ಸೌರ ವಿದ್ಯುತ್ ಕ್ರಾಂತಿ ಗುಜರಾತ್ ಕಥೆ ಕೇಳಿ
ಬಜೆಟ್ನಲ್ಲಿ ಉಲ್ಲೇಖೀಸಿದ ಸೌರ ವಿದ್ಯುತ್
Team Udayavani, Feb 2, 2020, 5:52 AM IST
ಕೇಂದ್ರ ಸರಕಾರ ನೂತನ ಬಜೆಟ್ನಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ತೊಡಗಿಕೊಳ್ಳಿ ಎಂದು ರೈತರಿಗೆ ಹೇಳಿದೆ. ಯೋಜನೆ ಅನುಷ್ಠಾನ ಕಾಲಮಿತಿಯೊಳಗೆ ಹಾಗೂ ಪ್ರಾಮಾಣಿಕ ಕಾಳಜಿಯಲ್ಲಿ ಸಾಧ್ಯವಾದರೆ ಏನಾದರೂ ಬದಲಾವಣೆ ಸಾಧ್ಯ ಎನ್ನುತ್ತಾರೆ ಸುಶ್ಮಿತಾ ಜೈನ್.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮುಂಗಡ ಪತ್ರದಲ್ಲಿ ರೈತರಿಗೆ ನೀವು ಬರೀ ಬೆಳೆ ಬೆಳೆದರೆ ಸಾಕಾಗೋದಿಲ್ಲ, ಸೂರ್ಯ ಶಕ್ತಿಯನ್ನೂ ನಿಮ್ಮ ಅಭಿವೃದ್ಧಿಗೆ ಬಳಸಿಕೊಂಡು ಬೆಳೆಯಿರಿ ಎಂದಿದ್ದಾರೆ.ಅವರ ಲೆಕ್ಕಾಚಾರದ ಪ್ರಕಾರ ರೈತರು ತಮ್ಮ ಭೂಮಿ ಯಲ್ಲಿ ಸೌರ ಶಕ್ತಿ ಉತ್ಪಾದನಾ ಘಟಕಗಳನ್ನು ಅಳವಡಿಸಿ, ಸೌರ ವಿದ್ಯುತ್ (ಅಸಾಂಪ್ರದಾಯಿಕ ವಿದ್ಯುತ್ ಉತ್ಪಾದನೆ) ಉತ್ಪಾದಿಸಬಹುದು. ತಮ್ಮ ಅಗತ್ಯಕ್ಕೆ ಸೋಲಾರ್ ಪಂಪ್ ಬಳಸುವುದಲ್ಲದೇ, ಘಟಕದಿಂದ ಉತ್ಪಾದಿತ ಸೌರ ವಿದ್ಯುತ್ ಅನ್ನು ಸರಕಾರದ ವಿದ್ಯುತ್ ಕಂಪೆನಿಗಳಿಗೆ ಕೊಟ್ಟು ಲಾಭ ಮಾಡಿಕೊಳ್ಳಿ ಎಂದಿದ್ದಾರೆ. ಇಡೀ ಜಗತ್ತೇ ಸೌರಶಕ್ತಿಯಂಥ ಅಸಾಂಪ್ರದಾಯಿಕ ಇಂಧನ ಮೂಲಗಳತ್ತ ಮುಖ ಮಾಡುತ್ತಿರುವಾಗ ಕೊಂಚ ಆಕರ್ಷಣೆ ಎನಿಸುತ್ತಿರುವುದು ನಿಜ.
ಈಗಾಗಲೇ ಗುಜರಾತ್ ರಾಜ್ಯದಲ್ಲಿ ಇದೇ ಮಾದರಿಯ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ. ಅದರ ವಿಸ್ತೃತ ರೂಪ ಇಂದಿನ ಬಜೆಟ್ನಲ್ಲಿ ಉಲ್ಲೇಖೀಸಿರುವುದು.
ಗುಜರಾತ್ನಲ್ಲಿ ಏನಾಗಿದೆ?
ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲೇ ಗುಜರಾತ್ ಮೊದಲ ಸ್ಥಾನದಲ್ಲಿದೆ. ಅಲ್ಲಿಯ ಸೂರ್ಯ ಶಕ್ತಿ ಕಿಸಾನ್ ಯೋಜನೆ ಅಡಿ ರೈತರು ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಿ ಉತ್ಪಾದನೆಯಲ್ಲಿ ತೊಡಗಿದ್ದಾರೆ. ದೀರ್ಘ ಕಾಲದಿಂದ ರಾಜ್ಯ ಅತಿ ಹೆಚ್ಚಿನ ಕ್ಷಮತೆಯುಳ್ಳ ಸೋಲಾರ್ ಪವರ್ ಪ್ಲಾಂಟ್ ನಿರ್ವಹಿಸುತ್ತಿದೆ. ಇದರಿಂದ ಅಲ್ಲಿನ ಕೃಷಿ ಕ್ಷೇತ್ರಕ್ಕೆ ಪ್ರಯೋಜನವಾಗಿದೆ. ಹೀಗಾಗಿಯೇ ಬರಡು ಭೂಮಿಯಲ್ಲಿ ಸೌರಶಕ್ತಿ ವಿದ್ಯುತ್ ಘಟಕ ಸ್ಥಾಪಿಸುವವರಿಗೆ ಅನುದಾನ ಘೋಷಣೆ ಮಾಡಿದೆ ಕೇಂದ್ರ ಸರಕಾರ.
