ಕೆಂಜಗಾಪುರದ ಶ್ರೀವೀರಭದ್ರೇಶ್ವರ
Team Udayavani, Feb 24, 2018, 12:01 PM IST
ಶಿವಗಣಗಳಲ್ಲಿಯೇ ಅತಿ ವಿಶಿಷ್ಟ ಶಕ್ತಿಯುಳ್ಳ ದೇವರು ಅಂದರೆ ಶ್ರೀ ವೀರಭದ್ರೇಶ್ವರ. ಈ ದೇವರು, ನಂಬಿದ ಭಕ್ತರನ್ನು ಸಂರಕ್ಷಿಸಿ ಬದುಕಿಗೆ ಭದ್ರತೆ ಒದಗಿಸುತ್ತಾನೆಂಬ ಪ್ರತೀತಿ ಇದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಯಡೇಹಳ್ಳಿ ಸನಿಹದ ಕೆಂಜಗಾಪುರದ ಶ್ರೀವೀರಭದ್ರೇಶ್ವರ ಸ್ವಾಮಿ, ಭಕ್ತರಿಗೆ ಶಕ್ತಿ ತುಂಬಿ ಮುನ್ನಡೆಸುವ ದೇವರೆಂದೇ ಹೆಸರಾಗಿದ್ದಾನೆ.ಪ್ರಾಚೀನ ಐತಿಹಾಸಿಕ ಮಹತ್ವವುಳ್ಳ ಈ ದೇವಾಲಯ ಅತ್ಯಂತ ಶಿಥಿಲಾವಸ್ಥೆ ಹೊಂದಿದ್ದು. ಭಕ್ತರ ಒಗ್ಗಟ್ಟಿನ ಪರಿಶ್ರಮದ ಫಲವಾಗಿ ಜೀರ್ಣೋದ್ಧಾರ ಆರಂಭಿಸಿದ ಕೇವಲ ಒಂದೂವರೆ ವರ್ಷದಲ್ಲಿಯೇ ಹೊಸ ರೂಪ ಪಡೆದು ನಿಂತಿದೆ.
ವಿಜಯನಗರದ ಅರಸರಿಂದ ಪೂಜೆ
ಸದಾ ಹರಿಯುವ ಜಲ ರಾಶಿಯ ಸುಂದರ ಎತ್ತರದ ದಿಂಬದ ಮೇಲೆ ನಿರ್ಮಾಣವಾಗಿರುವ ಈ ದೇಗುಲ ವಿಜಯನಗರದ ಅರಸರ ಕಾಲದಲ್ಲಿ ಜೀರ್ಣೋದ್ಧಾರಗೊಂಡ ಬಗ್ಗೆ ದಾಖಲೆ ಇದೆ. ಇದನ್ನು ಕ್ರಿ.ಶ.1,419ರ ಜನವರಿ 12ರಂದು ವಿಜಯನಗರದ ಅರಸ ಪ್ರತಾಪ ಪ್ರೌಢ ದೇವರಾಯ ಪ್ರತಿಷ್ಠಾಪಿಸದ ಎಂದು ಶಾಸನದಿಂದ ತಿಳಿದು ಬರುತ್ತದೆ. ವಿಜಯನಗರದ ಶೈಲಿಯಲ್ಲಿರುವ ನಿರ್ಮಾಣವಾಗಿರುವ ಈ ದೇಗುಲವನ್ನು ಮಲೆನಾಡಿನ ಈ ಪ್ರದೇಶಕ್ಕೆ ಹೊಂದಿಕೆಯಾಗುವಂತ ರಚಿಸಲಾಗಿದೆ.
