12ರಂದು ಅಯೋಧ್ಯೆಗೆ ಲಕ್ಷಾಂತರ ಮಂದಿ ಭೇಟಿ
Team Udayavani, Nov 7, 2019, 7:10 AM IST
ಲಕ್ನೋ: ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ರಾಜ್ಯವು ಪೊಲೀಸ್ ಸರ್ಪಗಾವಲಿನಲ್ಲಿರುವಾಗಲೇ ಧಾರ್ಮಿಕ ಕಾರ್ಯಕ್ರಮವೊಂದರ ಸಲು ವಾಗಿ ಮುಂದಿನ ಮಂಗಳವಾರ ಇಲ್ಲಿ 10 ಲಕ್ಷ ಭಕ್ತರು ಜಮಾಯಿಸುವ ಸಾಧ್ಯತೆಯಿದೆ. ಅದೇ ಸಮಯದಲ್ಲೇನಾದರೂ ತೀರ್ಪು ಪ್ರಕಟವಾದರೆ, ಏನು ಮಾಡುವುದು ಎಂಬ ಆತಂಕ ಮೂಡಿದೆ.
ಅಯೋಧ್ಯೆ ಭೂವಿವಾದವು ಸೂಕ್ಷ್ಮ ಪ್ರಕರಣವಾಗಿರುವ ಕಾರಣ, ಈಗಾಗಲೇ ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿದೆ, ಹೆಚ್ಚುವರಿ ಭದ್ರತಾ ಪಡೆಗಳನ್ನೂ ನಿಯೋಜಿಸಲಾಗಿದೆ. ನ.12 ರಂದು ಕಾರ್ತಿಕ ಪೂರ್ಣಿಮೆಯಾಗಿದ್ದು, ಸರಯೂ ನದಿಯಲ್ಲಿ ಲಕ್ಷಾಂತರ ಭಕ್ತರು ಪುಣ್ಯಸ್ನಾನ ಮಾಡಲಿದ್ದಾರೆ.
ಇಲ್ಲಿಗೆ ಬರುವ ಭಕ್ತರು ತಮ್ಮೂರುಗಳಿಗೆ ವಾಪಸಾಗಲು ಕನಿಷ್ಠ 24 ಗಂಟೆಗಳು ಬೇಕು. ಅಲ್ಲದೆ ಬಹುತೇಕ ಮಂದಿ ಕೆಲ ದಿನಗಳ ಕಾಲ ಅಯೋಧ್ಯೆಯಲ್ಲೇ ಉಳಿಯುತ್ತಾರೆ. ಇಂಥ ಸನ್ನಿವೇಶದಲ್ಲಿ ತೀರ್ಪು ಬಂದು ಅಹಿತಕರ ಘಟನೆಗಳೇನಾದರೂ ಸಂಭವಿಸಿದ್ದೇ ಆದಲ್ಲಿ, ಪರಿಸ್ಥಿತಿಯನ್ನು ಹತೋಟಿಗೆ ತರುವುದೇ ದೊಡ್ಡ ಸವಾಲಾಗಲಿದೆ.