ಗೊಡಚಿ ಶ್ರೀ ವೀರಭದ್ರೇಶ್ವರ ಕ್ಷೇತ್ರ
Team Udayavani, Dec 15, 2018, 5:05 AM IST
ಹಿಂದೆ ರಾಮದುರ್ಗವನ್ನು ಆಳುತ್ತಿದ್ದ ಶಿಂಧೆ ವಂಶಸ್ಥರ ಕುಲದೈವ ಗೊಡಚಿಯ ವೀರಭದ್ರೇಶ್ವರ. ಸಂಸ್ಥಾನಿಕರ ಕಾಲದಿಂದಲೂ ಇಲ್ಲಿ ವೈಭವದ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಈ ಗಾಗಲೇ ಜಾತ್ರೆ ಆರಂಭವಾಗಿದ್ದು , 22ರಂದು ರಥೋತ್ಸವ ಜರುಗಲಿದೆ.
ಉತ್ತರ ಕರ್ನಾಟಕದ ಧರ್ಮಸ್ಥಳವೆಂದೇ ಖ್ಯಾತಿ ಪಡೆದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ ದೇವಸ್ಥಾನವು ನಾಡಿನ ತುಂಬೆಲ್ಲಾ ಭಕ್ತ ಸಮೂಹವನ್ನು ಹೊಂದಿದೆ.
ಈ ಹಿಂದೆ ರಾಮದುರ್ಗ ಸಂಸ್ಥಾನವನ್ನು ಶಿಂಧೆ ವಂಶಸ್ಥರು ಆಳುತ್ತಿದ್ದರು. ಗೊಡಚಿ ವೀರಭದ್ರೇಶ್ವರ, ಸಂಸ್ಥಾನದ ಕುಲದೈವವಾಗಿತ್ತು. ದಕ್ಷ ಬ್ರಹ್ಮನ ಸಂಹಾರ ಮಾಡಲೆಂದು ಪರಶಿವನ ಅನುಗ್ರಹದಿಂದ ಅವತರಿಸಿದ ವೀರಭದ್ರೇಶ್ವರ, ದಕ್ಷ ಬ್ರಹ್ಮ ಸಂಹಾರಕ್ಕಾಗಿ ರೌದ್ರಾವತಾರ ತಾಳಿ ಹೋರಾಡಿದ ವೀರ ಎಂಬುದನ್ನು ಇತಿಹಾಸ ತಿಳಿಸುತ್ತದೆ.
ದೇವಾಲಯದಲ್ಲಿ ವಿಜಯನಗರ ಹಾಗೂ ಚಾಲುಕ್ಯರ ವಾಸ್ತುಶಿಲ್ಪ ಮಾದರಿಯನ್ನು ಕಾಣಬಹುದು. ದೇವಸ್ಥಾನದ ಹೆಬ್ಟಾಗಿಲು ಚಾಲುಕ್ಯರ ವಾಸ್ತುಶಿಲ್ಪವನ್ನು ಹಾಗೂ ಗರ್ಭಗುಡಿಯು ವಿಜಯನಗರ ಕಲೆಯ ಶೈಲಿಯನ್ನು ನೆನಪಿಸುತ್ತದೆ. ದೇವಾಲಯವು ಹಲವು ವಿಸ್ಮಯಗಳಿಗೆ ಸಾಕ್ಷಿಯಾಗಿದ್ದು, ಭಕ್ತರು ಎಲ್ಲಾ ದಿನದಲ್ಲೂ ಆಗಮಿಸುತ್ತಾರೆ. ಅದರಲ್ಲೂ ಅಮಾವಾಸ್ಯೆ ಮತ್ತು ಹುಣ್ಣಿಮೆಗಳೆಂದು ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ಅತೀ ಎಂಬಷ್ಟು ಹೆಚ್ಚಿರುತ್ತದೆ.
ಭಕ್ತರು ಒಂದು ದಿನದಲ್ಲಿ ಹಿಂತಿರುಗುವದಿಲ್ಲ. ಐದು ದಿನಗಳ ಕಾಲ ಗೊಡಚಿಯಲ್ಲಿಯೇ ಬಿಡಾರ ಹೂಡುತ್ತಾರೆ. ಹೀಗಾಗಿ ಗಾಡಿ, ಟ್ರಾಕ್ಟರ್ ಸಾಲು ಸಾಲು, ನೋಡುವದೇ ಒಂದು ಹಬ್ಬ. ವರ್ಷಕ್ಕೊಮ್ಮೆ ಜರುಗುವ ಈ ಜಾತ್ರೆಯಲ್ಲಿ ಬಳುವಳಿಕಾಯಿ ಹಾಗೂ ಬಾರೆಹಣ್ಣಿನ ಮಾರಾಟ ಜೋರಾಗಿ ನಡೆಯುತ್ತದೆ. ಆದ್ದರಿಂದ ಈ ಜಾತ್ರೆಯನ್ನು ಬಳುವಳಿಕಾಯಿ ಜಾತ್ರೆ ಎಂದೂ ಕರೆಯುತ್ತಾರೆ. ಬೆಳವಲ ಹಣ್ಣಿನೊಳಗೆ ಬೆಲ್ಲ ಸೇರಿಸಿ ಮತ್ತೇ ಸೊಗಟಿಗೆ ತುಂಬಿ ಒಂದು ದಿನ ಹಾಗೆಯೇ ಇಡಬೇಕು. ಒಂದು ದಿನ ಪೂರ್ತಿ ಕಳೆದನಂತರ ಸೇವಿಸಿದರೆ ಉತ್ತರ ಕರ್ನಾಟಕದ ಹುಗ್ಗಿಯ ರುಚಿ ದೊರೆಯುತ್ತದೆ.
