ಮಾತಾಡ್ ಮಾತಾಡ್ ಮದರಂಗಿ
Team Udayavani, Nov 11, 2017, 12:25 PM IST
ಗಿಜಿಗುಟ್ಟುವ ಶಾಪಿಂಗ್ ಸ್ಟ್ರೀಟ್ನಲ್ಲೋ ಅಥವಾ ಫ್ಯಾನ್ಸಿ ಸ್ಟೋರ್ನ ಎದುರಿನ ಮೆಟ್ಟಿಲ ಮೇಲೋ ಒಂದೆರಡು ಸ್ಟೂಲ್, ಒಂದು ಪೆಟ್ಟಿಗೆ, ಡಿಸೈನ್ಗಳಿರುವ ಒಂದು ಪುಸ್ತಕದ ಜೊತೆ ಕುಳಿತಿರುವವರನ್ನು ನೀವು ನೋಡಿರುತ್ತೀರ. ಅವರೆದುರು ಒಂದಷ್ಟು ಹೆಂಗಳೆಯರು ಕೈ ಚಾಚಿ ಕುಳಿತಿರುತ್ತಾರೆ. ಹೀಗೆಂದ ಮೇಲೆ ಅವರು ಮೆಹಂದಿ ಬಿಡಿಸುವವರು ಅಥವಾ “ಹೆನ್ನಾ ಬಾಯ್ಸ’ ಅಂತ ಬಿಡಿಸಿ ಹೇಳುವುದು ಬೇಡ.
ಅವರಲ್ಲಿ ಹೆಚ್ಚಿನವರು ಉತ್ತರಭಾರತದಿಂದ ಬಂದವರು. “ದೇಖೋ ಬೆಹನ್ಜಿà…’ ಎಂದು ಮಾತಾಡಿಸುತ್ತಲೇ ಚಕಚಕನೆ ಕೈ ಮೇಲೆ ರಂಗು ಮೂಡಿಸುವ ನಿಪುಣರು.ರಾಜಸ್ಥಾನ, ಉತ್ತರಪ್ರದೇಶ, ದೆಹಲಿ… ಹೀಗೆ ಉತ್ತರ ಭಾರತದಿಂದ ಬೆಂಗಳೂರಿಗೆ ಬಂದವರು ಮದರಂಗಿಯಲ್ಲಿ ಬದುಕು ಕಂಡುಕೊಂಡಿರುವುದು ಹೇಗೆ ಎಂದು ಮೆಹಂದಿ ಡಿಸೈನರ್ ಜಿತೇಂದ್ರ ಕುಮಾರ್ ಹೀಗೆ ಹೇಳುತ್ತಾರೆ; “ನಾವು ಮೂಲತಃ ಆಗ್ರಾದವರು.
ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ಮೆಹಂದಿ ಡಿಸೈನರ್ಗಳಾಗಿದ್ದೇವೆ. ನಮ್ಮದು 10 ಜನರ ತಂಡವೊಂದಿದೆ. ಮದುವೆಯಂಥ ಸಮಾರಂಭಗಳ ಆರ್ಡರ್ ಪಡೆದು ಮನೆಗೇ ಹೋಗಿ ಮೆಹಂದಿ ಬಿಡಿಸಿ ಬರುತ್ತೇವೆ. ಮದುಮಗಳ ಮೆಹಂದಿಗೆ (ಕೈ ಮತ್ತು ಕಾಲು) 1500 ರಿಂದ 7-8 ಸಾವಿರದವರೆಗೆ ಚಾರ್ಜ್ ಮಾಡುತ್ತೇವೆ. ನಿಮಗೆ ಯಾವ ರೀತಿಯ ಡಿಸೈನ್ ಬೇಕೋ, ಅದರ ಮೇಲೆ ಹಣ ನಿಗದಿಯಾಗುತ್ತದೆ.
