ಈ ದಿನ ನನ್ನ ದಿನ ಸುತ್ತಲೆಲ್ಲ ನನ್ನ ಜನ

ಅವಳನ್ನೇಕೆ ಇನ್ನೂ ಎರಡನೆಯ ದರ್ಜೆ ಪ್ರಜೆ ಎಂಬಂತೆ ನೋಡಲಾಗುತ್ತಿದೆ?

Team Udayavani, Mar 8, 2020, 6:09 AM IST

ಈ ದಿನ ನನ್ನ ದಿನ ಸುತ್ತಲೆಲ್ಲ ನನ್ನ ಜನ

ಸಹಜವಾಗಿ ಮಹಿಳಾ ವಿಚಾರ ಅತ್ಯಂತ ಹೆಚ್ಚಿನ ಒತ್ತನ್ನು ಇವತ್ತು ಅಪೇಕ್ಷಿಸುತ್ತದೆ. ಮಹಿಳೆಯೆಂದರೆ ಏನು, ಕಡೆಗೂ? ಅವಳನ್ನೇಕೆ ಎರಡನೆಯ ದರ್ಜೆ ಪ್ರಜೆ ಎಂಬಂತೆ ನೋಡಲಾಗುತ್ತಿದೆ? ನಮ್ಮ ಜಾನಪದದಿಂದ ತೊಡಗಿ ಎಲ್ಲ ಕಲಾಪ್ರಕಾರಗಳಲ್ಲಿಯೂ ಅವಳ ಕೊಡುಗೆ ಏನು, ಸಂವೇದನೆ ಏನು, ಅವಳು ಚಿತ್ರಿತಳಾದ ಬಗೆ ಹೇಗೆ? ಅವಳು ತನ್ನ ಬದುಕನ್ನು ನಿಭಾಯಿಸಿದ ಬಗೆ ಹೇಗೆ? ಅವಳ ಹೋರಾಟಗಳು ಏಕೆ ಅವಜ್ಞೆಗೊಳಗಾಗಿದೆ?

ನಮಗೆ ವೋಟಿನ ಹಕ್ಕು ಇದ್ದರೂ ಸಮಾನತೆಯಲ್ಲಿ ಮಾತ್ರ ಪುರುಷರು ಹೆಚ್ಚು ಸಮಾನರು ಎಂಬಂತೆ ಇಂಗಿತವಾಯಿತೇಕೆ? ಹಾಗೆ ಕಂಡರೆ ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ಎಂಬ ಶಬ್ದವೇ “ಪುರುಷ ಪ್ರಾಧಾನ್ಯ ಪಿತ್ತ’ದ ಏರುವಿಕೆಗೆ ಒಂದು ಘನ ಉದಾಹರಣೆಯಲ್ಲವೆ! ಅರ್ಥವಾಗಬೇಕಾದರೆ ಇದನ್ನೇ “ರಾಜಕೀಯದಲ್ಲಿ ಪುರುಷರಿಗೆ ಮೀಸಲಾತಿ’ ಎಂದಿಟ್ಟುಕೊಳ್ಳಿ. ಆಗ ತಿಳಿಯುತ್ತದೆ, ಇದು ಎಷ್ಟು ವಿಚಿತ್ರವಾದದ್ದು, ಎಷ್ಟು ಅಬದ್ಧವಾದದ್ದು ಎಂದು. ನಾವು ಮಹಿಳೆಯರು ಪ್ರಜೆಗಳೇ ಆಗಿರುವಾಗ ನಮಗೆ ಮೀಸಲಾತಿಯ ಮಾತನಾಡುವವರು ಯಾವ ದೊಣ್ಣಪ್ಪ ನಾಯಕರು? 30% , 25% ಅಂತೆಲ್ಲ ಚೌಕಾಸಿ ಮಾಡಲು ಅವರು ಯಾರು? ಪ್ರಜೆಗಳಲ್ಲಿ ಹೆಣ್ಣುಗಂಡು ಎಂಬ ಭೇದ ಇಲ್ಲ. ದೇಶ ಎಲ್ಲರಿಗೂ ಸೇರಿದ್ದು ತಾನೆ? ನಮಗೆ ತಿಳಿಯದಂತೆ ನಮ್ಮ ಜಾಗಗಳನ್ನು ಆಕ್ರಮಿಸಿಕೊಂಡವರು, ಅವರು. ಚೌಕಾಶಿಗೆ ಬಂದರೆ ಸರಿ, ಕೇಳಿ, ನಮಗೆ ವಾಸ್ತವವಾಗಿ ಮೂವತ್ತು ಅಲ್ಲ, ಐವತ್ತು ಬೇಕು. ನಾವದಕ್ಕೆ ಬಾಧ್ಯರು. ಅದೇನು, ಭಾರತಾಂಬೆ ಪುರುಷರ ತೊಟ್ಟಿಲನ್ನು ಆಕಾಶದಲ್ಲಿ ಕಟ್ಟಿ ತೂಗಿರುವಳೆ? ಇದನ್ನೆಲ್ಲ ಇನ್ನೂ ತಿಳಿಸಿ ಹೇಳಬೇಕಾದ ಸ್ಥಿತಿ ನಮಗಿದೆಯಲ್ಲ, ಇದು ಶೋಚನೀಯ.

