ಬೆಂಗಳೂರು ಸಾಹಿತ್ಯೋತ್ಸವ ಎಂಬ ಪಂಚತಾರಾ ಸಂಸ್ಕೃತಿಯ ಪ್ರದರ್ಶನ


Team Udayavani, Nov 2, 2017, 9:35 AM IST

02-23.jpg

ಬಲಪಂಥೀಯರನ್ನು ಅಥವಾ ಯಾರನ್ನು ಅವರು ಉದಾರವಾದಿಗಳಲ್ಲವೆಂದು ಪರಿಗಣಿಸಿದ್ದಾರೋ ಅವರನ್ನು – ಈ ಉತ್ಸವದಿಂದ ಅಕ್ಷರಶಃ ಹೊರಗಿಟ್ಟರು. ಈ ಮೂಲಕ “ಸಿದ್ಧಾಂತಗಳ ಘರ್ಷಣೆಯ ಸಾಧ್ಯತೆ’ಯನ್ನು ಸುಲಭವಾಗಿ ನಿವಾರಿಸಿಕೊಂಡರು. ರಾಷ್ಟ್ರೀಯತೆ “ಒಂದು ದೋಷ’ ಎಂಬ ತಪ್ಪು ತಿಳಿವಳಿಕೆ ಸಮ್ಮೇಳನದ ಸಂಘಟಕರು ಹಾಗೂ ಪ್ರತಿನಿಧಿಗಳಲ್ಲಿದೆ. ಇದು ನಿಜಕ್ಕೂ ಅಚ್ಚರಿಯ ಸಂಗತಿ.

ಈ ವರ್ಷದ “ಬೆಂಗಳೂರು ಸಾಹಿತ್ಯೋತ್ಸವ’ ಈ ಹಿಂದಿನ ಉತ್ಸವಗಳಂತೆಯೇ ಜರಗಿದೆ. ಮುಕ್ತಾಯಗೊಂಡಿದೆ. ವಾಸ್ತವ ವೇನೆಂದರೆ, ಒಂದು ರೀತಿಯಲ್ಲಿ ರಾಜಕೀಯ ಗ್ರಹಣಕ್ಕೊಳಗಾಗಿ ಭಾಗವಹಿಸಿರುವ ಈ ಬಾರಿಯ ಸಾಹಿತ್ಯಮೇಳದಲ್ಲಿ ಮೇಲುಗೈ ಸಾಧಿಸಿದ್ದು ಪುಸ್ತಕ ಪ್ರಕಾಶಕರು, ಪಂಚತಾರಾ ಸಂಸ್ಕೃತಿಯ ಪ್ರದರ್ಶನ ಪ್ರವೀಣರು ಹಾಗೂ ಗಣ್ಯಾತಿಗಣ್ಯರ ಬಳಗ.

