ಒಡಲು ತುಂಬಿಸಿದ ಔಡಲ , ಬರಗಾಲದ ಬೇಗೆಯ ಮಧ್ಯೆ
Team Udayavani, Apr 24, 2017, 3:45 AM IST
ಮಿಶ್ರ ಬೆಳೆಯ ವಿಶೇಷ ಅಂದರೆ ಇದು. ಬರಗಾಲದಿಂದಾಗಿ ಬೆಳೆಯೆಲ್ಲಾ ಒಣಗಿ ಹೋಯಿತು ಎನ್ನುವ ರೈತರ ಅಳಲಿನ ಮಧ್ಯೆ ಒಂದು ಬೆಳ್ಳಿ ಮಿಂಚಾಗಿ ಔಡಲ (ಹರಳು) ಕಂಡು ಬಂತು. ಎಕರೆಗೆ ಎರಡು ಕ್ವಿಂಟಾಲ್ ಹರಳು ಬೀಜ ಕೊಯ್ಲು
ಮಾಡಿದ ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು. ಭೂಮಿತಾಯಿ ಯಾವತ್ತೂ ಅನ್ನದಾತನ ಕೈಬಿಡುವುದಿಲ್ಲ ಎಂಬುದನ್ನು ಸಾರಿ ಹೇಳಿದಂತಿತ್ತು. ಕೊಯ್ಲಿಲಿಗೇ ಸಿಗದರಾಗಿ ಬೆಳೆಯನ್ನು ನೋಡುತ್ತಾ ನಿರಾಸೆಗೊಳಗಾದ ರೈತರ ತಲೆ ನೇವರಿಸಿ ಸಾಂತ್ವನ ಹೇಳಿದ್ದು ಈ ಭೂಮಿತಾಯಿ. “ಇದೋ, ನೀನು ಭೂಮಿಗೆ ಹಾಕಿದ ಬಂಡವಾಳವನ್ನು ವಾಪಸ್ಸು ಕೊಡುತ್ತಿದ್ದೇನೆ’ ಎನ್ನುವಂತಿತ್ತು ಆ ಔಡಲ ಬೆಳೆ.
ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಮಳೆಯಾಶ್ರಿತವಾಗಿ ರಾಗಿಯೇ ಮುಖ್ಯ ಬೆಳೆ. ಪ್ರತೀ ಹತ್ತು ಸಾಲು ರಾಗಿಗೆ ಒಂದು ಸಾಲು ಅಕ್ಕಡಿ ಬೆಳೆ ಬಿತ್ತುವುದು ವಾಡಿಕೆ. ಅಕ್ಕಡಿ ಸಾಲಿನಲ್ಲಿ ಜೋಳ, ಹರಳು. ಅಲಸಂದೆ, ಸಾಸಿವೆ, ಹುಚ್ಚೆಳ್ಳು ಮುಂತಾದ ನವಧಾನ್ಯಗಳು ಸೇರಿಕೊಂಡಿವೆ. ಈ ಸಂಪ್ರದಾಯ ತಲೆಮಾರಿನಿಂದ ರೂಢಿಸಿಕೊಂಡು ಬಂದಿರುವಂತಾದ್ದು. ಇತ್ತೀಚೆಗೆ ರೈತರು ಈ ಅಕ್ಕಡಿ ಬೆಳೆಯ ಸಾಲನ್ನು ಕೈ ಬಿಡುತ್ತಿದ್ದಾರೆ. ಏಕಬೆಳೆ ಪದ್ಧತಿಯತ್ತ ಒಲವು ತೋರುತ್ತಿದ್ದಾರೆ. ರಾಗಿಯೊಂದೇ ಬೆಳೆದರೆ ಸಾಕೆಂಬ ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಆಧುನಿಕ ರಾಗಿ ತಳಿಗಳೂ ಕೂಡಾ ಅಕ್ಕಡಿ ಸಾಲಿನ
ಬೆಳೆಗಳ ಬೆಳವಣಿಕೆಗೆ ಆಸ್ಪದ ಕೊಡುತ್ತಿಲ್ಲವೆಂಬುದು ಕೂಡಾ ಅಷ್ಟೇ ನಿಜ. ಅಕ್ಕಡಿ ಬೆಳೆ ಬೆಳೆಯುವವರೂ ಆದ್ಯತೆ ಮೇಲೆ ಬೀಜಗಳ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳುತ್ತಾರೆ. ದನಕರುಗಳಿಗೆ ಮೇವಾಗಿ ಜೋಳದ ಕಡ್ಡಿ ಬೇಕೆಂದವರು
ಜೋಳವನ್ನೇ ಹೆಚ್ಚು ಸೇರಿಸುತ್ತಾರೆ. ಅವರೇಕಾಯಿ ಜಾಸ್ತಿ ತಿನ್ನಬೇಕೆಂದವರು ಒಂದು ಹಿಡಿ ಜಾಸ್ತಿ ಬಿತ್ತುವುದಿದೆ.