ಹೆಂಗಸರಿಗೆ ಅನುಭವ ಸಾಲದು ಎನ್ನುವ ಮಾತಿದೆ, ಈಗಲೂ. ಕೇಳಿದ್ದನ್ನು ವಿಮರ್ಶಿಸದೆ ಒಳಗೆಳೆದುಕೊಳ್ಳುವ ವಯಸ್ಸಿನಲ್ಲಿ ಅದು ಸತ್ಯವೆಂದು ನಾನೂ ಕೂಡ ಎಣಿಸಿದ್ದೆ. ಆದರೆ, ನಿಧಾನವಾಗಿ ಯೋಚಿಸುತ್ತ ಹೋದಂತೆ- ಅನುಭವವೆಂದರೆ ಏನು ಕಡೆಗೂ? ಪುರುಷ ನಿರ್ಮಿತ ವ್ಯವಹಾರ ಪ್ರಪಂಚದ ಅನುಭವವೇ? ಅದು ಮಾತ್ರವೆ? ಮಹಿಳೆ ಬದುಕುತ್ತಿರುವ‌ ನೆಲೆ, ಅದು ನೀಡುವ ಅನುಭವ ಅನುಭವವಲ್ಲವೆ? ಅಂತೆಲ್ಲ ಜಿಜ್ಞಾಸೆಗಳೆದ್ದುವು. ನಾನು ನನ್ನ ನೆಲೆಯಿಂದ ಎಲ್ಲಿಯೇ ಬದುಕಿಕೊಂಡಿರಲಿ, ಆ ಬದುಕಿಗೆ ಬೆಲೆಯಿದೆ, ಭಾವನೆಗಳಿವೆ. ಎಂದಿಗೂ ಅದು ಎರಡನೆಯ ತರಗತಿಯದಲ್ಲ. ಈಗ ಮಹಿಳೆಯರೂ ಏನು ಸಾಮಾನ್ಯರಲ್ಲ. ಉದ್ಯೋಗ-ಹಣ ಎಲ್ಲ ಅವರ ಕಣ್ಣು ಮೇಲಾಗಿಸಿದೆ ಎಂಬ ದೂರಿದೆ. ಆದರೆ, ನಾವು ಚರ್ಚೆ ಮಾಡುವ ಕೇಂದ್ರ ವಿಷಯ ಇದಲ್ಲ. ಲಿಂಗತಾರತಮ್ಯದ ಪ್ರಶ್ನೆಯಲ್ಲಿರುವುದು ಪ್ರಧಾನವಾಗಿ ಮೇಲುಕೀಳಿನ ಪ್ರಶ್ನೆ. ಈ ಪ್ರಶ್ನೆಯ ಮೂಲ ಯಾವುದು? ಆರ್ಥಿಕವಾಗಿ ಸ್ವತಂತ್ರ ಮಹಿಳೆಯರಾದರೂ ಯಾರು? ನಗರ ಮತ್ತು ಪಟ್ಟಣಗಳಲ್ಲಿನ ಕೆಲ ಮಹಿಳೆಯರು. ಅವಕಾಶ ವಂಚಿತರೂ ಮನೆಯಲ್ಲಿ ಇರುವುದನ್ನೇ ಇಷ್ಟಪಡುವವರೂ ಅಸಂಖ್ಯ ಮಂದಿ ಇದ್ದಾರೆ. ಆರ್ಥಿಕ ಸಬಲತೆ ಒಂದು ಆಧಾರ ಅಷ್ಟೆ.

