎಲ್‌ ಮೆಗಾ ಹರಾಜಿಗೆ ತೆರೆ ಬಿದ್ದಿದೆ. ಯಾವುದೋ ತಂಡದಲ್ಲಿದ್ದ ಆಟಗಾರರು ಇನ್ಯಾವುದೋ ತಂಡದ ಪಾಲಾದದ್ದು, ಕರ್ನಾಟಕದ ಆರ್‌ಸಿಬಿಯಲ್ಲಿ ಕನ್ನಡಿಗರ ಕೊರತೆ ತೀವ್ರವಾಗಿ ಕಾಡಿದ್ದು, ಐಪಿಎಲ್‌ ದಾಖಲೆಯ ವೀರ ಸುರೇಶ್‌ ರೈನಾ ಮರೆಗೆ ಸರಿದದ್ದು, ಎಸ್‌. ಶ್ರೀಶಾಂತ್‌ ಹೆಸರೇ ಕಾಣಿಸದಿದ್ದುದು, ನಿರೀಕ್ಷೆಯಲ್ಲೇ ಇಲ್ಲದವರು ದೊಡ್ಡ ಗಂಟು ಪಡೆದದ್ದು, ಕೆಲವು ಪ್ರಮುಖ ಆಟಗಾರರನ್ನು ಕೇಳುವವರೇ ಇಲ್ಲದಿದ್ದುದು, ಮೊದಲ ದಿನ ಕುಸಿದು ಬಿದ್ದ ಹರಾಜುಗಾರ ಹ್ಯೂ ಎಡ್ಮಿàಡ್ಸ್‌ ಮರಳಿ ಏಲಂ ನಡೆಸಿ ಕೊಟ್ಟದ್ದು.. ಹೀಗೆ ಅಚ್ಚರಿ, ಅನಿರೀಕ್ಷಿತ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಮುಂದಿನದು 10 ತಂಡಗಳ ನಡುವಿನ ಬೃಹತ್‌ ಕ್ರಿಕೆಟ್‌ ಮೇಳದ ಕ್ಷಣಗಣನೆ..

ಲಿವಿಂಗ್‌ಸ್ಟೋನ್‌ ದಶಕೋಟಿ ಒಡೆಯ
ದ್ವಿತೀಯ ದಿನದ ಬಿಡ್ಡಿಂಗ್‌ನಲ್ಲಿ ಇಂಗ್ಲೆಂಡಿನ ಬಿಗ್‌ ಹಿಟ್ಟಿಂಗ್‌ ಆಲ್‌ರೌಂಡರ್‌ ಲಿಯಮ್‌ ಲಿವಿಂಗ್‌ಸ್ಟೋನ್‌ ದಶಕೋಟಿ ಒಡೆಯರ ಯಾದಿಗೆ ಸೇರ್ಪಡೆಗೊಂಡರು. ಅವರನ್ನು ಪಂಜಾಬ್‌ ಕಿಂಗ್ಸ್‌ 11.50 ಕೋಟಿ ರೂ. ನೀಡಿ ಬುಟ್ಟಿಗೆ ಹಾಕಿಕೊಂಡಿತು. ಕಳೆದ ವರ್ಷ ಮೂಲಬೆಲೆ 75 ಲಕ್ಷ ರೂ.ಗೆ ಇವರನ್ನು ರಾಜಸ್ಥಾನ್‌ ರಾಯಲ್ಸ್‌ ಖರೀದಿಸಿತ್ತು. ಅವರು 5 ಪಂದ್ಯಗಳಿಂದ ಕೇವಲ 42 ರನ್‌ ಮಾಡಿದ್ದರು.

ಇದು ಮೆಗಾ ಹರಾಜಿನಲ್ಲಿ ವಿದೇಶಿ ಕ್ರಿಕೆಟಿಗನಿಗೆ ಲಭಿಸಿದ ಅತ್ಯಧಿಕ ಮೊತ್ತ. ಮೊದಲ ದಿನ ವನಿಂದು ಹಸರಂಗ 10.75 ಕೋ.ರೂ., ಲಾಕೀ ಫ‌ರ್ಗ್ಯುಸನ್‌ 10 ಕೋ.ರೂ.ಗೆ ಮಾರಾಟವಾಗಿದ್ದರು.