ಅಂದ ಹಾಗೆ, ಈ ಸಾಹಿತ್ಯೋತ್ಸವ ಜರಗಿರುವುದು ಒಂದು ಪಂಚತಾರಾ ಹೊಟೇಲಿನಲ್ಲಿ ಎನ್ನುವುದೇ ಈ ಸಾಹಿತ್ಯೋತ್ಸವದ ಕತೆಯೇನು ಎನ್ನುವುದನ್ನು ಸಾರುತ್ತದೆ. ಸಾಹಿತ್ಯದ ಬಗ್ಗೆ, ಚರ್ಚೆ ನಡೆಸುವುದೇ ಈ ಉತ್ಸವದ (ಗಂಭೀರ) ಉದ್ದೇಶವಾಗಿದ್ದಿದ್ದರೆ ಇದನ್ನು ಯಾವುದಾದರೂ ಕಾಲೇಜಿನಲ್ಲಿ ಇಲ್ಲವೇ ವಿ.ವಿ. ಕ್ಯಾಂಪಸ್ಸಿನಲ್ಲಿ ಏರ್ಪಡಿಸಬಹುದಾಗಿತ್ತು. ಗಮನಿಸಬೇಕಾದ ಅಂಶ ವೆಂದರೆ ಮೈಸೂರಿನ ಮಣ್ಣಿನ ಮಗ, ದಿವಂಗತ ಎ.ಕೆ. ರಾಮಾನುಜನ್‌ ಅವರ ಸಾಹಿತ್ಯ ಕುರಿತ ಒಂದು ಕಾರ್ಯ ಕ್ರಮವನ್ನು ಹೊರತು ಪಡಿಸಿದರೆ, ಈ ಉತ್ಸವದಲ್ಲಿ ಇಂಗ್ಲಿಷ್‌ ಅಥವಾ ಯಾವುದೇ ಭಾರತೀಯ ಭಾಷಾ ಸಾಹಿತ್ಯದ ಬಗ್ಗೆ ಹೆಚ್ಚಿನ ಚರ್ಚೆ – ಸಂವಾದ ನಡೆದಿಲ್ಲ. ಈ ನಡುವೆ, ಇಂಗ್ಲಿಷ್‌ ಸಾಹಿತ್ಯಕ್ಕೆ ಸಂಬಂಧಿಸಿದ ಕರ್ನಾಟಕ ಮೂಲದ ಪ್ರಕಾಶನ ಸಂಸ್ಥೆಗಳು ಈ ಉತ್ಸವದಲ್ಲಿ ಗೈರು ಹಾಜರಾಗಿದ್ದವು. ಈ ಮೂಲಕ ಕರ್ನಾಟಕ ಮೂಲದ ಇಂಗ್ಲಿಷ್‌ ಲೇಖಕರ ಅಸ್ತಿತ್ವವನ್ನೇ ಕಡೆಗಣಿಸಿದಂತಾಗಿದೆ. ಹೆಚ್ಚಿನ ಇಂಗ್ಲಿಷ್‌ ಸಾಹಿತ್ಯ ಪ್ರಕಾಶನ ಸಂಸ್ಥೆಗಳು ಕೇಂದ್ರೀಕೃತವಾಗಿರುವುದು ದಿಲ್ಲಿಯಲ್ಲಿ; ಅವು ರಾಷ್ಟ್ರ ರಾಜಧಾನಿಯ ಅಥವಾ ಅದರ ಒಳಭಾಗಗಳ ಸಾಹಿತಿಗಳಿಗೆ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ “ಸರಿ’ಯಾದ ಸಂಪರ್ಕ ಸಂಬಂಧವನ್ನು ಕಾಯ್ದುಕೊಂಡಿರುವ ಸಾಹಿತಿಗಳಿಗೆ ಆದ್ಯತೆ ನೀಡುತ್ತವೆ. ಮುಕ್ತ ಅಭಿವ್ಯಕ್ತಿಯ ಮೇಲಿನ ದಬ್ಟಾಳಿಕೆ ಹಾಗೂ “ಮೋದಿಯ ಭಾರತ’ದಲ್ಲಿನ ಭಿನ್ನಾಭಿಪ್ರಾಯಗಳು/ಕಚ್ಚಾಟಗಳು ಮುಂತಾದ ಕಾಲ್ಪನಿಕ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಬದಲಿಗೆ ಈ ಉತ್ಸವ ಮೇಲೆ ಹೇಳಿದ (ದಿಲ್ಲಿ ಸಾಹಿತ್ಯ ಸಂಸ್ಥೆಗಳ) ಧೋರಣೆಯ ಬಗ್ಗೆ ಚರ್ಚೆ ನಡೆಸಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. ಇಂಗ್ಲಿಷ್‌ ಸಾಹಿತ್ಯದಲ್ಲಿ ಹೆಸರು ಮಾಡಿರುವ ಕೆಲವೇ ಕೆಲವು ಕನ್ನಡಿಗ ಸಾಹಿತಿಗಳು ಇಂಗ್ಲೆಂಡಿನಲ್ಲೋ ಅಮೆರಿಕದಲ್ಲೋ ತಮ್ಮ ಕೃತಿಗಳನ್ನು ಪ್ರಕಟಿಸುವ ಅವಕಾಶ ಪಡೆದವರು ಎಂಬುದನ್ನು ಗಮನಿಸಬೇಕು. ಈ ಮಾತು ಇಂದಿಗೂ ಪ್ರಸ್ತುತ. ಆರ್‌. ಕೆ. ನಾರಾಯಣ್‌ ಅವರ ಪ್ರಪ್ರಥಮ ಕೃತಿ, 20ನೆಯ ಶತಮಾನದ ಶ್ರೇಷ್ಠ ಲೇಖಕರೆನಿಸಿದ ಇಂಗ್ಲಿಷ್‌ ಕಾದಂಬರಿಕಾರ ಗ್ರಹಾಂ ಗ್ರೀನ್‌ (ಹೆನ್ರಿ ಗ್ರಹಾಂ ಗ್ರೀನ್‌) ಅವರಿಗೆ ಇಷ್ಟವಾಗಿ, ಅವರು ಅದನ್ನು “ಒಪ್ಪಿದ್ದರಿಂದ’ ಅದು ಬೆಳಕು ಕಾಣುವಂತಾಯಿತು; ಮುಂದೆ ಆರ್‌. ಕೆ. ನಾರಾಯಣ್‌ ಇಂಗ್ಲಿಷ್‌ ಸಾಹಿತ್ಯ ಕ್ಷೇತ್ರದಲ್ಲಿ ಮಿಂಚಲು ಇದೊಂದು ಮೀಟುಗೋಲಾಯಿತೆನ್ನಬಹುದು. ನಾರಾಯಣ್‌ ಅವರ ಬಾಲ್ಯ ಸ್ನೇಹಿತರಾಗಿದ್ದ ಕೃಷ್ಣ ರಾವ್‌ ಪೂರ್ಣ ಅವರು (ಕೆಲಕಾಲ ದಿವಾನ್‌ ಮಿರ್ಜಾ ಇಸ್ಮಾಯಿಲ್‌ ಅವರ ಆಪ್ತ ಕಾರ್ಯದರ್ಶಿಯಾಗಿದ್ದವರು; ಇಂಗ್ಲೆಂಡ್‌ನ‌ಲ್ಲಿ ಶಿಕ್ಷಣ ಪಡೆ ಯುವ ಅವಕಾಶ ಪಡೆದವರು) ಆರ್‌.ಕೆ. ನಾರಾಯಣ್‌ ಅವರ – ಮೇಲೆ ಹೇಳಿದ ಕೃತಿ ಬೆಳಕಿಗೆ ಬರುವಲ್ಲಿ ನೆರವಾಗಿದ್ದರು. ಮೊದಲಿಗೆ ಫ್ರಾನ್ಸ್‌ನಲ್ಲಿ, ಮುಂದೆ ಅಮೆರಿಕದಲ್ಲಿ ನೆಲೆಸಿದ್ದ ಕೆ. ರಾಜಾರಾವ್‌ ಅವರ ಕತೆಯೂ ಇದೇ.

