ತೆಂಗಿನ ತೋಟದಲ್ಲಿ ಸಿರಿಧಾನ್ಯ
Team Udayavani, Mar 5, 2018, 4:46 PM IST
ಸಿರಿಧಾನ್ಯದಿಂದ ಹಲವು ಬಗೆಯ ತಿನಿಸುಗಳನ್ನು ತಯಾರಿಸಿ ಆಸಕ್ತರಿಗೆ ಮಾರಾಟ ಮಾಡಿ ಅದರಲ್ಲಿರುವ ಆರೋಗ್ಯ ಗುಣಗಳ ಬಗ್ಗೆ ತಿಳುವಳಿಕೆ ಮೂಡಿಸುತ್ತಿರುವ ಅನೇಕರು ನಮ್ಮ ನಡುವೆ ಇದ್ದಾರೆ. ಅಂಥವರಲ್ಲಿ ಹರಿಹರ ತಾಲೂಕು ನಿಟ್ಟೂರು ಗ್ರಾಮದ ಸರೋಜಾ ನಾಗೇಂದ್ರಪ್ಪ ಪಾಟೀಲ್ ಒಬ್ಬರು. ಎರಡು ವರ್ಷಗಳಿಂದ ತಮ್ಮದೇ ಆದ ‘ತದ್ವನಂ’ ಬ್ರಾಂಡ್ ಅಡಿಯಲ್ಲಿ ಸಣ್ಣ ಪ್ರಮಾಣದ ಗೃಹ ಉದ್ದಿಮೆಯನ್ನು ಆರಂಭಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. 32 ಕ್ಕೂ ಅಧಿಕ ಬಗೆಯ ಸಿರಿಧಾನ್ಯ ಆಹಾರ ಪದಾರ್ಥಗಳನ್ನು ತಯಾರಿಸುತ್ತಿದ್ದಾರೆ. ನವಣೆ, ಕೊರಲೆ, ಸಜ್ಜೆ, ರಾಗಿ, ಊದಲು, ಜೋಳ, ಹಾರಕ, ಸಾಮೆ, ಬರಗು ಮುಂತಾದ ಸಿರಿಧಾನ್ಯಗಳಿಂದ ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ.
ಇಂತಿಪ್ಪ ಸರೋಜರಿಗೆ ತಾವೂ ಸಹ ಸಿರಿಧಾನ್ಯ ಬೆಳೆಯಬೇಕೆಂದು ನಿರ್ಧರಿಸಿದರು. ಇದಕ್ಕಾಗಿ ಇವರು ಆಯ್ದುಕೊಂಡ ಸ್ಥಳ ತೆಂಗಿನ ತೋಟ. ಮೂವತ್ತು ಅಡಿಗಳಿಗೆ ಒಂದರಂತೆ ಇರುವ ತೆಂಗಿನ ಮರಗಳ ನಡುವೆ ಸಿರಿಧಾನ್ಯ ಕೃಷಿಯನ್ನೇಕೆ ಪ್ರಯೋಗಿಸಿ ನೋಡಬಾರದು? ಎನ್ನಿಸಿತು. ಮರಗಳ ಮಧ್ಯೆ ಒಂದು ಬಾರಿ ಟ್ರಾಕ್ಟರ್ನಿಂದ ಕಲ್ಟಿವೇಟರ್ ಹೊಡೆಸಿದರು.
ಮರದ ಬೇರುಗಳು ಜಮೀನಿನ ತುಂಬ ಹರಡಿರುವುದರಿಂದ ಆಳವಾದ ಉಳುಮೆ ಮಾಡುವ ಹಾಗಿಲ್ಲ. ಕಲ್ಟಿವೇಟರ್ ಭೂಮಿಯಲ್ಲಿ ಎಳೆದ ತಿಳಿ ಆಳದ ಬಿರುಕಿನಲ್ಲಿಯೇ ಸಿರಿಧಾನ್ಯದ ಬೀಜ ಬಿತ್ತಿದ್ದರು. ತಲಾ ಅರ್ಧ ಎಕರೆಯಂತೆ ಕೊರಲೆ, ಹಾರಕ, ಬರಗು, ಊದಲು, ನವಣೆ, ಸಾಮೆ ಬೀಜಗಳನ್ನು ಬಿತ್ತಿದರು. ಇಪ್ಪತ್ತು ದಿನದ ನಂತರ ಸಣ್ಣ ಪವರ್ ಟಿಲ್ಲರ್ ಸಹಾಯದಿಂದ ಸಾಲಿನ ನಡುವಿನ ಕಳೆ ನಿಯಂತ್ರಿಸಿದರು. ಎಕರೆಗೆ ಒಂದು ಟ್ರಾಕ್ಟರ್ ಲೋಡ್ ಕೊಟ್ಟಿಗೆಯ ತಿಪ್ಪೆ ಗೊಬ್ಬರ ಬಳಸಿದರು. ಮೂರು ತಿಂಗಳಲ್ಲಿ ಸಿರಿಧಾನ್ಯ ಕಟಾವಿಗೆ ಬಂತು.
