2021…ಹೊಸ ಭರವಸೆಯೊಂದಿಗೆ ಹೊಸ ವರ್ಷದತ ಹೆಜ್ಜೆ ಹಾಕೋಣ
ಆರ್ಥಿಕ, ಸಾಮಾಜಿಕ, ಪ್ರಾಕೃತಿಕ ಅಸ್ಥಿರತೆಗಳನ್ನು ಕಡೆಗಣಿಸುವಂತಿಲ್ಲ.
Team Udayavani, Dec 29, 2020, 2:38 PM IST
2020 ಮಾನವ ಜಗತ್ತಿಗೆ ಎಂದೆಂದೂ ಮರೆಯಲಾಗದ ವರ್ಷ. ದುಃಖ, ನೋವನ್ನು ನೀಡಿ, ಜೀವನದ ಸತ್ಯದರ್ಶನ ಮಾಡಿಸಿದ ಕೊರೊನಾ ಕಾಯಿಲೆ ಬದುಕಿನ ಪಾಠ ಕಲಿಸಿದೆ. ಸಂಪತ್ತಿನ ಅಹಂಕಾರ, ಅಧಿಕಾರದ ಅಮಲು, ತಾನೇ ಶ್ರೇಷ್ಠನೆಂಬ ನಂಬಿಕೆ, ಪ್ರಕೃತಿಯ ಪರ ನಿರ್ಲಕ್ಷ್ಯ, ಗುರು ಹಿರಿಯರ ಅನಾದರ ಇವೆಲ್ಲದರ ಪರಿಣಾಮ ಮನುಷ್ಯನ ಕಾಲು ಮುರಿದು, ಜ್ಞಾನೋದಯದ ಅರಿವನ್ನು ಮೂಡಿಸಿ, ಮಾನವೀಯತೆಯ ಬಾಗಿಲು ತೆರೆಯಲು ಅವಕಾಶ ಮಾಡಿಕೊಟ್ಟಿದೆ.
ಕೊರೊನಾ ಎಂಬ ಈ ಕಣ್ಣಿಗೆ ಕಾಣದ ಜೀವಾಣು ಲಕ್ಷಾಂತರ ಜನರ ಸಾವಿಗೆ ಕಾರಣವಾಗಿ ಇಡೀ ವಿಶ್ವದ ಆರ್ಥಿಕತೆಯನ್ನು ನೆಲಕ್ಕುರುಳಿಸಿ ಬಿಟ್ಟಿದೆ. ಅನೇಕ ಜನರು ಕೆಲಸ ಕಳೆದುಕೊಂಡು ಬದುಕುವ ದಾರಿ ಕಾಣದೆ, ಮಾನಸಿಕವಾದ ಕಾಯಿಲೆಗಳಿಗೆ ಶಿಕಾರಿಯಾಗಿದ್ದಾರೆ. ಕೊರೊನಾ ಸಂಕಷ್ಟದ ನಡುವೆ ಮಾನಸಿಕ ಕಾಯಿಲೆಗಳಿಂದ ವಿಶ್ವದಾದ್ಯಂತ ಆತ್ಮಹತ್ಯೆಗಳ ಬಗ್ಗೆ ಚಿಂತನ ಮಂಥನ ಮಾಡಿಕೊಂಡು ಆ ದಿಶೆಯಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕವಾಗಿದೆ.
