ರಂಜಾನ್ ಹಬ್ಬ… ಶಿವಾಜಿನಗರ ಅಬ್ಬಬ್ಬಾ
Team Udayavani, Jun 9, 2018, 3:42 PM IST
ರಂಜಾನ್ ತಿಂಗಳಲ್ಲಿ ಶಿವಾಜಿನಗರಕ್ಕೆ ಒಮ್ಮೆಯಾದ್ರೂ ಒಂದು ಸುತ್ತು ಹಾಕದಿದ್ದರೆ ಬೆಂಗಳೂರಿಗರಿಗೆ ಹಬ್ಬ ಮಾಡಿದಂತೆ ಅನಿಸುವುದೇ ಇಲ್ಲ. ಅಲ್ಲಿ ಸಿಗುವ ತರಹೇವಾರಿ ಸಮೋಸ ಸವಿದು ಬಾಯಿ ಚಪ್ಪರಿಸಿಕೊಳ್ಳದಿದ್ದರೆ ರಂಜಾನ್ ರೋಜಾ (ಉಪವಾಸ) ಪೂರ್ಣವಾದಂತೆ ಕಾಣಿಸಲ್ಲ. ರಸೆಲ್ ಮಾರ್ಕೆಟ್ನಿಂದ ಖರ್ಜೂರ ತರದಿದ್ದರೆ ಶ್ಯಾವಿಗೆ ಪಾಯಸ ಬಾಯಿಗೆ ರುಚಿಸಲ್ಲ. ಕಮರ್ಷಿಯಲ್ ಸ್ಟ್ರೀಟ್ನಿಂದ ಘಾಗ್ರಾ, ಶರಾರಾ, ಅಪಾ^ನಿ ಸೂಟ್, ಜುಬ್ಟಾ ಶೇರ್ವಾನಿ ಖರೀದಿಸದಿದ್ದರೆ ಹಬ್ಬಕ್ಕೆ ಮೆರುಗೇ ಬರುವುದಿಲ್ಲ!
ಹೌದು! ರಂಜಾನ್ ಅಂದಾಕ್ಷಣ ನೆನಪಿಗೆ ಬರುವುದು ಶಿವಾಜಿನಗರ. ಅದರಲ್ಲೂ, ಅಲ್ಲಿ ಸಿಗುವ ರಂಜಾನ್ ಸ್ಪೆಷಲ್ ಸಮೋಸಾವನ್ನು ಮರೆಯುವಂತೆಯೇ ಇಲ್ಲ. ಇಡೀ ತಿಂಗಳು ಯಾವ ರಸ್ತೆ, ಬೀದಿ, ಗಲ್ಲಿಗೆ ಹೋದರೂ ಸಮೋಸಾದ್ದೇ ಘಮಘಮ ವಾಸನೆ, ಸಾಲು ಸಾಲು ಅಂಗಡಿಗಳು, ವೆಜ್ ಸಮೋಸಾ, ನಾನ್ವೆಜ್ ಸಮೋಸಾಗಳ ಭರ್ಜರಿ ವ್ಯಾಪಾರ. ರಂಜಾನ್ ತಿಂಗಳ ಮಟ್ಟಿಗೆ ಶಿವಾಜಿನಗರ “ಸಮೋಸಾನಗರ’ವಾಗಿ ಬದಲಾಗಿರುತ್ತದೆ.
