ಪ್ರವಾಹದ ಗೋಳು ಹಾಗೂ ನದಿಯ ಹೂಳು


Team Udayavani, Apr 23, 2018, 11:52 AM IST

pravaha.jpg

ಬೇಸಿಗೆಯಲ್ಲಿ ಹನಿ ನೀರಿಲ್ಲದೇ ಭಣಗುಡುವ ಹೊಳೆ -ಹಳ್ಳಗಳು ಮಳೆಗಾಲದಲ್ಲಿ ಉಕ್ಕೇರುತ್ತಿವೆ. ನದಿ ಪಾತ್ರಗಳಲ್ಲಿ ಹೂಳು ತುಂಬಿ ಸಮತಟ್ಟಾಗಿ ರಸ್ತೆಗೆ ಬಿದ್ದ ನೀರಿನಂತೆ ಇಳಿಜಾರಿಗೆ ಓಡುತ್ತಿವೆ. ಭೂತನ ಗುಂಡಿ, ಮೊಸಳೆ ಗುಂಡಿಗಳು ಮುಚ್ಚಿ ಹೋಗಿವೆ. ಕೆರೆಗಳ ಹೂಳೆತ್ತುವುದಕ್ಕೆ ಅಸಾಧ್ಯವಾದ  ರಾಜ್ಯದಲ್ಲಿ ನದಿ ಹೂಳೆತ್ತುವ ಗತಿ ಬಂದಿದೆ. ಜೀವ ನದಿಗಳ ಸಾವಿನ ಕಥನಕ್ಕೆ ಯಾರು ಕಾರಣ?

ಬೆಳಗಾವಿಯ ರಾಮದುರ್ಗದಲ್ಲಿ ಮಲಪ್ರಭಾ ನದಿ ಹರಿಯುತ್ತದೆ. ನದಿಯ ಇಕ್ಕೆಲಗಳಲ್ಲಿ ಗುಡ್ಡದ ಸಾಲುಗಳಿವೆ. ಕಲ್ಲುಗುಡ್ಡಗಳಲ್ಲಿ ಸಣ್ಣ ಪುಟ್ಟ ಪೊದೆಗಳು ಮಾತ್ರ ಇವೆ. ನದಿಯ ಇಕ್ಕೆಲಗಳಲ್ಲಿ ಫ‌ಲವತ್ತಾದ ಕೃಷಿ ಭೂಮಿಗಳು ವಿಸ್ತರಣೆಯಾಗಿ ನದಿಯಂಚಿನ ಸಸ್ಯಗಳು ಸರ್ವನಾಶವಾಗಿವೆ. ಜೋರಾಗಿ ಮಳೆ ಸುರಿದು ಪ್ರವಾಹ ಬಂದರೆ ಹೊಲಕ್ಕೆ ನೀರು ನುಗ್ಗುತ್ತದೆ. ನದಿ ಪಾತ್ರವನ್ನು ನೋಡಿದರೆ ಎಲ್ಲೂ ಆಳದ ಗುಂಡಿಗಳಿಲ್ಲ, ಹೂಳು ತುಂಬಿ, ನದಿಯ ಸ್ವರೂಪ ಬದಲಾಗಿದೆ. ನದಿಯ ಹೂಳೆತ್ತಿದರೆ ನೀರು ಸಂಗ್ರಹಣೆ ಹೆಚ್ಚುತ್ತದೆಂದೂ, ಅಂತರ್ಜಲ ಮಟ್ಟ ಸುಧಾರಿಸುತ್ತದೆಂದು ರಾಮದುರ್ಗದಲ್ಲಿ ಕೆಲಸ ನಡೆಯುತ್ತಿದೆ.

