ಹಿಮ್ಮೆಟ್ಟಿಸುವ ವೈರಿಯಾಗದಿರಲಿ ವೈಫ‌ಲ್ಯ


Team Udayavani, Jul 14, 2018, 12:30 AM IST

m-2.jpg

ಮೌಲ್ಯಮಾಪನ ಶಿಕ್ಷಣದ ಅವಿಭಾಜ್ಯ ಅಂಗ. ಮೌಲ್ಯ ಮಾಪನವೆಂದರೆ ಪರೀಕ್ಷೆ ಎಂದೇ ಅರ್ಥೈಸಬೇಕಿಲ್ಲ. ಏಕದಳ ಸಸ್ಯ ದ್ವಿದಳ ಸಸ್ಯಗಳಲ್ಲಿರುವ ಒಂದೆರಡು ವ್ಯತ್ಯಾಸಗಳನ್ನು ಬರೆದ ವಿದ್ಯಾರ್ಥಿಯನ್ನು ಉತ್ತೀರ್ಣಗೊಳಿಸಿ, ಮರದ ತೊಗಟೆ ಚೂರೊಂದನ್ನು ಮೂಸಿ ನೋಡಿ ಯಾವ ಮರದ್ದೆಂದು ನಿಖರವಾಗಿ ಹೇಳುವ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವ ಪರೀಕ್ಷೆ ಅದೆಷ್ಟೋ ಮಕ್ಕಳ ಬಾಲ್ಯವನ್ನು ವ್ಯರ್ಥಗೊಳಿಸುವುದು ಕ್ಲೀಷೆಯಲ್ಲ ಎನ್ನುವುದನ್ನು ಜ್ಞಾನ, ತಿಳಿವಳಿಕೆ, ಅನ್ವಯ ಕೌಶಲಗಳನ್ನು ಮುಂದಿರಿಸಿ ನೀಲನಕ್ಷೆ ಮತ್ತು ಪ್ರಶ್ನಾಪತ್ರಿಕೆ ತಯಾರಿಸುವ ಪ್ರಭೃತಿಗಳು ಅರಿತುಕೊಳ್ಳಬೇಕು.

ಇಂಗ್ಲೆಂಡಿನ ತತ್ವಜ್ಞಾನಿ ಫ್ರಾನ್ಸಿಸ್‌ ಬೇಕನ್‌ ಒಮ್ಮೆ ಇಗರ್ಜಿಯೊಂದರ ಬಾಗಿಲ ಫ‌ಲಕದಲ್ಲಿ ಕೆಲವೊಂದು ಹೆಸರುಗಳನ್ನು ಕೆತ್ತಿಸಿರುವ ಬಗ್ಗೆ ವಿಚಾರಿಸಿದರು. ಅವು ಸಮೀಪದಲ್ಲಿ ಸಂಭವಿಸಿದ ನೌಕಾಪಘಾತವೊಂದರಲ್ಲಿ ದೇವರ ದಯೆಯಿಂದ ಪಾರಾಗಿ ಬದುಕುಳಿದವರ ಹೆಸರುಗಳಾಗಿದ್ದವು. ದೇವರ ದಯೆಯನ್ನು ಕೊಂಡಾಡುವುದಕ್ಕಾಗಿ ಅದನ್ನು ಕೆತ್ತಿಸಲಾಗಿತ್ತು.

ಹಾಗಾದರೆ ಮುಳುಗಿ ಸತ್ತವರ ಹೆಸರುಗಳೆಲ್ಲಿ? ಈ ಪ್ರಶ್ನೆಗೆ ಅಲ್ಲಿದ್ದವರಲ್ಲಿ ಉತ್ತರವಿರಲಿಲ್ಲ. ಈ ಸನ್ನಿವೇಶ ನೆನಪಾದುದು ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಜಿಲ್ಲೆಯ 504 ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯದರ್ಶಿ ಡಾ| ಎಂ. ಆರ್‌. ರವಿ ಹೇಳಿದ ಮಾತುಗಳು. “ಸಾವಿರಾರು ವಿದ್ಯಾ ರ್ಥಿಗಳು ಉತ್ತೀರ್ಣರಾಗಲು ವಿಫ‌ಲರಾಗಿ ಅನುತ್ತೀರ್ಣ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವಾಗ ಕೆಲವೇ ವಿದ್ಯಾರ್ಥಿಗಳ ರ್‍ಯಾಂಕ್‌ ಪಟ್ಟಿ ಮುಂದಿಟ್ಟುಕೊಂಡು ಸಂಭ್ರಮ ಪಡುವುದು ಸರಿಯಲ್ಲ. ಸಮಾಧಿಯ ಮೇಲೆ ಸೌಧ ಕಟ್ಟುವುದು ಸಂಸ್ಕೃತಿಯಲ್ಲ.’

