ಬಾಳೆಎಲೆ ಊಟಕ್ಕೆ ವೆಂಕಟೇಶ್ವರ ಲಂಚ್ ಹೋಂಗೆ ಬನ್ನಿ!
Team Udayavani, Dec 10, 2018, 6:00 AM IST
ಇತ್ತ ಹೆಚ್ಚಾ ಅಲ್ಲದೆ, ಕಡಿಮೆಯೂ ಅಲ್ಲದ, ಕೈಗೆಟಕುವ ದರದಲ್ಲಿ ಉಪಾಹಾರ ಸಿಗುತ್ತದೆ. ಇಡ್ಲಿ, ವಡೆ ಸಾಂಬಾರ್, ಮಸಾಲ್ ದೋಸೆ ಮತ್ತು ಬಾಳೆಎಲೆಯಲ್ಲಿ ಊಟ ಹಾಕುವುದು ಈ ಹೋಟೆಲ್ನ ವಿಶೇಷ.
ಮೈಸೂರು ಜಿಲ್ಲೆಯಲ್ಲಿ ತೀರಾ ಹಿಂದುಳಿದ ತಾಲೂಕು ಎಂದೇ ಕರೆಯಿಸಿಕೊಳ್ಳುವ ಎಚ್.ಡಿ.ಕೋಟೆ ಕೇರಳ ಗಡಿಗೆ ಹೊಂದಿಕೊಂಡಿದೆ. ವನಸಿರಿಯ ನಾಡು, ಜಲಾಶಯಗಳ ಬೀಡು ಎಂದೇ ಕರೆಯಿಸಿಕೊಳ್ಳುವ ಈ ತಾಲೂಕಿನಲ್ಲಿ ಕಾಕನ ಕೋಟೆ ಅರಣ್ಯ, ಬೀಚನಹಳ್ಳಿ ಡ್ಯಾಂ, ಕಬಿನಿ ಹಿನ್ನೀರು ಪ್ರದೇಶಗಳು ಪ್ರವಾಸಿಗರ ನೆಚ್ಚಿನ ತಾಣಗಳಾಗಿವೆ. ಚಳಿಗಾಲದಲ್ಲಿ ಹಿಮಾಲಯದಿಂದ ವಲಸೆ ಬರುವ ಬೂದು ಬಣ್ಣದ ಬಾತುಕೋಳಿಗಳು ಪಕ್ಷಿಪ್ರಿಯರನ್ನು ಕೈಬೀಸಿ ಕರೆಯುತ್ತವೆ. ಇಂತಹ ಪ್ರಾಕೃತಿಕ ಪ್ರಮುಖ ಪ್ರವಾಸಿ ತಾಣವಾಗಿರುವ ಎಚ್.ಡಿ.ಕೋಟೆಯಲ್ಲಿ ಅಂತಹ ಸ್ಟಾರ್ ಹೋಟೆಲ್ಗಳು ಇಲ್ಲದಿದ್ದರೂ, ಶುಚಿ ರುಚಿಗೆ ಯಾವುದೇ ಕೊರತೆಯಾಗದಂತಹ ಹೋಟೆಲ್ಗಳು ಇವೆ. ಅದರಲ್ಲಿ ವೆಂಕಟೇಶ್ವರ ಲಂಚ್ ಹೋಂ ಕೂಡ ಒಂದು. ಇತ್ತ ಹೆಚ್ಚಾ ಅಲ್ಲದೆ, ಕಡಿಮೆಯೂ ಅಲ್ಲದ, ಕೈಗೆಟಕುವ ದರದಲ್ಲಿ ಉಪಾಹಾರ ಸಿಗುತ್ತದೆ. ಇಡ್ಲಿ, ವಡೆ ಸಾಂಬಾರ್, ಮಸಾಲ್ ದೋಸೆ ಮತ್ತು ಬಾಳೆಎಲೆಯಲ್ಲಿ ಊಟ ಹಾಕುವುದು ಈ ಹೋಟೆಲ್ನ ವಿಶೇಷ.