ನದಿದಂಡೆಗಳಿಗೆ ಕಲ್ಲು ಕಟ್ಟಿ ಕಾಲುವೆಯಂತೆ ಶಿಸ್ತಿನ ರೂಪ ನೀಡಲಾಗಿದೆ. ಹೂಳಿನ ಹೆಸರಿನಲ್ಲಿ ಒಂದಿಷ್ಟು ಮರಳು ತೆಗೆಯಲಾಗಿದೆ. ನದಿ ಹೂಳು ತೆಗೆಯುವುದಕ್ಕಿಂತ ಇನ್ನೂ ಹೂಳು ಬರದಂತೆ ಮಾಡುವ ನೆಲ ಜಲ ಸಂರಕ್ಷಣೆಯ ಕೆಲಸಗಳು ಕಣಿವೆಗಳಲ್ಲಿ ನಡೆಯಬೇಕು.  ಆದರೆ ನದಿಯ ಹೂಳೆತ್ತುವ ಕಾಮಗಾರಿಯೇ ಜಾಸ್ತಿ ಕಾಣಿಸುತ್ತಿದೆ. ನದಿಯ ಗುಣಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಆಡಳಿತ ಸೋಲುತ್ತಿದೆ. ಬಳ್ಳಾರಿಯ ಹಗರಿ ಹಳ್ಳ ಸಂಪೂರ್ಣ ಮರಳಿನ ನೆಲೆಯಾಗಿದೆ. ಮಳೆಗಾಲದಲ್ಲಿ ಸ್ವಲ್ಪ ದಿನ ಮಾತ್ರ ಇಲ್ಲಿ ನೀರು ನೋಡಬಹುದು.

ಹಳ್ಳದ ಗುಂಟ ನಡೆದರೆ ಹಲವು ಏತ ನೀರಾವರಿ ಯೋಜನೆಗಳು ಸರಕಾರಿ ಕಾಂಕ್ರೀಟ್‌ ಸ್ಮಾರಕದಂತೆ ನಿಂತಿವೆ. ರೈತರು ಬೇಸಿಗೆ ಆರಂಭದಲ್ಲಿ ಹಳ್ಳದ ಮರಳು ಬಗೆದು ನದಿ ಪಾತ್ರದಲ್ಲಿ ಹೊಂಡ ನಿರ್ಮಿಸಿ ಕೃಷಿಗೆ ನೀರೆತ್ತುತ್ತಾರೆ.  ಕುದುರೆಮುಖ ಗಣಿಗಾರಿಕೆಯಿಂದ ತುಂಗಭದ್ರಾದಲ್ಲಿ ಹೂಳು ತುಂಬಿದೆ. ಹೊಸಪೇಟೆಯ ಅಣೆಕಟ್ಟೆಯಲ್ಲಿ ನೀರಿಗಿಂತ ಜಾಸ್ತಿ ಹೂಳಿದೆ. ಕೃಷ್ಣಾ, ವರದಾ, ನೇತ್ರಾವತಿ… ಹೀಗೆ ಎಲ್ಲ ನದಿಗಳಲ್ಲಿಯೂ ಹೂಳು ಕಾಣಿಸುತ್ತಿದೆ. ನೀರು ಹಿಡಿಯುವ ಸರಣಿ ಕೆರೆಗಳಂತೆ ಆಳದ ಗುಂಡಿಗಳನ್ನು ಮಡಿಲಲ್ಲಿಟ್ಟುಕೊಂಡ ನದಿಗಳು ಇಂದು ಹೂಳಿನಿಂದ ತುಂಬಿಹೋಗಿವೆ. ಕಳೆದ 40 ವರ್ಷಗಳಲ್ಲಿ ನಮ್ಮ ಅಭಿವೃದ್ಧಿಯ ಫ‌ಲಗಳಿವು.

ಊರಿನ ಸ್ಮಶಾನ ಹಾಗೂ ಅಪರಿಚಿತ ಹೊಳೆ ಹೆದರಿಸುತ್ತದೆಂಬ ಮಾತು ಹಳೆಯದು. ರಾತ್ರಿ ನಮ್ಮ ಊರಿನ ಸ್ಮಶಾನ ರಸ್ತೆಯಲ್ಲಿ ಒಂಟಿಯಾಗಿ ನಡೆಯುವಾಗ ಅಲ್ಲಿ ಸುಟ್ಟ ಹೆಣಗಳ ನೆನಪಾಗಿ ಭಯ ಹುಟ್ಟಬಹುದು. ನಮಗೆ ಪರಿಚಿತವಲ್ಲದ ಊರಿನ ನದಿಗಿಳಿದು ಆಚೆ ದಡ ದಾಟುವಾಗ ಆಳ ಎಷ್ಟಿದೆಯೆಂದು ತಿಳಿಯದೇ ಭಯಪಡುತ್ತೇವೆ. ನದಿ, ಹಳ್ಳಗಳನ್ನು ನೋಡುತ್ತ ಬೆಳೆದ ನಮಗೆ ಇಂದು ಬದಲಾದ ಚಿತ್ರಗಳು ಕಾಣಿಸುತ್ತಿವೆ. ಹೊಳೆ-ಹಳ್ಳಗಳಿಗೆ ಸೇತುವೆಗಳಿಲ್ಲದ ಕಾಲದಲ್ಲಿ ಪ್ರವಾಹದ ಸಂದರ್ಭದಲ್ಲಿ ನದಿ ದಾಟಬೇಕಿತ್ತು.