ಸಿಂಪಲ್ ಡಿಸೈನ್ಗಳು 1500ರಿಂದ ಶುರುವಾಗುತ್ತದೆ. ಗಂಡು- ಹೆಣ್ಣಿನ ಫೋಟೊ ನೋಡಿ ಅದನ್ನು ಕೂಡ ಮೆಹಂದಿಯಲ್ಲಿ ಬಿಡಿಸಬಲ್ಲೆವು. ಕೃಷ್ಣ- ರಾಧೆ, ಮದುವೆಯ ದಿಬ್ಬಣದ ವೈಭವ, ನವಿಲು, ಹೂಬಳ್ಳಿ… ಹೀಗೆ ವಿವಿಧ ವಿನ್ಯಾಸಗಳನ್ನು ಮೂಡಿಸುತ್ತೇವೆ. ನಮ್ಮ ಕೆಲಸ ತುಂಬಾ ತಾಳ್ಮೆ ಬೇಡುತ್ತದೆ. ಕೈ ಅಲ್ಲಾಡಿಸದೆ ಗಂಟೆಗಟ್ಟಲೆ ಸಮಾಧಾನದಿಂದ ಕುಳಿತು, ಚೂರೂ ಆಚೀಚೆ ಆಗದಂತೆ ನಿಧಾನವಾಗಿ ಚಿತ್ರ ಬಿಡಿಸಬೇಕು.
ಮೊದಮೊದಲು ಪೇಪರ್ ಮೇಲೆ ಡಿಸೈನ್ ಬಿಡಿಸುವುದನ್ನು ಕಲಿತೆವು. ಕಲಿತ ಮೊದಲಿನಲ್ಲಿ ಕೈ ನಡುಗುತ್ತಿತ್ತು. ಮೆಹಂದಿ ಕೋನ್ ಹಿಡಿದು ಕೈಗಳ ಮೇಲೆ ಚಿತ್ತಾರ ಮೂಡಿಸುವುದನ್ನು ಕಲಿಯಲು ಒಂದು ವರ್ಷವೇ ಬೇಕಾಯ್ತು. ಈಗ ಚಿತ್ರ ಬಿಡಿಸುವುದು ಉಸಿರಾಡಿದಷ್ಟೇ ಸಲೀಸು. ನಮ್ಮ ಎದುರು ಕುಳಿತವರಿಗೂ ತಾಳ್ಮೆ ಬೇಕು. ಅವರು ಸಣ್ಣಗೆ ಕೈ ಅಲ್ಲಾಡಿಸಿದರೂ ನಮ್ಮ ಕೈ ನಡುಗಿ ಎಡವಟ್ಟಾಗುತ್ತದೆ.
ಹಾಗಾಗಿ, ಇದೊಂಥರಾ ಧ್ಯಾನ, ತಪಸ್ಸಿಗೆ ಕುಳಿತಂತೆ! ಸಮಾರಂಭಗಳಿಗೆ ಕರೆಯುವವರು 15-20 ದಿನ ಮುಂಚೆ ಆರ್ಡರ್ ಬುಕ್ ಮಾಡಬೇಕು. ಆಗಮಾತ್ರ ಹೇಳಿದ ಸಮಯಕ್ಕೆ ಹೋಗಲು ಸಾಧ್ಯವಾಗುತ್ತದೆ. ಜಮ್ಮು ಕಾಶ್ಮೀರದ ವ್ಯಕ್ತಿಯೊಬ್ಬರಿಂದ ಈ ಕಸುಬು ಕಲಿತಿದ್ದು. ಈಗ ಬಾಂಬೆ ಕಟ್, ರಾಜಸ್ಥಾನಿ, ಮಾರ್ವಾಡಿ, ಭಾರತೀಯ ಶೈಲಿ, ಅರೇಬಿಕ್ ಶೈಲಿಯ ವಿನ್ಯಾಸಗಳನ್ನು ಬಿಡಿಸುತ್ತೇನೆ.
