ಫಸಲು ವಿಮಾ ಯೋಜನೆ: ಲಾಭ ಯಾರಿಗೆ?
Team Udayavani, Oct 9, 2017, 1:20 PM IST
ರೈತ ಸಂಘಟನೆಗಳ ಮುಖಂಡರ ಅನುಸಾರ, ಈ ಫಸಲು ವಿಮಾ ಯೋಜನೆಯಿಂದ ಲಾಭ ಆಗಿರುವುದು ವಿಮಾ ಕಂಪೆನಿಗಳಿಗೆ: ಸರಕಾರಿ ಮತ್ತು ಖಾಸಗಿ ವಿಮಾ ಕಂಪೆನಿಗಳಿಗೆ! ಈ ಕಂಪೆನಿಗಳು ರೈತರಿಂದ ದುಬಾರಿ ವಿಮಾ ಶುಲ್ಕ (ಪ್ರೀಮಿಯಂ) ವಸೂಲಿ ಮಾಡಿವೆ.
ಕೇಂದ್ರ ಸರಕಾರದ ಫಸಲು ವಿಮಾ ಯೋಜನೆ ಜಾರಿ ಮಾಡುವಾಗ, 2016ರ ಮುಂಗಾರಿನಿಂದ ತೊಡಗಿ ಈವರೆಗೆ ಆಗಿರುವ ಅವಾಂತರಗಳು ಒಂದೆರಡಲ್ಲ. ಇದರಿಂದಾಗಿ, ಫೆಬ್ರವರಿ 2017ರಲ್ಲೆ ಇತ್ಯರ್ಥವಾಗ ಬೇಕಾಗಿದ್ದ ಕ್ಲೈಮುಗಳಲ್ಲಿ ಶೇಕಡಾ 68ಕ್ಕಿಂತ ಜಾಸ್ತಿ ಏಪ್ರಿಲ್ 2017 ಮುಗಿದರೂ ಇತ್ಯರ್ಥವಾಗಿಲ್ಲ. ಹಾಗಾದರೆ, ಫಸಲು ವಿಮಾ ಯೋಜನೆಯಿಂದ ಲಾಭ ಆಗಿರೋದು ಯಾರಿಗೆ?
ಫಸಲು ವಿಮಾ ಯೋಜನೆಯ ಅನುಸಾರ ವಿವಿಧ ಬೆಳೆಗಳ ಕನಿಷ್ಠ ಎಕರೆವಾರು ಫಸಲನ್ನು ಆಯಾ ಹಂಗಾಮಿನ ಮುನ್ನ ರಾಜ್ಯ ಸರಕಾರ ಅಧಿಕೃತವಾಗಿ ಪ್ರಕಟಿಸಬೇಕು. ಆದರೆ, ಗುಜರಾತ್, ಹಿಮಾಚಲ ಪ್ರದೇಶ, ರಾಜಸ್ಥಾನ, ತಮಿಳುನಾಡು ಮತ್ತು ಉತ್ತರಪ್ರದೇಶ ರಾಜ್ಯಗಳು ಇದನ್ನು ಪ್ರಕಟಿಸಲೇ ಇಲ್ಲ. ಇತರ ರಾಜ್ಯಗಳಲ್ಲಿ ಪ್ರಕಟಿಸಿದ್ದ ಕನಿಷ್ಠ ಎಕರೆವಾರು ಫಸಲು, ನಿಜವಾದ ಸರಾಸರಿ ಎಕ್ರೆವಾರು ಫಸಲಿಗಿಂತ ಕಡಿಮೆಯಾಗಿತ್ತು! ಉದಾಹರಣೆಗೆ, ಮಹಾರಾಷ್ಟ್ರ ಸರಕಾರವು ಬೀಡ್ ಜಿಲ್ಲೆಗೆ ಪ್ರಕಟಿಸಿದ ಹೆಸರುಕಾಳು ಬೆಳೆಯ ಕನಿಷ್ಠ ಫಸಲು ಎಕರೆಗೆ 313 ಕಿ.ಗ್ರಾಂ. ಆದರೆ ಇದು ರೈತರು ಪಡೆಯುವ ಸರಾಸರಿ ಫಸಲಿನ ಅರ್ಧಕ್ಕಿಂತ ಕಡಿಮೆ. ಹಾಗೆಯೇ, ಹರಿಯಾಣ ಸರಕಾರವು ಸೋನಿಪತ್ ಜಿಲ್ಲೆಗೆ 2016-17ನೇ ಸಾಲಿಗೆ ಪ್ರಕಟಿಸಿದ ಹತ್ತಿಯ ಕನಿಷ್ಠ ಫಸಲು ಹೆಕ್ಟೇರಿಗೆ 4.43 ಕ್ವಿಂಟಾಲ್ ಆದರೆ, ಆ ಜಿಲ್ಲೆಯಲ್ಲಿ ರೈತರು ಪಡೆಯುವ ಹತ್ತಿಯ ಸರಾಸರಿ ಫಸಲು ಹೆಕ್ಟೇರಿಗೆ 25 ಕ್ವಿಂಟಾಲ…. ಇದರ ಅರ್ಥವೇನು? ಒಬ್ಬ ರೈತನು ಬೆಳೆಸಿದ ಹತ್ತಿ ಬೆಳೆಯ ಶೇ. 80ರಷ್ಟು ಫಸಲು ನಷ್ಟವಾದರೂ ಅವನಿಗೆ ಪರಿಹಾರ ಸಿಗುವುದಿಲ್ಲ!
