![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-415x276.jpg)
ಚಿನ್ನು ಮೊಲ ಮತ್ತು ಬೇಟೆ ನಾಯಿ
Team Udayavani, Jan 2, 2020, 4:37 AM IST
![aa-5](https://www.udayavani.com/wp-content/uploads/2020/01/aa-5-583x465.jpg)
ಒಮ್ಮೆ ಚಿನ್ನು ಮೊಲ ತನ್ನ ಆಹಾರವನ್ನು ಹುಡುಕುತ್ತ ಹೊರಟಿತ್ತು.
“ಹಾಯ…, ಹುಲುಸಾದ ಹುಲ್ಲು ಇಲ್ಲಿದೆ! ದಿನಾಲೂ ಇಲ್ಲಿಗೆ ಬಂದರೆ ಸಾಕು, ನೆಮ್ಮದಿಯಿಂದ ಹೊಟ್ಟೆ ತುಂಬಿಸಿಕೊಳ್ಳಬಹುದು.’ ಎಂದುಕೊಳ್ಳುವಷ್ಟರಲ್ಲಿ
“ಬೌ ಬೌ, ಬೌ’ ನಾಯಿಯೊಂದು ಬೊಗಳಿದ ಸದ್ದು ಕೇಳಿಸಿತು.
ಬೇಟೆನಾಯಿ ಬರುತ್ತಿರಬಹುದು ಎಂದುಕೊಂಡ ಮೊಲ ಹುಷಾರಾಗಿಬಿಟ್ಟಿತು. ಅದರ ಕಿವಿ ನಿಮಿರಿ ನಿಂತಿತು.
“ಬೌ ಬೌ ಬೌ’ ಮತ್ತೆ ಸದ್ದು ಕೇಳಿತು.
ಬರುತ್ತಿರುವುದು ಬರೀ ನಾಯಿಗಳು ಮಾತ್ರವಲ್ಲ, ಅದರ ಜೊತೆ ಬೇಟೆಗಾರರೂ ಇರಬಹುದು ಎಂದು ಚಿನ್ನು ಮೊಲಕ್ಕೆ ಅನುಮಾನ ಬಂದಿತು. ತಾನು ಅವರ ಬಲೆಗೆ ಬೀಳುವ ಮುನ್ನ ತಪ್ಪಿಸಿಕೊಳ್ಳಬೇಕೆಂದು ಓಡಲು ಶುರು ಮಾಡಿತು ಮೊಲ. ಓಡುವಾಗ ದಾರಿಯಲ್ಲಿ ಕುದುರೆಯೊಂದನ್ನು ನೋಡಿತು. ಅದು ಮೊಲಕ್ಕಿಂತಲೂ ವೇಗವಾಗಿ ಓಡುತ್ತಿತ್ತು. ಮೊಲ ಕುದುರೆಯನ್ನು ಕೂಗಿ ಕರೆದು “ಕುದುರೆಯಣ್ಣಾ ನನ್ನನ್ನು ಹೇಗಾದರೂ ಮಾಡಿ ಕಾಪಾಡು!’ ಎಂದು ವಿನಂತಿಸಿಕೊಂಡಿತು.
“ಏನಾಯ್ತು?’ ಕುದುರೆ ಕೇಳಿತು.
“ಬೇಟೆ ನಾಯಿಗಳು ನನ್ನನ್ನು ಅಟ್ಟಿಸಿಕೊಂಡು ಬರುತ್ತಿವೆ. ನನ್ನನ್ನು ನಿನ್ನ ಬೆನ್ನ ಮೇಲೆ ಕೂರಿಸಿಕೊಂಡು ಈ ಜಾಗದಿಂದ ಕರೆದೊಯ್ದು ನನ್ನ ಪ್ರಾಣ ಉಳಿಸು’ ಎಂದು ಕೇಳಿಕೊಂಡಿತು ಚಿನ್ನು ಮೊಲ.
ಕುದುರೆಯಣ್ಣ “ನಾನೀಗ ತುರ್ತಾಗಿ ಬೇರೆ ಜಾಗಕ್ಕೆ ಹೋಗುತ್ತಿದ್ದೇನೆ. ಆದ್ದರಿಂದ ನಿನಗೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ.’ ಎಂದು ಹೇಳಿ ಕುದುರೆ ವೇಗದಿಂದ ಮುಂದೋಡಿತು.
ಚಿನ್ನು ಮೊಲ ಇನ್ನೇನು ಮಾಡುವುದೆಂದು ಯೋಚಿಸುತ್ತಿದ್ದಾಗ ದಾರಿಯಲ್ಲಿ ಎತ್ತು ಎದುರಾಯಿತು.
“ಎತ್ತಣ್ಣ… ನನ್ನನ್ನು ಕಾಪಾಡು’ ಎಂದು ಚಿನ್ನು ಮೊಲ ನಡೆದಿದ್ದನ್ನೆಲ್ಲಾ ಹೇಳಿತು.
ಎತ್ತು “ಅಯ್ಯೋ ನಾನೀಗ ಹೊಲ ಉಳಲು ಹೋಗಬೇಕಿದೆ. ಇಲ್ಲದಿದ್ದರೆ ರೈತ ನನ್ನ ಮೇಲೆ ಕೋಪ ಮಾಡಿಕೊಳ್ಳುತ್ತಾನೆ’ ಎಂದಿತು.
ಮೊಲ ತನ್ನ ಓಟವನ್ನು ಮುಂದುವರಿಸಿತ್ತು. ಇತರರ ಸಹಾಯವನ್ನು ಕೇಳಿದರೆ ಸಮಯ ಹಾಳು ಎಂದದಕ್ಕೆ ಅರ್ಥವಾಯಿತು. ಇನ್ನು ಯಾರ ಸಹಾಯವನ್ನೂ ಕೇಳದೆ ಇದೇ ವೇಗದಲ್ಲಿ ಓಡಿದರೆ ತಾನು ಬೇಟೆನಾಯಿಗಳಿಂದ ಬಚಾವಾಗುತ್ತೇನೆ ಎಂಬುದನ್ನರಿತ ಮೊಲ ಓಡಿತು. ಓಡುತ್ತಾ ಓಡುತ್ತಾ ಬೇಟೆನಾಯಿಗಳಿಂದ ರಕ್ಷಣೆ ಪಡೆಯಿತು.
– ಮೇಘನಾ
ಟಾಪ್ ನ್ಯೂಸ್
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-415x276.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.