ನೆರಳಿಗೆ ಬೆದರದೇ, ತೆಂಗಿನ ಮರಗಳ ಬೇರಿಗೆ ಅಂಜದೇ ಬೆಳೆದ ಸಿರಿಧಾನ್ಯಗಳು ಭಾರಿ ಎನ್ನಿಸುವಷ್ಟು ಅಲ್ಲದಿದ್ದರೂ ಕನಿಷ್ಠ ಇಳುವರಿಯನ್ನಾದರೂ ನೀಡಿದ್ದವು. ಕೊರಲೆ 50 ಕೆಜಿ. ಹಾರಕ ಐವತ್ತು ಕೆಜಿ. ಬರಗು, ಊದಲು, ನವಣೆ ಹಾಗೂ ಸಾಮೆಯಿಂದ ತಲಾ ಮೂವತ್ತು ಕೆ.ಜಿಯಂತೆ ಇಳುವರಿ ದೊರಕಿತ್ತು. ತೋಟದಲ್ಲಿ ಇವರದು ಮೊದಲ ಬಾರಿಯ ಸಿರಿಧಾನ್ಯ ಪ್ರಯೋಗ. ಈ ಬಾರಿ ಬೆಳೆಯುವ ರೀತಿಯ ಬಗ್ಗೆ ಅರಿವು ಮೂಡಿದೆ. ಮುಂದಿನ ಬಾರಿ ಉತ್ತಮ ಇಳುವರಿ ಪಡೆಯುವ ನಿರೀಕ್ಷೆ ಇವರಲ್ಲಿ ಮನೆ ಮಾಡಿದೆ.
ಕನಿಷ್ಠ ಇಳುವರಿ ದೊರಕಿರುವ ಬಗ್ಗೆ ಇವರಲ್ಲಿ ಬೇಸರವಿಲ್ಲ. ‘ಕನಿಷ್ಠ ಬೆಳೆ ಬಂತೆಂದು ಕೊರಗೇಕೆ? ಲಾಭ ಗಳಿಸಲು ಮೌಲ್ಯವರ್ಧನೆ ಮಾಡಿದರೆ ಸಾಕು’ ಎನ್ನುವುದು ಅವರ ಅನುಭವದ ಮಾತು.
ಭತ್ತ ಕೃಷಿಯಲ್ಲಿಯೂ ಕೂಡ ಇವರು ಪ್ರಯೋಗಶೀಲರು. ಶ್ರೀ ಮಾದರಿಯ ಭತ್ತ ಬೇಸಾಯವನ್ನು ಹರಿಹರ ತಾಲೂಕಿನಲ್ಲಿ ಮೊದಲ ಬಾರಿಗೆ ಪರಿಚುಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಕೃಷಿ ಸಾಧನೆಗಾಗಿ 2008-09 ರಲ್ಲಿ ರಾಜ್ಯ ಸರ್ಕಾರದ ಕೃ ಪಂಡಿತ ಪ್ರಶಸ್ತಿ, ಕೇಂದ್ರ ಸರ್ಕಾರದಿಂದ ಮಹೇಂದ್ರ ಕೃಷಿ ಪ್ರಶಸ್ತಿ ದೊರೆತಿದೆ.
ಭದ್ರಾ ನಾಲೆಯ ನೀರು ಬಿಡಲಿಲ್ಲವೆಂದು ಜಮೀನನ್ನು ಪಾಳು ಬಿಟ್ಟು ಕೊರಗುತ್ತಿರುವ ಹಲವರ ಮಧ್ಯೆ ಸಿರಿಧಾನ್ಯಕ್ಕೆ ಕೈ ಹಾಕಿ ಅದರ ಮೌಲ್ಯವರ್ಧನೆಯಲ್ಲಿ ಗೆದ್ದಿರುವ ಸರೋಜಾರ ಪ್ರಯತ್ನ ಎಲ್ಲ ರೀತಿಯಿಂದಲೂ ಮಾದರಿ ಎನಿಸುತ್ತದೆ.
ಸಂಪರ್ಕಿಸಲು: 9900769719
*ಕೋಡಕಣಿ ಜೈವಂತ ಪಟಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