ಶೈಕ್ಷಣಿಕ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವ ಪ್ರತಿಯೊಬ್ಬರೂ ಯೋಚಿಸಬೇಕಾದ ವಿಷಯವಿದು. ಜೀವನದಲ್ಲಿ ಸೋಲು-ಗೆಲುವು ಒಂದು ನಾಣ್ಯದ ಎರಡು ಮುಖಗಳು. ಗೆಲುವನ್ನು ವಿಜೃಂಭಿಸಿ ಸೋಲನ್ನು ನಿರ್ಲಕ್ಷಿಸುವುದು ಸರಿಯಲ್ಲ. ಅದರ ಬದಲು ಸೋಲನ್ನು ಗೆಲುವಿನತ್ತ ಮುನ್ನಡೆಸುವ ಚಿಂತನೆಗಳು ಸ್ವಾಗತಾರ್ಹವಾಗುತ್ತವೆ. 2018ರ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಗೆ ರಾಜ್ಯದಲ್ಲಿ 14,387 ಶಾಲೆಗಳಿಂದ 7,44,461 ವಿದ್ಯಾರ್ಥಿಗಳು ನೋಂದಣಿಗೊಂಡಿದ್ದರು. ಖಾಸಗಿ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳೂ ಸೇರಿದಂತೆ ಒಟ್ಟು 8,38,088 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಒಟ್ಟು ಫ‌ಲಿತಾಂಶವನ್ನು ವೀಕ್ಷಿಸಿದಾಗ 6,02,802 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ. 71.93 ಫ‌ಲಿತಾಂಶ ದಾಖಲಾಗಿರುತ್ತದೆ. 2,35,286 ವಿದ್ಯಾರ್ಥಿಗಳು ಅನುತ್ತೀರ್ಣರಾಗುವ ಮೂಲಕ ಶೇ. 28.07 ವಿದ್ಯಾರ್ಥಿಗಳು ಅನುತ್ತೀರ್ಣತೆಯ ಹಣೆಪಟ್ಟಿಯನ್ನು ಲಗತ್ತಿಸಿಕೊಂಡರು.

ಸೋಲು- ಗೆಲುವುಗಳನ್ನು ಅಂಕಿಅಂಶದ ಮೂಲಕ ವಿಶ್ಲೇಷಿಸಿದಾಗಲೂ ಸೋತವರ ಸಂಖ್ಯೆ ನಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ. ಬಹುಪಾಲು ಮಂದಿ ಸೋಲು ಸುಳಿದಾಗ ಆತಂಕಕ್ಕೊಳಗಾಗು ವುದನ್ನು ಗಮನಿಸಿದ್ದೇವೆ. ಕಾರಣವೂ ಸ್ಪಷ್ಟ, ಇತಿಹಾಸ ಯಾವಾಗಲೂ ವಿಜೇತರನ್ನು ವೈಭವೀಕರಿಸುತ್ತದೆ. ಸೋತವರನ್ನು ಮೂಲೆಗುಂಪಾಗಿಸುತ್ತದೆ. ಆದರೆ ಜಗತ್ತಿನಲ್ಲಿ ಯಶಸ್ವಿಯಾದವರೆಲ್ಲ ಸೋಲಿನ ರುಚಿ ಕಂಡವರೆಂಬುದನ್ನು ದೃಶ್ಯ ಮಾಧ್ಯಮವಾಗಲಿ, ಪ್ರತಿಕೆಗಳಾಗಲಿ, ಸಮಾಜವಾಗಲಿ, ಸಂಘ ಸಂಸ್ಥೆಗಳಾಗಲಿ, ಶಿಕ್ಷಕರಾಗಲಿ ಮರೆತು ಬಿಟ್ಟಿರುತ್ತಾರೆ. ಈ ಕಾರಣಕ್ಕಾಗಿಯೇ ಮಾನವ ಮನಸ್ಸು ಪರೀಕ್ಷೆ ಎಂದಲ್ಲ ಎಲ್ಲರಂಗಗಳಲ್ಲೂ ಎಲ್ಲ ಕ್ಷೇತ್ರಗಳಲ್ಲೂ ಪರಾಭವವನ್ನು ದೂರವಿಡಲು ಶತಾಯಗತಾಯ ಬಯಸುತ್ತಿರುತ್ತದೆ. “ನನ್ನ ಮಗನಿಗೆ ಸೋಲುವುದನ್ನೂ ಕಲಿಸಿಕೊಡಿ’ ಎನ್ನುವ ಪೋಷಕರು ಹುಡುಕಿದರೂ ಸಿಗಲಾರರು. 