ಮೂಲದೋಷ ಹುದುಗಿರುವುದು, ಗ‌ಂಡಿನ ಮನಸ್ಸಿನಲ್ಲಿ. ತನ್ನ ಕಣ್ಣು ಮೇಲಾದರೆ ಅದು ಸರಿ, ಅವಳದಾದರೆ ತಪ್ಪು, ಅವಳ ಕಣ್ಣು ನೆಲ ನೋಡುತ್ತಿರಬೇಕು ಎಂಬ ಒಳಾಂತರದ ಭಾವ ಇದೆಯಲ್ಲ, ಅಲ್ಲಿ. ವಾಸ್ತವವಾಗಿ, ಯಾವ ತಾರತಮ್ಯವೂ ಇಲ್ಲದೆ, ಹೆಣ್ಣುಗಂಡು ಇಬ್ಬರಿಗೂ ಕಣ್ಣು ಮೇಲಾಗುವುದೇ ತಪ್ಪಷ್ಟೆ?

ದುಃಖವೆಂದರೆೆ ಮುಖ್ಯವಾಗಿ ಪುರುಷರಿಗೆ ತಾವು ಎಷ್ಟು ಒಳ್ಳೆಯವರೆಂಬುದೇ ತಿಳಿಯದಿರುವುದು. ಪೌರುಷವನ್ನು ಅವರು ತಪ್ಪಾಗಿ ಅರ್ಥಮಾಡಿಕೊಂಡಿರುವುದು. ಅವರೀಗ ತಮ್ಮ ನಿಜವಾದ ಪುರುಷ ಗುಣಗಳನ್ನು ಎಚ್ಚರಿಸಿಕೊಳ್ಳಲಿ. ಅವರಲ್ಲಿ ಭದ್ರವಾಗಿ ಗೂಡುಕಟ್ಟಿರುವ ಶ್ರೇಷ್ಠತೆಯ ಭ್ರಮೆ ಒಮ್ಮೆ ಮಾಯವಾಗಲಿ. ಅಷ್ಟಾದಲ್ಲಿ ಪರಿಸ್ಥಿತಿ ಎಷ್ಟೋ ನೇರ್ಪುಗೊಂಡೀತು. ಆದರೆ, ಅದೇನು ತನ್ನಷ್ಟಕ್ಕೆ ಮಾಯವಾಗುವುದೆ? ಮನಸ್ಸಿನ ಆಳಪಾತಾಳದವರೆಗೂ ಇಳಿದ ಬೇರು ಅದು. ಬುಡಮೇಲು ಮಾಡಲು ಅಂಥಾ ಭಗೀರಥ ಯತ್ನ ವೇ ಆಗಬೇಕು. ಹಾಗಾದರೆ, ಹೆತ್ತವರ ಹೊಣೆ ಎಷ್ಟಿರಬೇಕಾಯ್ತು ! ಅಂತಶ್ಚಕ್ಷುವನ್ನು ಅರಳಿಸುವ ಕ್ರಿಯೆಯನ್ನು ಅವರು ತಮ್ಮ ಗಂಡುಮಕ್ಕಳ ಬಾಲ್ಯದಿಂದಲೇ ಆರಂಭಮಾಡಬೇಕು. ಅದುವೇ ಬದಲಾವಣೆಯ ಮೊತ್ತಮೊದಲಿನ ಮೆಟ್ಟಿಲು. ಆದರೆ, ಅದಕ್ಕೂ ಮುಂಚೆ ಹೆತ್ತವರೇ ತಮ್ಮನಾವರಿಸಿಕೊಂಡ ಭ್ರಮೆಯಿಂದ ಮುಕ್ತರಾಗಬೇಕು. ಅಡಿಪಾಯದಲ್ಲೇ ದೋಷವಿದೆ ಎಂಬ ಅರಿವು ಅವರಿಗೆ ಆಗುವುದಕ್ಕೇ ಇನ್ನೆಷ್ಟು ಶತಮಾನಗಳು ಜಾರಿ ಹೋಗಬೇಕೋ. ಎಂದ ಮೇಲೆ?