ಲಿವಿಂಗ್‌ಸ್ಟೋನ್‌ ಹೊಡಿಬಡಿ ಆಟಗಾರನಾಗಿದ್ದು, ಲೆಗ್‌ಸ್ಪಿನ್‌ ಬೌಲಿಂಗ್‌ ಕೂಡ ಮಾಡಬಲ್ಲರು. ಇವರನ್ನು ಸೆಳೆಯಲು ಚೆನ್ನೈ, ಕೆಕೆಆರ್‌, ಗುಜರಾತ್‌, ಹೈದರಾಬಾದ್‌ ಫ್ರಾಂಚೈಸಿಗಳು ಸ್ಪರ್ಧೆಗೆ ಇಳಿದಿದ್ದವು. ಅಂತಿಮವಾಗಿ ಪಂಜಾಬ್‌ ಮೇಲುಗೈ ಸಾಧಿಸಿತು.

ಮಾರಾಟವಾಗಲಿಲ್ಲ ವಿಶ್ವಕಪ್‌ ವಿಜೇತ ನಾಯಕರು!
ಹರಾಜಿನ ಮೊದಲ ದಿನವಾದ ಶನಿವಾರ ಕೆಲವು ದಿಗ್ಗಜರು ಮಾರಾಟವೇ ಆಗಿರಲಿಲ್ಲ. ಅಭಿಮಾನಿಗಳು ಆ ಆಘಾತ ಮರೆಯುವ ಮುನ್ನವೇ ರವಿವಾರ ಇನ್ನೊಂದಷ್ಟು ದಿಗ್ಭ್ರಮೆ ಎದುರಾಗಿವೆ. ಇಂಗ್ಲೆಂಡ್‌ ಏಕದಿನ ವಿಶ್ವಕಪ್‌ ಗೆಲ್ಲಲು ನೆರವಾಗಿದ್ದ ಇಯಾನ್‌ ಮಾರ್ಗನ್‌ ಮಾರಾಟವೇ ಆಗಲಿಲ್ಲ. 2021ರಲ್ಲಿ ಕೆಕೆಆರ್‌ ಬಹಳ ವರ್ಷಗಳ ಅನಂತರ ಐಪಿಎಲ್‌ ಫೈನಲ್‌ಗೇರಿತ್ತು. ಆ ತಂಡವನ್ನು ಮುನ್ನಡೆಸಿದ್ದು ಮಾರ್ಗನ್‌. ಅವರನ್ನು ಕೊಳ್ಳಲು ತಂಡಗಳು ಆಸಕ್ತಿ ತೋರಲಿಲ್ಲ. ಅಂಥದೇ ಪರಿಸ್ಥಿತಿಯನ್ನು ಆಸ್ಟ್ರೇಲಿಯ ಟಿ20 ತಂಡದ ನಾಯಕ ಆರನ್‌ ಫಿಂಚ್‌ ಎದುರಿಸಿದರು. 2021ರಲ್ಲಿ ಇವರ ನಾಯಕತ್ವದಲ್ಲೇ ಆಸೀಸ್‌ ಟಿ20 ವಿಶ್ವಕಪ್‌ ಗೆದ್ದಿತ್ತು. ಈ ಸಾಧನೆಯೂ ಅವರಿಗೆ ನೆರವಾಗಲಿಲ್ಲ.