ಸಾಮಾನ್ಯವಾಗಿ ಒಂದು ಎಕರೆಗೆ ಎರಡು ಕೆ.ಜಿ ಹರಳು ಬೀಜ ಬಿತ್ತುವುದು ವಾಡಿಕೆ. ಮನೆಬಳಕೆಗೆ ಹರಳೆಣ್ಣೆ ತಯಾರಿಸುವುದು ಇದರ ಮುಖ್ಯ ಉದ್ದೇಶ. ತಲೆಗೆ ಹರಳೆಣ್ಣೆ ಹಾಕಿದರೆ ತುಂಬಾ ತಂಪು. ಉಷ್ಣ ಶಮನ. ಕಣ್ಣು ತುಂಬಾ ಸುಖನಿದ್ರೆ. ಉಳಿದ ಹರಳಿನ ಬೀಜ ಮಾರಿದರೆ ಕೈಗೆ ಒಂದಿಷ್ಟು ಕಾಸು. ಆದರೆ ಈ ಹರಳು ಬೀಜವನ್ನು ಅಕ್ಕಡಿ ಸಾಲಿನಲ್ಲಿ ಬಿತ್ತುವ ಹಿರಿಯರ ಜಾಣ್ಮೆ ಮೆಚ್ಚುವಂತಾದ್ದು. ರಾಗಿ ಕೊಯಾÉಗುವವರೆಗೆ ಎಲೆಮರೆಕಾಯಂತೆ ಚಿಕ್ಕದಾಗಿರುವ
ಗಿಡಗಳಿಗೆ ತದನಂತರ ಅದೆಲ್ಲಿಂದ ಶಕ್ತಿ ಬರುತ್ತೋ ಗೊತ್ತಾಗುವುದಿಲ್ಲ. ಗಾಳಿ ಬೆಳಕು ಸಿಕ್ಕಿದರೆ ಸಾಕೆಂದು ಕಾಣಿಸುತ್ತದೆ. ನೋಡುನೋಡುತ್ತಿದ್ದಂತೆ ಆಳೆತ್ತರ ಬೆಳೆದು ನಿಂತಿರುತ್ತವೆ. ಪಕ್ಕದಲ್ಲೇ ಬೆಳೆಯುತ್ತಿರುವ ಅವರೇ ಗಿಡಗಳ ಹಂಬು ಹಬ್ಬಲು ಗೂಟವಾಗಿ ಸೇವೆ ಸಲ್ಲಿಸುತ್ತವೆ. ಇನ್ನೊಂದೆಡೆ ಅವರೇಕಾಯಿಗೆ ಬೀಳುವ ಹುಳುಗಳ ಭಕ್ಷಣೆಗಾಗಿ ಹಾತೊರೆಯುವ ಪಕ್ಷಿಗಳು ಕೂತುಕೊಳ್ಳಲು ಇದೇ ಹರಳಿನ ಗಿಡಗಳು ಆಶ್ರಯ ನೀಡುತ್ತವೆ. ಹೊಲವೆಲ್ಲಾ ಖಾಲಿಯಾಯಿತೆನ್ನುವಾಗ
ಕೊಂಬೆಯೊಡೆದು ಬೆಳೆದು ಹೂ ಬಿಟ್ಟು ಕಾಯಿ ಕಟ್ಟುತ್ತದೆ.
