‘ತುಳು ಅಭಿವೃದ್ಧಿ ಪ್ರಾಧಿಕಾರ, ವಿ.ವಿ. ಸ್ಥಾಪಿಸಿ’
Team Udayavani, Oct 17, 2018, 12:34 PM IST
ಸುಳ್ಯ : ತುಳುವನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಪರಿಗಣಿಸಬೇಕು ಹಾಗೂ ತುಳು ಅಭಿವೃದ್ಧಿ ಪ್ರಾಧಿಕಾರ ಮತ್ತು ತುಳು ವಿ.ವಿ. ಸ್ಥಾಪನೆಗೆ ಸರಕಾರಗಳು ಪ್ರಥಮ ಆದ್ಯತೆ ನೀಡಬೇಕು ಎಂದು ತಾಲೂಕು ತುಳು ಸಾಹಿತ್ಯ ಸಮ್ಮೇಳನ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಆಗ್ರಹಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಸಾಹಿತ್ಯ ಸಮ್ಮೇಳನ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ, ತುಡರ್ ತುಳುಕೂಟ ಆಶ್ರಯದಲ್ಲಿ ಮಂಗಳವಾರ ಚೆನ್ನಕೇಶವ ದೇವಾಲಯದ ಮುಂಭಾಗದ ಶಿಂಟೂರು ನಾರಾಯಣ ರೈ ವೇದಿಕೆಯಲ್ಲಿ ನಡೆದ ತಾಲೂಕು ಪ್ರಥಮ ತುಳು ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ತರಹ ತುಳು ಅಭಿವೃದ್ಧಿ ಪ್ರಾಧಿಕಾರ ರಚಿಸಿ ವಾರ್ಷಿಕ 5 ಕೋಟಿ ರೂ. ಅನುದಾನ ಮೀಸಲಿಡಬೇಕು. ಪ್ರಾಧಿಕಾರದ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಬೇಕು. ತುಳು ವಿ.ವಿ. ಸ್ಥಾಪಿಸಿ, ತುಳು ಬೆಳವಣಿಗೆ ಪೂರಕವಾಗುವ ಅಧ್ಯಯನ ವಿಭಾಗಗಳನ್ನು ತೆರೆಯಬೇಕು ಎಂದು ಹೇಳಿದರು.
ಪ್ರತ್ಯೇಕ ರಾಜ್ಯ ಬೇಡ
ತುಳುವರಿಗೆ ಕರ್ನಾಟಕದ ಮುಖ್ಯಮಂತ್ರಿ, ಸಚಿವರು ಆಗ ಬೇಕು ಎಂಬ ಬಯಕೆ ಇರ ಬೇಕು ಹೊರತು ಪ್ರತ್ಯೇಕ ರಾಜ್ಯದ ಮಂತ್ರಿಗಳಾಗುವ ಕನಸು ಬೇಡ. ತುಳುನಾಡಿನ ಆಚೆಗೂ ನಮ್ಮವರು ಗುರುತಿಸಿಕೊಳ್ಳಬೇಕು. ಅಂತಹ ಅವಕಾಶ ನಮಗೆ ಸಿಗುತ್ತಿದೆ. ಪ್ರತ್ಯೇಕ ತುಳು ರಾಜ್ಯ ಬೇಕು ಎಂಬ ಹೋರಾಟಕ್ಕೆ ಇಳಿಯುವುದು ಅಪ್ರಸ್ತುತ. ನಮ್ಮ ಸ್ಥಾನಮಾನದ ಬೇಡಿಕೆ ಸ್ಪಂದನೆ ಸಿಗದೆ ಇದ್ದಾಗ ಮುಂದಿನ ಹೋರಾಟದ ಬಗ್ಗೆ ಚಿಂತಿಸೋಣ ಎಂದು ವಸಂತ ಶೆಟ್ಟಿ ಅಭಿಪ್ರಾಯಿಸಿದರು.
ಮಾನ್ಯತೆ ಅಭಿಮಾನದ ಪ್ರಶ್ನೆ
ತುಳುವಿಗೆ ರಾಜ್ಯದ ಮಾನ್ಯತೆ ಸಿಗಬೇಕು ಎಂಬ ಬೇಡಿಕೆ ಇಟ್ಟಿರುವುದು ಯಾವುದೇ ಸೌಲಭ್ಯ, ಸೌಕರ್ಯಕ್ಕೆ ಅಲ್ಲ. ತುಳುವಿನ ಅಭಿಮಾನಕೋಸ್ಕರ ಪ್ರಾಧ್ಯಾನ ನೀಡಬೇಕು ಎನ್ನುವುದು ನಮ್ಮ ಆಗ್ರಹ. ಸೌಕರ್ಯ, ಸೌಲಭ್ಯವನ್ನು ತುಳುವರೇ ಸೇರಿ ಭರಿಸುವಷ್ಟು ಸಾಮ ರ್ಥ್ಯವಿದೆ ಎಂದರು.
ತುಳು ಸಾಹಿತ್ಯ, ಚಟುವಟಿಕೆಗೆ ಸಂಬಂಧಿಸಿ ಸುಳ್ಯ ತಾಲೂಕು ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ. ಇಲ್ಲಿನ ತುಳು ಕೃತಿಗಳು ತುಳುವರಿಂದಲೇ ಪ್ರಕಟಿತಗೊಂಡಿದ್ದು ವಿರಳ. ಅದಕ್ಕೆ ಒತ್ತು ನೀಡಬೇಕು. ತುಳು ಭಾಷೆಯ ಕೃತಿಗಳು ಇಂಗ್ಲಿಷ್, ಹಿಂದಿ ಮೊದಲಾದ ಭಾಷೆಗಳಿಗೆ ಅನುವಾದಗೊಂಡಾಗ ಇಲ್ಲಿನ ಮಹತ್ವ ಎಲ್ಲೆಡೆ ಪಸರಿಸಲು ಸಾಧ್ಯ ಎಂದರು.