ಇಷ್ಟೆಲ್ಲ ಇದ್ದೂ ನಾವು ಮಹಿಳೆಯರು ಎಂಬ ವರ್ಗ ಇನ್ನೂ ನಮ್ಮ ಜೀವನ ಪ್ರೀತಿಯನ್ನು ನಂದಿಸಿಕೊಳ್ಳದೆ ಮುನ್ನಡೆಯುತ್ತಿದೆ. ಬದುಕನ್ನೇ ಫಿಲಾಸಫಿಯಾಗಿ ಸ್ವೀಕರಿಸಿದ ವಿಶೇಷ‌ದವರು ನಾವು. ಗಾಢ ನೋಡಿದರೆ, ಸ್ತ್ರೀಲೋಕವೆಂಬುದೇ ಜೆನ್‌ ತತ್ವಾಧಾರಿತ. ಬದುಕಿನ ನಾನಾ ಗೊಂದಲ ಜಗಳ ರಾದ್ಧಾಂತಗಳಲ್ಲಿ ಪ್ರೀತಿವಿಶ್ವಾಸದ ಹುಯಿಲಿನಲ್ಲಿ ಬದುಕನ್ನು ಕಡೆಯುವ ವರ್ಗ ನಮ್ಮದು. ಜಗತ್ತು ಸತ್ಯವೋ ಮಿಥ್ಯವೋ, ಅದಲ್ಲ ನಮಗೆ ಮುಖ್ಯ. ನಮ್ಮ ಬದುಕನ್ನಾಗಲೀ ನಮ್ಮ ಭಾವನೆಯನ್ನಾಗಲೀ ಈ ಜಗತ್ತನ್ನಾಗಲೀ ಮಿಥ್ಯವೆನ್ನಲು ಮನಬಾರದೆ, ಸತ್ಯವೆನ್ನಲು ಯಾವ ಗ್ಯಾರಂಟಿಯೂ ಇಲ್ಲದೆ ಬದುಕುವ ನಾವು ನಿತ್ಯಾತ್ಮರು. “ಕೇವಲ ಧ್ಯಾನಕ್ಕಾಗಿ’ ತುಡಿವವರಲ್ಲ. ಬದುಕಿನ ಮೂಲಕ ಕೇವಲ ಧ್ಯಾನಕ್ಕೆ ಸಂದು ಹೋದವರು. ಹಿಮಾಲಯಕ್ಕೆ ಓಡಿ ಹೋಗುವವರಲ್ಲ. (ಹಿಮಾಲಯಕ್ಕೆ ಓಡಿಹೋಗಲು ನಮಗೆ ಭಯವೂ ಇದೆ. ಯಾರ ಭಯ ಅಂದರೆ ಸನ್ಯಾಸಿಗಳ ಭಯ. ಅವರಿಗೆ ಮೇನಕೆಯೇ ಬೇಕೆಂದಿದೆಯೆ? ಇಲ್ಲವಲ್ಲ). ಕೆಲಸ ಕೆಲಸ ಕೆಲಸದ ಮೂಲಕ ಬದುಕಿನ ಧ್ಯಾನ ಮಾಡುವವರು. ಆ ರೀತಿಯಲ್ಲಿ ತುಕಾರಾಮನ ಹೆಂಡತಿಯ ವಂಶಸ್ಥರು. ಕತೆ ಗೊತ್ತಷ್ಟೆ? ತುಕಾರಾಮನನ್ನು ಸ್ವರ್ಗಕ್ಕೆ ಒಯ್ಯಲು ದೇವವಿಮಾನ ಬಂತು. ಆತ ಹೆಂಡತಿಯನ್ನು ಕರೆದ. ಆಕೆ ಹೊರಡಲಿಲ್ಲ. ಮಕ್ಕಳನ್ನು ಬಿಟ್ಟು ಬರಲಾರೆ ಎಂದ ಧೀರೆ ಅವಳು. ಹಾಗೆ, ಎಲ್ಲ ರೀತಿಯಲ್ಲಿಯೂ ನಾವು ಸ್ತ್ರೀಸತ್ವದವರು, ನಿಜವಾಗಿಯೂ ಪ್ರಪಂಚದ ಬೆಟರ್‌ಹಾಫ್!

