ಬಂದನೋ ಪರಿಸರಪ್ರಿಯ ಗಣಪ
Team Udayavani, Sep 8, 2018, 11:02 AM IST
ಈ ಬಾರಿ ಚೌತಿಯ ವೇಳೆ ಬಹುತೇಕ ಭಕ್ತರ ಮನವನ್ನು ಗೆಲ್ಲುತ್ತಿರುವುದು ಮಣ್ಣಿನ ಗಣಪ. ಪಿಒಪಿ ಗಣಪನ ಮೇಲೆ ಮಮಕಾರ ತುಸು ಕಡಿಮೆ ಆಗಿದೆ ಎನ್ನಬಹುದು…
ಇತೀಚಿನ ದಿನಗಳಲ್ಲಿ ಪರಿಸರಸ್ನೇಹಿ ಗಣೇಶ ಹಬ್ಬ ಆಚರಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕೆರೆಗಳನ್ನು, ಜಲಮೂಲಗಳನ್ನು ಸಂರಕ್ಷಿಸುವ ಉದ್ದೇಶದಿಂದ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಗೌರಿ-ಗಣೇಶ ಹಬ್ಬದಂದು ಜೇಡಿ ಮಣ್ಣಿನಿಂದ ಮಾಡಿದ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ ಬಣ್ಣ ಲೇಪಿತ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಿದೆ.
ಗೋಮಯ ಗಣಪ
ಭಕ್ತರಿಗಾಗಿ ಈ ಬಾರಿ ಗೋಮಯ ಗಣೇಶಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಶೇ.25ರಷ್ಟು ದೇಶೀ ಗೋವಿನ ಗೋಮಯದೊಂದಿಗೆ ವಿಭೂತಿ, ಅರಿಶಿನ, ಜೇಡಿಮಣ್ಣು , ಗೋಮೂತ್ರದಿಂದಲೇ ಕಲಸಿ ಈ ಗಣಪತಿ ಮೂರ್ತಿಯನ್ನು ಮಾಡಲಾಗಿದೆ. ಪೂಜೆ, ಆರಾಧನೆ ನಂತರ ವಿಗ್ರಹ ವಿಸರ್ಜನೆ ಸಂದರ್ಭದಲ್ಲಿ ನೀರಲ್ಲಿ ಕರಗಿಸಿದರೆ ಆಯ್ತು. ನಂತರ ಆ ನೀರನ್ನು ಗಿಡಗಳಿಗೆ, ಸಸಿಗಳಿಗೆ ಹಾಕಬಹುದು. ಈ ರೀತಿಯ ಮೂರ್ತಿಗಳಿಂದ ಜಲಮೂಲಕ್ಕೆ ಯಾವುದೇ ಹಾನಿಯಾಗುವುದಿಲ್ಲ.
ಮಣ್ಣಿನ ಗಣಪಗೆ ಜೈ
ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳ ಪ್ರತಿಷ್ಠಾಪನೆಗೆ ಹೆಚ್ಚಿನ ಕುಟುಂಬಗಳು ಒಲವು ವ್ಯಕ್ತಪಡಿಸಿದರೆ, ಬೀದಿಗಳಲ್ಲಿ ಗಣಪನನ್ನು ಕೂರಿಸುವವರು ಪಿಒಪಿಯ ದೊಡ್ಡ ದೊಡ್ಡ ಗಣೇಶನ ಮೂರ್ತಿಗಳನ್ನೇ ಇಷ್ಟಪಡುತ್ತಾರೆ. ಸಾಂಪ್ರದಾಯಿಕ ಮಣ್ಣಿನ ಗಣಪನ ಮೂರ್ತಿ ಮಾಡಲು ಮಣ್ಣಿನ ಕೊರತೆಯಾದ್ದರಿಂದ ತಯಾರಕರು ಸುಲಭವಾಗಿ ಪಿಒಪಿ ಮೊರೆ ಹೋಗುತ್ತಾರೆ. ಆದರೂ ಎರಡು ಮೂರು ವರ್ಷಗಳಿಗೆ ಹೋಲಿಸಿದರೆ ಪಿಒಪಿ ಗಣೇಶ ವಿಗ್ರಹಗಳ ಮಾರಾಟ ಈ ಬಾರಿ ಕಡಿಮೆಯಾಗಿದೆ ಎನ್ನುತ್ತಾರೆ ಮಾರಾಟಗಾರರು.
ಗೋಪಾಲ್ ತಿಮ್ಮಯ್ಯ