ಟ್ರೇ ಹುಲ್ಲು ಮಣ್ಣಿಲ್ಲ, ನೀರೇ ಎಲ್ಲಾ
Team Udayavani, Nov 19, 2018, 6:00 AM IST
ನೈಸರ್ಗಿಕವಾದ ಹೈಡ್ರೋಫೋನಿಕ್ ಘಟಕವನ್ನು ಸ್ಥಾಪಿಸಿ, ಕೇವಲ ನೀರಿನ ಸಿಂಪರಣೆಯಿಂದ (ಮಣ್ಣನ್ನು ಬಳಸದೆ) ಮೆಕ್ಕೆಜೋಳದ ಹುಲ್ಲನ್ನು ಟ್ರೇ ಗಳಲ್ಲಿ ಬೆಳೆಯುವ ಮೂಲಕ ಹೊಸ ದಾರಿಯನ್ನು ಪರಿಚಯಿಸಿದ್ದಾರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾದ ಪ್ರಗತಿ ಪರ ರೈತ ಅಶೋಕ ಬಳ್ಳೊಳ್ಳಿ.
ಹೀಗೆ ಬೆಳೆದ ಹುಲ್ಲನ್ನು ಆಕಳುಗಳಿಗೆ ಪೌಷ್ಠಿಕ ಆಹಾರ (ಹುಲ್ಲು)ದಂತೆ ನೀಡುವ ಮೂಲಕ, ಹೆಚ್ಚು ಹಾಲನ್ನು ಪಡೆಯುತ್ತಿದ್ದಾರೆ. ನೀರಿನ ಸಿಂಪರಣೆಯ ಮೂಲಕ ಟ್ರೇಗಳಲ್ಲಿ ಹುಲ್ಲು ಬೆಳೆಯುವುದು ಕೊಪ್ಪಳ ಜಿಲ್ಲೆಯಲ್ಲಿ ಪ್ರಪ್ರಥಮ ಪ್ರಯೋಗ ಅಶೋಕ ಬಳ್ಳೊಳ್ಳಿ, ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರೂ ಸಹ, ಅವರಿಗೆ ಕೃಷಿಯ ಕಡೆ ತುಡಿತವಿದೆ.
ಪೌಷ್ಠಿಕ ಹುಲ್ಲನ್ನು ಆಕಳುಗಳಿಗೆ ಪ್ರತಿ ದಿನ ಮುಂಜಾನೆ, ದಿನಕ್ಕೆ ಒಪ್ಪತ್ತು ಮಾತ್ರ ಆಹಾರವಾಗಿ ನೀಡುತ್ತಾರೆ.
ಬೆಳೆಯೋದು ಹೇಗೆ?
ಮೆಕ್ಕೆಜೋಳದ ಬೀಜಗಳನ್ನು ಒಂದು ದಿನ ನೀರಿನಲ್ಲಿ ನೆನೆಸಿ, ಮರು ದಿನ ಬಟ್ಟೆಯಲ್ಲಿ ಕಟ್ಟಿ ಇಡಲಾಗುತ್ತದೆ. ಇಡೀ ದಿನ ನೀರಿನಲ್ಲಿ ನೆನೆಸಿದರೆ, ಬಟ್ಟೆಯಲ್ಲಿ ಕಟ್ಟಿ ಇಟ್ಟರೆ, ಒಂದು ದಿನದಲ್ಲಿ ಮೊಳಕೆ ಬಂದಿರುತ್ತವೆ. ಹೀಗೆ ಮೊಳಕೆ ಬಂದ ಬೀಜಗಳಲ್ಲಿ ಅರ್ಧ ಕೆ.ಜಿಯಷ್ಟನ್ನು ಟ್ರೇನಲ್ಲಿ ಹಾಕಿ ಇಡಲಾಗುತ್ತದೆ. ಅವುಗಳಿಗೆ ಪ್ರತಿದಿನ ಸಣ್ಣ ಸಣ್ಣ ಪೈಪ್ಗ್ಳ ಮೂಲಕ ನೀರನ್ನು ಸಿಂಪಡಿಸಲಾಗುತ್ತದೆ. ಅದಕ್ಕಾಗಿ ಅಟೋಮ್ಯಾಟಿಕ್ ಟೈಮರ್ ಅಳವಡಿಸಲಾಗಿದೆ. ಪ್ರತಿ 75 ನಿಮಿಷಗಳಿಗೊಮ್ಮೆ, 25 ಸೆಕೆಂಡ್ ಮಾತ್ರ ಈ ಮೊಳಕೆ ಬಿಟ್ಟ ಬೀಜಗಳಿಗೆ ನೀರು ಸಿಂಪಡಿಸುವ ವ್ಯವಸ್ಥೆ ಮಾಡಲಾಗಿದೆ. ಅದರಂತೆ, ಮೊಳಕೆ ಬೀಜಗಳಿಗೆ 10 ದಿನಗಳ ವರೆಗೆ ನೀರು ಸಿಂಪಡಿಸಲಾಗುತ್ತದೆ. ಈ ಹೊತ್ತಿಗೆ ಒಂದು ಅಡಿ ಎತ್ತರ ಮೆಕ್ಕೆಜೋಳದ ಹುಲ್ಲು ಬೆಳೆಯುತ್ತದೆ. ಅದನ್ನು ನೇರವಾಗಿ ಆಕಳುಗಳಿಗೆ ಆಹಾರವಾಗಿ ನೀಡಲಾಗುತ್ತದೆ.
ಅಟೋಮೆಟಿಕ್ ಟೈಮರ್ ಗಾಗಿ ನಿರಂತರವಾಗಿ ವಿದ್ಯುತ್ ಸಂಪರ್ಕ ಬೇಕಾಗುತ್ತದೆ. ಅದಕ್ಕಾಗಿ ಒಂದು ಬ್ಯಾರಲ್ನಲ್ಲಿ ನೀರು ಸಂಗ್ರಹಣೆ ಮಾಡಿ ಅದರಿಂದ ಚಿಕ್ಕ ಪೈಪ್ ಗಳ ಮೂಲಕ ನೀರು ಸಿಂಪರಣೆ ಮಾಡಲು ಅರ್ಧ ಹೆಚ್ ಪಿ ಮೋಟರ್ ಅಳವಡಿಸಲಾಗಿದೆ. ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಮೇಲಿಂದ ಮೇಲೆ ಕಡಿತಗೋಳ್ಳುವ ಕಾರಣ, ನೀರು ಸಿಂಪಡಿಸಲು ಇನ್ವರ್ಟರ್ (ಯುಪಿಎಸ್) ಗಾಗಿ 12 ವ್ಯಾಟ್ಸ್ ಬ್ಯಾಟರಿಯ ಸಂಪರ್ಕ ಕೊಡಲಾಗಿದೆ.
ಈ ಪೌಷ್ಟಿಕ ಆಹಾರದಿಂದ ನಮ್ಮಲ್ಲಿರುವ 10 ಜವಾರಿ ಆಕಳುಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡುತ್ತಿವೆ. ಇದಕ್ಕಾಗಿ ಖರ್ಚಾದ ಒಟ್ಟು ಮೊತ್ತ 28 ಸಾವಿರ ರೂ.ಗಳು ಎಂದುರೈತ ಅಶೋಕ ಬಳ್ಳೊಳ್ಳಿ ವಿವರಿಸಿದರು.
ಮಾಹಿತಿಗೆ: 9739925886
– ಎನ್. ಶಾಮೀದ್ ತಾವರಗೇರಾ