ನೀರಿನ ಸೆಳವು ಇಲ್ಲದ ಜಾಗ ಗುರುತಿಸಿದ ಹಿರಿಯರು ಅಲ್ಲಿ ” ದಾಟ್‌ಸಾಲು’ ಕಂಡುಕೊಂಡಿದ್ದರು. ತಲೆಯಲ್ಲಿ ಚೀಲದ ಭಾರ ಹೊತ್ತು ಪ್ರವಾಹದ ಕೆಂಪು ನೀರಿಗೆ ಇಳಿದು ನಿಧಾನಕ್ಕೆ ಹೆಜ್ಜೆ ಇಡುತ್ತಿದ್ದರು. ಹಳ್ಳ ಉಳಿದೆಡೆಗಿಂತ ದಾಟ್‌ಸಾಲಿನ ಜಾಗದಲ್ಲಿ ಹೆಚ್ಚು ಅಗಲವಾಗಿ ಸೆಳೆತವಿಲ್ಲದೇ ಹರಿಯುತ್ತಿತ್ತು. ನದಿಗೆ ಇಳಿಯಲು ಇಲ್ಲಿ ಅಭ್ಯಾಸ, ಧೈರ್ಯ ಬೇಕು. ಹಿರಿಯರ ಜೊತೆ ನೀರಿಗಿಳಿದ ಅನುಭವದಲ್ಲಿ ಮಕ್ಕಳಿಗೂ ನದಿ ನಡಿಗೆ ಸಾಧ್ಯವಾಗುತ್ತಿತ್ತು. ಬಿದಿರಿನ ಸಾರ, ಮರದ ಸಂಕಗಳನ್ನು  ಮಳೆಗಾಲದಲ್ಲಿ ನಿರ್ಮಿಸುತ್ತಿದ್ದರು.

ಕಾಂಕ್ರಿಟ್‌ ಸೇತುವೆಗಳು 70 ರ ದಶಕದ ನಂತರದಲ್ಲಿ ವ್ಯಾಪಕ ಪ್ರಮಾಣದಲ್ಲಿ ನಿರ್ಮಾಣವಾದವು. ಅಲ್ಲಿಂದ ನೇರ ನೀರಿಗಿಳಿದು ಪ್ರವಾಹದಲ್ಲಿ ಗೆಲ್ಲುವ  ಜಲಜಾnನದಿಂದ ನಾವು ದೂರಾದೆವು. ಮಳೆಗಾಲ ಮುಗಿದು ಆಗಸ್ಟ್‌ ಹೊತ್ತಿಗೆ ತಿಳಿಯಾದ ಒರತೆ ಜಲ ಅಬ್ಬರದಲ್ಲಿ ಹರಿಯುವಾಗ ನೀರೊಳಗಿನ ಮೀನು, ಕಪ್ಪೆಗಳು ಕಾಣುತ್ತಿದ್ದವು. ಜಲ ಸಸ್ಯಗಳ ನಡುವೆ ಜೀವಲೋಕದ ಆಟ ನೋಡಬಹುದಿತ್ತು. ಮಳೆಗಾಲದ ಕೆಂಪು ಕೆಸರು ನೀರಿಗಿಂತ ಈ ತಿಳಿನೀರಿನ ಹರಿವಿನ ವೇಗ ಇನ್ನೂ ಜಾಸ್ತಿ, ಯೋಚಿಸದೆ ಹಳ್ಳಕ್ಕಿಳಿದರೆ ಕಾಲ್ತಪ್ಪಿಸಿ ಎಳೆದೊಯ್ಯುವ ಶಕ್ತಿ ಇದರದು.

