ಸಾರಾ ದೇಶ್ ಮೇ
Team Udayavani, Dec 21, 2018, 6:00 AM IST
ಸಾರಾ ಅಲಿಖಾನ್ಳನ್ನು ಪರಿಚಯಿಸುವ ಅಗತ್ಯವೇ ಇಲ್ಲ. ಹುಟ್ಟಿದಂದಿನಿಂದಲೇ ಮಾಧ್ಯಮಗಳ ಡಾರ್ಲಿಂಗ್ ಆಗಿ ಬೆಳೆದವಳು ಅವಳು. ತಂದೆ -ತಾಯಿ ಇಬ್ಬರೂ ಬಾಲಿವುಡ್ ತಾರೆಗಳಾಗಿದ್ದ ಕಾರಣ ಬಾಲ್ಯದಿಂದಲೇ ಸಾರಾ ಯಾರೆಂದು ಮನೋರಂಜನಾ ಜಗತ್ತಿಗೆ ಗೊತ್ತಿತ್ತು. ಅಂತೆಯೇ ಮನರಂಜನಾ ಜಗತ್ತು ಹೇಗಿದೆ ಎನ್ನುವುದು ಸಾರಾಳಿಗೂ ಗೊತ್ತಿದೆ. ಹೀಗಾಗಿಯೇ ಇನ್ನೂ ಹದಿಹರೆಯದವಳಾಗಿರುವ ಸಾರಾ ಚಿತ್ರರಂಗದ ಬಗ್ಗೆ ವೇದಾಂತಿಯಂತೆ ಮಾತನಾಡುವ ಪ್ರಬುದ್ಧತೆಯನ್ನು ಬೆಳೆಸಿಕೊಂಡಿದ್ದಾಳೆ.
ಅವಳು ಹೇಳುವ ಪ್ರಕಾರ ಚಿತ್ರರಂಗವೆಂಬ ಮಾಯಾಲೋಕದಲ್ಲಿ ವಾಸ್ತವಕ್ಕೆ ರಿಲೇಟ್ ಆಗಿರುವುದೇ ದೊಡ್ಡ ಸಾಧನೆ. ಹೀಗೆ ರಿಯಲ್ ಆಗಿ ಇರುವುದೇ ಅವಳ ಗುರಿಯಂತೆ. ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡೇ ಹುಟ್ಟಿರುವ ನಟಿಯೊಬ್ಬಳಿಂದ ಈ ಮಾತು ಬಂದಿರುವುದು ನಿಜಕ್ಕೂ ಗ್ರೇಟ್. ಸಾರಾ ಸಾಗುತ್ತಿರುವ ಹಾದಿಯನ್ನು ಗಮನಿಸಿದರೆ ಈ ಕ್ಷೇತ್ರದಲ್ಲಿ ಅವಳಿಗೆ ಭವ್ಯ ಭವಿಷ್ಯವಿರುವ ಲಕ್ಷಣ ಕಾಣಿಸುತ್ತದೆ. ಮೊದಲ ಚಿತ್ರ ಕೇದಾರನಾಥ್ ಸೂಪರ್ಡ್ನೂಪರ್ ಹಿಟ್ ಆಗಿರದಿದ್ದರೂ ಗಮನ ಸೆಳೆಯುವಲ್ಲಿ ಸಫಲವಾಗಿದೆ. ಅದರಲ್ಲೂ ಸಾರಾಳ ಅಭಿನಯ ವಿಶೇಷ ಪ್ರಶಂಸೆಗೆ ಪಾತ್ರವಾಗಿದೆ. ಇದರ ಬೆನ್ನಿಗೆ ರಣವೀರ್ ಸಿಂಗ್ ಹೀರೊ ಆಗಿರುವ ಸಿಂಬ ಬಿಡುಗಡೆಗೆ ತಯಾರಾಗಿದೆ. ಈ ಆ್ಯಕ್ಷನ್ ಚಿತ್ರದಲ್ಲಿ ಸಾರಾಳಿಗೆ ಲವಲವಿಕೆಯ ಪಾತ್ರವಿದೆ. ಹಿಂದಿ ಮೀಡಿಯಂನ ಎರಡನೇ ಭಾಗಕ್ಕೂ ಸಾರಾಳನ್ನು ಹಾಕಿಕೊಳ್ಳಲು ಇರ್ಫಾನ್ ಖಾನ್ ಉತ್ಸುಕರಾಗಿದ್ದಾರೆ.
ಅಂತೆಯೇ ವರುಣ್ ಧವನ್ ನಾಯಕನಾಗಿರುವ ರಣಭೂಮಿ ಚಿತ್ರದ ನಾಯಕಿಯಾಗುವ ಅವಕಾಶ ಸಾರಾಳಿಗೆ ಸಿಗುವ ಸಾಧ್ಯತೆಯಿದೆ. ಹೀಗೆ ಆರಂಭದಿಂದಲೇ ಸಾರಾಳಿಗೆ ಅವಕಾಶಗಳು ಹರಿದು ಬರುತ್ತಿವೆ. ಸರಿಯಾದ ಹೆಜ್ಜೆಯಿಟ್ಟರೆ ಸಾರಾಳಿಗೆ ದೀಪಿಕಾ ಮತ್ತು ಪ್ರಿಯಾಂಕಾ ತೆರವುಗೊಳಿಸಿದ ಸ್ಥಾನವನ್ನು ತುಂಬುವ ಸಾಮರ್ಥ್ಯವಿದೆ.