ಇದರೊಂದಿಗೆ ಸಾಕಷ್ಟು ಪ್ರಾಕೃತಿಕ ಆಪತ್ತುಗಳಿಂದ ಈಗ ತಾನೇ ಚೇತರಿಸಿಕೊಂಡು ಸಿಹಿ-ಕಹಿ ಅನುಭವಗಳೊಂದಿಗೆ ಹೊಸ ವರುಷ, ಹೊಸ ದಶಕ, ಹೊಸ ಶತಮಾನಕ್ಕೆ ನಾವು ಮತ್ತೆ ಹೊಸ ಭರವಸೆಯ ಹೆಜ್ಜೆ ಇಡುತ್ತಿದ್ದೇವೆ. ಒಂದು ರಾತ್ರಿಯ ಅಂತ್ಯದ ಹಿಂದೆಯೇ ಮತ್ತೂಂದು ಹೊಸ ಜೀವನ, ಹೊಸ ಆಸೆ, ಹೊಸ ಹುರುಪಿನೊಂದಿಗೆ ಹೊಸ ಶತಮಾನದ ಭರವಸೆಯ ಬೆಳಗಾಗಲಿದೆ. ಒಂದೇ ನೂಲಿನಲ್ಲಿ ಉಳಿದ ಹನ್ನೊಂದು ತಿಂಗಳುಗಳನ್ನು ಗಂಟು ಹಾಕಿದ ಕಾಲದ ರಚನೆಯಲ್ಲಿ ಗಳಿಸಿ, ಉಳಿಸಿಬಿಟ್ಟ ಕಾರ್ಯಗಳ ಹೊಣೆ ಒಂದೆಡೆಯಾದರೆ, ಮತ್ತೂಂದೆಡೆ ಅನುಭವದ ಗಣಿಯೊಂದಿಗೆ ವಿಶ್ವಾಸದ, ಹುರುಪಿನ ಕರ್ತವ್ಯದೊಂದಿಗೆ ಹೊಸ ಆರಂಭ. ಉಳಿದ ಹನ್ನೊಂದು ತಿಂಗಳನ್ನು ತನ್ನ ಭರವಸೆಯ ಗಂಟಿನೊಂದಿಗೆ ಬೆರೆಸಿದ ಅದೇನು ಮಧುರ ಸಂಬಂಧ ಈ ಡಿಸೆಂಬರ್ ಮತ್ತು ಜನವರಿ ತಿಂಗಳದ್ದು.
ಕಾಲದ ಅಂತ್ಯ ಮತ್ತು ಆದಿಯನ್ನು ಸಂಕೇತಿಸುವ ಈ ಎರಡು ತಿಂಗಳುಗಳು, ಬಾಳ ಹಗ್ಗವನ್ನು ನವಿರಾಗಿ ಸುರಿದು ನಮ್ಮೆಲ್ಲರನ್ನೂ ಏಕತೆಯಿಂದ ಒಂದು ಮಾಡುವ ಸೂತ್ರಧಾರಿಯಂತೆ ಕಂಡು ಬರುತ್ತವೆ. ಸಕಾರಾತ್ಮಕವಾದ ಮನೋಭಾವದಿಂದ ಹೊಸ ವರುಷ, ಶತಮಾನಕ್ಕೆ ಕಾಲಿಡುತ್ತಿದ್ದರೂ ಇಂದು ವಿಶ್ವದಾದ್ಯಂತ ಕಂಡು ಬರುತ್ತಿರುವ ಆರ್ಥಿಕ, ಸಾಮಾಜಿಕ, ಪ್ರಾಕೃತಿಕ ಅಸ್ಥಿರತೆಗಳನ್ನು ಕಡೆಗಣಿಸುವಂತಿಲ್ಲ. ದಿನೇ ದಿನೇ ಹೆಚ್ಚುತ್ತಿರುವ ಸಾಮಾಜಿಕ ಅರಾಜಕತೆಗಳು, ಕೋಮುಗಲಭೆ, ಮಹಿಳೆಯರ ಮೇಲಿನ ದೌರ್ಜನ್ಯ, ಪ್ರಾಕೃತಿಕ ವಿನಾಶದ ಆಪತ್ತುಗಳು, ಮಾನವೀಯ ಮೌಲ್ಯಗಳ ನಶಿಸುವಿಕೆ ಮನುಕುಲವನ್ನು ಚಿಂತಿಸುವಂತೆ ಪ್ರಚೋದಿಸುತ್ತಿದೆ.
