ಕುರುಡನೊಬ್ಬನ “ಝಣ’ ಗಣ ಮನ
Team Udayavani, Dec 19, 2017, 10:52 AM IST
ಅವನ ಚೀಲದಲ್ಲಿದ್ದ ಕಡಲೆಕಾಯಿ ಪೊಟ್ಟಣ ಬಹುತೇಕ ಮುಗಿದಿತ್ತು. ಆದರೆ, ಹಣ ಕಡಿಮೆ ಇತ್ತು? “ಇವತ್ತು ಎಷ್ಟು ಪೊಟ್ಟಣ ತಂದಿದ್ದೆ?’ ಎಂದು ಪ್ರಶ್ನಿಸಿದೆ. “30, ಉಳಿದಿರೋದು 3′ ಎಂದ. ಅಲ್ಲಿಗೆ ಅವನ ಬಳಿ 270 ರೂ. ಇರಬೇಕು. ನಾನು “ಬೇಜಾರ್ ಮಾಡ್ಕೊಬೇಡಿ. ಒಂದು ಸಲ ಎಣಿಸ್ತೀನಿ’ ಅಂದೆ.
ಮೊನ್ನೆ ತುಮಕೂರು ತಾಲೂಕು ಕಚೇರಿಯ ಬಳಿಯ ಮರದಡಿಯಲ್ಲಿ ಕಾಲ ಕಳೆಯುತ್ತಾ ಕುಳಿತಿದ್ದೆ. ಅಲ್ಲಿಗೆ ಒಬ್ಬ ವ್ಯಕ್ತಿ ಕಡಲೆಕಾಯಿ ಮಾರುತ್ತಾ ಬಂದ. ಅವನನ್ನು ಕಂಡು ಆಶ್ಚರ್ಯವಾಯ್ತು; ಬದುಕಲು ಹೀಗೂ ಪ್ರಯತ್ನಿಸುವವರಿದ್ದಾರಲ್ಲ ಎಂದು. ಅದರಲ್ಲೇನು ವಿಶೇಷ ಅಂದ್ರೆ, ಕಡಲೆಕಾಯಿ ಮಾರುತ್ತಿದ್ದವ ಕುರುಡನಾಗಿದ್ದ. ಕೈಯಲ್ಲೊಂದು ಕಡ್ಡಿ ಹಿಡಿದು ದಾರಿ ಹುಡುಕುತ್ತಾ ಜನಜಂಗುಳಿ ನಡುವೆ ಕಟ್ಟಿದ ಪೊಟ್ಟಣಗಳೊಂದಿಗೆ ಕಡಲೆಕಾಯಿ ವ್ಯಾಪಾರ ಮಾಡುತ್ತಿದ್ದ. ದೇಹದ ಎಲ್ಲಾ ಅಂಗಗಳು ಸರಿಯಿದ್ದರೂ ಭಿಕ್ಷೆ ಬೇಡುವ ಕೆಲವರನ್ನು ನಾವು ನೋಡಿರುತ್ತೇವೆ. ಆದರೆ, ಈ ವ್ಯಕ್ತಿ ತನ್ನ ಕುರುಡುತನವನ್ನು ಮರೆತು ದುಡಿದು ತಿನ್ನಲು ತವಕಿಸುತ್ತಿದ್ದ.
ಆತನನ್ನು ಕರೆದು ಕೂರಿಸಿ, 2 ಪೊಟ್ಟಣ ಕಡಲೆಕಾಯಿ ಖರೀದಿಸಿ ಮಾತಿಗಿಳಿದೆ. “ಇದೆಲ್ಲಾ ಹೇಗೆ ಮಾಡ್ತೀರಾ? ಕಷ್ಟ ಆಗಲ್ವಾ?’ ಅಂದೆ, ಅದಕ್ಕಾತ “ಇಲ್ಲಾ ಸಾರ್! ನನ್ ಹೆಂಡ್ತಿ ಇಲ್ಲೆಲ್ಲೋ ಇದ್ದಾಳೆ. ಅವಳೇ ಇದೆಲ್ಲಾ ರೆಡಿಮಾಡಿ ಕೊಡ್ತಾಳೆ. ನಾನು ಮಾರಿಕೊಂಡು ಬರೋದು ಅಷ್ಟೆ. ಎಲ್ಲಾ ಕೆಲಸ ಅವಳದೇ’ ಅಂದ. ನನ್ನ ಕೆಟ್ಟ ಕುತೂಹಲ ಜಾಗೃತವಾಯ್ತು. ಆಕೆ ಕೂಡ ದೃಷ್ಟಿ ಇಲ್ಲದವರಾ? ಹೇಗೆ ಕೇಳ್ಳೋದು? ಆತನಿಗೆ ಬೇಜಾರಾಗುತ್ತೆ ಅಂತ ಮಾತು ಬದಲಿಸಿದೆ. “ಈ ವ್ಯಾಪಾರದಿಂದ ನಿನ್ನ ಜೀವನ ಹೇಗೆ ಸಾಗುತ್ತಿದೆ?’ ಎಂದು ಕೇಳಿದೆ. “ಪರವಾಗಿಲ್ಲ ಅಷ್ಟೋ- ಇಷ್ಟೋ ಸಿಗುತ್ತೆ. ಅವಳೂ ಸಹಾಯ ಮಾಡ್ತಾಳೆ. ಆರಾಮಿದೀವಿ’ ಅನ್ನೋ ಉತ್ತರ ಬಂತು.