ಶಿವಾಜಿನಗರ ಸದಾ ಗಿಜುಗಿಡುವ ಪ್ರದೇಶ. ಇದು ಪಕ್ಕಾ ವ್ಯಾಪಾರಿ ಕೇಂದ್ರ. ಸೂಜಿಯಿಂದ ವಿಮಾನದವರೆಗೆ ಇಲ್ಲಿ ಏನು ಬೇಕಾದ್ರೂ ಸಿಗುತ್ತದೆ. ಫರ್ನಿಚರ್ ಅಂಗಡಿಗಳ ಒಂದೆರಡಲ್ಲ, ಆರು ಬೀದಿಗಳೇ ಇಲ್ಲಿವೆ. ವರ್ಷವಿಡೀ ಭರ್ಜರಿ ಬಿಜಿನೆಸ್ ನಡೆಯುತ್ತದೆ. ಗುಜರಿ ವ್ಯಾಪಾರದ ದೊಡ್ಡ ಅಡ್ಡಾ ಇಲ್ಲಿದೆ. ಎಲ್ಲ ಅರ್ಥದಲ್ಲೂ ಇದು ಬೆಂಗಳೂರಿನ “ವಾಣಿಜ್ಯ ನಗರಿ’. ಇದೆಲ್ಲ ಶಿವಾಜಿನಗರದ ಬಗ್ಗೆ ಕೊಡುವ ಉಪಮೆಗಳು. ರಂಜಾನ್ ತಿಂಗಳಲ್ಲಿ ಇಲ್ಲಿನ ಗಿಜುಗಿಡುವಿಕೆ ದುಪ್ಪಟ್ಟು ಆಗುತ್ತದೆ. ಕೊನೆಯ ಹತ್ತು ದಿನಗಳಲ್ಲಂತೂ ಶಿವಾಜಿನಗರದ ಒಳಹೊಕ್ಕು ಹೊರಬರುವುದು ದೊಡ್ಡ ಸಾಹಸವೇ ಸರಿ.
ದುಬೈ, ಕುವೈತ್, ಇರಾನ್ನಿಂದ ಇಲ್ಲಿಗೆ ನಾನಾ ಬಗೆಯ ಖರ್ಜೂರಗಳು ಬರುತ್ತವೆ. ದೆಹಲಿ, ಗುಜರಾತ್, ಸೂರತ್, ಕಾನ್ಪುರ, ಬನಾರಸ್ನಿಂದ ಬಟ್ಟೆಗಳು ಬರುತ್ತವೆ. ಹೈದರಾಬಾದ್, ಲಖನೌ ತಿನಿಸುಗಳ ಭರಾಟೆ ಜೋರು. ಆದರೆ, ಸಮೋಸ ವಿಷಯಕ್ಕೆ ಬಂದಾಗ ಶಿವಾಜಿನಗರದ್ದೇ ಮೇಲುಗೈ. ಇಲ್ಲಿನ ರಂಜಾನ್ ಸ್ಪೆಷಲ್ ಸಮೋಸಾಗೆ ಅದಕ್ಕೆ ಅದೇ ಸಾಟಿ. ಆನಿಯನ್ ಸಮೋಸಾ, ಚಿಕನ್ ಸಮೋಸಾ, ಮಟನ್ ಸಮೋಸಾ ಭಾರಿ ಫೇಮಸ್.
ವೆಜ್ ಸಮೋಸಾ 10 ರೂ.ಗೆ ಒಂದು ಸಿಕ್ಕರೆ, ನಾನ್ವೆಜ್ ಸಮೋಸಾ ಕೆ.ಜಿ.ಗೆ 80-100 ರೂ. ಲೆಕ್ಕದಲ್ಲಿ ಸಿಗುತ್ತದೆ. ರಂಜಾನ್ ತಿಂಗಳ ಮಟ್ಟಿಗೆ ಇಲ್ಲಿನ ರಸೆಲ್ ಮಾರ್ಕೆಟ್ ಸುತ್ತ, ಬ್ರಾಡ್ವೇ ರಸ್ತೆ, ಹರಿ ಮಸೀದಿ, ಲಾಲ್ ಮಸೀದಿ, ಚೌಕ್, ಜುಮ್ಮಾ ಮಸೀದಿ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಸಮೋಸಾ ಅಂಗಡಿಗಳನ್ನು ಹಾಕಲಾಗಿರುತ್ತದೆ. ಒಂದು ದಿನಕ್ಕೆ ಇಲ್ಲಿ 2-3 ಲಕ್ಷ ಸಮೋಸಾ ಮಾರಾಟ ಆಗುತ್ತವೆ.