ಕರ್ನಾಟಕದ ಇಂಗ್ಲಿಷ್‌ ಪ್ರಾಧ್ಯಾಪಕರೂ ಲೇಖಕರೂ ಆಗಿದ್ದ ಪ್ರೊ| ಬಿ.ಎಂ. ಶ್ರೀ ಕಂಠಯ್ಯ, ಪ್ರೊ| ಎನ್‌. ಮೂರ್ತಿರಾವ್‌, ಪ್ರೊ| ಎಲ್‌. ಎಸ್‌. ಶೇಷಗಿರಿ ರಾವ್‌, ಎಚ್‌. ಎಚ್‌. ಅಣ್ಣಯ್ಯ ಗೌಡ, ಭರತ್‌ರಾಜ್‌ ಸಿಂಗ್‌, ಬಿ.ಸಿ. ಚಂದ್ರಶೇಖರ ಅಥವಾ ಡಿ.ಎ. ಶಂಕರ್‌ (ಈಚಿನ ವರ್ಷಗಳಲ್ಲಿ) ಮುಂತಾದವರು ರಾಜ್ಯ ಮಟ್ಟದ ಕೀರ್ತಿಯಿಂದಲೇ ತೃಪ್ತಿ ಕಾಣಬೇಕಾಯಿತು. ಈ ಮಾತಿಗೆ ಅಪವಾದವೆಂದರೆ ಉನ್ನತಮಟ್ಟದ ಹುದ್ದೆಗಳನ್ನು ಹಾಗೂ ಸಾಹಿತ್ಯ ಕ್ಷೇತ್ರದಲ್ಲೂ ಕೀರ್ತಿಯನ್ನು ಸಂಪಾದಿಸಿದ ಪ್ರೊ| ವಿ.ಕೆ. ಗೋಕಾಕ್‌, ಪದ್ಮಪ್ರಶಸ್ತಿ ಪಡೆದ ಪ್ರೊ| ಸಿ.ಡಿ. ನರಸಿಂಹಯ್ಯ (ಬಹುಶಃ ಇದಕ್ಕೆ ಕಾರಣ, ಜವಾಹರಲಾಲ್‌ ನೆಹರೂ ಅವರ ಬಗ್ಗೆ ರಚಿಸಿದ್ದ ಕೃತಿಗಳು) ಹಾಗೂ ಸಾರ್ವಜನಿಕ ವಿದ್ಯಮಾನಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡುವ ಮೂಲಕ ಕೊನೆಯವರೆಗೂ ಪ್ರಸ್ತುತ ಲೇಖಕರೆನಿಸಿದ್ದ ಪ್ರೊ| ಯು.ಆರ್‌. ಅನಂತಮೂರ್ತಿ ಮುಂತಾದ ಕೆಲವೇ ಕೆಲವರು. ಸಿ.ಡಿ. ನರಸಿಂಹಯ್ಯ ಹಾಗೂ ಅನಂತಮೂರ್ತಿಯವರನ್ನು ರಾಜ್ಯದ ಯಾವುದೇ ವಿಶ್ವ ವಿದ್ಯಾ ನಿಲಯದ ಕುಲಪತಿಯನ್ನಾಗಿ ನೇಮಿಸುವುದು “ಒಳ್ಳೆಯದು’ ಎಂದು ಖುದ್ದು ಕರ್ನಾಟಕಕ್ಕೇ ಅನಿಸಿರಲಿಲ್ಲ! ಹಾಗೆ ನೋಡಿದರೆ ಎ.ಕೆ. ರಾಮಾನುಜನ್‌ ಕೂಡ ಅಮೆರಿಕಕ್ಕೆ ವಲಸೆ ಹೋದವರು; ಅಲ್ಲೇ ಸಾಕಷ್ಟು ಗೌರವದ ಗರಿಗಳನ್ನು ಸಂಪಾದಿಸಿದವರು.