ಯಾಕೆಂದರೆ ದನಕರುಗಳು ಓಡಿ ಬಂದು ಮೇಯ್ದು ಬಿಡುವ ಭಯ ರೈತರಿಗಿಲ್ಲ. ಹರಳು ಗಿಡದ ಹಸಿರು ದನಕರುಗಳನ್ನು ಅಷ್ಟಾಗಿ ಸೆಳೆಯುವದಿಲ್ಲ. ವಾರ್ಧಾ ಮಳೆಯ ಪ್ರಭಾವ ಡಿಸೆಂಬರ್ ತಿಂಗಳಿನಲ್ಲಿ ಸುರಿದ ವಾರ್ಧಾ ಮಳೆಯೇ ಔಡಲ ಬೆಳೆಯ ಬೆಳವಣಿಗೆ ಕಾರಣ. ಅಪಾರ ಬರನಿರೋಧಕ ಶಕ್ತಿ ಇರುವ ಈ ಬೆಳೆಗೆ ಸಿಕ್ಕಿದ ಸ್ವಲ್ಪ ತೇವಾಂಶವನ್ನು ಬಳಸಿಕೊಂಡು ಪುನಶ್ಚೇತನಗೊಳ್ಳುವ ತಾಕತ್ತೂ ಇದೆ ಎಂದು ಸಾಭೀತುಪಡಿಸಿತು. ಹೊಲವೆಲ್ಲಾ ಒಣಗಿ ಹೋಗುವ ಸಮಯದಲ್ಲಿ ಹಸಿರು ತುಂಬಿ ಬಂತು.
ಹೊಲದ ಕಡೆ ತಿರುಗಿ ಕೂಡಾ ನೋಡದೇ ಇದ್ದ ರೈತರು ಮತ್ತೆ ಹೊಲದತ್ತ ಹೆಜ್ಜೆ ಹಾಕಿದರು. ಮುಂಜಾನೆಯೇ ಎದ್ದು ಮಾಗಿದ ಹರಳಿನ ತೆನೆ ಬಿಡಿಸಿ, ಮಂಕರಿಗಳಲ್ಲಿ ತುಂಬಿ ತಂದು ಮನೆ ಮುಂದೆ ಹರಡಿ ಬಿಸಿಲಿಗೆ ಒಣಗಿಸಿದರು. ಕೋಲಿನಿಂದ ಬಡಿದು ಕಾಳು ತೂರಿ ಮನೆ ತುಂಬಿಸಿಕೊಂಡರು. ಈ ವರ್ಷ ಹೊಲದಿಂದ ಸಿಕ್ಕಿದ ಉತ್ಪನ್ನ ಇದೊಂದೇ. ಕೆಜಿಗೆ ಮೂವತ್ತೆ„ದರಿಂದ ನಲ್ವತ್ತು ರೂ.ಗೆ ಹರಳಿನ ಬೀಜ ಮಾರಾಟವಾಗುತ್ತಿದೆ. ಸರಿಯಾಗಿ ಬಿತ್ತಿ ಬೆಳೆದವರಿಗೆ ಎಕರೆಗೆ ಏಳರಿಂದ ಎಂಟು ಸಾವಿರ ರೂಪಾಯಿ ಕೈ ಸೇರಿದೆ.
ನಮ್ಮ ಹಿರಿಯರ ಮಿಶ್ರ ಬೆಳೆ ಬೆಳೆಯುವ ಸಂಪ್ರದಾಯ ನಿಜಕ್ಕೂ ಮೆಚ್ಚುವಂತದ್ದು. ಮೂರು ತಿಂಗಳಿನ ರಾಗಿ ಬೆಳೆಯೊಂದಿಗೆ ಆರು ತಿಂಗಳ ಔಡಲವನ್ನೂ ಜೋಡಿಸಿರುವುದರ ಹಿಂದೆ ಒಂದು ಸರಳ ಲೆಕ್ಕಾಚಾರವಿದೆ. ಒಂದು ಮಳೆ ಕೈಕೊಟ್ಟರೆ ಒಂದು ಬೆಳೆ ಕೈ ತಪ್ಪಬಹುದು. ಹಾಗೆಯೇ ಯಾವುದಾದರೂ ಒಂದು ಮಳೆ ಬಂದರೆ ಒಂದು ಬೆಳೆಯಾದರೂ ಕೈಗೆ ಸಿಕ್ಕೀತು. ಭೂಮಿಗೆ ಹಾಕಿದ ಬಂಡವಾಳ ಯಾವತ್ತೂ ನಷ್ಟವಾಗುವುದಿಲ್ಲ. ನಮ್ಮೊಂದಿಗೆ ಜೂಜಾಡುವ ಮುಂಗಾರು ಮಳೆಗೂ ಸಡ್ಡು ಹೊಡೆದು ಅವರು ಬದುಕಿದ್ದು ಹೀಗೇ ತಾನೇ ?
– ಗಣಪತಿಭಟ್, ಹಾರೋಹಳ್ಳಿ