ಗ್ರೀಕ್‌ ಪುರಾಣದ ಪ್ರಕಾರ ಫೀನಿಕ್ಸ್‌ ಪಕ್ಷಿ ಉರಿದು ಬೂದಿಯಾದ ನಂತರ ಕೂಡಾ ಮರುಹುಟ್ಟು ಪಡೆದು ಎದ್ದು ಬರುತ್ತದೆ. ಜೀವನದ ಏಳುಬೀಳುಗಳಲ್ಲಿ ಸೋತು ಸುಣ್ಣವಾದವರಿಗೆ ಈ ಕಲ್ಪನೆ ಅದಮ್ಯ ಸ್ಫೂರ್ತಿದಾಯಕವಾದರೂ ಅದು ಕಥೆಗಷ್ಟೇ ಸೀಮಿತ ಹೊರತು ನಿತ್ಯ ಜೀವನಕ್ಕಲ್ಲ.
ಅಮೆರಿಕದ ಮೈಕೆಲ್‌ ಜೋರ್ಡಾನ್‌ ಸಾರ್ವಕಾಲಿಕ ಶ್ರೇಷ್ಠ ಬಾಸ್ಕೆಟ್‌ಬಾಲ್‌ ಕ್ರೀಡಾಪಟುಗಳಲ್ಲಿ ಒಬ್ಬರೆಂದು ಖ್ಯಾತರಾದವರು. ಆದರೆ ಶಾಲಾ ಜೀವನದಲ್ಲಿ ಅವರನ್ನು ಬಾಸ್ಕೆಟ್‌ಬಾಲ್‌ ತಂಡಕ್ಕೆ ಸೇರಿಸಿಕೊಳ್ಳಲು ಕೋಚ್‌ ನಿರಾಕರಿಸಿದ್ದರಂತೆ. ನಿನ್ನಲ್ಲಿ ಆಟದ ಕೌಶಲ್ಯವಿಲ್ಲವೆಂದು ಜರೆದಿದ್ದರಂತೆ. “ನನ್ನ ಕ್ರೀಡಾ ಕೆರಿಯರ್‌ನಲ್ಲಿ 9000 ಶಾಟ್‌ (ಎಸೆತ)ಗಳು ಗುರಿತಪ್ಪಿವೆ. ಸುಮಾರು 300 ಪಂದ್ಯಗಳಲ್ಲಿ ಸೋತಿದ್ದೇನೆ. 26 ಸಲ ಗೆಲುವಿನ ಅಂಚಿಗೆ ಬಂದು ಸೋಲುಂಡಿದ್ದೇನೆ. ಹೀಗೆ ಕ್ರೀಡಾ ಬದುಕಿನಲ್ಲಿ ಅನೇಕ ಬಾರಿ ಸೋಲುಂಡ ಬಳಿಕ ಯಶಸ್ಸು ನನ್ನದಾಯಿತು’ ಎನ್ನುತ್ತಾರೆ ಜೋರ್ಡಾನ್‌. ಇಂದಿನ ಸೋಲುವವರಿಗೆ ಆ ವ್ಯವಧಾನವಾದರೂ ಎಲ್ಲಿಂದ ಬರಬೇಕು?