ಮೂಲತಃ ಗುಂಡ್ಲುಪೇಟೆ ಮೂಲದವರಾದ ನಾಗೇಂದ್ರ ಅವರು, ತಮ್ಮ ತಂದೆಯ ಕಾಲದಲ್ಲೇ ಎಚ್.ಡಿ.ಕೋಟೆಗೆ ಬಂದು ನೆಲೆಸಿದ್ದಾರೆ. ತಂದೆ ತೀರಿಕೊಂಡ ನಂತರ ಕೇರಳದ ದಾಮೋದರ್, ಉಡುಪಿ ಮೂಲದ ವಾದಿರಾಜರಾವ್ ಅವರ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ನಾಗೇಂದ್ರ ಅವರು, 1967ರಲ್ಲಿ ಪಟ್ಟಣದ ಮೊದಲನೇ ಮುಖ್ಯರಸ್ತೆಯಲ್ಲಿರುವ ಮಾರಮ್ಮನ ದೇಗುಲದ ಬಳಿ ಪುಟ್ಟ ಹೋಟೆಲ್ಅನ್ನು ಪ್ರಾರಂಭಿಸಿ, 20 ವರ್ಷ ಅಲ್ಲೇ ನಡೆಸಿದರು. ಇವರಿಗೆ ಪತ್ನಿ ರೇಣುಕಾ, ತಾಯಿ ವೆಂಕಟಲಕ್ಷ್ಮಮ್ಮ (ಪುಟ್ಟಮ್ಮ) ಸಾಥ್ ನೀಡುತ್ತಿದ್ದರು. ನಂತರ ಹಳೇ ತಾಲೂಕು ಕಚೇರಿ ಎದುರು ಎಚ್.ಬಿ.ರಸ್ತೆಯಲ್ಲಿ ಸ್ವಂತ ಕಟ್ಟಡ ಕಟ್ಟಿಕೊಂಡು ಅಲ್ಲಿ ಹೊಸದಾಗಿ ವೆಂಕಟೇಶ್ವರ ಲಂಚ್ ಹೋಂ ಎಂಬ ಹೆಸರಲ್ಲಿ ಹೋಟೆಲ್ ಅನ್ನು ಪ್ರಾರಂಭಿಸಿದ್ದರು. ಇದೀಗ ತಂದೆಗೆ ವಯಸ್ಸಾಗಿದ್ದು, ಮಗ ತೇಜಸ್ವಿ ಹೋಟೆಲ್ ನೋಡಿಕೊಳ್ಳುತ್ತಾರೆ. ಆದರೆ, ಬೆಳಗ್ಗೆ ಹೋಟೆಲ್ ಬಾಗಿಲು ತೆಗೆದು, ರುಚಿಕಟ್ಟಾದ ಊಟ, ತಿಂಡಿಯನ್ನು ತಯಾರಿ
ಮಾಡಿಸುವುದು ನಾಗೇಂದ್ರ ಅವರೇ. ಮೊದಲು ಅವರು ಟೇಸ್ಟ್ ನೋಡಿ ಸರಿ ಇದೆ ಎಂದ ಮೇಲೆ ಗ್ರಾಹಕರಿಗೆ ಬಡಿಸಲಾಗುತ್ತದೆ.
ಇಡ್ಲಿ ಸಾಂಬರ್ ಫೇಮಸ್:
ಈ ಲಂಚ್ ಹೋಂನ ವಿಶೇಷ ಅಂದ್ರೆ ಇಡ್ಲಿ, ವಡೆ ಸಾಂಬಾರ್. ಗ್ರಾಹಕರು ಹೆಚ್ಚಾಗಿ ಇಡ್ಲಿ ಜತೆ ಚಟ್ನಿಗಿಂತ ಸಾಂಬಾರ್ ಕೇಳುವುದೇ ಹೆಚ್ಚು. ಬೆಳಗ್ಗೆ 6 ಗಂಟೆಗೆ ಹೋಟೆಲ್ ಪ್ರಾರಂಭವಾದ್ರೆ ಮಧ್ಯಾಹ್ನ 12 ಗಂಟೆಯವರೆಗೂ ತಿಂಡಿಯನ್ನು ವಿತರಣೆ ಮಾಡಲಾಗುತ್ತದೆ. 20 ರಿಂದ 40 ರೂ.ವರೆಗೂ ದರ ಇದೆ. ಮಸಾಲೆ, ಬೇಬಿ ಮಸಾಲೆ, ಪ್ಲೆ„ನ್, ಈರುಳ್ಳಿ, ಸೆಟ್, ರವೆ ಹೀಗೆ ವಿವಿಧ ಬಗೆಯ ದೋಸೆ, ರೈಸ್ ಬಾತ್ ಜೊತೆಗೆ ಕಾಫಿ, ಟೀ, ಹಾಲು, ಹಾರ್ಲಿಕ್ಸ್, ರಾಗಿ ಮಾಲ್ಟ್ ಕೂಡ ಇಲ್ಲಿ ಸಿಗುತ್ತದೆ.