ನನಗೆ ಆಶ್ಚರ್ಯ. ಬಡತನವಿದೆ, ಅಂಗವೈಕಲ್ಯವೂ ಇದೆ. ಹಾಗಿದ್ರೂ, ಆರಾಮಿದೀವಿ ಅಂತಿದ್ದಾರಲ್ಲ ಇವ್ರು. ಮತ್ತೆ ನಾವ್ಯಾಕೆ ಹೀಗೆ ನೆಮ್ಮದಿ ಇಲ್ಲದೆ ಒದ್ದಾಡ್ತಾ ಕೂತಿದೀವಿ? ವಿದ್ಯೆ ನಮ್ಮನ್ನು ಬಲಹೀನರನ್ನಾಗಿ ಮಾಡಿದ್ಯಾ ಎಂದುಕೊಳ್ಳುತ್ತಾ ಮುಂದಿನ ಪ್ರಶ್ನೆಗೆ ಬಂದೆ; “ನಿಮಗೆ ದೃಷ್ಟಿ ಇಲ್ಲ. ಹಣ ಹೇಗೆ ಲೆಕ್ಕ ಮಾಡ್ತೀರಿ? ಚಿಲ್ಲರೆ ಕೊಡೋದು ತಗೊಳ್ಳೋದು ಕಷ್ಟ ಆಗಲ್ವಾ?’ ಅದಕ್ಕಾತ “ಹಾ ಸಾರ್… ಕಷ್ಟಾನೇ… ನಂಗೇನೂ ಗೊತ್ತಾಗಲ್ಲ. ವ್ಯಾಪಾರ ಮಾಡುವವರೇ ಚಿಲ್ಲರೆ ಕೊಡ್ತಾರೆ. ನನ್ನಿಂದ ಚಿಲ್ಲರೆಯನ್ನೂ ಅವರೇ ತಗೋತಾರೆ ಸಾರ್’ ಎಂದ.
“20 ರೂ. ವ್ಯಾಪಾರ ಮಾಡಿ 50 ರೂ. ಕೊಟ್ಟಿದ್ದೀನಿ, ಚಿಲ್ಲರೆ ಕೊಡು ಅಂದ್ರೆ ಹೇಗಪ್ಪ ಕೊಡ್ತೀಯ?’ ಎಂದೆ ನಾನು. ಅದಕ್ಕಾತ “ಅದೇ ಸಾರ್, ನನ್ ಜೇಬಿನಿಂದ ಇರೋದೆಲ್ಲಾ ತೆಗೆದುಕೊಡ್ತೀನಿ, ಅವರೇ ಚಿಲ್ಲರೆ ತಗೊಂಡು ನನ್ನ ದುಡ್ಡು ನಂಗೆ ಕೊಟ್ಟು ಹೋಗ್ತಾರೆ, ಅಷ್ಟೇ’ ಅಂತ ಮುಗ್ಧವಾಗಿ ಉತ್ತರಿಸಿದ.
ನಾನು ಮತ್ತೆ ಕೇಳಿದೆ: “ಯಾರೂ ಮೋಸ ಮಾಡಲ್ವಾ?’ ಅದಕ್ಕಾತ “ಅಯ್ಯೋ ಬಿಡಿ ಸಾರ್… ನಮ್ಮಂಥವರಿಗೆ ಯಾರ್ ಮೋಸ ಮಾಡ್ತಾರೆ? ಹಾಗೆಲ್ಲ ಏನೂ ಇಲ್ಲ. ದಿನಕ್ಕೆ 30 ಪೊಟ್ಟಣ ತರಿ¤àನಿ. ಒಂದಕ್ಕೆ 10 ರೂ. ಪೂರ್ತಿ ವ್ಯಾಪಾರ ಆದ್ರೆ 300 ರೂಪಾಯಿ ಆಗಬೇಕು ಅಲ್ವ? ಮನೆಗೆ ಹೋದ ಮೇಲೆ ನನ್ ಹೆಂಡ್ತಿ ಲೆಕ್ಕ ಮಾಡಿ ನೋಡ್ತಾಳೆ. ಹತ್ತೋ- ಇಪ್ಪತ್ತೋ ವ್ಯತ್ಯಾಸ ಬರಬಹುದು ಅಷ್ಟೇ!’ ಎಂದ. ನನಗೆ ಉತ್ತರ ಸಿಕು¤, ಆತನ ಹೆಂಡತಿ ಕುರುಡಿ ಅಲ್ಲ ಅಂತ.