ಪಿ.ಕೆ. ಸಮತೋಲಿತ ತಂಡ
ಪಂಜಾಬ್‌ ಕಿಂಗ್ಸ್‌ ಅತ್ಯಂತ ಸಮತೋಲಿತ ತಂಡವಾಗಿ ಗೋಚರಿಸುತ್ತಿದೆ. ಮಾಯಾಂಕ್‌ ಅಗರ್ವಾಲ್‌, ಶಿಖರ್‌ ಧವನ್‌, ಜಾನಿ ಬೇರ್‌ಸ್ಟೊ, ಹರ್‌ಪ್ರೀತ್‌ ಬ್ರಾರ್‌ ಇಲ್ಲಿನ ಪ್ರಮುಖ ಆಟಗಾರರು. ಆರ್ಶದೀಪ್‌ ಅವರನ್ನು ಉಳಿಸಿಕೊಂಡದ್ದು ದಿಟ್ಟ ನಿರ್ಧಾರವಾಗಿತ್ತು. ಬೌಲಿಂಗ್‌ ವಿಭಾಗದಲ್ಲಿ ರಬಾಡ, ರಾಹುಲ್‌ ಚಹರ್‌ ಅವರನ್ನು ಹೊಂದಿದೆ. ಹಾಗೆಯೇ ವಿಂಡೀಸ್‌ ಆಲ್‌ರೌಂಡರ್‌ ಓಡೀನ್‌ ಸ್ಮಿತ್‌ ಅವರನ್ನು 6 ಕೋಟಿ ರೂ.ಗೆ ಖರೀದಿಸಿದೆ.
ಆದರೆ ಮಾಜಿ ಕ್ರಿಕೆಟಿಗ ಸಂಜಯ್‌ ಮಾಂಜ್ರೆàಕರ್‌ ಪ್ರಕಾರ ಲಿವಿಂಗ್‌ಸ್ಟೋನ್‌ಗೆ ಅಷ್ಟು ಮೊತ್ತ ಸುರಿದದ್ದು ನಿಜಕ್ಕೂ ಗ್ಯಾಂಬ್ಲಿಂಗ್‌. ಇದಕ್ಕೆ ಅವರು ಕಳೆದ ಋತುವಿನ ವೈಫ‌ಲ್ಯದತ್ತ ಬೆಟ್ಟು ಮಾಡುತ್ತಾರೆ.

ಶಿವಂ ದುಬೆಗೆ ಅವಳಿ ಸಂಭ್ರಮ
ಆಲ್‌ರೌಂಡರ್‌ ಶಿವಂ ದುಬೆ ಅವರಿಗೆ ರವಿವಾರ ಅವಳಿ ಸಂಭ್ರಮ. ಬೆಳಗ್ಗೆ ಅವರು ಗಂಡು ಮಗುವಿನ ತಂದೆಯಾದ ಖುಷಿ ಆಚರಿಸುತ್ತಿದ್ದರು. ಅಪರಾಹ್ನ ಐಪಿಎಲ್‌ ಹರಾಜಿನಲ್ಲಿ ಇವರ ಹೆಸರು ಕರೆಯಲ್ಪಟ್ಟಿತು. 4 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತಕ್ಕೆ ಚೆನ್ನೈ ತಂಡ ಖರೀದಿಸಿತು. ಮುಂಬೈ ಮತ್ತು ರಾಜಸ್ಥಾನ್‌ ಕೂಡ ಇವರನ್ನು ಸೆಳೆಯಲು ಪ್ರಯತ್ನಿಸಿದವು. ಕಳೆದ ವರ್ಷ ದುಬೆ ರಾಜಸ್ಥಾನ್‌ ತಂಡದಲ್ಲಿದ್ದರು.

ಅನೀಶ್ವರ್‌ ಖರೀದಿ, ಕೈತಪ್ಪಿದ ಕರುಣ್‌
ಆರ್‌ಸಿಬಿ ತಂಡದಲ್ಲಿ ಕರ್ನಾಟಕದವರೇ ಇಲ್ಲ, ಇನ್ನು ನಾವೇಕೆ ಈ ತಂಡದ ಪಂದ್ಯಗಳನ್ನು ನೋಡಬೇಕು ಎಂದು ಕೆಲವರು ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಫ್ರಾಂಚೈಸಿ ಕೆಲವರನ್ನು ಖರೀದಿಸಲು ಯತ್ನಿಸಿತು. ಈ ಪೈಕಿ ಅಂಡರ್‌-19 ವಿಶ್ವಕಪ್‌ ತಂಡದ ಸದಸ್ಯ ಅನೀಶ್ವರ್‌ ಗೌತಮ್‌ ಅವರನ್ನು ಮೂಲಬೆಲೆ 20 ಲಕ್ಷ ರೂ.ಗೆ ಖರೀದಿಸಿತು. ಕರುಣ್‌ ನಾಯರ್‌ರನ್ನು ಖರೀದಿಸಲು ಯತ್ನಿಸಿತು. ಆದರೆ ರಾಜಸ್ಥಾನ್‌ ರಾಯಲ್ಸ್‌ 1.4 ಕೋಟಿ ರೂ. ನೀಡಿ ಖರೀದಿಸಿತು. ಕಡೆಗೂ ಆರ್‌ಸಿಬಿ ತಂಡದಲ್ಲಿ ಕರ್ನಾಟಕದ ಆಟಗಾರರನ್ನು ಹುಡುಕುವಂತಾಗಿದೆ.