ಕನ್ನಡದ ಬಗ್ಗೆ ಮಲತಾಯಿ ಧೋರಣೆ
ಕರ್ನಾಟಕದ ರಾಜಧಾನಿಯಲ್ಲೇ ನಡೆಯುವ “ಬೆಂಗಳೂರು ಸಾಹಿತ್ಯೋತ್ಸವ’ದಲ್ಲಿ ಕನ್ನಡದ ಬಗ್ಗೆ ಮಲತಾಯಿ ಧೋರಣೆ ತೋರಿಸಲಾಗುತ್ತಿದೆಯೆಂಬುದು ಯಾರ ಗಮನಕ್ಕೂ ಬೀಳದೆ ಹೋಗಿಲ್ಲ. ಉತ್ಸವದಲ್ಲಿ ಕನ್ನಡದ ಸಾಹಿತ್ಯಕ್ಕೆ ಸಂಬಂಧಿಸಿದಂತೆ, ಕೇವಲ ಸಾಂಕೇತಿಕವಾಗಿ, ಯಾವುದಾದರೂ ಒಂದು ಚರ್ಚೆ/ಸಂವಾದ ಅಥವಾ ಭಾಷಣವಿರುತ್ತದೆ.

ಸಾಹಿತ್ಯ ಹಾಗೂ ಮೋದಿ ವಿರೋಧಿ ಕೂಗು
ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬೆಂಗಳೂರು, ಜೈಪುರ ಅಥವಾ 
ಇನ್ನಿತರ ಕಡೆಗಳಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಅಥವಾ ಉತ್ಸವಗಳು ಮೋದಿ ವಿರೋಧಿ ಹಾಗೂ ಹಿಂದುತ್ವ ವಿರೋಧಿ ಹಾಗೂ “ಫ್ಯಾಸಿಸ್ಟ್‌ ವಿರೋಧಿ’ ಘೋಷಣೆಗಳಿಗೆ ಅವಕಾಶ ನೀಡುವ ವೇದಿಕೆಗಳಾಗಿ ಪರಿಣಮಿಸಿವೆ! ಈ ಸಾಹಿತ್ಯ ಸಮ್ಮೇಳನ ಅಥವಾ ಉತ್ಸವಗಳಲ್ಲಿ ಬಹುಸಂಖ್ಯೆಯಲ್ಲಿ ಮೆರೆಯುತ್ತಿರುವವರು ಸಮಾಜವಾದ ಹಾಗೂ ಜಾತ್ಯತೀತವಾದದ ಬಗ್ಗೆ ಧ್ವನಿಯೆತ್ತಿ ಮಾತನಾಡುವ ಸೂಪರ್‌ ಶ್ರೀಮಂತ ಎಡಪಂಥೀಯರು, ಬಂಡವಾಳಶಾಹಿಗಳು ಹಾಗೂ ಫ್ಯೂಡಲ್‌ ಸಂಸ್ಕೃತಿ ಸಂಪನ್ನ ರೆನ್ನುವುದು ಎಲ್ಲರಿಗೂ ಗೊತ್ತೇ ಇದೆ. ನಮ್ಮ ಕಮ್ಯುನಿಸ್ಟರು ಹಾಗೂ ಎಡಪಂಥೀಯರಲ್ಲಿ ಬಂಡವಾಳಶಾಹಿಗಳು ಹಾಗೂ ಪ್ರಗತಿ ವಿರೋಧಿಗಳೂ ಇದ್ದಾರೆಂಬುದನ್ನು ಅಲ್ಲಗಳೆಯು ವಂತಿಲ್ಲ. ಇಂಥ ಸೂಪರ್‌ ಸಿರಿವಂತ ಪೀಳಿಗೆಯ ಹಾಗೂ ಆಧುನಿಕ “ಕಾರ್ಪೊರೇಟ್‌ ಕಮ್ಯೂನಿಸಂ’ನ ಈ ಕಾಲದಲ್ಲಿ ವಾಮಪಂಥೀಯ ಒಲವೆನ್ನುವುದು “ಬದ್ಧತೆ’ಗಿಂತಲೂ ಹೆಚ್ಚಾಗಿ ಒಂದು ಫ್ಯಾಶನ್ನೇ ಆಗಿಬಿಟ್ಟಿದೆ. ಸಮಾಜದ ದುರ್ಬಲ ವರ್ಗಗಳ ಮೇಲಿನ ಕಾಳಜಿಯೆನ್ನುವುದು ಕೇವಲ ವಾಮಪಂಥೀಯರ ಏಕಸ್ವಾಮ್ಯದ ಸೊತ್ತೆಂದು ಹೇಳುವ ಹಾಗಿಲ್ಲ. ಒಂದು ವೇಳೆ ಇದೇ ನಿಜವಾಗಿದ್ದಿದ್ದರೆ ಪಶ್ಚಿಮ ಬಂಗಾಲದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಡತನ ವಿರುತ್ತಿರಲಿಲ್ಲ ಅಥವಾ ಕೇರಳದಲ್ಲಿ ಇಷ್ಟೊಂದು ಹೆಚ್ಚಿನ ಪ್ರಮಾಣದ ನಿರುದ್ಯೋಗವಿರುತ್ತಿರಲಿಲ್ಲ. ಪಶ್ಚಿಮ ಬಂಗಾಲದಲ್ಲಿ ಘೇರಾವ್‌ಗಳಿಗೆ, ಹರತಾಳಗಳಿಗೆ, ನಕ್ಸಲೀಯ ಚಟುವಟಿಕೆಗಳಿಗೆ ಹಾಗೂ ಅಶಿಸ್ತಿನ ಘಟನೆಗಳಿಗೆ ಬೆಂಬಲ ನೀಡುವ ಮೂಲಕ ಅಲ್ಲಿನ ಕೈಗಾರಿಕೆಗಳಿಗೆ ಹಾನಿಯೆಸಗಿದವರು ಮಾರ್ಕ್ಸಿಸ್ಟರು ಹಾಗೂ ಅವರ ಮಿತ್ರರೇ ಅಲ್ಲವೆ? ಇದು ತಪ್ಪು ಎಂದು ಅವರಿಗೆ ಅರಿವಾಗುವಾಗ ತುಂಬಾ ತಡವಾಗಿತ್ತು.

