ಇಲ್ಲ್ ಒಕ್ಕೆಲ್ ಸಂಭ್ರಮಕ್ಕೆ ದಿನಗಣನೆ
Team Udayavani, Mar 12, 2020, 4:03 AM IST
ಕೋಸ್ಟಲ್ವುಡ್ನ “ಇಲ್ಲ್ ಒಕ್ಕೆಲ್’ ದಿನದ ಸಂಭ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ಕಾರಣ, ಕೆಲವೇ ದಿನಗಳಲ್ಲಿ ಇಲ್ಲ್ ಒಕ್ಕೆಲ್ ಸಿನೆಮಾ ತೆರೆಕಾಣಲು ಅಣಿಯಾಗಿರುವುದು. ಶ್ರೀ ಗಜನಿ ಲಾಂಛನದಲ್ಲಿ ತಯಾರಾದ ವಾಸುದೇವ ಎಸ್.ಚಿತ್ರಾಪು ಮತ್ತು ದಿವಾಕರ ಶೆಟ್ಟಿ ನಿರ್ಮಾಣದ ಡಾ| ಸುರೇಶ್ ಕೋಟ್ಯಾನ್ ಚಿತ್ರಾಪು ನಿರ್ದೇಶನದ ಸಿನೆಮಾ ಇಲ್ಲ್ ಒಕ್ಕೆಲ್. ಸಿನೆಮಾ ಸಂಪೂರ್ಣ ಹಾಸ್ಯಮಯ. ಕಾಮಿಡಿಗೆ ಎಲ್ಲೂ ಬರವಿಲ್ಲ. ಆದರೆ, ಕಾಮಿಡಿಯ ಜತೆಗೆ ಒಂದಷ್ಟು ಭಯಾನಕತೆಯೂ ಇದೆ ಎನ್ನುವುದು ಸಿನೆಮಾ ನಿರ್ದೇಶಕರ ಅಭಿಪ್ರಾಯ.
ಅವರೇ ಹೇಳುವ ಪ್ರಕಾರ, ಇದೊಂದು ಮನೋರಂಜನೆಯ ಪ್ರಯೋಗಮುಖೀ ಚಿತ್ರ. ಮನೆಕಟ್ಟಿ ಬಿಟ್ಟುಕೊಡುವಲ್ಲಿನ ಅವಸರದ ಸನ್ನಿವೇಶವನ್ನು ಹಿಡಿದುಕೊಂಡು ಅಲ್ಲಿ ನಡೆಯುವ ಕಾಮಿಡಿ ಅವಾಂತರಗಳನ್ನು ವಿಷಯವಾಗಿ ಇಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಮತ್ತೂಂದು ಹಂತದಲ್ಲಿ ಚಿತ್ರವು ಹಾರರ್ ರೂಪ ಪಡೆಯುತ್ತದೆ. ಹಾರರ್ ಅನ್ನು ಪ್ರೇಕ್ಷಕರು ಹಾಸ್ಯಾತ್ಮಕವಾಗಿ ಎಂಜಾಯ್ ಮಾಡಬೇಕೆಂದು ಚಿತ್ರ ತಂಡದ ಉದ್ದೇಶ. ಈ ನಿಟ್ಟಿನಲ್ಲಿ ಇದೊಂದು ಹೊಸ ಪ್ರಯೋಗ ಎನ್ನುತ್ತಾರೆ.
ನವೀನ್.ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಅದ್ವಿತಿ ಶೆಟ್ಟಿ, ವಿಸ್ಮಯ ವಿನಾಯಕ್, ವಿ.ಜೆ. ವಿನೀತ್, ಚಂದ್ರಕಲಾ ಮೋಹನ್, ಸೀತಾರಾಮ್ ಕಟೀಲು, ಸುನಿಲ್ ನೆಲ್ಲಿಗುಡ್ಡೆ, ಉಮೇಶ್ ಮಿಜಾರ್ ಸೇರಿದಂತೆ ಹಲವು ಕಲಾವಿದರು ಇಲ್ಲ್ ಒಕ್ಕೆಲ್ನಲ್ಲಿದ್ದಾರೆ.