ವಾಣಿಜ್ಯ ಬ್ಯಾಂಕುಗಳು ಅಥವಾ ಸಹಕಾರಿ ಸಂಘಗಳಿಂದ ಬೆಳೆಸಾಲ ಪಡೆಯದಿರುವ ರೈತರ ಪರಿಸ್ಥಿತಿಯೂ ಶೋಚನೀಯ. ಇವರಲ್ಲಿ ಶೇ. 5ರಷ್ಟು ರೈತರೂ ಫಸಲು ವಿಮಾ ಯೋಜನೆಯ ಕಂತು ಕಟ್ಟಿಲ್ಲ. ಆದ್ದರಿಂದ ಅವರಿಗೆ ಈ ಯೋಜನೆಯಿಂದ ಕಿಂಚಿತ್ ಪ್ರಯೋಜನವೂ ಇಲ್ಲ.
ಮತ್ತೆ ಅದೇ ಪ್ರಶ್ನೆ ಎದುರಾಗುತ್ತದೆ. ಹಾಗಾದರೆ, ಈ ಯೋಜನೆಯಿಂದ ಲಾಭ ಯಾರಿಗೆ? ರೈತ ಸಂಘಟನೆಗಳ ಮುಖಂಡರ ಅನುಸಾರ, ಈ ಫಸಲು ವಿಮಾ ಯೋಜನೆಯಿಂದ ಲಾಭ ಆಗಿರುವುದು ವಿಮಾ ಕಂಪೆನಿಗಳಿಗೆ: ಸರಕಾರಿ ಮತ್ತು ಖಾಸಗಿ ವಿಮಾ ಕಂಪೆನಿಗಳಿಗೆ! ಈ ಕಂಪೆನಿಗಳು ರೈತರಿಂದ ದುಬಾರಿ ವಿಮಾ ಶುಲ್ಕ (ಪ್ರೀಮಿಯಂ) ವಸೂಲಿ ಮಾಡಿವೆ. ನವದೆಹಲಿಯ ವಿಜ್ಞಾನ ಮತ್ತು ಪರಿಸರ ಕೇಂದ್ರದ (ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್) ಅಧ್ಯಯನ ವರದಿಯ ಪ್ರಕಾರ, 2016ರ ಮುಂಗಾರಿನಲ್ಲಿ ಈ ವಿಮಾ ಕಂಪೆನಿಗಳು ರಾಷ್ಟ್ರಮಟ್ಟದಲ್ಲಿ ವಸೂಲಿ ಮಾಡಿದ ವಿಮಾ ಶುಲ್ಕ (ವಿಮೆ ಇಳಿಸಿದ ಮೊತ್ತದ) ಶೇ.12.6. ಇದು ನಮ್ಮ ದೇಶದ ಬೆಳೆವಿಮೆ ಚರಿತ್ರೆಯಲ್ಲೇ ವಿಧಿಸಿದ ಅತ್ಯಧಿಕ ಶುಲ್ಕ. ಇದಕ್ಕೆ ಹೋಲಿಸಿದಾಗ, ಈ ಮುನ್ನ ಚಾಲ್ತಿಯಲ್ಲಿದ್ದ ಪರಿಷ್ಕೃತ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಲ್ಲಿ ವಿವಿಧ ಮುಂಗಾರು ಬೆಳೆಗಳಿಗೆ ರೈತರಿಗೆ ವಿಧಿಸಿದ ಶುಲ್ಕ ಶೇ.9ರಿಂದ 11.5.