ಕುತೂಹಲಕಾರಿ ಸಂಗತಿಯೆಂದರೆ, ಬಲಪಂಥೀಯ ಅಭಿಪ್ರಾ ಯ ಗಳನ್ನು ಹೊಂದಿರುವುದು ಹಾಗೂ ಸಮಾಜವಾದದ ವಿರುದ್ಧ ಮಾತೆತ್ತುವುದು ಮಧ್ಯಮ ವರ್ಗವೇ. ವಾಮ ಪಂಥೀಯರೊಂದಿಗೆ ಹೋಲಿಸಿದಲ್ಲಿ ಬಲಪಂಥೀಯರಲ್ಲಿ ಹೆಚ್ಚಿನವರು ನಿಜಕ್ಕೂ ಉತ್ತಮ ಮಟ್ಟದ ಪ್ರಗತಿಪರರು ಹಾಗೂ ಉದಾರವಾದಿ ಧೋರಣೆಯವರು. ಈ ಬಾರಿಯ ಬೆಂಗಳೂರು ಸಾಹಿತ್ಯೋತ್ಸವಕ್ಕೆ ಜವಾಹರಲಾಲ್‌ ನೆಹರೂ ವಿ.ವಿ.ಯ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್‌ನನ್ನೂ ಆಹ್ವಾನಿಸಲಾಗಿತ್ತು. ಉತ್ಸವ ಸಂಘಟಕರಿಗೆ ಸಾಹಿತ್ಯಕ್ಕಿಂತಲೂ ರಾಜಕೀಯದಲ್ಲಿ ಹೆಚ್ಚು ಆಸಕ್ತಿ ಎಂಬುದರ ದ್ಯೋತಕ ಇದು. ಕನ್ನಯ್ಯ ಕುಮಾರ್‌ ಸಾಹಿತ್ಯದಲ್ಲಿ ಕೃಷಿ ಮಾಡಿರುವ ಬಗ್ಗೆ ಹೆಚ್ಚೇನೂ ಮಾಹಿತಿ ಇಲ್ಲ. ಈಚೆಗೆ ಗುಂಡೇಟಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್‌ ಬಗ್ಗೆ ಚರ್ಚಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದ್ದುದು ಅರ್ಥಪೂರ್ಣವೇ ಆಗಿತ್ತು. ಆಕೆಯ ತಂದೆ ಪಿ. ಲಂಕೇಶ್‌ ಮೂಲತಃ ಇಂಗ್ಲಿಷ್‌ ಅಧ್ಯಾಪಕರಾಗಿದ್ದವರು; ಮುಂದಿನ ದಿನ ಗಳಲ್ಲಿ ಕನ್ನಡ ಪತ್ರಿಕೋದ್ಯಮ ಪ್ರಪಂಚವನ್ನು ಪ್ರವೇಶಿಸಿ ದ ವರು. ಸಚಿತ್ರ ನಿಯತಕಾಲಿಕೆಯಲ್ಲಿ ದೈನಿಕ ಪತ್ರಿಕೆಗಿಂತಲೂ ಹೆಚ್ಚಿನ ಪ್ರತಿಭಾಭಿವ್ಯಕ್ತಿಗೆ ಅವಕಾಶವಿದೆ. ಪತ್ರಿಕೋದ್ಯಮವೆನ್ನು ವುದು ಅವಸರದ ಸಾಹಿತ್ಯ ಎಂಬ ಮಾತೇ ಇದೆ. ಕ್ರಿಕೆಟ್‌ ಕುರಿತು ಬರೆಯುತ್ತಿದ್ದ ಲೇಖಕ ನಿವೆಲ್‌ ಕಾರ್ಡಸ್‌, ಕ್ರಿಕೆಟ್‌ ಪಂದ್ಯಾವಳಿಯ ವರದಿಗಾರಿಕೆಯಲ್ಲಿ ತಮ್ಮದೇ ಶೈಲಿಯನ್ನು ಮೆರೆದವರು. 1930ರ ಮಧ್ಯಭಾಗದಲ್ಲಿ ವಿಜಯ್‌ ಮರ್ಚೆಂಟ್‌ ಹಾಗೂ ಸೈಯದ್‌ ಮುಷ್ತಾಕ್‌ ಆಲಿ ಇವರುಗಳು, ಇಂಗ್ಲೆಂಡ್‌ನ‌ ತಾರಾಕ್ರಿಕೆಟಿಗರ ತಂಡದ ವಿರುದ್ಧ ಆಡಿದ ಪಂದ್ಯದಲ್ಲಿ ಒಬ್ಬೊಬ್ಬನೂ ನೂರು ರನ್‌ಗಳನ್ನು ಬಾರಿಸಿದ್ದನ್ನು ನೋಡಿ ಉಭಯತ್ರರನ್ನೂ ಕ್ರಿಕೆಟ್‌ನ ಗದ್ಯ ಹಾಗೂ ಕಾವ್ಯವೆಂದು ಬಣ್ಣಿಸಿದವರು ಕಾರ್ಡಸ್‌. ಆ ದಿನಗಳಲ್ಲಿ ಹೆಲ್ಮೆಟ್‌ಗಳಾಗಲಿ, ರಕ್ಷಣಾತ್ಮಕ ಸಲಕರಣೆಗಳಾಗಲಿ, ದೊಡ್ಡ ಮೊತ್ತದ ಸಂಭಾವನೆಯಾಗಲಿ ಇರಲಿಲ್ಲ. ಆ ಕಾಲದ ಆಟಗಾರರು, ಹಣ ಹಾಗೂ ಕೀರ್ತಿ ದಾಖಲೆಗಳನ್ನು ಬೆಂಬತ್ತುವ ಇಂದಿನವರಂತಲ್ಲ. ಈ ಮಾತನ್ನು ಪ್ರಸ್ತಾವಿಸಿದ್ದಕ್ಕೆ ಕಾರಣವಿದೆ. ಮೊನ್ನೆಯ ಸಾಹಿತ್ಯೋತ್ಸವದಲ್ಲಿ ಕ್ರಿಕೆಟ್‌ ಬಗೆಗಿನ ಸಂವಾದ ಕಾರ್ಯಕ್ರಮವೊಂದಿತ್ತು. 

