ಪ್ರಧಾನಿ ಮೋದಿ ದೇಶವನ್ನು ಏಕೆ ತಪ್ಪು ದಾರಿಗೆಳೆಯುತ್ತಿದ್ದಾರೆ ? ಅಸಾದುದ್ದೀನ್ ಓವೈಸಿ
Team Udayavani, Dec 24, 2019, 8:15 AM IST
ಹೈದರಾಬಾದ್: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಎನ್ ಆರ್ ಸಿ ಕುರಿತು ಮಾತನಾಡುತ್ತಾ ಪ್ರಧಾನಿ ಮೋದಿ ದೇಶದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಪ್ರಧಾನಿ ಭಾಷಣವೊಂದರಲ್ಲಿ ನಾವು ದೇಶಾದ್ಯಂತ ಎನ್ ಆರ್ ಸಿ ಯನ್ನು ಜಾರಿಗೊಳಿಸುತ್ತೇವೆ ಎಂದಿದ್ದರು. ಆದರೀಗ ವಿರೋಧಭಾಸ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಯೇ ? ಇದು ಅವರ ಕೆಲಸ ಕಾರ್ಯಗಳಿಗೆ ಸರಿಹೊಂದುವುದೇ ಎಂದು ಪ್ರಶ್ನಿಸಿದ್ದಾರೆ.
ಹೈದರಾಬಾದ್ ನಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನನಗೆ ಪ್ರಧಾನಿ ಮೋದಿ ಸತ್ಯವನ್ನು ಹೇಳುತ್ತಿದ್ದಾರೋ ಅಥವಾ ಗೃಹ ಸಚಿವ ಅಮಿತ್ ಶಾ ಸುಳ್ಳನ್ನು ಹೇಳುತ್ತಿದ್ದಾರೋ ಎಂದು ತಿಳಿಯಬೇಕಾಗಿದೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ಭಾಷಣವೊಂದರಲ್ಲಿ ಸಿಎಎ ಕಾಯ್ದೆ ಭಾರತದ ಮುಸ್ಲಿಮರಿಗೆ ಅನ್ವಯವಾಗುವುದಿಲ್ಲ ಎಂದಿದ್ದರು. ಇದು ದೇಶದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ರೂಪಿಸುತ್ತಿರುವ ತಂತ್ರ. ಇವರು ಗೊಂದಲವನ್ನು ಸೃಷ್ಟಿಸಿ ಸಿಎಎ ಮತ್ತು ಎನ್ ಆರ್ ಸಿ ಜಾರಿಗೊಳಿಸಲು ಹೊರಟಿದ್ದಾರೆಯೇ ? ಸಿಎಎ ಕಾಯ್ದೆಯೇ ಅಸಂವಿಧಾನಿಕ, ದೇಶದ ಮೂಲ ರಚನೆಯನ್ನು ಮತ್ತು ಮೂಲಭೂತ ಹಕ್ಕುಗಳನ್ನು ಇದು ಕಸಿದುಕೊಳ್ಳುತ್ತದೆ ಎಂದು ಹರಿಹಾಯ್ದಿದ್ದಾರೆ.