ಬದುಕಿನ ಸತ್ಯಾಸತ್ಯತೆಯನ್ನು ತೆರೆದಿಟ್ಟ ಧ್ಯಾನ
Team Udayavani, Jun 20, 2018, 4:12 PM IST
ನಮ್ಮಲ್ಲಿ ನೈತಿಕತೆ ನಿಷ್ಠುರವಾಗುತ್ತಿದ್ದಂತೆ ಸೌಜನ್ಯ ಕಡಿಮೆಯಾಗುತ್ತದೆ. ಸೌಜನ್ಯ ಅತಿಯಾದಂತೆ ನೈತಿಕವಾದ ನಿಷ್ಠುರ ಸತ್ಯಗಳನ್ನು ವ್ಯಕ್ತಿ ಮರೆಮಾಚಿ ಇಡುತ್ತಾನೆ ಎನ್ನುವ ಡಾ| ಯು.ಆರ್. ಅನಂತ ಮೂರ್ತಿಯವರ ಮಾತುಗಳು ಇಂದಿನ ಪ್ರತಿಯೊಬ್ಬ ವ್ಯಕ್ತಿಯ ಅಂತರಾತ್ಮದೊಳಗೆ ಏನಿದೇ ಎಂಬುದನ್ನು ಹುಡುಕುವಂತೆ ಮಾಡಿದೆ.
ನ. ರವಿಕುಮಾರ್ ಅವರು ಸಂಗ್ರಹಿಸಿರುವ ಡಾ| ಯು.ಆರ್. ಅನಂತಮೂರ್ತಿಯವರ ಲೇಖನ, ಮುನ್ನುಡಿ, ವಿಮರ್ಶೆ ಬರಹಗಳನ್ನು ‘ಯು.ಆರ್. ಅನಂತ ಮೂರ್ತಿ ನಿಜವಾದ ಬೆಳಕಿನೆಡೆಗೆ ಒಂದು ಧ್ಯಾನ (ವಿಚಾರ- ವಿಮರ್ಶೆ)’ ಕೃತಿಯು ಒಂದು ಕ್ಷಣ ನಾವು ಯಾರು, ನಮ್ಮ ಮನಸ್ಸು ಹೇಗಿದೆ ಎಂಬುದನ್ನು ಚಿಂತಿಸುವಂತೆ ಮಾಡುತ್ತದೆ.
ಪ್ರಕರಣ 1
ಸರಕಾರಿ ಶಾಲೆಗಳು ಉತ್ತಮವಾಗಿರುತ್ತವೆ. ಖಾಸಗಿ ಶಾಲೆಗಳಿಗಿಂತ ಹೆಚ್ಚು ಕಲಿತವರು, ನುರಿತ ಶಿಕ್ಷಕರೂ ಇರುತ್ತಾರೆ. ಆದರೂ ಅಂತಹ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ನಾವು ಹಿಂಜರಿಯುತ್ತೇವೆ. ಇಂಗ್ಲಿಷ್ ಎಂಬುದು ಜ್ಞಾನ ಗಳಿಕೆಯ ಬದಲಾಗಿ ಸಾಮಾಜಿಕ ಶ್ರೇಷ್ಠತೆಯನ್ನು ಉಳಿಸುವ ಸಲುವಾಗಿ ಕಲಿಯುವಂತದ್ದಾಗಿದೆ.
ಪ್ರಕರಣ 2
ಬಂಗಾಳದವನೊಬ್ಬ ಎಲ್ಲಿಯಾದರೂ ಸಿಕ್ಕಿದರೆ ನೀವು ಯಾರು ಎಂದು ಕೇಳಿದಾಕ್ಷಣ ಆತ ಹೇಳುವ ಉತ್ತರ ‘ನಾನು ಬಂಗಾಳಿ’. ತಮಿಳಿನವನ ಬಳಿ ಕೇಳಿದರೆ ಆತ ತಾನು ತಮಿಳಿನವನು ಎನ್ನುತ್ತಾನೆ. ಅದೇ ಒಬ್ಬ ಕನ್ನಡಿಗನಲ್ಲಿ ಕೇಳಿದರೆ ಆತ ನಾನು ಬ್ರಾಹ್ಮಣ, ಗೌಡ, ಲಿಂಗಾಯಿತ ಎನ್ನುತ್ತಾನೆ.
ಪ್ರಕರಣ 3
ಭಾರತ ಬಹುಭಾಷಿಕ ದೇಶ. ಎಲ್ಲ ಭಾಷೆಗಳು ಇಲ್ಲಿ ರಾಷ್ಟ್ರ ಭಾಷೆಗಳೇ ಆಗಿವೆ. ವಿಶ್ವ ಸಂಸ್ಥೆಯಲ್ಲಿ ಇರುವಂತೆ ನಮ್ಮ ಎಲ್ಲ ಪ್ರಾಂತ್ಯಗಳಿಂದ ಬಂದ ಜನ ದಿಲ್ಲಿಯಲ್ಲಿ ಕೂಡುವಂತಾದರೆ ಭಾಷೆಯಿಂದ ಭಾಷೆಗೆ ಅನುವಾದ ಮಾಡಲು ಹಲವರು ಬೇಕು. ಆಗ ಸ್ವರಾಜ್ಯ ಎನ್ನುವುದು ಎಲ್ಲ ಭಾಷೆಗಳಲ್ಲಿ ನಿಜವಾಗುತ್ತದೆ ಎನ್ನುವ ನೆಹರೂ ಅವರ ಸ್ನೇಹಿತರು, ಕಾಗೋಡು ರೈತ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಲೋಹಿಯಾ ಅವರ ಮಾತುಗಳು.
ಅಣ್ಣಾ ಹಜಾರೆ, ಲೋಹಿಯಾ, ಗಾಂಧೀಜಿ, ಅಂಬೇಡ್ಕರ್ ಸಹಿತ ಅನೇಕ ಗಣ್ಯಾತಿಗಣ್ಯರು ಹೇಳಿರುವ ಸಾಲುಗಳು, ಎಲ್ಲಿಯೂ
ಚರ್ಚೆಗೊಳಪಡದ ವಿಚಾರಧಾರೆಗಳನ್ನು ಲೇಖಕರು ಈ ಕೃತಿಯ ಮೂಲಕ ಹಂಚಿಕೊಂಡಿದ್ದು ಓದುಗರನ್ನು ವಿಭಿನ್ನ ಕಲ್ಪನೆ, ಚಿಂತನೆಗೆ ಹಚ್ಚುವಂತೆ ಮಾಡುತ್ತದೆ.
ವಿದ್ಯಾ ಕೆ. ಇರ್ವತ್ತೂರು