ಸಾಮಾನ್ಯವಾಗಿ ಬೆಂಗಳೂರು ಸಾಹಿತ್ಯೋತ್ಸವದಂಥ ಗಣ್ಯರ ಅಕ್ಷರ ಮೇಳಗಳಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ ಅವರಂಥವರು ಇದ್ದೇ ಇರುತ್ತಾರೆ. ಈ ಬಾರಿ ಇವರ ಜತೆಗೆ ಕರ್ನಾಟಕದವರೇ ಆದ, ಮಾಜಿ ಕಾಂಗ್ರೆಸ್‌ ಸಚಿವ ಜೈರಾಮ್‌ ರಮೇಶ್‌ ಕೂಡ ಇದ್ದರು. ಜೈರಾಮ್‌ ರಮೇಶ್‌ ಅವರು ಕೆಲ ಕಾಲ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದವರು; ಆದರೆ ಅವರ ಕಣ್ಣು ದಿಲ್ಲಿಯ ಮೇಲಿದ್ದುದರಿಂದ ಈ ಹುದ್ದೆಯಲ್ಲಿ ಅವರು ತೋರಿಸಿದ ಆಸಕ್ತಿ “ಇಲ್ಲ’ ಎನ್ನುವಷ್ಟು ಅಲ್ಪ ಪ್ರಮಾಣದ್ದು. ಭಾಷಣಕಾರರಲ್ಲಿ ಕೆಲವರು, ದೇಶದಲ್ಲಿ ಭಿನ್ನಾಭಿಪ್ರಾಯ ಹತ್ತಿಕ್ಕುವ ಸನ್ನಿವೇಶವಿದೆಯೆಂದು ದೊಡ್ಡ ಗಂಟಲಲ್ಲಿ ಹೇಳಿದರಾದರೂ, ಪ್ರಸ್ತುತಃ ಈ ಸಾಹಿತ್ಯೋತ್ಸವದ ಸಂಘಟಕರೂ ಮಾಡಿದ್ದು ಇದನ್ನೇ ಎಂಬುದನ್ನು ಸ್ವತಃ ಗುರುತಿಸುವಲ್ಲಿ ವಿಫ‌ಲರಾದರು. ಯಾಕೆಂದರೆ ಸಂಘಟಕರು ಬಲಪಂಥೀಯರನ್ನು ಅಥವಾ ಯಾರನ್ನು ಅವರು ಉದಾರ ವಾದಿಗಳಲ್ಲವೆಂದು ಪರಿಗಣಿಸಿದ್ದಾರೋ ಅವರನ್ನು – ಈ ಉತ್ಸವದಿಂದ ಅಕ್ಷರಶಃ ಹೊರಗಿಟ್ಟರು. ಈ ಮೂಲಕ “ಸಿದ್ಧಾಂತಗಳ ಘರ್ಷಣೆಯ ಸಾಧ್ಯತೆ’ಯನ್ನು ಸುಲಭವಾಗಿ ನಿವಾರಿಸಿಕೊಂಡರು. ರಾಷ್ಟ್ರೀಯತೆ “ಒಂದು ದೋಷ’ ಎಂಬ ತಪ್ಪು ತಿಳಿವಳಿಕೆ ಸಮ್ಮೇಳನದ ಸಂಘಟಕರು ಹಾಗೂ ಪ್ರತಿನಿಧಿ ಗಳಲ್ಲಿದೆ. ಇದು ನಿಜಕ್ಕೂ ಅಚ್ಚರಿಯ ಸಂಗತಿ. ಹಾಗೆ ನೋಡಿದರೆ ರಾಷ್ಟ್ರೀಯತೆಯ ಕೊರತೆ (ರಾಷ್ಟ್ರ ಪ್ರೇಮದ್ದಲ್ಲ)ಯೇ ದೇಶದಲ್ಲಿಂದು ತಾಂಡವವಾಡುತ್ತಿರುವ ಭ್ರಷ್ಟಾಚಾರ ಹಾಗೂ ಅದಕ್ಷತೆಯಂಥ ಪಿಡುಗುಗಳಿಗೆ ಹಾದಿ ಮಾಡಿಕೊಟ್ಟಿರುವ ಕೆಲವು ಮುಖ್ಯ ಕಾರಣಗಳಲ್ಲೊಂದು. ಜವಾಹರಲಾಲ್‌ ನೆಹರೂ ವಿ.ವಿ. ಹಾಗೂ ದೇಶದ ಮತ್ತಿತರ ವಿ.ವಿ.ಗಳ ವಿದ್ಯಾರ್ಥಿಗಳ ಒಂದು ವರ್ಗದಲ್ಲಿಂದು “ಆಜಾದಿ’ ಸಂಸ್ಕೃತಿ ಹಾಗೂ ರಾಷ್ಟ್ರವಿರೋಧಿ ಭಾವನೆಗಳು ಹೇಗೆ ಉಲ್ಬಣಗೊಳ್ಳುತ್ತ ಬಂದಿವೆ ಎಂಬುದನ್ನು ಕನ್ಹಯ್ಯರಂಥವರಿಗೆ ನೆನಪಿಸಿಕೊಡಬೇಕಾಗಿದೆ. “ಮೇಡ್‌ 
ಇನ್‌ ಇಂಡಿಯಾ’ ಎಂಬ ಸ್ವದೇಶೀ ಆಂದೋಲನಕ್ಕೆ ಹಾಗೂ ಭಾರತ ನಿರ್ಮಿತ ಉತ್ಪನ್ನಗಳಲ್ಲಿ ಪ್ರಗತಿ ಸಾಧಿಸಬೇಕೆಂಬ ಉದ್ದೇಶಕ್ಕೆ ಬಿಜೆಪಿ ಸರಕಾರ ಒತ್ತಾಸೆ ನೀಡಿದರೆ ಇದನ್ನು ಅಪರಾಧ ಎಂದು ಹೇಳುವುದಕ್ಕಾಗುತ್ತದೆಯೆ? ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾಗುವ ಪೂರ್ವದಲ್ಲೇ ಅಲ್ಲಿನ ಜನರು ಇಂಥ ಸ್ವದೇಶೀ ಭಾವನೆಯನ್ನು ಪ್ರೋತ್ಸಾಹಿಸುತ್ತಿದ್ದರು. ನಮ್ಮ ದೇಶದಲ್ಲಿ ಪ್ರಾಂತೀಯತೆ, ಕೋಮುವಾದ ಹಾಗೂ ಜಾತೀಯವಾದಗಳ ಅಬ್ಬರ ತಾಳದ ನಡುವೆಯೂ ರಾಷ್ಟ್ರೀಯ ತೆಯ ಭಾವ ಸ್ವಲ್ಪ ಮಟ್ಟಿಗೆ ತಲೆಯೆತ್ತಿದೆಯೆಂಬ ಬಗ್ಗೆ ನಾವು ಸಂತಸ ಪಡಬೇಕು. ರಾಷ್ಟ್ರೀಯತಾಭಾವದ ಕೊರತೆ ಎದ್ದು ತೋರುತ್ತಿರುವ ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ನೋಡಿ. ಅಲ್ಲಿನ ಜನರು ದೊಡ್ಡ ಸಂಖ್ಯೆಯಲ್ಲಿ ನಮ್ಮ ಸೇನಾ ಪಡೆಗಳನ್ನು ಹೀನಾಯಿಸುವಂತಾಗಿದೆ; ಭಯೋತ್ಪಾದಕರ ಪರವಾಗಿ ಮಾತಾಡುತ್ತ ತಿರುಗುವಂತಾಗಿದೆ.