ಮಳೆಗಾಲದಲ್ಲಿ ನದಿ ದಾಟಿದ ಜಾಗದಲ್ಲಿ ತಿಳಿ ನೀರು ದಾಟಲಾಗದ ಸ್ಥಿತಿ ಇರುತ್ತಿತ್ತು. ತೇಲಿ ಹೋಗುವ ಹೊತ್ತಿನಲ್ಲಿ ನದಿಯಂಚಿನ ಹೆಮ್ಮರಗಳ ಟೊಂಗೆ, ಬೇರು ಹಿಡಿದು ಬಚಾವಾದ ರೋಚಕ  ಅನುಭವಗಳಿವೆ. ಬೇಸಿಗೆಯಲ್ಲಿ ನಮ್ಮ ಹಳ್ಳಗಳಿಗೆ ಸಾಬರ ತಂಡ ಬರುತ್ತಿತ್ತು. ಉದ್ದನೆಯ ಬಿದಿರು ಗಳು, ಬಲೆ ಹಿಡಿದು ಅವರು ಹಳ್ಳದ ದಂಡೆಯ ಚಾರಣಿಗರಾಗಿ ಸಾಗುತ್ತಿದ್ದರು. ಆಳದ ಗುಂಡಿಗಳಿಗೆ ಬಲೆ ಹಾಕಿ ನಡು ರಾತ್ರಿಯೂ ಮೀನ ಧ್ಯಾನದ ಠಿಕಾಣಿ ಅವರದು. ನೀರಿನಾಳದಲ್ಲಿ ತೆಪ್ಪಗೆ ಅವಿತಿದ್ದ ಮೀನುಗಳನ್ನು  ಬಿದಿರು ಗಳುವಿನ ನೆರವಿನಿಂದ (ಎಬ್ಬಿಸಿ) ಬಲೆಗೆ ಬೀಳಿಸುವ ಸಾಹಸ ನಡೆಸುತ್ತಿದ್ದರು.

ನಮ್ಮ ಹಳ್ಳದ ಗುಂಡಿಯ ಆಳ ಎಷ್ಟಿದೆಯೆಂದು ತಿಳಿಯಲು ಇದು ತಕ್ಕ ಸಮಯವೆಂದು, ಅವರ ಜೊತೆ ಊರಿನ ಮಕ್ಕಳೆಲ್ಲ ಜಮಾಯಿಸುತ್ತಿದ್ದರು. 15-20 ಅಡಿ ಉದ್ದದ ಗಳುವಿಗೂ ಆಳ ಅಂದಾಜಾಗದ ನೆಲೆಗಳು ಪತ್ತೆಯಾಗುತ್ತಿದ್ದವು. ಇದರಿಂದ ಹಳ್ಳಕ್ಕೆ ಈಜಲು ಹೊರಟ ನಮ್ಮನ್ನು ಹೆದರಿಸಲು ಹಿರಿಯರಿಗೆ ಅರಿನ ಹೊಸ ಅಸ್ತ್ರ ಸಿಗುತ್ತಿತ್ತು. ಆಳದ ಗುಂಡಿ, ಮೀನು ಬೇಟೆ, ಈಜು ಸಂಭ್ರಮಗಳಿಂದ ಪ್ರತಿ ಹಳ್ಳಿಗೂ ಹಳ್ಳದ ಒಂದೆರಡು ಕಿ.ಲೋ ಮೀಟರ್‌ ಉದ್ದದ ನೀರಿನ ಸ್ಥಿತಿಗತಿಯ ಪಕ್ಕಾ ಪರಿಚಯವಿತ್ತು.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಹಳ್ಳಿಯಲ್ಲಿ ಮಕ್ಕಳು ಬೇಸಿಗೆಯಲ್ಲಿ ಮೊಸಳೆ ಗುಂಡಿಯತ್ತ ಹೋಗುತ್ತಿರಲಿಲ್ಲ. ಈಜುವ ಮಕ್ಕಳನ್ನು ಮೊಸಳೆ ನುಂಗುವ ಭಯವಿತ್ತು. ಈಗ  ಮೊಸಳೆ ಗುಂಡಿಯಲ್ಲಿ ಬೇಸಿಗೆಯಲ್ಲಿ ವಾಲಿಬಾಲ್‌, ಲಗೋರಿ ಆಡಬಹುದು ! ಹೂಳು ತುಂಬಿ ಗುಂಡಿಗಳು ಸಂಪೂರ್ಣ ಮಾಯವಾಗಿವೆ. 80ರ ದಶಕದ ನಂತರದಲ್ಲಿ ನದಿ ಕಣಿವೆಗಳಲ್ಲಿ ಸಾರಿಗೆ ಸಂಪರ್ಕ ಬದಲಾಯಿತು. ಕಾಲು ದಾರಿಯ ಪಯಣ ಮರೆತು ಜನತೆ ಮಣ್ಣಿನ ರಸ್ತೆಯಲ್ಲಿ ಬೆಳೆದರು.  ಚಕ್ಕಡಿ ಓಡಾಟ ನಿಂತು ಟಾರು ರಸ್ತೆಗಳಲ್ಲಿ ಮೋಟಾರು ಕಾಣಿಸಿದವು.