ಶಿಕ್ಷಕಿಯೊಬ್ಬರು ಒಂದು ಪುಟ್ಟ ಗ್ಲಾಸನ್ನು ಹಿಡಿದುಕೊಂಡು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರಂತೆ ಈ ಗ್ಲಾಸು ಎಷ್ಟು ಭಾರವಿರಬಹುದು?ಬೇರೆ ಬೇರೆ ಉತ್ತರಗಳನ್ನು ಪಡೆದ ಶಿಕ್ಷಕಿಗೆ ಓರ್ವ ಹುಡುಗಿಯ ಉತ್ತರ ಚಕಿತಗೊಳಿಸಿತು. “ಮೇಡಂ ಗ್ಲಾಸ್‌ ಸಾಪೇಕ್ಷವಾದುದು. ನೀವದನ್ನು ಒಂದು ನಿಮಿಷ ಹಿಡಿದುಕೊಂಡರೆ ಅದು ಭಾರವೆನಿಸದು ಒಂದು ಗಂಟೆಯ ಕಾಲ ಹಿಡಿದುಕೊಂಡರೆ ಅದು ತುಂಬಾ ಭಾರವೆನಿಸಬಹುದು. ದಿನವಿಡೀ ಹಿಡಿದು ಕೊಳ್ಳುವುದೆಂದರೆ ಅದು ಹಿಂಸೆಯೇ ಸರಿ. ವರ್ಷವಿಡೀ ಹಿಡಿದುಕೊಂಡರೆ ಅದು ಯಮಯಾತನೆಯನ್ನು ಉಂಟುಮಾಡ ಬಹುದು.’ ಅನುತ್ತೀರ್ಣರಾದವರಿಗೆ ಈ ಕತೆಯಲ್ಲೊಂದು ಪಾಠವಿದೆ. ಅನುತ್ತೀರ್ಣತೆಯ ಅವಮಾನಕ್ಕೆ ಒಳಗಾದ ಮಗು ಅದನ್ನು ಸದಾ ಮನಸ್ಸಿನಲ್ಲಿಟ್ಟುಕೊಂಡರೆ ತೀವ್ರತರದ ಹಿಂಸೆಯನ್ನುಂಟು ಮಾಡಬಹುದು. ಅನುತ್ತೀರ್ಣತೆಯನ್ನು ಮರೆಯಬೇಕಾದರೆ ಅವರು ಉತ್ತೀರ್ಣರಾಗಬೇಕು. ಉತ್ತೀರ್ಣತೆಯ ವಿಷಯದಲ್ಲಿ ನಾವು ಚಿಂತಿಸದೆ ಹೋದರೆ ಅದು ಘನಘೋರವಾದ ಶಾಪವಾಗುತ್ತದೆ. ಯಶಸ್ಸಿನ ಸಂಭ್ರಮದ ಜೊತೆಗೆ ಸೋಲಿನ ಆತ್ಮಾವಲೋಕನವಾಗಬೇಕು. ಈ ಆತ್ಮಾವಲೋಕನದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗುತ್ತದೆ. 

ಒಂದು ಬಾರಿಯ ಸೋಲಿಗೆ ಶರಣಾಗತಿಯಾಗಿ ಆತ್ಮಹತ್ಯೆಯ ದಾರಿ ಹಿಡಿಯುವ ವಿದ್ಯಾರ್ಥಿಯಾಗಲಿ, ರೈತನಾಗಲಿ ಕೈತಪ್ಪಬಹುದಾದ ಅವಕಾಶಗಳು ಎಷ್ಟು ಎಂಬುದನ್ನು ಸಾವಧಾನದಿಂದ ಸಮಚಿತ್ತದಿಂದ ಯೋಚಿಸಿ ಎಚ್ಚೆತ್ತುಕೊಳ್ಳುತ್ತಿದ್ದರೆ ಪತ್ರಿಕೆಗಳಲ್ಲಿ ಆತ್ಮಹತ್ಯಾ ಪ್ರಕರಣಗಳು ಉಲ್ಲೇಖವಾಗುತ್ತಲೇ ಇರಲಿಲ್ಲ. ವೈಫ‌ಲ್ಯ ಗುರುವಾಗಬೇಕೇ ಹೊರತು ಹಿಮ್ಮೆಟ್ಟಿಸುವ ವೈರಿಯಾಗಬಾರದು. ಆಗಿರುವ ಅವಮಾನ ಸೋಲು ಟೀಕೆಗಳೆಲ್ಲ ವಿಜಯದ ಸೋಪಾನವಾಗಬೇಕು. ಗೆಲುವಿನ ಚೈತ್ರಯಾತ್ರೆಗೆ ಹತ್ತುವ ಅಶ್ವವಾಗಬೇಕು.