ಆಕರ್ಷಕ ವಾಸ್ತು ಶೈಲಿ
ಈಗ ಹೊರನೋಟಕ್ಕೆ ಕಾಣುವ ಕಾಂಕ್ರಿಟ್ ಕಟ್ಟಡದ ಒಳಭಾಗದಲ್ಲಿ ಸಂಪೂರ್ಣ ಶಿಲಾಮಯ ಮೂಲ ದೇವಾಲಯವಿದೆ. ದೇವಾಲಯವು ಮುಖಮಂಟಪ, ಗರ್ಭಗೃಹ ಹಾಗೂ ಪ್ರದಕ್ಷಿಣಾ ಪಥವನ್ನು ಹೊಂದಿದೆ. ಮುಖ ಮಂಟಪದಲ್ಲಿ ನಾಲ್ಕು ಆಕರ್ಷಕವಾದ ಚಿತ್ರಗಳ ಕೆತ್ತನೆಯುಳ್ಳ ಶಿಲಾ ಕಂಬಗಳಿವೆ. ಸುತ್ತಲೂ ಭಕ್ತರು ಕುಳಿತುಕೊಳ್ಳಲು ಅನುಕೂಲವಾಗುವಂತೆ ರûಾಸನವಿದೆ. ಮುಖ ಮಂಟಪದಲ್ಲಿರುವ ಭುವನೇಶ್ವರಿಯಲ್ಲಿ ಅಷ್ಟದಿಕಾ³ಲಕರ ಉಬ್ಬು ಶಿಲ್ಪಗಳು ಆಕರ್ಷಕವಾಗಿವೆ. ದೇವಾಲಯದ ಪ್ರವೇಶ ದ್ವಾರದ ಇಕ್ಕೆಲದಲ್ಲಿ 4 ಕಂಬಗಳಲ್ಲಿ ಸಿಂಹದ ಶಿಲ್ಪವಿದೆ. ದೇಗುಲದ ಸುತ್ತಲಿನ ಹೊರ ಮೈಯಲ್ಲಿ ಬಗೆ ಬಗೆಯ ಶಿಲಾ ಮೂರ್ತಿಗಳಿದ್ದು ರಾಮಾಯಣ, ಮಹಾಭಾರತ ಮತ್ತು ಪುರಾಣದ ಕಥಾನಕದ ಚಿತ್ರಗಳಿವೆ.
ಕಣ್ಣುಗಳನ್ನು ಕಾಪಾಡುವ ದೇವರು
ದೇವಾಲಯದ ಸುತ್ತಲೂ ಪರಿವಾರ ದೇವತೆಗಳಿದ್ದು ಈಶಾನ್ಯದಲ್ಲಿ ಚೌಡಮ್ಮ, ಪಶ್ಚಿಮದಲ್ಲಿ ಕಂಗಳ ವೀರಪ್ಪಸ್ವಾಮಿ, ಮುಂಭಾಗದ ಬಲಗಡೆ ಈಶ್ವರ ದೇವಾಲಯಗಳಿವೆ. ಇಲ್ಲಿನ ಕಂಗಳ ವೀರಪ್ಪಸ್ವಾಮಿ ಕಣ್ಣಿನ ಬೇನೆ ಮತ್ತು ದೃಷ್ಠಿದೋಷಕ್ಕೆ ಸಂಭಂದಿಸಿದ ಕಾಯಿಲೆಗಳಿಗೆ ಭಕ್ತರು ಹರಕೆ ಹೊರುತ್ತಾರೆ.