ನಮ್ಮ ನಾಟಕದ ಸದಾರಮೆ ಮುಂತಾದ ಅನೇಕ ಪಾತ್ರಗಳನ್ನು ಕತೆ ಇತಿಹಾಸ ವರ್ತಮಾನದ ನಿಜಘಟನೆಗಳನ್ನೂ ಓದಿದಾಗ ಕೇಳಿದಾಗೆಲ್ಲ ಮತ್ತೆಮತ್ತೆ ಮನಸ್ಸಿಗೆ ತಟ್ಟುವುದು ಹೆಣ್ಣು ತನ್ನ ಬದುಕನ್ನು ಜಾಣ್ಮೆಯಿಂದ ನಿಭಾಯಿಸುವ‌ ಕ್ರಮವೇ. ಆದರೆ, ಇದು ಎಲ್ಲಿಯವರೆಗೆ? ಇನ್ನೂ ಎಷ್ಟು ಕಾಲ?

ಈಗಲೂ
ಮಲ್ಲೀಗೆ ಹೂವೇ ಇಲ್ಯಾಕೆ ನಿಂತಿರುವೆ,
ಇಲ್ಯಾಕೆ ನಿಂತಿರುವೆ, ಒಳಹೋಗು,
ಇಲ್ಯಾಕೆ ನಿಂತಿರುವೆ ಒಳಹೋಗು ಮಗಳೇ,
ಎಲ್ಲಾರ ಕಣ್ಣು ನಿನ ಮ್ಯಾಲೆ…
ಎಂಬುದು ಪೂರ್ತಿ ಮಾಯವಾಗಿಲ್ಲ. ಎಲ್ಲಾರ ಎಂದರೆ ಯಾರ? ಹೇಳಲೇಬೇಕಿಲ್ಲ ತಾನೆ?
ನಾವು ಬರಿಯ ಎಚ್ಚರದಿಂದ ನಿಜವಾದ ಜಾಗೃತಿಯ ಕಡೆಗೆ ಸಾಗುವ ಗಳಿಗೆ ಬಂದೇ ಬಿಟ್ಟಿದೆ.
ಕಾಲ ಬದಲಾಗಿದೆ ಎನ್ನುತ್ತೇವೆ, ಆಗಿದೆಯೇ? ಅಥವಾ ರೂಪಾಂತರಗೊಂಡಿದೆಯೆ?
ವೈಕುಂಠದ ಏಳು ಬಾಗಿಲುಗಳು ತೆರೆಯುವುದೆಂದರೆ ಅರಿವಿನ ಬಾಗಿಲುಗಳು ತೆರೆದುಕೊಳ್ಳುತ್ತ ಹೋದಂತೆ. ಆದರೆ, ಹೋಗಿಹೋಗಿ ನಾವು ಅಲ್ಲಿ ಕಾಣುವುದು ಶಯನದಲ್ಲಿರುವ ವಿಷ್ಣು ಮತ್ತು ಅವನ ಕಾಲು ಒತ್ತುವ ಲಕ್ಷ್ಮೀಯ ಚಿತ್ರವಾದರೆ ! ಆ ಚಿತ್ರವನ್ನು ಬದಲಿಸೋಣ. ಹೇಗೆ? ಆ ಚಿತ್ರ ಹೇಗಿರಬೇಕು? ಜೊತೆಜೊತೆ ಕುಳಿತು ಸಲ್ಲಾಪಿಸುವಂತೆ ಇದ್ದರೆ? ಇನ್ನಾದರೂ ನಮ್ಮ ನಮ್ಮ ಇಂಥ ಇಷ್ಟಗಳ ಅನುಸಾರ ಚಿತ್ರವನ್ನೂ ನಡೆಯನ್ನೂ ನುಡಿಯನ್ನೂ ಬರೆದುಕೊಳ್ಳೋಣ.

ವೈದೇಹಿ
ಫೊಟೊ : ಶಮಂತ್‌ ಪಾಟೀಲ್‌

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.