ಕರ್ವಾಚೌತ್, ದೀಪಾವಳಿ, ದಸರಾ ಮುಂತಾದ ಹಬ್ಬದ ಸಂದರ್ಭಗಳಲ್ಲಿ ಕೈ ತುಂಬಾ ಕೆಲಸವಿರುತ್ತದೆ. ಉಳಿದಂತೆ ದಿನಕ್ಕೆ 15-20 ಜನ ಬಂದು ಕೈಮೇಲೆ ಚಿತ್ತಾರ ಮೂಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಗಿರಾಕಿಗಳಿಲ್ಲದೆ ಖಾಲಿ ಕುಳಿತದ್ದೂ ಇದೆ. ಇತ್ತೀಚೆಗೆ ಬ್ಯೂಟಿಪಾರ್ಲರ್ಗಳಲ್ಲಿಯೂ ಮೆಹಂದಿ ಹಾಕುವುದರಿಂದ ಬಿಸಿನೆಸ್ ಡಲ್ ಆಗುತ್ತಿದೆ. ಒಂದು ಕೈಗೆ 50 ರೂ. ಪಡೆಯುತ್ತೇವೆ.
4-5 ನಿಮಿಷದಲ್ಲಿ ಒಂದು ಕೈಗೆ ವಿನ್ಯಾಸ ಮೂಡಬಹುದು. ಬೆಳಗ್ಗೆ 9.30ರಿಂದ ರಾತ್ರಿ 9ರವರೆಗೆ ಕೆಲಸ ಮಾಡುತ್ತೇವೆ. ಇಲ್ಲಿನ ಜನರಿಂದ ಕನ್ನಡ ಮಾತಾಡುವುದನ್ನು ಕಲಿತಿದ್ದೇವೆ. ಇಂಗ್ಲಿಷ್ ಗೊತ್ತಿಲ್ಲ. ಗೊತ್ತಿದ್ದರೆ ನಮಗೂ ಬೇರೆ ಕೆಲಸ ಸಿಗುತ್ತಿತ್ತೇನೋ. ಅಕ್ಷರ ಗೊತ್ತಿಲ್ಲದ ನಮಗೆ ಈ ಚಿತ್ರಗಳೇ ಊಟ ಹಾಕುತ್ತಿರುವುದು. ವರ್ಷಕ್ಕೊಮ್ಮೆ ಊರಿಗೆ ಹೋಗಿ ಬರುತ್ತೇವೆ. ರಾಜಸ್ಥಾನದಿಂದ ಮದರಂಗಿ ಪುಡಿ ತರಿಸುತ್ತೇವೆ.
ಯಾಕಂದ್ರೆ ಬೇರೆಲ್ಲೂ ಅಂಥ ಮದರಂಗಿ ಸಿಗುವುದಿಲ್ಲ. ಹೊಟ್ಟೆಪಾಡಿಗೆ ಬ್ಯಾಗ್, ಬಟ್ಟೆ, ಫ್ಯಾನ್ಸಿ ವಸ್ತುಗಳ ಮಾರಾಟವನ್ನೂ ಮಾಡುತ್ತೇವೆ. ಈ ಕಲೆ ಬಿಸಿನೆಸ್ ಆಗಿರುವುದರಿಂದ ದೊಡ್ಡ ದೊಡ್ಡ ಮೆಹಂದಿ ಸೆಂಟರ್ಗಳ ಜೊತೆ ಸ್ಪರ್ಧಿಸುವುದು ಈಗ ಅನಿವಾರ್ಯವಾಗಿದೆ’. ಅಂದಹಾಗೆ, ಜಿತೇಂದ್ರ ಕುಮಾರ್ಗೆ (ಮೊ. 9740847266) ಬೆಂಗಳೂರೆಂದರೆ ಅತೀವ ಪ್ರೀತಿ. ಈ 15 ವರ್ಷಗಳಿಂದ “ಲಾಲಾ ಮೆಹಂದಿ ಆರ್ಟ್’ ಎಂಬ ಪುಟ್ಟ ಬ್ಯಾನರ್ ಕಟ್ಟಿಕೊಂಡು, ಮದರಂಗಿ ಬಿಡಿಸುತ್ತಿದ್ದಾರೆ. ಮಲ್ಲೇಶ್ವರಂನ ಜನತಾ ಹೋಟೆಲ್ ಎದುರು ಇವರು ಕೂತಿರುತ್ತಾರೆ.