ಊಟಕ್ಕೆ 50 ರೂ. ದರ ನಿಗದಿ ಮಾಡಿದ್ದು, ಚಪಾತಿ, ಅನ್ನ ಸಾಂಬರ್, ತಿಳಿಸಾರು, ಫಲ್ಯ, ಸಾಗು, ಹಪ್ಪಳ, ಉಪ್ಪಿನಕಾಯಿ, ಮೊಸರನ್ನು ಕೊಡುತ್ತಾರೆ. ಕೋಟೆಯಲ್ಲಿನ ಪ್ರಮುಖ ಹೋಟೆಲ್ಗಳಲ್ಲಿ ಒಂದಾಗಿರುವ ವೆಂಕಟೇಶ್ವರ ಲಂಚ್ಹೊàಂಗೆ ಅಧಿಕಾರಿಗಳು ಹೆಚ್ಚಾಗಿ ಬರುತ್ತಾರೆ. ಆಗಾಗ ಶೂಟಿಂಗ್ಗೆ ಅಂತ ಬಂದಾಗ ಸಿಹಿ ಕಹಿ ಚಂದ್ರು, ಇತ್ತೀಚೆಗೆ ದರ್ಶನ್, ಸಿನಿಮಾ ತಾರೆಯರು, ರಾಜಕಾರಣಿಗಳಾದ ಮಾಜಿ ಶಾಸಕ ಚಿಕ್ಕಮಾದು, ಚಿಕ್ಕಣ್ಣ, ಅನಿಲ್ ಈ ಹೋಟೆಲ್ನಲ್ಲಿ ರುಚಿ ಸವಿದಿದ್ದಾರೆ. ಇನ್ನು ಮಾಲಿಕರು ವೆಂಕಟೇಶ್ವರನ ಭಕ್ತರಾಗಿದ್ದು, ಶುಚಿತ್ವ, ಭಕ್ತಿಗೆ ಹೆಚ್ಚು ಆದ್ಯತೆ ನೀಡುವುದರಿಂದ ಅಯ್ಯಪ್ಪನ ಭಕ್ತರು, ಹಳ್ಳಿಯ ಜನರೂ ಈ ಹೋಟೆಲ್ಗೆ ಬರುತ್ತಾರೆ.
ಹೋಟೆಲ್ ಸಮಯ:
ಬೆಳಗ್ಗೆ 6ರಿಂದ ರಾತ್ರಿ 8 ಗಂಟೆಯವರೆಗೆ, ಭಾನುವಾರ ಬೆಳಗ್ಗೆ 6 ರಿಂದ ರಾತ್ರಿ 5ರವರೆಗೆ. ವಾರದ ರಜೆ ಇಲ್ಲ. ಹಬ್ಬಗಳಲ್ಲಿ ಮಾತ್ರ ರಜೆ.
ಹೋಟೆಲ್ ವಿಳಾಸ:
ವೆಂಕಟೇಶ್ವರ ಲಂಚ್ ಹೋಂ, ಹಳೇ ತಾಲೂಕು ಕಚೇರಿ ಎದುರು, ಎಚ್.ಬಿ.ರೋಡ್, ಎಚ್.ಡಿ.ಕೋಟೆ.
– ಭೋಗೇಶ್ ಎಂ.ಆರ್./ ನಿಂಗಣ್ಣ ಕೋಟೆ