ದೇವಾಲಯಕ್ಕೆ ವಿಜಯನಗರದ ಅರಸರು ಮತ್ತು ಕೆಳದಿರಾಣಿ ಚೆನ್ನಮ್ಮಾಜಿ ಉಂಬಳಿ ನೀಡಿದ ದಾಖಲೆ ಇದೆ. ಬಹು ಹಿಂದಿನಿಂದ ರಾಜಾಶ್ರಯ ಪಡೆದು ಉಛಾÅಯ ಸ್ಥಿತಿ ಹೊಂದಿದ ಬಗ್ಗೆ ಪುರಾವೆಗಳಿವೆ. ಈ ದೇಗುಲಕ್ಕೆ ಎಲ್ಲಾ ಮತಧರ್ಮ ಹಾಗೂ ಜಾತಿಯ ಭಕ್ತರು ಆಗಮಿಸಿ ಪೂಜೆ ಸಲ್ಲಿಸುವುದು ವಿಶೇಷ. ಅಷ್ಟಮಂಗಲ ಪ್ರಶ್ನಾ ಚಿಂತನ ಕಾರ್ಯಕ್ರಮದಲ್ಲಿ ದೇವಾಲಯವು ಸುಮಾರು 2,500 ವರ್ಷಗಳಷ್ಟು ಹಿಂದೆ ಮೃಚ್ಛೇಂದ್ರನಾಥ ಯೋಗಿಗಳ ನೆಲೆಯಾಗಿತ್ತೆಂದು ತಿಳಿದು ಬಂದಿದೆ
ನಿತ್ಯ ಪೂಜೆ ವರ್ಷವಿಡೀ ಉತ್ಸವ
ಈ ದೇವರಿಗೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಪೂಜೆ ಮತ್ತು ನೈವೇದ್ಯ ನಡೆಯುತ್ತದೆ. ಯುಗಾದಿ ಹಬ್ಬದಂದು ವಿಶೇಷ ಬಲಿ ಮತ್ತು ಪೂಜೆ, ಶ್ರಾವಣ ಮಾಸದಂದು ನಿತ್ಯ ರುದ್ರಾಭಿಷೇಕ, ಪ್ರತಿ ಶ್ರಾವಣ ಸೋಮವಾರ ವಿಶೇಷ ಪೂಜೆ, ಸಾಮೂಹಿಕ ಅನ್ನ ಸಂತರ್ಪಣೆ, ರುದ್ರ ಹೋಮ ,ವಿವಿಧ ಮಠಾಧೀಶರಿಂದ ಧಾರ್ಮಿಕ ಸಭೆ ನಡೆಯುತ್ತದೆ.ಆಶ್ವಯುಜ ಮಾಸದಲ್ಲಿ ನವರಾತ್ರಿ ಉತ್ಸವ, ವಿಜಯದಶಮಿಯಂದು ಪಲ್ಲಕ್ಕಿ ಸೇವೆ, ದೀಪಾವಳಿಯಂದು ಗ್ರಾಮ ಪೂಜೆ, ಶಿವರಾತ್ರಿಯಂದು ದಿನವಿಡೀ ಅಭಿಷೇಕ, ಅರ್ಚನೆ ನಡೆಯುತ್ತದೆ.
ಜೀರ್ಣೋದ್ಧಾರ
ಸುಮಾರು 5-6 ವರ್ಷಗಳ ಹಿಂದಿನವರೆಗೂ ದೇವಾಲಯದ ಮುಂಭಾಗ ಮತ್ತು ಎಡಭಾಗದ ಪ್ರದೇಶ ಕಲ್ಲು, ಪೊದೆಗಳಿಂದ ಕೂಡಿತ್ತು. ಈ ಸ್ಥಳವನ್ನು ಸಮತಟ್ಟುಗೊಳಿಸಿ ಮುಂಭಾಗದಲ್ಲಿ ಆಕರ್ಷಕ ಉದ್ಯಾನ, ಶೌಚಾಲಯ, ವಾಹನ ನಿಲುಗಡೆ ಮೈದಾನ, ಸುಮಾರು 15 ಲಕ್ಷ ರೂ.ವೆಚ್ಚದಲ್ಲಿ ಸುಸಜ್ಜಿತ ಅಡುಗೆ ಮನೆ, ಸಭಾಂಗಣ ನಿರ್ಮಿಸಲಾಗಿದೆ.
ಪ್ರತಿ ವರ್ಷ ಹೋಳಿ ಹುಣ್ಣಿಮೆಯಂದು ಮಹಾರಥೋತ್ಸವ ನಡೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಇದೇ ಮಾರ್ಚ್ 1 ರಂದು ಮಹಾರಥೋತ್ಸವ ನಡೆಯಲಿದೆ. ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ರಥೋತ್ಸವ ಮತ್ತು ಕೆಂಡದರ್ಚನೆ, ಪುರವಂತರ ಕುಣಿತಗಳನ್ನು ಕಣ್ಣಾರೆ ನೋಡಿ ಮನದುಂಬಿಕೊಳ್ಳುತ್ತಾರೆ.
ಫೋಟೋ-ಮತ್ತು ಲೇಖನ -ಎನ್.ಡಿ.ಹೆಗಡೆ ಆನಂದಪುರಂ