ಗುಜರಾತ್ನಲ್ಲಿ 2016 ಮುಂಗಾರಿನಲ್ಲಿ ರೈತರಿಂದ ವಸೂಲಿ ಮಾಡಿದ ಫಸಲು ವಿಮಾ ಶುಲ್ಕದ ದರ ಶೇ.20.5. ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಈ ದರ ಶೇ.19.9 ಮತ್ತು ಶೇ.18.9. ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯಲ್ಲಿ 2016 ಮುಂಗಾರಿನಲ್ಲಿ ತೊಗರಿ ಬೆಳೆಗೆ ವಸೂಲಿ ಮಾಡಿದ ಶುಲ್ಕದ ದರ ಶೇ.40. ಅಲ್ಲಿನ ಅಗರ್-ಮಾಲ್ವಾ ಜಿಲ್ಲೆಯಲ್ಲಿ ಬೇಳೆಕಾಳು ಬೆಳೆಗಳಿಗೆ ಇದೇ ಶುಲ್ಕದ ದರ ಶೇ.35.
ಇಂತಹ ಪರಿಸ್ಥಿತಿಯಲ್ಲಿ. ವಿಮಾ ಕಂಪೆನಿಗಳಿಗೆ ಲಾಭದ ಕೊಳ್ಳೆ! ಭಾರತದ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸಿದ ಅಂಕಿಸಂಖ್ಯೆಗಳ ಅನುಸಾರ, 2016-17ರಲ್ಲಿ ಸಾಮಾನ್ಯ ವಿಮಾ ರಂಗದ ಬೆಳವಣಿಗೆಯಲ್ಲಿ ಫಸಲು ವಿಮಾ ಯೋಜನೆ ಪ್ರಧಾನ ಪಾತ್ರ ವಹಿಸಿದೆ. ಈ ಅವಧಿಯಲ್ಲಿ ಕಂಪೆನಿಗಳ ಸಾಮಾನ್ಯ ವಿಮೆ ನೇರ ಪ್ರೀಮಿಯಮ್ ಸಂಗ್ರಹದ ಹೆಚ್ಚಳ ಶೇ.32. (2015-16ರಲ್ಲಿ ರೂ.96,376 ಕೋಟಿಗಳಿಂದ 2016-17ರಲ್ಲಿ ರೂ.1,27 ಲಕ್ಷ ಕೋಟಿಗಳಿಗೆ). ಇದರ ಅರ್ಧಕ್ಕರ್ಧ ಫಸಲು ವಿಮಾ ಯೋಜನೆಯ ಪ್ರೀಮಿಯಮ… ಹಣ! ವಿಜ್ಞಾನ ಮತ್ತು ಪರಿಸರ ಕೇಂದ್ರದ ವಿಶ್ಲೇಷಣೆಯ ಪ್ರಕಾರ 2016ರ ಮುಂಗಾರಿನಲ್ಲಿ ವಿಮಾ ಕಂಪೆನಿಗಳು ಗಳಿಸಿದ ಲಾಭ ರೂ.10,000 ಕೋಟಿ (ಇದು ಅಂತಿಮ ಲಾಭವಲ್ಲ; ಇದರಿಂದ ಆಡಳಿತ ಹಾಗೂ ಮಾರಾಟ ವೆಚ್ಚ ಮತ್ತು ತೆರಿಗೆಗಳನ್ನು ಕಳೆಯಬೇಕು.) ಅದೇನಿದ್ದರೂ, ಖಾಸಗಿ ವಿಮಾ ಕಂಪೆನಿಗಳು ಗರಿಷ್ಠಲಾಭ ಗಳಿಸಲು ಪ್ರಯತ್ನಿಸುತ್ತವೆಯೇ ವಿನಃ ಅತ್ಯಧಿಕ ಸಂಖ್ಯೆಯ ರೈತರ ಕ್ಲೈಮುಗಳನ್ನು ಇತ್ಯರ್ಥ ಪಡಿಸಲು ಪ್ರಯತ್ನಿಸುವುದಿಲ್ಲ.
