RSS ಕಾರ್ಯಕರ್ತರನ್ನು ನೋಡಿ ಕಲಿತುಕೊಳ್ಳಿ; ಪಕ್ಷದ ಕಾರ್ಯಕರ್ತರಿಗೆ ಪವಾರ್ ನೀತಿ ಪಾಠ!
Team Udayavani, Jun 7, 2019, 10:13 AM IST
ಮುಂಬೈ:ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರ ನಿಷ್ಠೆ, ದಕ್ಷತೆಯನ್ನು ಹೊಗಳಿ, ತನ್ನ ಪಕ್ಷದ ಕಾರ್ಯಕರ್ತರು ಕೂಡಾ ಆರ್ ಎಸ್ ಎಸ್ ನ ಸಂವನ ಕೌಶಲ್ಯವನ್ನು ಕಲಿತುಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಗುರುವಾರ ಪುಣೆಯ ಪಿಂಪ್ರಿ ಚಿಂಚ್ ವಾಡ್ ನಲ್ಲಿ ಎನ್ ಸಿಪಿ ಕಾರ್ಯಕರ್ತರ ಶಿಬಿರದಲ್ಲಿ ಮಾತನಾಡಿದ ಪವಾರ್, ನಮ್ಮ ಪಕ್ಷದ ಕಾರ್ಯಕರ್ತರು ಪ್ರಚಾರಕ್ಕಾಗಿ ಹೋದಾಗ ಒಂದು ವೇಳೆ ಯಾವುದಾದರು ಮನೆ ಬಾಗಿಲು ಬಂದ್ ಆಗಿದ್ದರೆ, ಬಾಗಿಲ ಬಳಿ ಕರಪತ್ರವನ್ನು ಹಾಕಿ ವಾಪಸ್ ಆಗುತ್ತಾರೆ!
ಆ ನಿಟ್ಟಿನಲ್ಲಿ ಆರ್ ಎಸ್ ಎಸ್ ಏಕನಿಷ್ಠೆ, ಸಾರ್ವಜನಿಕರ ಸಂಬಂಧವನ್ನು ಹೆಚ್ಚು ಅಭಿವೃದ್ದಿಗೊಳಿಸುವ ಅವರ ದಕ್ಷತೆ ಮೆಚ್ಚುವಂತಹದ್ದು. ಒಂದು ವೇಳೆ ಆರ್ ಎಸ್ ಎಸ್ ಕಾರ್ಯಕರ್ತನೊಬ್ಬನಿಗೆ ಒಂದು ವಾರ್ಡ್ ನ ಹೊಣೆಗಾರಿಕೆ ನೀಡಿದರೆ, ಆ ವಾರ್ಡ್ ನಲ್ಲಿ ಐದು ಮನೆಗಳಿದ್ದರೆ, ಆತ ಐದು ಮನೆಗೂ ಭೇಟಿ ನೀಡುತ್ತಾನೆ. ಒಂದು ವೇಳೆ ಮನೆಗೆ ಬಾಗಿಲು ಹಾಕಿದ್ದರೆ, ಆತ ಸಂಜೆ ಮತ್ತೆ ಆ ಮನೆಗೆ ಭೇಟಿ ಕೊಡುತ್ತಾನೆ. ಆವಾಗಲೂ ಮನೆಯವರ ಭೇಟಿ ಸಾಧ್ಯವಾಗದಿದ್ದರೆ, ಮರುದಿನ ಬೆಳಗ್ಗೆ ಮನೆಯ ಸದಸ್ಯರನ್ನು ಭೇಟಿಯಾಗುತ್ತಾನೆ. ಈ ನಿಷ್ಠೆ ನೀವೂ(ಎನ್ ಸಿಪಿ ಕಾರ್ಯಕರ್ತ) ಕಲಿತುಕೊಳ್ಳಬೇಕು ಎಂದು ಪವಾರ್ ಹೇಳಿದರು.
ಆರ್ ಎಸ್ ಎಸ್ ಮತ್ತು ನಮ್ಮ ಸಿದ್ಧಾಂತದ ನಡುವೆ ವ್ಯತ್ಯಾಸಗಳಿವೆ. ಹೀಗಾಗಿ ನಾವು ಸಾರ್ವಜನಿಕ ಸಂಪರ್ಕ ಅಭಿವೃದ್ದಿಗೊಳಿಸುವ, ನಿಷ್ಠೆಯ ಕೌಶಲ್ಯವನ್ನು ಅವರಿಂದ ಕಲಿತುಕೊಳ್ಳಬೇಕಾಗಿದೆ ಎಂದು ಪವಾರ್ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.