ಕೆಂಬಸಳೆ ಬೆಳಸಿ ಆರೋಗ್ಯ ವೃದ್ಧಿಸಿ
Team Udayavani, Apr 22, 2019, 6:15 AM IST
ಹಚ್ಚ ಹಸಿರು ವರ್ಣದ ಎಲೆ ಹಾಗೂ ದಂಡುಗಳಿರುವ ಬಸಳೆ ಎಲ್ಲರಿಗೂ ಪರಿಚಿತ. ಅದರಿಂದ ತಯಾರಿಸುವ ನಾನಾ ಬಗೆಯ ಸಾರು, ಸಾಂಬಾರುಗಳು ರುಚಿಯ ದೃಷ್ಟಿಯಿಂದ ಮನ ಗೆಲ್ಲುತ್ತವೆ. ಔಷಧೀಯವಾಗಿಯೂ ಅನೇಕ ಬಳಕೆಗಳಿಗೂ ಬೇಕಾಗುತ್ತದೆ. ಆದರೆ ಮನ ಸೆಳೆಯುವ ಕೆಂಪು ವರ್ಣದ ಬಸಳೆ ನೋಡಲು ಮಾತ್ರ ಆಕರ್ಷಕವಲ್ಲ. ಪದಾರ್ಥಗಳ ತಯಾರಿಕೆಯಷ್ಟೇ ಔಷಧೀಯ ಉಪಯೋಗಗಳಿಗೂ ಬೇಕಾಗುತ್ತದೆ.
ಬಂಟ್ವಾಳದ ಮಂಚಿಯಲ್ಲಿರುವ ಸತ್ಯಭಾಮಾ ಶಂಕರನಾರಾಯಣ ಅವರ ಮನೆಯಂಗಳದಲ್ಲಿ ವರ್ಷವಿಡೀ ಚಪ್ಪರ ತುಂಬಿಕೊಂಡಿರುವ ಕೆಂಪು ಬಸಳೆ ಗೋಬರ್ ಬಗ್ಗಡದ ಸತ್ವದಿಂದಲೇ ಹರಡಿ ಬೆಳೆಯುತ್ತಿದೆ. ರಾಸಾಯನಿಕ ಗೊಬ್ಬರ ಬಯಸುವುದಿಲ್ಲ. ಎಲೆಗಳು ಹಚ್ಚ ಹಸಿರಾಗಿ ದಪ್ಪರುವುದರಿಂದ ವ್ಯಂಜನಗಳ ತಯಾರಿಕೆಗೂ ಹೆಚ್ಚು ಅನುಕೂಲಕರವಾಗಿವೆ. ಇದರ ದಂಡನ್ನು ಪಾಲಿಥಿನ್ ಹಾಳೆಯಲ್ಲಿ ನೆಟ್ಟ ತಯಾರಿಸುವ ಗಿಡಗಳಿಗೆ ಸಾವಯವ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಮತ್ತು ಬೇಡಿಕೆ ಇದೆಯಂತೆ. ಮಳೆಗಾಲದಲ್ಲಿಯೂ ಎಲೆಗಳು ಕೊಳೆಯದೆ ದಿನದ ಅಡುಗೆಗೆ ಒದಗುತ್ತದೆಂಬ ವಿವರಣೆ ಅವರದು.
ಕೆಂಪು ಬಸಳೆಯ ಎಲೆಯಲ್ಲಿ ಎ ಜೀವಸತ್ವ ಅಧಿಕವಾಗಿರುವುದರಿಂದ ನಿತ್ಯ ಬಳಕೆಯಿಂದ ಇರುಳು ಕುರುಡುತನವನ್ನು ನೀಗಬಹುದು. ದೇಹಕ್ಕೆ ಬೇಕಾದ ಸಾಕಷ್ಟು ಪೋಷಕಾಂಶಗಳು ಇದರಲ್ಲಿವೆ. ಎಲೆಗಳನ್ನು ಅಕ್ಕಿಯೊಂದಿಗೆ ಸೇರಿಸಿ ತಯಾರಿಸುವ ಪತ್ರೊಡೆಯ ಸೇವನೆಯಿಂದ ಉರಿ ಮೂತ್ರ ಮತ್ತು ಮೂತ್ರಕೋಶದ ಸಮಸ್ಯೆಗಳು ಗುಣವಾಗುತ್ತದೆಂಬ ನಂಬಿಕೆಯೂ ಇದೆ.
— ರಾಮಕೃಷ್ಣ ಶಾಸ್ತ್ರಿ