ದೇಶದಲ್ಲಿ ಅಸಹಿಷ್ಣುತೆಯಿದೆ, ಭಿನ್ನಮತವನ್ನು ಹತ್ತಿಕ್ಕಲಾಗು ತ್ತಿದೆ ಎಂದು ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಆಕ್ಷೇಪ ತೆಗೆದು ಮಾತನಾಡಿದ ಭಾಷಣಕಾರರಿಗೆ ಒಂದು ಮಾತನ್ನು ನೆನಪಿಸಿ ಕೊಡಬೇಕಾಗಿದೆ. ಹೀಗೆ ತಮ್ಮಿಷ್ಟ ಬಂದಂತೆ ಮಾತನಾಡಿದ್ದಕ್ಕಾಗಿ ಯಾರೊಬ್ಬರ ವಿರುದ್ಧವೂ ರಾಜದ್ರೋಹ ಕಾಯ್ದೆಯಡಿ ಕೇಸು ದಾಖಲಿಸಲಾಗಿಲ್ಲ; ಯಾರೊಬ್ಬರ ಗಂಟಲನ್ನೂ ಒತ್ತಿ ಹಿಡಿಯಲಾಗಿಲ್ಲ. ಕನಿಷ್ಠ ಪಕ್ಷ, 2015ರ ಬೆಂಗಳೂರಿನ ಸಾಹಿತ್ಯೋತ್ಸ ವದಲ್ಲಿ, ಲೇಖಕ ವಿಕ್ರಂ ಸೇಥ್‌ ಅವರು, ಸಾಹಿತ್ಯ ಅಕಾಡೆಮಿ ಹಾಗೂ ಕೇಂದ್ರ ಸರಕಾರದ ಪ್ರಶಸ್ತಿಗಳನ್ನು ಮರಳಿಸಲು ಹೊರಟಿದ್ದ ಸಾಹಿತಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯಾದರೂ ನಡೆದಿತ್ತು. ಈ ಬಾರಿಯ ಉತ್ಸವದಲ್ಲಿ ಚರ್ಚಿಸಲು ಇಂಥ ವಿಷಯಗಳು/ವಿವಾದಗಳು ಇರಲಿಲ್ಲವೆ?