ಎರಡು ಸಾವಿರ ಮೆಗಾವ್ಯಾಟ್
ಸದ್ಯ ಗುಜರಾತ್ನಲ್ಲಿರುವ ಈ ಘಟಕಗಳ ಕ್ಷಮತೆ 2000 ಮೆಗಾವ್ಯಾಟ್ನಿಂದ 5000ದ ವರೆಗೂ ಇದೆ. 2000 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯ ಸೋಲಾರ್ ಪಾರ್ಕ್ ಅನ್ನು ತಲಾ 250 ಮೆ.ವ್ಯಾ. ಸಾಮರ್ಥ್ಯದ 8 ಬ್ಲಾಕ್ಗಳಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಪ್ರತಿ 250 ಮೆಗಾ ವ್ಯಾಟ್ ಸೌರ ವಿದ್ಯುತ್ ಬ್ಲಾಕ್ 220 ಕೆ.ವಿ. ಸಾಮರ್ಥ್ಯದ ಒಂದು ಪೂಲಿಂಗ್ ಉಪಕೇಂದ್ರ ಸ್ಥಾಪಿಸಲಾಗುತ್ತದೆ. ಈ 250 ಮೆಗಾ ವ್ಯಾಟ್ ಸಾಮರ್ಥ್ಯದ ಬ್ಲಾಕ್ ಅನ್ನು ಮತ್ತೆ 50 ಮೆಗಾ ವ್ಯಾಟ್ ಸಾಮರ್ಥ್ಯದ ಉಪ ಬ್ಲಾಕ್ಗಳಾಗಿ ವಿಭಜಿಸಲಾಗುತ್ತದೆ.
ಹೀಗಾಗಿ ಉಪ ಬ್ಲಾಕ್ಗಳಿಂದ 33 ಕೆವಿ ಅಥವಾ 66 ಕೆವಿ ಭೂಗತ ಕೇಬಲ್ಗಳ ಮೂಲಕ ಪೂಲಿಂಗ್ ಉಪಕೇಂದ್ರಕ್ಕೆ ವಿದ್ಯುತ್ ಹರಿಸಲಾಗುತ್ತದೆ. ಇಲ್ಲಿಂದ ಈ ವಿದ್ಯುತ್ ಅನ್ನು 220 ಕೆ.ವಿ. ಪೂಲಿಂಗ್ ಕೇಂದ್ರಕ್ಕೆ ರವಾನಿಸಲಾಗುತ್ತದೆ.
ರೈತರಿಗೇನು
ಪ್ರಯೋಜನ?
ರೈತರಿಗೆ ಎರಡು ರೀತಿಯ ಪ್ರಯೋಜನಗಳಿವೆ. 1. ವಿದ್ಯುತ್ ಸ್ವಾವಲಂಬನೆ ಯನ್ನು ಹೊಂದುವುದು. 2. ಹೆಚ್ಚು ವರಿ ವಿದ್ಯುತ್ ಉತ್ಪಾದನೆಯಿಂದ ಆದಾಯ ಗಳಿಸುವುದು. ಒಂದು ಪ್ರತ್ಯಕ್ಷ ಪ್ರಯೋಜನವಾದರೆ, ಇನ್ನೊಂದು ಪರೋಕ್ಷ ಲಾಭ.
-ಕೃಷಿಗೆ ನೀರಿನ ಅಭಾವದ ಸಮಸ್ಯೆಗಳು ಕಾಡುವುದನ್ನು ತಪ್ಪಿಸಬಹುದು.
-ಸೂರ್ಯನಿಂದ ದೊರೆಯುವ ಸೌರ ವಿದ್ಯುತ್ ವರ್ಷವಿಡೀ ಲಭ್ಯ. ಹಾಗಾಗಿ ವಿದ್ಯುತ್ ಅವಲಂಬನೆ ಕಡಿಮೆಯಾಗಲಿದೆ.
-ಸೌರ ಚಾಲಿತ ನೀರಾವರಿ ಪಂಪ್ಸೆಟ್ಗೆ ಬಳಕೆಯಾಗಿ ಉಳಿದ ಹೆಚ್ಚುವರಿ ವಿದ್ಯುತ್ನ್ನು ಜಾಲಕ್ಕೆ ನೀಡುವುದರಿಂದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗುತ್ತದೆ.
-ರೈತರಿಗೆ ಆದಾಯ ಮೂಲವಾಗುತ್ತದೆ.ಈ ಯೋಜನೆ ಅನುಷ್ಠಾನದಿಂದ ಕೃಷಿ ಕ್ಷೇತ್ರಕ್ಕೆ ಉತ್ತೇಜನ ದೊರೆಯುವುದರೊಂದಿಗೆ, ವಿದ್ಯುತ್ ಅಭಾವಕ್ಕೆ ಪರಿಹಾರವಾಗುತ್ತದೆ.
-ರೈತರು ಬಂಡವಾಳ ಹೂಡಿಕೆಗಾಗಿ ಕಡಿಮೆ ದರದಲ್ಲಿ ಸಾಲವನ್ನು ಹಾಗೂ ಕೇಂದ್ರ ಸರಕಾರದ ಎಂ.ಎನ್.ಆರ್.ಇ. ಯಿಂದ ಶೇ.30ರಷ್ಟು ಸಹಾಯಧನವನ್ನು ಪಡೆಯಬಹುದು.
-ಸೌರ ಶಕ್ತಿ ಘಟಕಗಳ ಸ್ಥಾಪನೆ ಮೂಲಕ ರೈತರು ಹಣ ಗಳಿಸಬಹುದಾಗಿದ್ದು, ಪ್ರತಿ ತಿಂಗಳ ಬಳಕೆಯನ್ನು ಲೆಕ್ಕ ಹಾಕಿ ಆರು ತಿಂಗಳಿಗೊಮ್ಮೆ ನಿವ್ವಳ ವಿದ್ಯುತ್ಗೆ ಬೆಲೆ ಪಾವತಿ ಪಡೆಯಬಹುದು.