ಅಂಕ ಪಡೆಯಲೂ ಅದೃಷ್ಟ ಬೇಕಂತೆ !
Team Udayavani, Mar 16, 2018, 7:30 AM IST
ಪರೀಕ್ಷೆಯಲ್ಲಿ ಉತ್ತರ ಹೊಳೆಯದಿದ್ದಾಗ ಕಣ್ಣು ಗಡಿಯಾರದ ಕಡೆಗೆ ಒಮ್ಮೆ ದೃಷ್ಟಿ ಹರಿಸಿ ಪಟಕ್ಕನೆ ಕಿಟಕಿಯಾಚೆಗಿನ ದೃಶ್ಯಾವಳಿಗಳನ್ನು ನೋಡುತ್ತ ಕುಳಿತಿತು. ಕಣ್ಣನ್ನು ಅರಸುತ್ತ ಹೋದ ಲಕ್ಷ್ಯವೂ ಅಲ್ಲೇ ಬಾಕಿಯಾಯಿತು. ಮೋಜು ನೋಡುತ್ತ ಕುಳಿತಿದ್ದ ಇಬ್ಬರೂ ಮಹಾಶಯರನ್ನು ವಾಸ್ತವಕ್ಕೆ ಕರೆದುಕೊಂಡು ಬರಲು ನಿರ್ವಾಹಕರು ಎದೆಯ ಮೇಲೆ ಎಚ್ಚರಿಕೆಯ ಗಂಟೆಯನ್ನು ಝ… ಎಂದು ಬಾರಿಸಬೇಕಾಯಿತು. ಉಗುರು ಕಚ್ಚುತ್ತ ಮತ್ತೆ ಪ್ರಶ್ನೆಪತ್ರಿಕೆಯನ್ನು ನೋಡಿದಾಗ “ಛೆ! ಓದಬಾರದಿತ್ತೇ’ ಎಂದೆನಿಸದಿರಲಿಲ್ಲ. ಎಲ್ಲರೂ ಬರೆಯುವುದ ನೋಡಿದಾಗ ಪಾಪಿಗಳು ನನಗೂ ಪರೀಕ್ಷೆಯ ಬಿಸಿ ತಟ್ಟೋ ಹಾಗೆ ಮಾಡದೆ ತಾವು ಮಾತ್ರ ನೂರಕ್ಕೆ ಇನ್ನೂರು ತೆಗೆಯುವಂತೆ ಬರೆಯುತ್ತಿದ್ದಾರೆ ಎಂದು ಸಿಟ್ಟು ಕುದಿಯುತಿತ್ತು. ಗಡಿಯಾರದ ಮುಳ್ಳಿಗೂ ಪೆನ್ನಿನ ಮುಳ್ಳಿಗೂ ಪೈಪೋಟಿ ಇಟ್ಟಿದ್ದರೆ ಪೆನ್ನೇ ಗೆಲ್ಲುತ್ತಿತ್ತು. ನಾನೂ ಓದಿದ್ದರೆ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೆ. ಹೀಗೆ ಯೋಚನಾಲಹರಿಯೊಳಗೆ ಸಿಲುಕಿಕೊಂಡವಳನ್ನು ತನ್ನತ್ತ ಎಳೆದುಕೊಂಡವಳು ಅವಳು! ಅಯ್ಯೋ ನಿನ್ನೆಯೂ ಇದೇ ಚೂಡಿದಾರದಲ್ಲಿದ್ದಳು! ಥೋ ಪರೀಕ್ಷೆಯ ಬಿಸಿ ಮೇಲೆ ಇದೂ ಒಂದು ತುಪ್ಪ ಬೇಕ ! ಎಂದೆಲ್ಲ ಅನಿಸಿ ಅದೇನೋ ಮೆದುಳು ಹೇಳಿಕೊಟ್ಟದ್ದನ್ನೆಲ್ಲ ಗೀಚಲು ಶುರುಮಾಡಿದೆ.