ಮರಳಿದ ಹ್ಯೂ ಎಡ್ಮಿಡ್ಸ್‌
ಮೊದಲ ದಿನ ಕಡಿಮೆ ರಕ್ತದೊತ್ತಡದಿಂದ ಕುಸಿದುಬಿದ್ದಿದ್ದ ಹರಾಜುಗಾರ ಹ್ಯೂ ಎಡ್ಮಿಡ್ಸ್ ಎರಡನೇ ದಿನ ಕೊನೆಯ ಹೊತ್ತಿಗೆ ಚೇತರಿಸಿಕೊಂಡು, ಹರಾಜು ಪ್ರಕ್ರಿಯೆಗೆ ಮರಳಿದರು. ಅವರು ಮರಳಿದಾಗ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಅವರ ಸ್ಥಾನದಲ್ಲಿ ನಿಂತು ಬಹುತೇಕ ಹರಾಜು ಪ್ರಕ್ರಿಯೆಯನ್ನು ನಡೆಸಿದ್ದ ಚಾರು ಶರ್ಮ, ಪ್ರೀತಿಪೂರ್ವಕವಾಗಿ ಜಾಗ ಬಿಟ್ಟುಕೊಟ್ಟರು.

ಮತ್ತೆ ಮುಂಬೈ ಕೂಡಿಕೊಂಡ ಅರ್ಜುನ್‌!
ಸಚಿನ್‌ ತೆಂಡುಲ್ಕರ್‌ ಪುತ್ರ ಅರ್ಜುನ್‌ ತೆಂಡುಲ್ಕರ್‌ ಹಿಂದಿನ ಆವೃತ್ತಿಯಲ್ಲಿ ಮುಂಬೈ ಪರ ಕಾಣಿಸಿಕೊಂಡಿದ್ದರು. ಈ ಬಾರಿ ಮತ್ತೆ ಹರಾಜುಪಟ್ಟಿಗೆ ಬಂದಿದ್ದರು. ಆದರೆ ಮುಂಬೈ ನಿರೀಕ್ಷೆಯಂತೆಯೇ ಅರ್ಜುನ್‌ರನ್ನು 30 ಲಕ್ಷ ರೂ.ಗೆ ಖರೀದಿಸಿತು.

ಅಂಡರ್‌-19 ನಾಯಕನಿಗೆ ಬರೀ 50 ಲಕ್ಷ!
ಮೊನ್ನೆಯಷ್ಟೇ ಅಂಡರ್‌-19 ವಿಶ್ವಕಪ್‌ ಗೆದ್ದು ಮೆರೆದಾಡಿದ ಕಿರಿಯ ಆಟಗಾರರು ಮೆಗಾ ಹರಾಜಿನ ಕುತೂಹಲದ ಕೇಂದ್ರವಾಗಿದ್ದರು. ಇವರಲ್ಲಿ ಆಲ್‌ರೌಂಡರ್‌ ರಾಜ್‌ ಅಂಗದ್‌ ಬಾವಾ ಉತ್ತಮ ಮೊತ್ತ ಪಡೆದರೆ, ನಾಯಕ ಯಶ್‌ ಧುಲ್‌ಗೆ ಬರೀ 50 ಲಕ್ಷ ರೂ. ಸಿಕ್ಕಿತು. ಕೂಟದಲ್ಲೇ ಅತ್ಯಧಿಕ ವಿಕೆಟ್‌ ಕಿತ್ತ ವಿಕ್ಕಿ ಓಸ್ವಾಲ್‌ 20 ಲಕ್ಷಕ್ಕೆ ಡೆಲ್ಲಿ ಪಾಲಾದರು. ಆರಂಭಕಾರ ಹರ್ನೂರ್‌ ಸಿಂಗ್‌ ಮಾರಾಟವಾಗಲೇ ಇಲ್ಲ!