ಶಿವಾಜಿನಗರ ರಂಜಾನ್ ಸ್ಪೆಷಲ್ ಸಮೋಸಾಗೆ ದಶಕಗಳ ಇತಿಹಾಸವಿದೆ. ಇದರ ಜೊತೆಗೆ ಸಿಹಿ ಖಾದ್ಯಗಳಾದ ಅಫ್ಲಾತೂನ್, ಶಾಹಿ ತುಕಡಾ, ಖವಾ ನಾನ್, ಖುಬಾನಿ ಮಿಟ್ಟಾ, ಗಾಜರ್ ಹಲ್ವಾ, ಫಾಲುದಾ ಸಹ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತದೆ. ಸಂಜೆ ವೇಳೆಗೆ ವ್ಯಾಪಾರ ಜೋರು ಇರುತ್ತದೆ. “ಈ ಬಾರಿ ವ್ಯಾಪಾರ ಬಹಳ ಚೆನ್ನಾಗಿದೆ’ ಎಂದು ಬಿಲಾಲ್ ಬೇಕರಿ ಆ್ಯಂಡ್ ಸ್ವೀಟ್ಸ್ ಮಾಲಿಕ ಎಂ. ವಸೀಂ ಅಹ್ಮದ್ ಹೇಳುತ್ತಾರೆ.
ದಮ್ ಬಿರಿಯಾನಿ, ಮೊಗ್ಲೆ„ ಚಿಕನ್
ಬರೀ ಸಮೋಸಾ ಅಷ್ಟೇ ಅಲ್ಲ, ನಾನ್ವೆಜ್ ಫುಡ್ ಭರಾಟೆ ಸಹ ಜೋರಾಗಿರುತ್ತದೆ. ಹಾಗೆ ನೋಡಿದರೆ ಎಲ್ಲ ದಿನಗಳಲ್ಲೂ ಶಿವಾಜಿನಗರ ನಾನ್ವೆಜ್ ಊಟಕ್ಕೆ ಫೇಮಸ್. ಆದರೆ, ರಂಜಾನ್ನಲ್ಲಿ ಇದರ ಘಮಲು ಇನ್ನೂ ಹೆಚ್ಚಾಗಿರುತ್ತದೆ. ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಧಮ್ ಬಿರಿಯಾನಿ ಜೊತೆಗೆ ಹೈದರಾಬಾದ್ ಮತ್ತು ಉತ್ತರ ಭಾರತದ ಸಾಂಪ್ರದಾಯಿಕ ಖಾದ್ಯಾಗಳಾದ ಮೊಗ್ಲೆ„ ಚಿಕನ್, ಪತ್ತರ್ ಗೋಷ್, ಚಿಕನ ಕಡಾಯಿ, ಇರಾನಿ ಚಿಕನ್, ಹೈದರಾಬಾದಿ ಹಲೀಮ್ ಮುಂತಾದವು ಬಾಯಲ್ಲಿ ನೀರೂರಿಸುವ ನಾನ್ವೆಜ್ “ಡಿಶ್’ಗಳು.
ಶರಾರಾ ಚಮಕ್, ಶೇರ್ವಾನಿ ದಮಕ್
ಹಬ್ಬಕ್ಕೆ ಬಟ್ಟೆಗಳ ಖರೀದಿ ಸಹ ಜೋರಾಗಿರುತ್ತದೆ. ಕೊನೆಯ ಹತ್ತು ದಿನಗಳಲ್ಲಿ ಕಮರ್ಷಿಯಲ್ ಸ್ಟ್ರೀಟ್ನಲ್ಲಿ ಕಾಲಿಡಲೂ ಜಾಗ ಇರುವುದಿಲ್ಲ. ಮಹಿಳೆಯರ, ಮಕ್ಕಳ ಸಾಂಪ್ರದಾಯಿಕ ಮತ್ತು ಆಧುನಿಕ ಫ್ಯಾಷನ್ ಬ್ರಾಂಡ್ಗಳು ಗ್ರಾಹಕರ ಆಯ್ಕೆಯಾಗಿರುತ್ತವೆ. ಹೆಣ್ಣು ಮಕ್ಕಳ ಶರಾರಾ, ಘಾಗ್ರಾ, ಲಾಂಗ್ ಕಟ್, ಗೌನ್ ಮತ್ತು ಗಂಡು ಮಕ್ಕಳ ಅಪಾ^ನಿ ಸೂಟ್, ಜುಬ್ಟಾ ಶೇರ್ವಾನಿ ಈ ಬಾರಿಯ ಪ್ರಮುಖ ಆಕರ್ಷಣೆ. ಮಾರ್ಕೆಟ್ನಲ್ಲಿ 500ರಿಂದ 50 ಸಾವಿರ ರೂ.ವರೆಗಿನ ಡ್ರೆಸ್ಗಳು ಸಿಗುತ್ತವೆ. ರಂಜಾನ್ ವ್ಯಾಪಾರಕ್ಕೆ ಯಾವತ್ತೂ ಮೋಸ ಆಗಿಲ್ಲ. ಅದರಂತೆ ಈ ಬಾರಿಯೂ ವ್ಯಾಪಾರ ಚೆನ್ನಾಗಿದೆ ಎಂದು “ಗುಲÒನ್’ ಬಟ್ಟೆ ಅಂಗಡಿ ಮಾಲೀಕ ಚಾಂದಪಾಷಾ ಹೇಳುತ್ತಾರೆ.