ಜಾತ್ರೆಗೆ ಬಂದ ಭಕ್ತರಿಗೆ ಮನರಂಜನೆ ನೀಡಲು ಹಲವಾರು ಪ್ರಸಿದ್ಧ ನಾಟಕ ಕಂಪನಿಗಳು ಇಲ್ಲಿಯೇ ನೆಲೆಯೂರಿ ನಾಟಕ ಪ್ರದರ್ಶನ ನೀಡುತ್ತಾರೆ.
ತಲುಪುವ ಮಾರ್ಗ
ಬೆಳಗಾವಿಯಿಂದ 87 ಕಿ.ಮೀ. ಹಾಗೂ ಾಮದುರ್ಗದಿಂದ 12 ಕಿ.ಮೀ. ಅಂತರದಲ್ಲಿ ಗೊಡಚಿ ಶ್ರೀ ಕ್ಷೇತ್ರ ಇದೆ. ಎಲ್ಲ ಕೇಂದ್ರ ಸ್ಥಳಗಳಿಂದ ಗೊಡಚಿಗೆ ಬಸ್ ಸೌಲಭ್ಯವಿವೆ. ಬದಾಮಿಯ ರೈಲ್ವೆ ನಿಲ್ದಾಣವು ಅತೀ ಸನಿಹದಲ್ಲಿ ಇರುತ್ತದೆ.
ಜಾತ್ರೆ
ಪ್ರತಿವರ್ಷ ಡಿಸೆಂಬರ್ ತಿಂಗಳಿನಲ್ಲಿ ಹೊಸ್ತಿಲು ಹುಣ್ಣಿಮೆಯಂದು ಜಾತ್ರೆ ನಡೆಯುತ್ತದೆ. ಹಿಂದಿನಿಂದಲೂ ಸಂಸ್ಥಾನಿಕರು ಜಾತ್ರೆಯನ್ನು ಅತೀ ವೈಭವದಿಂದ ಆಚರಿಸುತ್ತ ಬಂದಿದ್ದಾರೆ. ಈಗಲೂ ಈ ಜಾತ್ರೆ ಸಂಸ್ಥಾನಿಕರ ವಂಶಸ್ಥರಾದ ಶಿಂಧೆ ಮನೆತನದ ಮುಂದಾಳತ್ವದಲ್ಲಿ ನಡೆಯುತ್ತದೆ. ಡಿಸೆಂಬರ್ 12ರಂದು ಗೊಡಚಿ ಶ್ರೀವೀರಭದ್ರೇಶ್ವರ ದೇವಸ್ಥಾನದ ವೀರಗಾಸೆ ವೀರಪುರವಂತರ ಸಮೇತವಾಗಿ ಪಲ್ಲಕ್ಕಿ ಉತ್ಸವವು ತೊರಗಲ್ ಭೂತನಾಥ ದೇವಸ್ಥಾನಕ್ಕೆ ಹೋಗುತ್ತದೆ. ನಂತರ ಜಾತ್ರೆಯ ಕಾರ್ಯಕ್ರಮಗಳು ಪ್ರಾರಂಭಗೊಳ್ಳುತ್ತವೆ.
ಡಿಸೆಂಬರ್ 19 ರಿಂದ 21ರ ವರೆಗೆ ಸಾಯಕಾಲ ಗೊಡಚಿಯಲ್ಲಿ ಸಣ್ಣತೇರು ಉತ್ಸವ ಜರುಗುವದು. ಡಿಸೆಂಬರ್ 22ರಂದು ಮಧ್ಯರಾತ್ರಿ 12ಗಂಟೆಗೆ ಹನ್ನೊಂದು ಜನ ಶಾಸಿŒಗಳಿಂದ ಶ್ರೀವೀರಭದ್ರಸ್ವಾಮಿಯ ಹಾಗೂ ಶ್ರೀಭದ್ರಕಾಳಿ ಮಾತೆಗೆ ಮಹಾರುದ್ರಾಭಿಕ್ಷೇಕ, ಸಹಸ್ರ ಬಿಲ್ವಾರ್ಚನೆ, ಅಮ್ಮನವರಿಗೆ ಕುಂಕುಮಾರ್ಚನೆ, ಮಹಾಮಂಗಳಾರತಿ ಜರುಗುವದು. ಸಂಜೆ 5ಗಂಟೆಗೆ ಮಹಾರಥೋತ್ಸವ ಅತೀ ವಿಜೃಂಭಣೆಯಿಂದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಲಿದೆ.
ಜಾತ್ರೆಯ ಐದನೆಯ ದಿನ ಅಂದರೆ ಡಿಸೆಂಬರ್ 26ರಂದು ಸಂಜೆ ರಥಧ ಕಳಸ ಇಳಿಸಿದ ನಂತರ, 6ಗಂಟೆಗೆ ಲಕ್ಷದೀಪೋತ್ಸವ ಜರುಗಲಿದೆ. ಲಕ್ಷದೀಪೋತ್ಸವದಂದು ಸಾವಿರಾರು ಭಕ್ತರು ಆಗಮಿಸಿ ಹರಕೆಯ ದೀಪ ಹಚ್ಚುವದು ಇಲ್ಲಿನ ವಿಶೇಷವಾಗಿದೆ. ವೀರಗಾಸೆ ಪುರವಂತರ ವೀರಾವೇಶ ಕುಣಿತಕ್ಕೆ ಗೊಡಚಿ ಶ್ರೀ ಕ್ಷೇತ್ರ ಪ್ರಖ್ಯಾತಿ ಪಡೆದುಕೊಂಡಿದೆ.
ಸುರೇಶ ಗುದಗನವರ