ಅರಕೆರೆ ಜಯರಾಮ್‌

ಟಾಪ್ ನ್ಯೂಸ್

“ಸಂತ್ರಸ್ತೆ ಸಂಬಂಧಿ ಮನೆಯಲ್ಲಿ ತಂಗಿದ್ದರು’; ಸಾ.ರಾ.ಮಹೇಶ್‌

“ಸಂತ್ರಸ್ತೆ ಸಂಬಂಧಿ ಮನೆಯಲ್ಲಿ ತಂಗಿದ್ದರು’; ಸಾ.ರಾ.ಮಹೇಶ್‌

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

man hits his wife because he could not afford the treatment!

ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!

Teacher Recruitment Scam: Supreme Court Slams Bengal Govt

West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

Torture of husband by burning with cigarette: Wife arrested based on CCTV video

Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ

Afghan batsman Rahmanullah Gurbaz to return to KKR team

KKR ತಂಡಕ್ಕೆ ಮರಳಲಿರುವ ಅಫ್ಘಾನ್‌ ಬ್ಯಾಟರ್‌ ರಹ್ಮಾನುಲ್ಲ ಗುರ್ಬಾಝ್

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

“ಸಂತ್ರಸ್ತೆ ಸಂಬಂಧಿ ಮನೆಯಲ್ಲಿ ತಂಗಿದ್ದರು’; ಸಾ.ರಾ.ಮಹೇಶ್‌

“ಸಂತ್ರಸ್ತೆ ಸಂಬಂಧಿ ಮನೆಯಲ್ಲಿ ತಂಗಿದ್ದರು’; ಸಾ.ರಾ.ಮಹೇಶ್‌

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

man hits his wife because he could not afford the treatment!

ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!

CSIR: Opportunity to wear unironed clothes every Monday!

CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!

Teacher Recruitment Scam: Supreme Court Slams Bengal Govt

West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.