ಸಾರಿಗೆ ಸಂಪರ್ಕ ಬದಲಾದಂತೆ ಇದಕ್ಕೆ ಪೂರಕವಾಗಿ ಸೇತುವೆಗಳ ನಿರ್ಮಾಣವಾಯ್ತು. ರಸ್ತೆಯನ್ನು ಮಳೆ ನೀರಿನಿಂದ ರಕ್ಷಿಸಲು ಅಕ್ಕಪಕ್ಕ ಕಾಲುವೆಗಳು ನಿರ್ಮಾಣವಾದವು.  ರಸ್ತೆ, ಕಾಲುವೆಗೆ ಮಣ್ಣು ಅಗೆದ ಜಾಗದಲ್ಲಿ ಮಳೆ ನೀರು ಗುಡ್ಡದಿಂದ ವೇಗವಾಗಿ ಹರಿಯಿತು. ಅಪಾರ ಪ್ರಮಾಣದಲ್ಲಿ ಹೂಳು ಹಳ್ಳ, ನದಿಗಳಿಗೆ ಸಾಗಿತು. ಅರಣ್ಯನಾಶದಿಂದ ಭೂಸವಕಳಿಗೆ ಇನ್ನಷ್ಟು ವೇಗ ದೊರೆಯಿತು. ನೆಡುತೋಪು ಬೆಳೆಸಲು ಬಂದ ರಿಪ್ಪಿಂಗ್‌ ಯಂತ್ರ, ಬುಲ್ಡೋಜರ್‌ಗಳು ಭೂಮಿಯ ಮೇಲ್ಪದರವನ್ನು ಅಗೆದು ಸಡಿಲಗೊಳಿಸಿದವು. ಕೃಷಿ ವಿಸ್ತಣೆಯೂ ನದಿ ಕಣಿವೆಯಲ್ಲಿ ಹೆಚ್ಚಿದವು.

ಅಬ್ಬರದ ಮಳೆಯಲ್ಲಿ ಹೊಳೆ ಹಳ್ಳಗಳು ಕೆಂಪಾದವು. ಕಾಡು ಗುಡ್ಡದ ಮರ, ಗಿಡ, ಪೊದೆ, ಹುಲ್ಲು, ಬಳ್ಳಿ, ತೆರಕು ಮಣ್ಣು ಸವಕಳಿಯಾಗದಂತೆ ನೈಸರ್ಗಿಕ ತಡೆಯಾಗಿದ್ದವು. ಈಗ ನೆಲದ ಪರಿಸರ ಬದಲಾಗಿ ಗುಡ್ಡದಿಂದ ಓಡಿ ಬಂದ ಮಣ್ಣು, ಮರಳು ಹಳ್ಳಗಳಲ್ಲಿ ಶೇಖರಣೆಯಾಗಿವೆ. ಕಲ್ಲಣೆ, ಅಣೆಕಟ್ಟೆ, ಬಾಂದಾರ, ಕೊರಕಲು ತಡೆ, ಕಿಂಡಿ ತಡೆ ಅಣೆಕಟ್ಟುಗಳನ್ನು  ಕೃಷಿ ನೀರಾವರಿಗಾಗಿ ಹಳ್ಳಗಳಲ್ಲಿ ನಿರ್ಮಿಸಿದ್ದೇವೆ. ಓಡುವ ನೀರನ್ನು ಬೇಸಿಗೆಯಲ್ಲಿ ಹಿಡಿದಿಡುವ ಇವು ಮಳೆ ಪ್ರವಾಹದಲ್ಲಿ ಹೂಳು ಸಂಗ್ರಹಿಸುವ ಕಾರ್ಯವನ್ನು ಮಾಡುತ್ತಿವೆ. ಇದರಿಂದ ಅಣೆಕಟ್ಟೆಗಳ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗುತ್ತಿದೆ.