ಮುಂಚೆ ಚಾಲ್ತಿಯಲ್ಲಿದ್ದ ಎರಡು ಬೆಳೆವಿಮಾ ಯೋಜನೆಗಳಿಗಿಂತ ಫಸಲು ವಿಮಾ ಯೋಜನೆ ಉತ್ತಮ ಎಂಬುದೇನೋ ನಿಜ. ಹೆಚ್ಚೆಚ್ಚು ರೈತರಿಗೆ ಇದರಿಂದ ಪ್ರಯೋಜನ ಆಗಬೇಕಾದರೆ ಇದರಲ್ಲಿ ಕೆಲವು ಸುಧಾರಣೆಗಳು ಅಗತ್ಯ ಎಂಬುದೂ ನಿಜ. ಮೊದಲಾಗಿ, ಬೆಳೆ-ಪಾಲುದಾರ ರೈತರು ಈ ಯೋಜನೆಗೆ ಸೇರಲು ಅವಕಾಶ ಕಲ್ಪಿಸಬೇಕು. ಎರಡನೆಯದಾಗಿ, ವಿವಿಧ ಬೆಳೆಗಳ ಕಳೆದ ಇಪ್ಪತ್ತು ವರ್ಷಗಳ ಎಕರೆವಾರು ಫಸಲಿನ ಮಾಹಿತಿ ಸಂಗ್ರಹಿಸಿ, ಅದರ ಆಧಾರದಿಂದ ಪ್ರತಿಯೊಂದು ಗ್ರಾಮದ ಬೆಳೆಗಳ ಕನಿಷ್ಠ ಫಸಲಿನ ಪ್ರಮಾಣ ನಿಗದಿ ಪಡಿಸಬೇಕು. ಮೂರನೆಯದಾಗಿ, ಕಾಡುಪ್ರಾಣಿಗಳಿಂದ ಆಗುವ ಫಸಲು ನಷ್ಟ ಮತ್ತು ಬೆಂಕಿ, ಚಳಿಗಾಳಿ ಹಾಗೂ ಭೀಕರ ಚಳಿ (ಪ್ರಾಸ್ಟ…)ಯಿಂದಾಗುವ ಫಸಲು ನಷ್ಟ ಇವುಗಳಿಗೂ ವೈಯುಕ್ತಿಕ ರೈತರ ನೆಲೆಯಲ್ಲಿ ವಿಮಾ ಪರಿಹಾರ ಒದಗಿಸಬೇಕು.
ಜೊತೆಗೆ, ಇನ್ನು ಐದು ವರ್ಷಗಳೊಳಗೆ ಪ್ರತಿಯೊಬ್ಬ ರೈತನೂ ಫಸಲು ವಿಮಾ ಯೋಜನೆಯ ಮೂಲಘಟಕ ಆಗಬೇಕು (ಜೀವವಿಮೆ ಯೋಜನೆಯಲ್ಲಿ ಇರುವಂತೆ). ವಿಮಾ ಪರಿಹಾರ ಮೊತ್ತವು (ಸಮ…-ಇನ್-ಷೂರ್ಡ್) ಆಯಾ ಬೆಳೆಗಳ ಸಾಲದ ಮೊತ್ತಕ್ಕೆ (ಸ್ಕೇಲ… ಆಫ್ ಫೈನಾನ್ಸ್) ಸಮವಾಗಿರಬೇಕು. ಈ ಯೋಜನೆಯಲ್ಲಿ ರೈತರ ದೂರು ನಿರ್ವಹಣಾ ವ್ಯವಸ್ಥೆಯನ್ನು ಶುಲ್ಕರಹಿತ ಸಹಾಯವಾಣಿಗಳ ಮೂಲಕ ರೈತಸ್ನೇಹಿಯಾಗಿ ಮಾಡಬೇಕು. ಅಂತಿಮವಾಗಿ, ಫಸಲು ವಿಮಾ ಯೋಜನೆಯ ಎಲ್ಲ ಮಾಹಿತಿ ಇಂಟರ್-ನೆಟ… ಮೂಲಕ ಸುಲಭವಾಗಿ ಎಲ್ಲರಿಗೂ ಸಿಗಬೇಕು.
ಈ ಎಲ್ಲ ಬದಲಾವಣೆಗಳು ಜಾರಿಯಾದರೆ, ಆರಂಭದಲ್ಲೇ ಎಡವಿದ ಫಸಲು ವಿಮಾ ಯೋಜನೆ ಕೃಷಿಕರ ಸಂಕಟ ನಿವಾರಣಾ ಯೋಜನೆಯಾಗಲು ಸಾಧ್ಯ. ಹಾಗಾಗಲಿ ಎಂದು ಹಾರೈಸೋಣ.
ಅಡ್ಡೂರು ಕೃಷ್ಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