“ಸರಿಯಪ್ಪಾ, ಹೀಗೆ ದುಡೀತಾ ಆರಾಮಾಗಿರಿ. ತಗೊಳ್ಳಿ ನಂದು 20 ರೂ.’ ಅಂತ 100 ರೂ. ನೋಟು ಕೊಟ್ಟೆ. “ಸಾರ್, ಚಿಲ್ಲರೆ ನೀವೇ ತಗೋಬೇಕು’ ಅಂದ! “ಹೇಗೆ ಗೊತ್ತಾಯ್ತು ನಾನ್ ಕೊಟ್ಟಿದ್ದು 100 ರೂ. ಅಂತ?’ ಕೇಳಿದೆ. ಅದಕ್ಕೆ ಅವನು “ಅದೆಲ್ಲಾ ಗೊತ್ತಾಗುತ್ತೆ ಸಾರ್. ಅಳತೆ ಲೆಕ್ಕಾಚಾರ ಅಷ್ಟೇ… ತಗೊಳ್ಳಿ ನಿಮ್ಮ ಚಿಲ್ಲರೆ’ ಅಂತ ಜೇಬಿನಿಂದ ಎಲ್ಲಾ ಹಣವನ್ನೂ ತೆಗೆದು ನನ್ನೆದುರಿಟ್ಟ. ನಾನು 80 ರೂ. ತೆಗೆದುಕೊಂಡೆ. ಯಾಕೋ ಅನುಮಾನ ಬಂತು, ಅವನ ಹಣದಲ್ಲಿ ಕಮ್ಮಿ ಇರಬಹುದೆಂದು. ಅವನ ಚೀಲದಲ್ಲಿದ್ದ ಕಡಲೆಕಾಯಿ ಪೊಟ್ಟಣ ಬಹುತೇಕ ಮುಗಿದಿತ್ತು. ಆದರೆ, ಹಣ ಕಡಿಮೆ ಇತ್ತು? “ಇವತ್ತು ಎಷ್ಟು ಪೊಟ್ಟಣ ತಂದಿದ್ದೆ?’ ಎಂದು ಪ್ರಶ್ನಿಸಿದೆ. “30 ತಂದಿದ್ದೆ, ಉಳಿದಿರೋದು 3′ ಎಂದ. ಅಲ್ಲಿಗೆ ಅವನ ಬಳಿ 270 ರೂ. ಇರಬೇಕು. ನಾನು “ಬೇಜಾರ್ ಮಾಡ್ಕೊಬೇಡಿ. ಒಂದು ಸಲ ಎಣಿಸ್ತೀನಿ’ ಅಂದೆ. ಅವನ ಬಳಿಯಿದ್ದಿದ್ದು 100 ರೂ.ನ ಒಂದು ನೋಟು, 10 ರೂ.ನ 5 ನೋಟು, 20 ರೂ.ನ 3 ನೋಟು ಮತ್ತು ಚಿಲ್ಲರೆ ನಾಣ್ಯಗಳು. ಒಟ್ಟು 233 ರೂ. ಇತ್ತು!
ಅಯ್ಯೋ! ಯಾರೋ 40 ರೂ. ಮೋಸ ಮಾಡಿದ್ದಾರಲ್ಲ. ಅದನ್ನು ಅವನಿಗೆ ಹೇಗೆ ಹೇಳ್ಳೋದು ಅಂತ ಗೊತ್ತಾಗಲಿಲ್ಲ. ಒಂದು ವೇಳೆ ಈತ ಮನೆಗೆ ಹೋದ ಮೇಲೆ ಹೆಂಡತಿ ಎಣಿಕೆ ಮಾಡಿದಾಗ ಕಡಿಮೆ ಹಣ ಇರೋದು ಗೊತ್ತಾಗಿ, ನನ್ನನ್ನೇ ಬೈದುಕೊಳ್ಳೋದು ಪಕ್ಕಾ ಎಂದೆನಿಸಿತು. ಇಂಥವರಿಗೂ ಮೋಸ ಮಾಡುವವರಿದ್ದಾರಲ್ಲ ಎಂದು ಶಪಿಸುತ್ತಾ “ಹಣ ಸರಿ ಇದೆ ತಗೊಳ್ಳಿ’ ಅಂತ ಎಲ್ಲಾ ಹಣ ಅವರ ಜೇಬಿಗಿಟ್ಟೆ. “ಸರಿ ಸಾರ್, ನಾನು ಹೋಗ್ತಿàನಿ. ಇನ್ನೂ 3 ಪೊಟ್ಟಣ ಇದೆ. ಬೇಗ ಮನೆಗೆ ಹೋಗಬೇಕು. ಅವಳು ಕಾಯುತ್ತಾ ಇರುತ್ತಾಳೆ’ ಎಂದು ಕಡ್ಡಿ ಹಿಡಿದು ಹೊರಟರು.
ಅಂದಹಾಗೆ, ಆತ ಮನೆಯಲ್ಲಿ ಹೆಂಡತಿಯೊಡನೆ ಹಣ ಲೆಕ್ಕ ಮಾಡುವಾಗ ಖಂಡಿತಾ ಹಣ ಕಡಿಮೆ ಬಂದಿರೋಲ್ಲ. ಅದಕ್ಕೆ ನಾನೇ ಗ್ಯಾರಂಟಿ!
ನವೀನ್ ಕುಮಾರ್, ತುಮಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