ಸಾಮಾನ್ಯವಾಗಿ ಅಕ್ಕಪಕ್ಕದ ದಂಡೆ ಎತ್ತರವಿರುವ ನೆಲೆಯಲ್ಲಿ ಹೆಚ್ಚು ನೀರು ನಿಲ್ಲಿಸಲು ಸಾಧ್ಯವಾಗುವುದರಿಂದ ಇಲ್ಲಿ ಒಡ್ಡು ನಿರ್ಮಾಣವಾಗುತ್ತದೆ. ನೀರು ವೇಗವಾಗಿ ಹರಿಯುವ ಪ್ರದೇಶಗಳು ಇದಾದ್ದರಿಂದ ಒಡ್ಡು ಹರಿಯುವ ನೀರಿನ ವೇಗಕ್ಕೆ ತಡೆ ನೀಡುತ್ತದೆ. ಬೇಸಿಗೆಯಲ್ಲಿ ಬಾಗಿಲು ಹಾಕಿ ಮಳೆಗಾಲದಲ್ಲಿ ಈ ಕಿಂಡಿತಡೆ ಅಣೆಕಟ್ಟಿನ ಬಾಗಿಲು  ತೆಗೆಯುವರು. ಮಳೆ ಪ್ರವಾಹದ ನೀರಿಗೆ ಅಡ್ಡವಾಗುವ ಕಿಂಡಿ ತಡೆಯ ಕಾಂಕ್ರೀಟ್‌ ಕಂಬಗಳು ಹೊಳೆ, ಹಳ್ಳಗಳಲ್ಲಿ ಹೂಳಿನ ದಿಬ್ಬ ನಿರ್ಮಿಸುತ್ತವೆ. ವರ್ಷಗಳು ಕಳೆದಂತೆ ದಿಬ್ಬ ಬೆಳೆದು ಪ್ರವಾಹದ ಒತ್ತಡದಿಂದ ದಂಡೆ ಅಗಲವಾಗುತ್ತದೆ.

ಒಂದು ಹಳ್ಳ  ಕಿರಿದಾದ ಜಾಗದಲ್ಲಿ ಆಳವಾಗಿ ಹರಿಯುವುದಕ್ಕೂ ದಂಡೆ ಹಿಗ್ಗಿಸಿಕೊಂಡು ಅಗಲಕ್ಕೆ ಹರಿಯುವುದಕ್ಕೂ ವ್ಯತ್ಯಾಸವಿದೆ.  ನದಿ ದಂಡೆಯ ಸಸ್ಯಗಳ ನಾಶದಿಂದ ಅಂಕುಡೊಂಕಾಗಿ ಹರಿಯುವ ನದಿ, ಹಳ್ಳಗಳು ನೇರವಾಗಿ ಹರಿಯುತ್ತಿವೆ. ಹೀಗಾಗಿ ನೀರು ನಿಲ್ಲದೇ  ಓಡುತ್ತಿದೆ. ಚೈನಾದ ಫೆಂಗ್‌ಶ್ವಯ್‌ ಪರಿಸರ ಲಕ್ಷಣ ಶಾಸ್ತ್ರ ಹೇಳುತ್ತದೆ. ಅಲ್ಲಿ ನದಿಗಳು ಅಂಕುಡೊಂಕಾಗಿ ಹರಿಯುವುದು ಭೂಮಿಯ ಉತ್ತಮ ಲಕ್ಷಣ ಎಂದು ಗುರುತಿಸಲಾಗುತ್ತಿದೆ. ಕಾಡಿನ ನೆಲೆಯಲ್ಲಿ ನೇರಕ್ಕೆ ಬೆಳೆಯುವ ನೆಡುತೋಪು ಬೆಳೆಸಿದಂತೆ ನಮ್ಮ ನದಿಗಳನ್ನೂ ಕಾಲುವೆಯಂತೆ ತಿದ್ದುತ್ತಿದ್ದೇವೆ, ಕಟ್ಟುತ್ತಿದ್ದೇವೆ.