ಸಮ್ಮೇಳನ ಉದ್ಘಾಟಿಸಿದ ಕರ್ನಾಟಕ ರಾಜ್ಯ ತುಳು ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಜಾತಿ, ಮತ, ಧರ್ಮ ಮೀರಿದ ಭಾಷೆ ಆಗಿರುವ ತುಳು ಜಗತ್ತಿನೆಲ್ಲೆಡೆ ಪಸರಿಸುತ್ತಿದೆ. ನಗರಕ್ಕೆ ಸೀಮಿತ ಆಗಿದ್ದ ಸಮ್ಮೇಳನಗಳು ಹಳ್ಳಿಗೆ ವಿಸ್ತರಿತವಾಗಬೇಕು ಎಂಬ ಆಕಾಡೆಮಿ ಆಶಯ ಈಗ ಸಾಕಾರಗೊಳ್ಳುತ್ತಿದೆ ಎಂದು ನುಡಿದರು.
ಸ್ಮರಣ ಸಂಚಿಕೆ ಸಿರಿ ಕುರಲ್ ಬಿಡುಗಡೆಗೊಳಿಸಿದ ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ನ.ಪಂ. ವತಿಯಿಂದ 25 ಸಾವಿರ ರೂ. ನೀಡುವಂತೆ ಬೇಡಿಕೆ ಬಂದಿದ್ದು, ಜಿಲ್ಲಾಧಿಕಾರಿ ಒಪ್ಪಿಗೆ ದೊರೆತ ತತ್ಕ್ಷಣ ಸಹಾಯಧನ ಒದಗಿಸಲಾಗುವುದು ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಭಾಷೆಯ ಮೇಲೆ ಅಭಿಮಾನವಿದ್ದಾಗ ಅದರ ಉನ್ನತ್ತಿ ಸಾಧ್ಯ ಎಂದರು. ಜಿ.ಪಂ. ಸದಸ್ಯರಾದ ಆಶಾ ತಿಮ್ಮಪ್ಪ, ಪುಷ್ಪಾವತಿ ಬಾಳಿಲ ಮಾತನಾಡಿದರು. ಸಿಸಿಆರ್ಟಿ ಇದರ ಸಮ್ಮಿಳನ-4 ಮತ್ತು ವಿಜಯ ಭಂಡಾರಿ ಹೆಬ್ಟಾರ್ಬೈಲು ಅವರ ಪೂವರಿ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಜಿ.ಪಂ. ಸದಸ್ಯ ಎಸ್.ಎನ್. ಮನ್ಮಥ, ಚೆನ್ನಕೇಶವ ದೇವಾಲಯದ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್ ತುದಿಯಡ್ಕ, ತುಳು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಸದಸ್ಯರಾದ ಸುಧಾ ನಾಗೇಶ್ ಎ., ಗೋಪಾಲ ಅಂಚನ್, ವಿಜಯ ಶೆಟ್ಟಿ ಸಾಲೆತ್ತೂರು, ವಿದ್ಯಾಶ್ರೀ ಎನ್., ದುರ್ಗಾ ಮೆನನ್, ಸಮ್ಮೇಳನ ಸಂಚಾಲಕ ಸದಸ್ಯ ನಿರಂಜನ ರೈ ಮಠಂತಬೆಟ್ಟು, ತಾಲೂಕು ತುಳುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಪ್ರಶಾಂತ್ ರೈ ಮರುವಂಜ, ಸ್ವಾಗತ ಸಮಿತಿ ಅಧ್ಯಕ್ಷ ಗೋಕುಲ್ದಾಸ್ ಕೆ, ಕೋಶಾಧಿಕಾರಿ ಜೆ.ಕೆ. ರೈ ಉಪಸ್ಥಿತರಿದ್ದರು.
ಮಮತಾ ಮೂಡಿತ್ತಾಯ ಅಧ್ಯಕ್ಷರ ಪರಿಚಯ ವಾಚಿಸಿದರು. ಪೂರ್ಣಿಮಾ, ಗಿರಿಜಾ ಮತ್ತು ತಂಡ ಪ್ರಾರ್ಥಿಸಿದರು. ಸಮ್ಮೇಳನ ಪೋಷಕಾಧ್ಯಕ್ಷ ಕೆ. ಸವಣೂರು ಸೀತಾರಾಮ ರೈ ಪ್ರಸ್ತಾವನೆಗೈದು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ ಎಂ.ಜೆ. ಕೊಯಿಕುಳಿ ವಂದಿಸಿದರು. ತುಳು ಅಕಾಡೆಮಿ ಮಾಜಿ ಸದಸ್ಯ ದುರ್ಗಾಕುಮಾರ್ ನಾಯರ್ಕೆರೆ ಮತ್ತು ಅಕ್ಷಿತಾ ರೈ ಬೆಳ್ಳಾರೆ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು: ಕೃತಜ್ಞತೆ, ಗೌರವ
ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು
ಪ್ರಜ್ವಲ್ ಪ್ರಕರಣ ತನಿಖೆಯಲ್ಲಿದ್ದರೂ ಬಿಜೆಪಿಯಿಂದ ರಾಜಕೀಯ:ಸಚಿವ ಬಿ. ನಾಗೇಂದ್ರ
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ
Bantwala: ನೀರಿನ ಅಭಾವದಿಂದ ಕೃಷಿ ಹಾನಿ; ಮನನೊಂದು ಕೃಷಿಕ ಆತ್ಮಹತ್ಯೆ