ಪರೀಕ್ಷೆ ಮುಗಿಸಿ ಬಂದಾಗ ಹುಡುಗಿಯರೆಲ್ಲ ಏನೋ ಪಿಸುಗುಟ್ಟುತ್ತಿದ್ದರು. ಕಿವಿ ಚುರುಕಾಯಿತು. ಅವಳ ಬಗೆಗಿನ ಮಾತುಗಳೇ ಕೇಳುತ್ತಿದ್ದವು. ಹೆಸರು ಪ್ರೀತ. ನನಗೆ ಅನಿಸಿದ್ದು ಸುಳ್ಳಾಗಿರಲಿಲ್ಲ. ಮೊದಲ ದಿನದ ಪರೀಕ್ಷೆಯಿಂದಲೂ ಆಕೆ ಅದೊಂದೇ ಉಡುಪಿನಲ್ಲಿದ್ದಾಳಂತೆ. ಅದೂ ಎಲ್ಲೊ ಒಂದು ಕಡೆ ಹರಿದಿತ್ತು. ಪ್ರೀತಳ ಪ್ರೀತಿಯ ಚೂಡಿದಾರವೆಂದುಕೊಂಡಿ¨ªೆ . ಅಲ್ಲ ಅದು ಅವಳ ಅದೃಷ್ಟದ ಚೂಡಿದಾರವಾಗಿತ್ತು. ಯಾಕೋ ತುಂಬ ಕುತೂಹಲವೆನಿಸಿತು. ಗೆಳತಿಯರ ಮಾತುಗಳಿಂದ ಪ್ರಭಾವಿತಳಾಗಿ ಅವಳನ್ನು ಗಮನಿಸಲು ಶುರುಮಾಡಿಕೊಂಡೆ. ಪರೀಕ್ಷೆ ಇದ್ದಷ್ಟು ದಿನ ಬಟ್ಟೆ ಒಗೆಯಲಿಲ್ಲ . ಅದೇ ಹರಿದ ಚೂಡಿದಾರದಲ್ಲಿ ಮಾನ ಕಾಪಾಡಿಕೊಳ್ಳುತ್ತಿದ್ದಳು. ರಾತ್ರಿ ಮಲಗುವ ಮುನ್ನ ಪೆನ್ನು ಎಂಬ ಶಸ್ತ್ರವನ್ನು ದೇವರಿಗೆ ಒಪ್ಪಿಸಿ ಬೆಳಗ್ಗೆ ಅದನ್ನು ಹಿಡಿದು ಹತ್ತು ನಿಮಿಷದ ಪ್ರಾರ್ಥನೆ ಸಲ್ಲಿಸಿ ಕಾಲೇಜಿನ ಕಡೆ ನಡೆಯುತ್ತಿದ್ದಳು. ಹಾಸ್ಟೆಲಿನಲ್ಲಿ ಓದುವಾಗಲೂ ಅಷ್ಟೇ, ಹರಿದ ಒಂದು ಅಂಗಿ, ಜಾಕೆಟು, ಮಣ್ಣಿನ ಬಣ್ಣದ ಪ್ಯಾಂಟು, ಓದುವ ಮುನ್ನ ತನ್ನ ಇಷ್ಟ ದೇವರನ್ನೆಲ್ಲ ನೆನೆಸಿ ಒಂದು ಕಾಗದದಲ್ಲಿ ಬರೆದು, ಒಂದು ಕಣ್ಣು ದೇವರ ಹೆಸರುಗಳನ್ನು ನೋಡುತ್ತಿದ್ದರೆ, ಇನ್ನೊಂದು ಪುಸ್ತಕವನ್ನು ನೋಡುತ್ತಿರುತ್ತದೆ. ಮುಂಜಾನೆ ನಿದಿರೆಯಿಂದ ಎದ್ದು ಒಂದುವೇಳೆ ತಪ್ಪಿ ನಮ್ಮ ಮುಖ ಕಂಡರೂ ವಾಪಸು ಮಲಗಿ ಮತ್ತೆ ಎದ್ದು ಅರ್ಧ ತಾಸು ದೇವರ ಜೊತೆ ಒಪ್ಪಂದದ ಮಾತುಕತೆಯಾಗುತ್ತದೆ. ಬಳಸೋ ಕನ್ನಡಿಯೂ ಒಂದೇ ಆಗಿರಬೇಕು. ಹೋಗೋವಾಗ ಪೊರಕೆಯನ್ನು ನೋಡೋ ಹಾಗೂ ಇಲ್ಲ . ಇನ್ನೂ ಏನೇನೋ ! ಇಷ್ಟೆಲ್ಲ ನಡೆಯುತ್ತಿದ್ದರೂ ನನಗೆ ಗೊತ್ತೇ ಇರಲಿಲ್ಲ !
ಅದೃಷ್ಟವನ್ನು ನಂಬಿ ವಿಚಿತ್ರ ದಿನಚರಿಗೆ ಒಗ್ಗಿಕೊಂಡವಳು ಯಾವಾಗ ಮರಳಿ ಮೌಡ್ಯವನ್ನು ಬದಿಗೊತ್ತಿ ನಮ್ಮೊಂದಿಗೆ ಬೆರೆಯುವಳ್ಳೋ ಗೊತ್ತಿಲ್ಲ. ಸದ್ಯಕ್ಕಂತೂ ಅದೃಷ್ಟ ಖುಲಾಯಿಸಿ ಅಂಕಗಳು ಚಿರತೆಯ ವೇಗದಲ್ಲಿ ಏರುತ್ತಿದೆ. ಓದುವುದನ್ನು ಬಿಟ್ಟು ಅವಳನ್ನು ಗಮನಿಸುವ ಆವಶ್ಯಕತೆ ನನಗಿರಲಿಲ್ಲ. ಆದರೂ ಒಳ್ಳೊಳ್ಳೆಯ ಉಡುಪುಗಳು ಮೂಲೆಗುಂಪಾಗುವುದನ್ನು ನೋಡಲಾಗುತ್ತಿಲ್ಲವಷ್ಟೆ !
ದೀಪ್ತಿ ಚಾಕೋಟೆ ವಿ. ವಿ. ಕಾಲೇಜು, ಮಂಗಳೂರು