300 ಬಗೆಯ ಖರ್ಜೂರ
“ಖರ್ಜೂರ’ ತಿಂದು ಇಫ್ತಾರ್ (ಉಪವಾಸ ಪೂರ್ಣ) ಮಾಡುವುದು ಮುಸ್ಲಿಮರ ಧಾರ್ಮಿಕ ಮತ್ತು ಭಾವನಾತ್ಮಕ ನಂಬಿಕೆ. ಖರ್ಜೂರ ಹಾಗೂ ಡ್ರೈ ಫೂÅಟ್ ಮಾರಾಟಕ್ಕೆ ರಸೆಲ್ ಮಾರ್ಕೆಟ್ನ “ಡೆಲಿಶಿಯೆಸ್’ ತುಂಬಾ ಫೇಮಸ್. ಪ್ರಪಂಚದ ವಿವಿಧ 300 ಬಗೆಯ ಖರ್ಜೂರಗಳ ಪೈಕಿ ಬೆಸ್ಟ್ ಆಫ್ ದಿ ಬೆಸ್ಟ್ 64 ಬಗೆಯ ಖರ್ಜೂರಗಳು ಒಂದೇ ಸೂರಿನಡಿ ಇಲ್ಲಿ ಸಿಗುತ್ತವೆ. ಈ ಬಾರಿ 6 ದೇಶಗಳಿಂದ 4 ಬಗೆಯ ಖರ್ಜೂರಗಳು ಹೊಸದಾಗಿ ಬಂದಿವೆ. ಸೌದಿ ಅರೇಬಿಯಾ, ಜೋರ್ಡಾನ್, ಮಧ್ಯ ಏಷ್ಯಾ, ಟುನಿಶಿಯಾ, ಸೌತ್ ಆಫ್ರಿಕಾದ ಖರ್ಜೂರಗಳು ವಿಶೇಷ ಆಕರ್ಷಣೆ. ಅಜ್ವಾ, ಮಬ್ರೂಮ್, ಕಲಿ¾, ಸುಗಾಯಿ, ಸುಕ್ರಿ, ಅಂಬರ್ ಇವು ನಮ್ಮಲ್ಲಿ ಸಿಗುವ ಖರ್ಜೂರಗಳ ಪೈಕಿ ಪ್ರಮುಖವಾದವು. ಕೆ.ಜಿ.ಗೆ 100 ರಿಂದ 4,500 ರೂ.ವರೆಗೆ ಬೆಲೆ ಇದೆ. ರಂಜಾನ್ ವ್ಯಾಪಾರ ಚೆನ್ನಾಗಿದೆ ಎಂದು ಡೆಲಿಶಿಯಸ್ ಮಳಿಗೆಯ ಮಾಲೀಕ ಮಹ್ಮದ್ ಇದ್ರೀಸ್ ಚೌದ್ರಿ ಹೇಳುತ್ತಾರೆ.
ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