ಮೆಹಂದಿ ಕಲಾವಿದರ ಬೀಡು: ಮಲ್ಲೇಶ್ವರಂ 8ನೇ ಕ್ರಾಸ್, ಜಯನಗರ 4ನೇ ಬ್ಲಾಕ್, ರಾಜಾಜಿನಗರ (ಕದಂಬ ಹೋಟೆಲ್ ಸಮೀಪ), ಕಮರ್ಷಿಯಲ್ ಸ್ಟ್ರೀಟ್, ಎಂ.ಜಿ. ರಸ್ತೆ, ವಿಜಯನಗರ ಮಾರುತಿ ಮಂದಿರ ಸಮೀಪ.
ಬೆಂಗಳೂರಿಗರು ಇಷ್ಟಪಡುವ ಟ್ರೆಂಡ್ಗಳು
1. ಮದುವೆಯಾಗುವ ಹುಡುಗನ ಹೆಸರನ್ನು ಮದರಂಗಿಯ ಮಧ್ಯೆ ಮೂಡಿಸುತ್ತಿದ್ದ ಕಾಲವಿತ್ತು. ಆದರೆ ಈಗ ಹುಡುಗನ ಚಿತ್ರವನ್ನೇ ಬಿಡಿಸುವ (ಪೋಟ್ರೈಯ್ಟ್ ಮೆಹಂದಿ) ಟ್ರೆಂಡ್ ಶುರುವಾಗಿದೆ.
2. ದಿಬ್ಬಣ, ವಾಲಗದವರು ಹಾಗೂ ಇತರ ವಾದ್ಯಗಳ ಚಿತ್ರದ ಡಿಸೈನ್ಗೆ ಭಾರೀ ಬೇಡಿಕೆ ಇದೆ.
3. ಪ್ರೇಮಕ್ಕೆ ಹೆಸರಾದ ರಾಧಾ-ಕೃಷ್ಣರ ಚಿತ್ರವನ್ನು ಮದುಮಗಳ ಕೈ ಮೇಲೆ ಮೂಡಿಸುತ್ತಾರೆ.
4. ಬಣ್ಣ ಬಣ್ಣದ ಮದರಂಗಿಯ ಸ್ಟಿಕರ್ಗಳು ಮಾರುಕಟ್ಟೆಗೆ ಬಂದಿದ್ದು, ಧರಿಸುವ ಉಡುಪಿನ ಬಣ್ಣದ ಮೆಹಂದಿ ಸ್ಟಿಕರ್ನ್ನು ಕೈಗೆ ಅಂಟಿಸಿಕೊಳ್ಳಬಹುದು.
5. ಕೆಂಪು ಬಣ್ಣ ಬೇಸರವಾದವರಿಗಾಗಿ ವೈಟ್ ಮದರಂಗಿ ಕೂಡ ಇದೆ.
6. ಗಡಿಬಿಡಿಯಲ್ಲಿ ಮೆಹಂದಿ ಹಚ್ಚಿಕೊಳ್ಳುವವರಿಗಾಗಿ ಹೇಗೂ ಹೂ ಬಳ್ಳಿಯ ಡಿಸೈನ್ ಇದೆಯಲ್ಲ?
7. ಮದುಮಗಳ ಕಾಲಿನಲ್ಲಿ ಮೂಡುವ ಗರಿಬಿಚ್ಚಿದ ನವಿಲಿನ ಚಿತ್ರ ಹೊಸ ಟ್ರೆಂಡ್ ಸೃಷ್ಟಿಸಿದೆ.
8. ಹಾರ ಬದಲಾಯಿಸಿಕೊಳ್ಳುತ್ತಿರುವ ವಧು-ವರರ ಡಿಸೈನ್ಗೂ ಭಾರೀ ಬೇಡಿಕೆಯಿದೆ.
* ಪ್ರಿಯಾಂಕಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು