ಫಿಲಿಪೈನ್ಸ್ : ಹೊರಗೆ ಬಂದರೆ ಗುಂಡಿಕ್ಕಿ ಕೊಲ್ಲಲು ಆದೇಶ
Team Udayavani, Apr 3, 2020, 2:45 PM IST
ಫಿಲಿಪೈನ್ಸ್ : ವಿಶ್ವದಲ್ಲಿ ಕೋವಿಡ್ ಸೊಕ್ಕು ಅಡಗಿಸುವುದಕ್ಕಿಂತ, ಸಾರ್ವಜನಿಕರನ್ನು ಮನೆಯಲ್ಲಿರುವಂತೆ ನೋಡಿಕೊಳ್ಳುವುದೇ ಎಲ್ಲ ರಾಷ್ಟ್ರಗಳಿಗೂ ತಲೆ ನೋವಾಗಿದೆ.
ಲಾಕ್ಡೌನ್ ಘೋಷಿಸಿದರೂ ಆದೇಶವನ್ನು ಪಾಲಿಸದ ಜನರು ಮುಂಜಾಗ್ರತೆಯನ್ನು ತೆಗೆದುಕೊಳ್ಳದೇ ಮನೆಯಿಂದ ಹೊರಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಫಿಲಿಪೈನ್ಸ್ ಸರಕಾರವು ಕಂಡಲ್ಲಿ ಗುಂಡು ನಿಯಮವನ್ನು ಜಾರಿಮಾಡಿದೆ. ಆ ಕುರಿತಾದ ಮಾಹಿತಿ ಇಲ್ಲಿದೆ.
ಕ್ವಾರೆಂಟೈನ್ ನಿಯಮ ಉಲ್ಲಂಘಿಸಿದರೆ ಗುಂಡಿಕ್ಕಿ ಕೊಲ್ಲಿ ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಲ್ಲಿ ವಿಧಿಸಲಾಗಿರುವ ಕಟ್ಟುನಿಟ್ಟಿನ ಕ್ವಾರೆಂಟೈನ್ ನಿಯಮವನ್ನು ಉಲ್ಲಂಘಿಸುವವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಫಿಲಿಪೈನ್ಸ್ ಅಧ್ಯಕ್ಷ ರೊಡ್ರಿಗೊ ಡಟರ್ಟೆ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಪೊಲೀಸರು ಮತ್ತು ಮಿಲಿಟರಿ ಪಡೆಗಳ ಕಾರ್ಯಾಚರಣೆಗೂ ಅಂಥವರು ತೊಂದರೆ ಮಾಡಿದರೆ ಬಿಡಲೇ ಬೇಡಿ, ಕೊಂದು ಬಿಡಿ ಎಂದು ಹೇಳಿದ್ದು, ಕೋವಿಡ್ 19 ಸೋಂಕಿತರು ಇತರರಿಗೆ ಅಪಾಯ ತಂದೊಡ್ಡುವ ಬದಲು ಸಾಯುವುದೇ ಮೇಲು. ಅವರ ಶವ ಸಂಸ್ಕಾರ ನಾವು ನೆರವೇರಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಶಿಕ್ಷೆ ನೀಡಲು ಹಿಂಜರಿಯುವುದಿಲ್ಲ
ಕೋವಿಡ್ 19ನ್ನು ಮಟ್ಟ ಹಾಕಬೇಕಾದರೆ ದೇಶದ ಪ್ರಜೆಗಳಾದ ನಿಮ್ಮ ಸಹಕಾರ ಅತ್ಯಗತ್ಯವಾಗಿದ್ದು, ಸೋಂಕು ನಿಯಂತ್ರಣವಾಗುವವರೆಗೂ ಲಾಕ್ಡೌನ್ ನಿಯಮ ಪಾಲನೆ ಬಹುಮುಖ್ಯ. ವೈದ್ಯಕೀಯ ಕಾರ್ಯಕರ್ತರನ್ನು ನಿಂದಿಸುವುದು ಗಂಭೀರ ಅಪರಾಧವಾಗಿದ್ದು, ಇಂತಹ ನಡತೆಯನ್ನು ನಾನು ಎಂದಿಗೂ ಸಹಿಸುವುದಿಲ್ಲ ಮತ್ತೂ ಶಿಕ್ಷೆ ನೀಡಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.
ಗಲಭೆಗಳಿಗೆ ಕಾರಣರಾಗಬೇಡಿ
ರಾಜಧಾನಿ ಮನಿಲಾ ಸಹಿತ ದೇಶದ ಬಹುತೇಕ ನಗರಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಲಾಕ್ಡೌನ್ ಮಾಡಲಾಗಿದ್ದು, ಕಟ್ಟುನಿಟ್ಟಿನ ಆದೇಶ ಪಾಲನೆಯಿಂದ ರಾಜಧಾನಿಯ ನೆರೆಹೊರೆಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರಿಗೆ ತೊಂದರೆಯಾಗಬಹುದು. ಆದರೆ ನೀವು ಸಮಸ್ಯೆಯ ಗಂಭೀರತೆಯನ್ನು ಅರಿತು ಸರಕಾರದ ಜತೆಗೆ ಸ್ಪಂದಿಸಿದರೆ ಆದಷ್ಟು ಬೇಗ ಕೋವಿಡ್ 19 ಮುಕ್ತರಾಗಬಹುದು. ಅದು ಬಿಟ್ಟು ಸರಕಾರದ ವಿರುದ್ಧ ಹೋರಾಟ ಮಾಡುವುದು, ಗಲಭೆಗಳನ್ನು ನಡೆಸುವುದನ್ನು ಮಾಡಿದರೆ ನಿಮ್ಮನ್ನೇ ಬಂಧಿಸಲು ಆದೇಶಿಸುತ್ತೇನೆ ಎಂದು ಜನತೆಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಾನವ ಹಕ್ಕು ರಕ್ಷಕ ಗುಂಪುಗಳಿಂದ ಆಕ್ರೋಶ
ಮಾನವ ಹಕ್ಕುಗಳ ರಕ್ಷಕರು ಮತ್ತು ನಾಗರಿಕ ಗುಂಪುಗಳು ಅಧ್ಯಕ್ಷ ಡಟರ್ಟೆ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, OustDuterte ಎಂಬ ಹ್ಯಾಶ್ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಗ್ ನಲ್ಲಿದೆ. “ಅಧ್ಯಕ್ಷರ ಮಾತುಗಳು ಮುಂದಿನ ದಿನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ದಬ್ಟಾಳಿಕೆ ಮತ್ತು ಹಿಂಸಾಚಾರದ ಕೆಟ್ಟ ಮತ್ತು ಹೆಚ್ಚು ಕ್ರೂರ ಸ್ವರೂಪಗಳಿಗೆ ಕಾರಣವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈವರೆಗೆ ಫಿಲಿಪೈನ್ಸ್ನಲ್ಲಿ 2,633 ಕೋವಿಡ್ 19 ವೈರಸ್ ಸೋಂಕಿತ ಪ್ರಕರಣ ದೃಢಪಟ್ಟಿದ್ದು, 107 ಮಂದಿ ಸಾವನ್ನಪ್ಪಿದ್ದಾರೆ.
ಭಾರತದಲ್ಲೂ ಕೆಲವು ದಿನಗಳ ಹಿಂದೆ ತೆಲಂಗಾಣ ಸರಕಾರ ಕೂಡ ಇದೇ ಆದೇಶ ಹೊರಡಿಸುವುದಾಗಿ ಎಚ್ಚರಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