ಸ್ತ್ರೀ ಜಾತಿಯ ಗೌರವದ ಬಗ್ಗೆ ಸ್ವಾಮಿ ವಿವೇಕಾನಂದರ ನುಡಿಯಂತೆ ಒಂದು ದೇಶದ ಪ್ರಗತಿಯ ಮಾಪನ ಆ ದೇಶದ ಮಹಿಳೆಯರಿಗೆ ಸಿಗುವ ಗೌರವದ ಮೇಲೆ
ಆಧಾರಿತವಾಗಿರುತ್ತದೆ ಅನ್ನುವುದು ಎಷ್ಟೊಂದು ಸತ್ಯ. ಒಂದು ಕಡೆ ಚಂದ್ರನಲ್ಲಿ ಮನೆ ಮಾಡುವ ತಯಾರಿಯಲ್ಲಿರುವ ನಾವು ಬದುಕಿನ ಮೂಲ ಶಕ್ತಿಯ ನೈತಿಕತೆಯ ಬಗ್ಗೆ ಪ್ರಶ್ನೆ ಮಾಡುವಂತಹ ಅಮಾಯಕ ಕೆಲಸಗಳನ್ನು ಮಾಡುತ್ತಿದ್ದೇವೆ. ಸರಕಾರದ ಧ್ಯೇಯ, ಧೋರಣೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಆಂತರಿಕ ಶಕ್ತಿಗಳ ಪ್ರಚೋದನೆಗೆ ಒಳಪಟ್ಟು ಕಲಹ ಹುಟ್ಟಿಸಿ, ಜನಸಾಮಾನ್ಯರ ಜೀವನ ಮತ್ತು ಸಾರ್ವಜನಿಕ ಸಂಪತ್ತಿಗೆ ಹಾನಿಯುಂಟು ಮಾಡುವ ದುಷ್ಟ ಶಕ್ತಿಗಳು ತಲೆ ಎತ್ತಿ ನಿಲ್ಲುತ್ತಿರುವುದು ನಿಜಕ್ಕೂ ಚಿಂತಿಸಬೇಕಾದ ಸಂಗತಿಯಾಗಿದೆ.
ಪ್ರಜಾತಂತ್ರ ರಾಷ್ಟ್ರದಲ್ಲಿ ಪ್ರತಿಯೊಬ್ಬನಿಗೂ ಸಾಂವಿಧಾನಿಕವಾದ ಹಕ್ಕು ಬಾಧ್ಯತೆಗಳಿದ್ದರೂ ತಮ್ಮ ನಿಜ ಸ್ವಾರ್ಥಕ್ಕಾಗಿ ಯುವ ಜನತೆಯನ್ನು ಹಾಳು ದಾರಿಗೆ
ಪ್ರಚೋದಿಸುವ ಶಕ್ತಿಗಳನ್ನು ಮುರಿದು ತಟಸ್ಥಗೊಳಿಸುವುದು ಅನಿವಾರ್ಯವಾಗಿದೆ. ಡಿಜಿಟಲ್ ಮಾಧ್ಯಮದೊಂದಿಗೆ ಇಂದು ಕಾಂಕ್ರೀಟ್ ನೆಲದಲ್ಲಿ ವಾಸಿಸುತ್ತಿರುವ ಜನತೆ ಪ್ರಕೃತಿಯ ಮಹತ್ವವನ್ನು ಅರಿತು ಅದರೊಂದಿಗೆ ಸಾಮರಸ್ಯದ ಜೀವನ ಮಾಡಲು ಪ್ರಯತ್ನಿಸಬೇಕು.
ಸಂಭ್ರಮದಿಂದ ಸ್ವಾಗತಿಸುತ್ತಿರುವ ಹೊಸ ವರುಷ, ಹೊಸ ಶತಮಾನ ಜಗತ್ತಿನ ಅಂಧಕಾರವನ್ನು ಸರಿಸಿ, ಶಾಂತಿಯ ನೆಲೆಗಟ್ಟಲ್ಲಿ ಎಲ್ಲರೂ ಸುಖ ಶಾಂತಿಯಿಂದ ಬದುಕುವಂತೆ ಅವಕಾಶ ಮಾಡಿಕೊಡಲಿ. ಶಾಂತಿ, ಖುಷಿ, ಪ್ರೀತಿ ತುಂಬಿದ ಹೃದಯದಲ್ಲಿ, ನಗು ತುಂಬಿದ ತುಟಿಗಳಲಿ, ಹೊಸ ಹೊಸ ಕನಸುಗಳ ಕಂಗಳಲಿ, ಸಕಾರಾತ್ಮದೆಡೆ ಹೆಜ್ಜೆಯಿಡುವ ಈ ಶುಭ ಸಂದರ್ಭದಲ್ಲಿ “ತಮಸೋಮಾ ಜ್ಯೋತಿರ್ಗಮಯ’ ಎಂಬ ವೇದವಾಕ್ಯದೊಂದಿಗೆ, ಸುಂದರ ಕಾಮನೆಯೊಂದಿಗೆ
ಒಬ್ಬರನ್ನೊಬ್ಬರು ಪ್ರೀತಿಸಿ, ಗೌರವಿಸಿ, ಹೊಸ ಆಸೆ, ಭರವಸೆಯೊಂದಿಗೆ ಮುಂದಡಿಯಿಡೋಣ.
*ಸುಶೀಲಾ ಎಸ್. ಅಮೀನ್
ಬೊರಿವಲಿ, ಲೇಖಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