ಅಂಡರ್‌-19 ಸಾಧಕರಲ್ಲಿ ಅತ್ಯಧಿಕ ಮೊತ್ತಕ್ಕೆ ಮಾರಾಟಗೊಂಡವರೆಂದರೆ ರಾಜ್‌ ಬಾವಾ. ಇವರು 2 ಕೋಟಿ ರೂ. ಮೊತ್ತಕ್ಕೆ ಪಂಜಾಬ್‌ ಕಿಂಗ್ಸ್‌ ಪಾಲಾದರು. ಮುಂಬೈ ಕೂಡ ಇವರ ಮೇಲೆ ಆಸಕ್ತಿ ತೋರಿತ್ತು. ಬಾವಾ ಮೂಲ ಬೆಲೆ 20 ಲಕ್ಷ ರೂ. ಆಗಿತ್ತು. ವಿಶ್ವಕಪ್‌ನಲ್ಲಿ ಒಟ್ಟು 252 ರನ್‌ ಬಾರಿಸಿದ ಬಾವಾ, ಉಗಾಂಡ ವಿರುದ್ಧ 162 ರನ್‌ ಸಿಡಿಸಿದ್ದರು.
ಫಾಸ್ಟ್‌ ಬೌಲಿಂಗ್‌ ಆಲ್‌ರೌಂಡರ್‌ ರಾಜ್ಯವರ್ಧನ್‌ ಹಂಗಗೇìಕರ್‌ ಒಂದೂವರೆ ಕೋಟಿಗೆ ಚೆನ್ನೈ ತಂಡ ಸೇರಿಕೊಂಡರು. ಮಹಾರಾಷ್ಟ್ರದ 19ರ ಹರೆಯದ ಹಂಗಗೇìಕರ್‌ ನಿರಂತರವಾಗಿ 140 ಕಿ.ಮೀ. ವೇಗ ಕಾಯ್ದುಕೊಂಡು ಬರುತ್ತಿದ್ದಾರೆ.

ಆದರೆ ಅಂಡರ್‌-19 ನಾಯಕ ಯಶ್‌ ಧುಲ್‌ ಅವರಿಗೆ ಲಭಿಸಿದ್ದು ಬರೀ 50 ಲಕ್ಷ ರೂ. ದಿಲ್ಲಿಯವರಾದ ಇವರು ತವರಿನ ತಂಡವನ್ನೇ ಸೇರಿಕೊಂಡರು. ಕಳೆದ ಅಂಡರ್‌-19 ವಿಶ್ವಕಪ್‌ ಆಡಿದವರಲ್ಲಿ ದೊಡ್ಡ ಮೊತ್ತಕ್ಕೆ ಮಾರಾಟಗೊಂಡ ಕ್ರಿಕೆಟಿಗನೆಂದರೆ “ಬೇಬಿ ಎಬಿ’ ಎಂದೇ ಗುರುತಿಸಲ್ಪಡುವ ದಕ್ಷಿಣ ಆಫ್ರಿಕಾದ ಡಿವಾಲ್ಡ್‌ ಬ್ರೇವಿಸ್‌. ಅವರನ್ನು ಮುಂಬೈ 3 ಕೋಟಿ ರೂ. ನೀಡಿ ಖರೀದಿಸಿತು.

ಮಿಸ್‌ ಯೂ ಚೆನ್ನೈ: ಡು ಪ್ಲೆಸಿಸ್‌ ಭಾವುಕ ಸಂದೇಶ
2012ರಿಂದ ಚೆನ್ನೈ ತಂಡದ ಖಾಯಂ ಸದಸ್ಯನಾಗಿದ್ದು, ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತ ಬಂದ ಫಾ ಡು ಪ್ಲೆಸಿಸ್‌ ಅವರ ಧೋನಿ ತಂಡದೊಂದಿಗಿನ ನಂಟು ಕೊನೆಗೊಂಡಿದೆ. ಮೆಗಾ ಹರಾಜಿನಲ್ಲಿ ಅವರು ಆರ್‌ಸಿಬಿ ಪಾಲಾಗಿದ್ದಾರೆ.
ಈ ಸಂದರ್ಭದಲ್ಲಿ ಡು ಪ್ಲೆಸಿಸ್‌ ಚೆನ್ನೈ ಅಭಿಮಾನಿಗಳಿಗೆ ಭಾವುಕ ಸಂದೇಶವೊಂದನ್ನು ಕಳುಹಿಸಿದ್ದಾರೆ. “ಒಂದು ದಶಕದಿಂದ ಒಂದೇ ತಂಡವನ್ನು ಪ್ರತಿನಿಧಿಸುತ್ತ ಬಂದಿದ್ದೆ. ಚೆನ್ನೈ ತಂಡದೊಂದಿಗಿನ ನಂಟು ಕೊನೆಗೊಂಡಿದೆ. ಚೆನ್ನೈ, ಫ್ಯಾನ್ಸ್‌, ಸ್ಟಾಫ್, ಆಡಳಿತ ಮಂಡಳಿ, ಆಟಗಾರರಿಗೆ ನನ್ನ ಹಾಗೂ ಕುಟುಂಬದ ಪರವಾಗಿ ಥ್ಯಾಂಕ್ಸ್‌. ನೀವೆಲ್ಲ ಸೇರಿ ನನ್ನ ಪಾಲಿನ ಸ್ಮರಣಿಯ ಕ್ಷಣಗಳಿಗೆ ಸಾಕ್ಷಿಯಾಗಿದ್ದೀರಿ. ನಿಮ್ಮೆಲ್ಲರನ್ನೂ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಆದರೆ ಒಂದು ಬಾಗಿಲು ಮುಚ್ಚಿದಾಗ ಮತ್ತೊಂದು ಬಾಗಿಲು ತೆರೆಯುತ್ತದೆ. ಭವಿಷ್ಯದ ಬಗ್ಗೆ ತೀವ್ರ ಕುತೂಹಲದಿಂದಿದ್ದೇನೆ’ ಎಂದಿದ್ದಾರೆ ಡು ಪ್ಲೆಸಿಸ್‌.

ಚೆನ್ನೈ ತಂಡವನ್ನು ನಿಷೇಧಿಸಿದಾಗಲೂ ಡು ಪ್ಲೆಸಿಸ್‌ “ಧೋನಿ ಟೀಮ್‌’ನ ನಂಟನ್ನು ಕಡಿದುಕೊಂಡವರಲ್ಲ. ಆಗ ಪುಣೆ ತಂಡದಲ್ಲಿ ಧೋನಿ ಜತೆಯಲ್ಲೇ ಆಡಿದ್ದರು. ಭರ್ತಿ 100 ಪಂದ್ಯಗಳಿಂದ 2,935 ರನ್‌ ಪೇರಿಸಿದ ಸಾಧನೆ ಈ ದಕ್ಷಿಣ ಆಫ್ರಿಕಾ ಕ್ರಿಕೆಟಿಗನದ್ದು. ಚೆನ್ನೈಯನ್ನು ಎತ್ತರಕ್ಕೆ ಏರಿಸಿದ್ದೇ ಡು ಪ್ಲೆಸಿಸ್‌ ಎಂಬುದರಲ್ಲಿ ಅನುಮಾನವಿಲ್ಲ.
2021ರಲ್ಲಂತೂ ಚೆನ್ನೈ ಜಯದಲ್ಲಿ ಡು ಪ್ಲೆಸಿಸ್‌ ಪಾತ್ರ ನಿರ್ಣಾಯಕವಾಗಿತ್ತು. 16 ಪಂದ್ಯಗಳಿಂದ 633 ರನ್‌ ರಾಶಿ ಹಾಕಿದ್ದರು. ಆದರೂ ಅವರನ್ನು ಚೆನ್ನೈ ಉಳಿಸಿಕೊಳ್ಳಲಿಲ್ಲ, ಖರೀದಿಸಲೂ ಇಲ್ಲ!

ಸಿಂಗಾಪುರ್‌ ಕ್ರಿಕೆಟಿಗನಿಗೆ 8.25 ಕೋಟಿ!
ಮುಂಬೈ ಇಂಡಿಯನ್ಸ್‌ ರವಿವಾರ ಕೆಲವು ದುಬಾರಿ ಬಿಡ್‌ ನಡೆಸಿ ಗಮನ ಸೆಳೆಯಿತು. ಇವರಲ್ಲಿ ಪ್ರಮುಖರೆಂದರೆ ಸಿಂಗಾಪುರ ಬ್ಯಾಟರ್‌ ಟಿಮ್‌ ಡೇವಿಡ್‌ ಮತ್ತು ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್. ಇವರಲ್ಲಿ ಆರ್ಚರ್‌ಗಿಂತಲೂ ಡೇವಿಡ್‌ ಬೆಲೆ ಜಾಸ್ತಿ!

ಕಳೆದ ವರ್ಷ ಆರ್‌ಸಿಬಿಯಲ್ಲಿದ್ದ ಟಿಮ್‌ ಡೇವಿಡ್‌ ಒಂದೇ ಪಂದ್ಯವಾಡಿ ಒಂದು ರನ್‌ ಮಾಡಿದ್ದರು. ಆದರೆ ಉಳಿದ ಕ್ರಿಕೆಟ್‌ ಲೀಗ್‌ಗಳಲ್ಲಿ ಇವರದು ಉತ್ತಮ ಪ್ರದರ್ಶನ. ಬಿಗ್‌ ಬಾಶ್‌ (ಹೋಬರ್ಟ್‌ ಹರಿಕೇನ್ಸ್‌), ಪಾಕಿಸ್ಥಾನ್‌ ಸೂಪರ್‌ ಲೀಗ್‌ (ಲಾಹೋರ್‌ ಖಲಂದರ್), ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ಗಳಲ್ಲೆಲ್ಲ (ಸೇಂಟ್‌ ಲೂಸಿಯಾ ಕಿಂಗ್ಸ್‌) ಮಿಂಚಿನ ಆಟವಾಡಿದ್ದಾರೆ. ಮುಂಬೈ ಇದನ್ನೆಲ್ಲ ಗಮನಿಸಿ ಡೇವಿಡ್‌ಗೆ ಬಲೆ ಬೀಸಿತು.

ಆರ್ಚರ್‌ಗೆ ಮೊದಲು ಬಿಡ್‌ ಮಾಡಿದ್ದು ರಾಜಸ್ಥಾನ್‌. ಕಳೆದ ವರ್ಷ ಇಂಗ್ಲೆಂಡ್‌ ವೇಗಿ ಇದೇ ತಂಡದಲ್ಲಿದ್ದರು. ಬಳಿಕ ಮುಂಬೈ ಪ್ರವೇಶವಾಯಿತು. ಹೈದರಾಬಾದ್‌ ಕೂಡ ಅಖಾಡಕ್ಕಿಳಿದು 7.5 ಕೋಟಿ ತನಕ ಬಂತು. ಆದರೆ ಮುಂಬೈ ಪಟ್ಟು ಸಡಿಲಿಸಲಿಲ್ಲ.

ಆರ್ಚರ್‌ ಅವರ ದೊಡ್ಡ ಸಮಸ್ಯೆಯೆಂದರೆ ಫಿಟ್‌ನೆಸ್‌ನದ್ದು. ಇದರಿಂದ ಕಳೆದ ಮಾರ್ಚ್‌ ಬಳಿಕ ಟಿ20 ಆಡಿಲ್ಲ. ಅವರು ಲಭ್ಯರಾಗುತ್ತಾರೆಂಬ ಖಾತ್ರಿ ಈಗಲೂ ಇಲ್ಲ!

ರೈನಾ ಐಪಿಎಲ್‌ ಆಟ ಮುಗಿಯಿತೇ?
ಅಚ್ಚರಿಯೆಂದರೆ ಮೊದಲ ದಿನ ಮಾರಾಟವಾಗದೇ ಉಳಿದಿದ್ದ ಐಪಿಎಲ್‌ನ ಅತ್ಯಂತ ಯಶಸ್ವಿ ಆಟಗಾರ ಸುರೇಶ್‌ ರೈನಾ ಅವರನ್ನು ಎರಡನೇ ದಿನವೂ ಪರಿಗಣಿಸದಿರುವುದು. ಇನ್ನೂ ವಿಚಿತ್ರವೆಂದರೆ, ಅವರ ಹೆಸರು ಮರು ಹರಾಜು ಪಟ್ಟಿಯಲ್ಲೂ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಅವರ ಐಪಿಎಲ್‌ ಅವಧಿ ಮುಗಿಯಿತೇ ಎಂಬ ಪ್ರಶ್ನೆಯೆದ್ದಿದೆ. 2020ರ ಐಪಿಎಲ್‌ ಅರ್ಧದಲ್ಲೇ ರೈನಾ ಯುಎಇನಿಂದ ಭಾರತಕ್ಕೆ ಮರಳಿದ್ದರು. ಅಲ್ಲಿಂದ ಅವರ ಕ್ರಿಕೆಟ್‌ ಜೀವನ ಇಳಿಕೆಯ ದಾರಿ ಹಿಡಿದಿದೆ.

ಮರು ಹರಾಜಿನಲ್ಲಿ ಬಂಪರ್‌!
ಮೊದಲ ದಿನ ಮಾರಾಟವಾಗದೇ ಉಳಿದ ಆಟಗಾರರನ್ನು ರವಿವಾರ ಮರು ಹರಾಜಿಗೆ ಹಾಕಲಾಯಿತು. ಇಲ್ಲಿ ಕ್ರಿಸ್‌ ಜೋರ್ಡನ್‌, ಡೇವಿಡ್‌ ಮಿಲ್ಲರ್‌, ಮ್ಯಾಥ್ಯೂ ವೇಡ್‌, ಸ್ಯಾಮ್‌ ಬಿಲ್ಲಿಂಗ್ಸ್‌ ಅವರಿಗೆಲ್ಲ ಉತ್ತಮ ಬೆಲೆ ಸಿಕ್ಕಿತು.
ಜೋರ್ಡನ್‌ 3.6 ಕೋಟಿಗೆ ಚೆನ್ನೈ ಪಾಲಾದರು. ಮಿಲ್ಲರ್‌ ಮತ್ತು ವೇಡ್‌ ಅವರನ್ನು ಗುಜರಾತ್‌ ಕ್ರಮವಾಗಿ 3 ಕೋಟಿ ಹಾಗೂ 2.4 ಕೋಟಿ ನೀಡಿ ಖರೀದಿಸಿತು. ಸಾಹಾ ಕೂಡ ಗುಜರಾತ್‌ ಪಾಲಾದರು (1.9 ಕೋಟಿ).

ಸ್ಯಾಮ್‌ ಬಿಲ್ಲಿಂಗ್ಸ್‌ ಅವರನ್ನು ಕೆಕೆಆರ್‌ ಖರೀದಿಸಿತು (2 ಕೋಟಿ ರೂ.). ಲಕ್ನೋ ಎವಿನ್‌ ಲೆವಿಸ್‌ಗೂ 2 ಕೋಟಿ ನೀಡಿತು. ಅಲೆಕ್ಸ್‌ ಹೇಲ್ಸ್‌ ಕೆಕೆಆರ್‌, ಗ್ಲೆನ್‌ ಫಿಲಿಪ್ಸ್‌ ಹೈದರಾಬಾದ್‌ ಪಾಲಾದರು (ತಲಾ 1.5 ಕೋಟಿ). ಕನ್ನಡಿಗ ಕರುಣ್‌ ನಾಯರ್‌ ಅವರನ್ನು ಖರೀಸುವ ಹಾದಿಯಲ್ಲಿ ಆರ್‌ಸಿಬಿ ಎಡವಿತು. ಅವರು 1.4 ಕೋಟಿ ರೂ.ಗೆ ರಾಜಸ್ಥಾನ್‌ ಪಾಲಾದರು.

ಶಕಿಬ್‌ ಅಲ್‌ ಹಸನ್‌, ಶೆಲ್ಡನ್‌ ಕಾಟ್ರೆಲ್‌, ಬೆನ್‌ ಮೆಕ್‌ಡರ್ಮಟ್‌, ಮೊಸಸ್‌ ಹೆನ್ರಿಕ್ಸ್‌, ಆ್ಯಂಡ್ರೂé ಟೈ, ಕಾಲಿನ್‌ ಮುನ್ರೊ ಇಲ್ಲಿಯೂ “ಅನ್‌ ಸೋಲ್ಡ್‌’ ಆಗಿಯೇ ಉಳಿದರು.

ಐಪಿಎಲ್‌ ತಂಡಗಳು

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.