ಮಹಾರಾಷ್ಟ್ರದಲ್ಲಿ ಮಾಂಜಾ ನದಿಗೆ ಕೃಷಿ ನೀರಾವರಿ ಅನುಕೂಲಕ್ಕೆ ಸರಣಿ ಬ್ಯಾರೇಜ್‌ಗಳನ್ನು ಎರಡು ಮೂರು ದಶಕಗಳ ಹಿಂದೆಯೇ ನಿರ್ಮಿಸಲಾಗಿದೆ. ನದಿಯ ಪಾತ್ರಗಳಲ್ಲಿ ಹೂಳು ತುಂಬಿದ್ದರಿಂದ ಮಳೆಯ ನೀರೆಲ್ಲ ಹರಿದು ಹೋಗುತ್ತಿತ್ತು, ಆಳದ ಗುಂಡಿಗಳೆಲ್ಲ ಆಟದ ಬಯಲಾಗಿದ್ದವು. 18 ಕಿಲೋ ಮೀಟರ್‌ ಉದ್ದ ಹಾಗೂ ಸುಮಾರು 180 ಮೀಟರ್‌ ಅಗಲದ ನದಿ ಪಾತ್ರದಲ್ಲಿ ಹೂಳು ತೆಗೆಯುವುದಕ್ಕೆ ಮಹಾರಾಷ್ಟ್ರ ಸರಕಾರ 138 ಕೋಟಿ ರೂಪಾಯಿಯ ಯೋಜನೆ ರೂಪಿಸಿತ್ತು. ಆದರೆ ಎರಡು ವರ್ಷಗಳ ಹಿಂದೆ ಬರದ ಸಂಕಷ್ಟ ಅನುಭಸಿದ ರೈತರು ಸ್ವತಃ ತಾವೇ ಹೂಳೆತ್ತಲು ನಿರ್ಧರಿಸಿದರು. ವಿವಿಧ ಕಂಪನಿಗಳು, ವ್ಯಾಪಾರಿಗಳು, ದೇಗುಲ ಆಡಳಿತ ಮಂಡಳಿ, ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದವು.

ಜನತೆ ದಾನವಾಗಿ ನೀಡಿದ ನೂರು ಸಾವಿರ ರೂಪಾಯಿಗಳನ್ನು ಸೇರಿಸಿ ಸುಮಾರು ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ಈಗ ನದಿ ಪಾತ್ರದ ಹೂಳು ತೆಗೆಯಲಾಗಿದೆ. ಈಗ ಮುಂಚಿಗಿಂತ ಹತ್ತುಪಟ್ಟು ಜಾಸ್ತಿ ಬ್ಯಾರೇಜುಗಳಲ್ಲಿ ನೀರು ನಿಲ್ಲುವ ಅವಕಾಶವಾಗಿದೆ.  ಆದರೆ ಇದು ಅಷ್ಟು ಸರಳ ಕೆಲಸವಲ್ಲ. ಇಂದು ಮರಳಿಗೆ ಬೆಲೆ ಏರಿರುವುದರಿಂದ ಹೂಳೆತ್ತುವ ನೆಪದಲ್ಲಿ ಗಣಿಕಳ್ಳರು ಗುಡ್ಡಬಿಟ್ಟು ನದಿಗಿಳಿಯುವ ಅಪಾಯವಿದೆ. ಲಾರಿ ಮರಳಿಗೆ 35-40 ಸಾವಿರ ಬೆಲೆಯಿರುವಾಗ ನದಿಯ ಹೂಳೆತ್ತುವುದು ಇನ್ನೊಂದು ಬಳ್ಳಾರಿಯ ಮೈನಿಂಗ್‌ ಆಗಬಹುದು. ಜಗತ್ತು ಗೆಲ್ಲುವ ವಿದ್ಯೆ ಪಡೆದ ನಾವು ನಮ್ಮ ನದಿ, ನದಿಯಂಚಿನ ಅರಣ್ಯವನ್ನು ಅರ್ಥಮಾಡಿಕೊಳ್ಳದೇ ಜೀವ ನದಿಗಳ ಸಾವಿಗೆ ಕಾರಣರಾಗಿದ್ದೇವೆ. 

ಮುಂದಿನ ಭಾಗ: ಹೊಳೆ ದಂಡೆಯ ಹಳೆ ನೆನಪುಗಳು

* ಶಿವಾನಂದ ಕಳವೆ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.