ಕ್ರಿಕೆಟರ್ ಆಗುವ ಹಾದಿಯಲ್ಲಿದ್ದ ಇರ್ಫಾನ್ !
ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ತಂಡಕ್ಕೆ ಆಯ್ಕೆ ; 600 ರೂ. ಕೊರತೆಯಿಂದ ಆಸೆ ಭಗ್ನ !
Team Udayavani, Apr 30, 2020, 11:58 AM IST
ಮುಂಬಯಿ: ಬುಧವಾರ ಬಣ್ಣದ ಲೋಕವನ್ನೇ ಬಿಟ್ಟು ನಡೆದ ಖ್ಯಾತ ನಟ ಇರ್ಫಾನ್ ಖಾನ್ ಅಭಿನಯ ಕ್ಷೇತ್ರಕ್ಕೆ ಬಾರದೇ ಇರುತ್ತಿದ್ದಲ್ಲಿ ಕ್ರಿಕೆಟ್ ರಂಗಕ್ಕೆ ಕಾಲಿಡುತ್ತಿದ್ದರು ಎಂಬ ಸಂಗತಿ ಅತ್ಯಂತ ಸ್ವಾರಸ್ಯಕರವಾಗಿದೆ. ಇದನ್ನು ಹಿಂದೊಮ್ಮೆ ಸ್ವತಃ ಇರ್ಫಾನ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕೇವಲ 600 ರೂ. ಕೊರತೆಯಿಂದಾಗಿ ಅವರಿಗೆ ಕ್ರಿಕೆಟ್ ಬಾಗಿಲು ಮುಚ್ಚಿತ್ತು ಎಂಬುದು ಅಷ್ಟೇ ನೋವಿನ ಸಂಗತಿ! ಇದು ಸುಮಾರು 35 ವರ್ಷಗಳ ಹಿಂದಿನ ಘಟನೆ. ಉತ್ತಮ ಆಲ್ರೌಂಡರ್ ಆಗಿದ್ಧ ಇರ್ಫಾನ್ ಖಾನ್ ಕ್ರಿಕೆಟಿಗನಾಗಿ ಬೆಳೆಯುವುದು ಬಹುತೇಕ ನಿಚ್ಚಳವಾಗಿತ್ತು. ಆಗ ಜೈಪುರದಲ್ಲಿದ್ದ ಇರ್ಫಾನ್, ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರು. ತಂಡದ ಅತೀ ಕಿರಿಯ ಆಟಗಾರನಾಗಿದ್ದರು. ಆದರೆ ಆಗ ಅವರಿಗೆ 600 ರೂ.ಗಳ ಕೊರತೆ ಕಾಡಿತು. ಇದನ್ನು ಯಾರಲ್ಲಿ ಕೇಳುವುದೆಂದೇ ಅವರಿಗೆ ತಿಳಿಯಲಿಲ್ಲ. ಮುಜುಗರವೂ ಕಾಡಿತು. ಹೀಗಾಗಿ ಆ ದಿನವೇ ಕ್ರಿಕೆಟ್ನಲ್ಲಿ ಮುಂದುವರಿಯುವ ಬಯಕೆಯನ್ನು ಕೈಬಿಡಬೇಕಾಯಿತು ಎಂದು ಇರ್ಫಾನ್ “ಟೆಲಿಗ್ರಾಫ್ ಇಂಡಿಯಾ’ಕ್ಕೆ ನೀಡಿದ ಸಂದ ರ್ಶನವೊಂದರಲ್ಲಿ ಹೇಳಿದ್ದರು.
ಅಭಿನಯ ತರಬೇತಿಗೂ ಹಣದ ಕೊರತೆ!
ಮುಂದೆ ಇರ್ಫಾನ್ ಖಾನ್ ಅಭಿನಯದತ್ತ ಒಲವು ತೋರಿದರು. ಇದರ ತರಬೇತಿಗಾಗಿ “ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ’ವನ್ನು ಸೇರಲು ಮುಂದಾದರು. ಇಲ್ಲಿಯೂ ಅವರಿಗೆ ಹಣದ ಕೊರತೆ ಎದುರಾಗಬೇಕೇ?! ಇದು 300 ರೂ.ಗಳ ತುಸು ಸಣ್ಣ ಮೊತ್ತವಾಗಿತ್ತು. ಆದರೆ ಇರ್ಫಾನ್ ಇಲ್ಲಿ ನಿರಾಶರಾಗುವ ಪ್ರಮೇಯ ಎದುರಾಗಲಿಲ್ಲ. ಆಗ ಸಹೋದರಿ ನೆರವಿಗೆ ಬಂದರು. ಮುಂದಿನದು ಇತಿಹಾಸ!
ಪ್ರಜ್ಞಾವಂತಿಕೆಯ ನಿರ್ಧಾರ
“ಕ್ರಿಕೆಟಿನಿಂದ ದೂರ ಉಳಿಯಬೇಕಾಗಿ ಬಂದದ್ದು ನಿಜಕ್ಕೂ ಪ್ರಜ್ಞಾವಂತಿಕೆಯ ನಿರ್ಧಾರವಾಗಿತ್ತು. ಅಲ್ಲಿ ತಂಡದಲ್ಲಿ ಕೇವಲ 11 ಮಂದಿಗೆ ಮಾತ್ರ ಅವಕಾಶ ಇರುತ್ತಿತ್ತು. ಆದರೆ ನಟನಾರಂಗದಲ್ಲಿ ಇದಕ್ಕೆ ಆಸ್ಪದವಿಲ್ಲ. ವಯಸ್ಸಿನ ಮಿತಿಯೂ ಇಲ್ಲ. ಇಲ್ಲಿ ನಮಗೆ ನಾವೇ ಬಾಸ್…’ ಎಂದು ಇರ್ಫಾನ್ ಈ ಸಂದರ್ಶನದ ವೇಳೆ ಹೇಳಿದ್ದರು.