ಮೌಲ್ಯಮಾಪನ ಶಿಕ್ಷಣದ ಅವಿಭಾಜ್ಯ ಅಂಗ. ಮೌಲ್ಯ ಮಾಪನವೆಂದರೆ ಪರೀಕ್ಷೆ ಎಂದೇ ಅರ್ಥೈಸಬೇಕಿಲ್ಲ. ಏಕದಳ ಸಸ್ಯ ದ್ವಿದಳ ಸಸ್ಯಗಳಲ್ಲಿರುವ ಒಂದೆರಡು ವ್ಯತ್ಯಾಸಗಳನ್ನು ಬರೆದ ವಿದ್ಯಾರ್ಥಿಯನ್ನು ಉತ್ತೀರ್ಣಗೊಳಿಸಿ, ಮರದ ತೊಗಟೆ ಚೂರೊಂದನ್ನು ಮೂಸಿ ನೋಡಿ ಯಾವ ಮರದ್ದೆಂದು ನಿಖರವಾಗಿ ಹೇಳುವ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವ ಪರೀಕ್ಷೆ ಅದೆಷ್ಟೋ ಮಕ್ಕಳ ಬಾಲ್ಯವನ್ನು ವ್ಯರ್ಥಗೊಳಿಸುವುದು ಕ್ಲೀಷೆಯಲ್ಲ ಎನ್ನುವುದನ್ನು ಜ್ಞಾನ, ತಿಳಿವಳಿಕೆ, ಅನ್ವಯ ಕೌಶಲಗಳನ್ನು ಮುಂದಿರಿಸಿ ನೀಲನಕ್ಷೆ ಮತ್ತು ಪ್ರಶ್ನಾಪತ್ರಿಕೆ ತಯಾರಿಸುವ ಪ್ರಭೃತಿಗಳು ಅರಿತುಕೊಳ್ಳಬೇಕು.

ಹೆಣ್ಣು ಅನಾಫಿಲಿಸ್‌ ಸೊಳ್ಳೆಯಿಂದ ಮಲೇರಿಯಾ ಹರಡುತ್ತದೆಂದು ಉತ್ತರಿಸುವ ವಿದ್ಯಾರ್ಥಿಯನ್ನು ಪುರಸ್ಕರಿಸುವ ಶಿಕ್ಷಕ, “ಗಂಡು ಅನಾಫಿಲಿಸ್‌ ಸೊಳ್ಳೆಯಿಂದ ಯಾಕೆ ಮಲೇರಿಯಾ ಹರಡುವುದಿಲ್ಲ ಸರ್‌?’ ಎಂದು ಪ್ರಶ್ನಿಸುವ ವಿದ್ಯಾರ್ಥಿಯನ್ನು ದಂಡಿಸುವಂತಾಗಬಾರದು. ಪಂಪನ ವಿಷಯವನ್ನು ಅರಿಯದ ಬಾಲಕ ರನ್ನನನ್ನೂ ತಿಳಿದಿಲ್ಲ ಎಂಬ ತೀರ್ಮಾನಕ್ಕೆ ಕಟ್ಟುಬಿದ್ದು ಅಂಕವನ್ನು ಕಳೆಯುವ ಹಂತಕ್ಕೆ ಬರಬಾರದು ನಮ್ಮ ಶಿಕ್ಷಣ ವ್ಯವಸ್ಥೆ.

ಅಡ್ವೆ ರವೀಂದ್ರ ಪೂಜಾರಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.